ಅಮೆರಿಕ ಅಧ್ಯಕ್ಷೀಯ ಚುನಾವಣೆ ಮೇಲೆ ಬಿಎಲ್ ಸಂತೋಷ್ ಕಣ್ಣು!
ನವದೆಹಲಿ, ಫೆಬ್ರವರಿ 27: ಭಾರತ ಭೇಟಿಯ ವೇಳೆ 'ಮುಸ್ಲಿಂ ವಿರೋಧಿ' ಹಿಂಸಾಚಾರವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಲಕ್ಷಿಸಿದ್ದಾರೆ ಎಂಬ ಅಮೆರಿಕ ಚುನಾವಣೆಯ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಆಕಾಂಕ್ಷಿ ಬೆರ್ನಿ ಸ್ಯಾಂಡರ್ಸ್ ಅವರ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ನೀಡಿರುವ ಪ್ರತಿಕ್ರಿಯೆ ವಿವಾದ ಸೃಷ್ಟಿಸಿದೆ.
ಬೆರ್ನಿ ಸ್ಯಾಂಡರ್ಸ್ ಟ್ವೀಟ್ಗೆ ಪ್ರತಿಯಾಗಿ ಬಿಎಲ್ ಸಂತೋಷ್ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ತಟಸ್ಥರಾಗಿರುವ ಭಾರತ, ಅದರಲ್ಲಿ ಮಧ್ಯಪ್ರವೇಶ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡುವಂತೆ ಟ್ವೀಟ್ ಮಾಡಿದ್ದರು. ಅದು ತೀವ್ರ ಚರ್ಚೆಗೆ ಒಳಗಾಗುತ್ತಿದ್ದಂತೆಯೇ ಅವರು ಅಳಿಸಿಹಾಕಿದ್ದಾರೆ.
ಗೋಲಿಬಾರ್ಗೆ ಯು ಟಿ ಖಾದರ್ ನೇರ ಹೊಣೆ; ಬಿ ಎಲ್ ಸಂತೋಷ್
ದೆಹಲಿಯಲ್ಲಿ ತೀವ್ರ ಹಿಂಸಾಚಾರ ನಡೆಯುತ್ತಿದೆ. ವ್ಯಾಪಕ ಮುಸ್ಲಿಂ ವಿರೋಧಿ ದಂಗೆಗಳಲ್ಲಿ ಕನಿಷ್ಠ 27 ಮಂದಿ ಮೃತಪಟ್ಟಿದ್ದಾರೆ. ಭಾರತದಲ್ಲಿನ ಮುಸ್ಲಿಮರು ಕಂಗೆಟ್ಟಿದ್ದಾರೆ. ಇಷ್ಟೆಲ್ಲ ಆಗಿದ್ದರೂ ಡೊನಾಲ್ಡ್ ಟ್ರಂಪ್ ಇದು ಅವರ ಆಂತರಿಕ ವಿಚಾರ ಎಂದು ಹೇಳಿದ್ದಾರೆ ಎಂದು ಬೆರ್ನಿ ಸ್ಯಾಂಡರ್ಸ್ ಕಿಡಿಕಾರಿದ್ದರು.
ನಾಯಕತ್ವದ ವೈಫಲ್ಯ-ಸ್ಯಾಂಡರ್ಸ್
'200 ಮಿಲಿಯನ್ಗೂ ಅಧಿಕ ಮುಸ್ಲಿಮರು ಭಾರತವನ್ನು ತಮ್ಮ ದೇಶವೆಂದು ಕರೆದುಕೊಂಡಿದ್ದಾರೆ. ವ್ಯಾಪಕವಾಗಿ ನಡೆಯುತ್ತಿರುವ ಮುಸ್ಲಿಂ ವಿರೋಧಿ ಗುಂಪು ಹಿಂಸಾಚಾರದಲ್ಲಿ ಕನಿಷ್ಠ 27 ಮಂದಿ ಮೃತಪಟ್ಟಿದ್ದು, ಇನ್ನೂ ಅನೇಕರು ಗಾಯಗೊಂಡಿದ್ದಾರೆ. ಇದಕ್ಕೆ ಟ್ರಂಪ್, 'ಅದು ಭಾರತಕ್ಕೆ ಬಿಟ್ಟಿದ್ದು' ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇದು ಮಾನವ ಹಕ್ಕುಗಳ ವಿಚಾರದಲ್ಲಿ ನಾಯಕತ್ವದ ವೈಫಲ್ಯ' ಎಂದು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಆಕಾಂಕ್ಷಿ ಬೆರ್ನಿ ಸ್ಯಾಂಡರ್ಸ್ ಹೇಳಿದ್ದರು. ತಮ್ಮ ಟ್ವೀಟ್ ಜತೆಗೆ ಅವರು ವಾಷಿಂಗ್ಟನ್ ಪೋಸ್ಟ್ ಲೇಖನವನ್ನು ಹಂಚಿಕೊಂಡಿದ್ದರು.
ಪಾತ್ರ ವಹಿಸುವಂತೆ ಒತ್ತಾಯಿಸುತ್ತಿದ್ದೀರಿ
ಇದರಿಂದ ಕೋಪಗೊಂಡಿದ್ದ ಬಿಎಲ್ ಸಂತೋಷ್, ಬೆಳಿಗ್ಗೆ 7.45ಕ್ಕೆ ಟ್ವಿಟ್ಟರ್ನಲ್ಲಿ ಪ್ರತಿಕ್ರಿಯೆ ನೀಡಿದ್ದರು. 'ನಾವು ಎಷ್ಟೇ ತಟಸ್ಥರಾಗಿರಬೇಕೆಂದು ಬಯಸಿದ್ದರೂ, ಅಧ್ಯಕ್ಷೀಯ ಚುನಾವಣೆಯಲ್ಲಿ ನಾವು ಪಾತ್ರ ವಹಿಸುವಂತೆ ನೀವು ಒತ್ತಾಯಿಸುತ್ತಿದ್ದೀರಿ... ಇದನ್ನು ಹೇಳುತ್ತಿರುವುದಕ್ಕೆ ಕ್ಷಮೆಯಿರಲಿ... ಆದರೆ ನೀವು ನಮ್ಮನ್ನು ಬಲವಂತಪಡಿಸುತ್ತಿದ್ದೀರಿ' ಎಂದು ಹೇಳಿದ್ದರು.
ಬಿಜೆಪಿ ಪ್ರಭಾವಿ ಬಿ.ಎಲ್.ಸಂತೋಷ್ ವಿರುದ್ಧವೇ ಶಾಸಕ ಯತ್ನಾಳ್ ವಾಗ್ದಾಳಿ
ಟ್ವೀಟ್ ಅಳಿಸಿಹಾಕಿದ ಸಂತೋಷ್
ಕೆಲ ಸಮಯದ ಬಳಿಕ ಬಿಎಲ್ ಸಂತೋಷ್ ಈ ಟ್ವೀಟ್ ಅನ್ನು ಅಳಿಸಿ ಹಾಕಿದ್ದಾರೆ. ತಮ್ಮ ಟ್ವೀಟ್ ವಿವಾದ ಸೃಷ್ಟಿಸಬಹುದು ಎಂಬ ಕಾರಣಕ್ಕಾಗಿ ಅವರು ಅದನ್ನು ಡಿಲೀಟ್ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಅವರ ಟ್ವೀಟ್ನ ಸ್ಕ್ರೀನ್ ಶಾಟ್ ತೆಗೆದುಕೊಂಡು ಎಲ್ಲೆಡೆ ಚರ್ಚೆಗೆ ಒಳಪಡಿಸಲಾಗುತ್ತಿದೆ. ಅವರ ಟ್ವೀಟ್ಗೆ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ದೆಹಲಿ ಚುನಾವಣೆಯನ್ನು ನೆನಪಿಸಿಕೊಳ್ಳಿ
'ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಶೋಚನೀಯ ಪ್ರದರ್ಶನವನ್ನು ಬಿ.ಎಲ್. ಸಂತೋಷ್ ನೆನಪಿಸಿಕೊಳ್ಳಬೇಕು. ನಿಮ್ಮ ದೇಶವನ್ನು ಮೊದಲು ನೋಡಿಕೊಳ್ಳಿ. ಪಕ್ಕದ ಮನೆಯ ಆಂಟಿಯಂತೆ ಆಡಬೇಡಿ' ಎಂದು ದಿ ಸಾಲಿಟರಿ ಶ್ರಿಂಕ್ ಎಂಬ ಖಾತೆಯಿಂದ ಅಣಕಿಸಲಾಗಿದೆ.
ನಿಮ್ಮ ಸಿದ್ಧಾಂತ ಉಳಿಯುವುದಿಲ್ಲ
'ಬಿಎಲ್ ಸಂತೋಷ್ ಅವರೇ ಮೊದಲು ಭಾರತದಲ್ಲಿ ಆಡಳಿತ ಮಾಡಿ. ನಿಮ್ಮ ನಾಜಿ ಪ್ರೇರಿತ ಆರೆಸ್ಸೆಸ್ ಸಿದ್ಧಾಂತವು ಎಲ್ಲಿಯೂ ತಲುಪಲು ಸಾಧ್ಯವಾಗುವುದಿಲ್ಲ. ಇದು ಕೆಲವು ಕ್ಷಣ ಮಿನುಗುತ್ತದೆ. ಆದರೆ ಜನಾಂಗೀಯ ಶುದ್ಧತೆ, ಬ್ರಾಹ್ಮಣ್ಯ ಶ್ರೇಷ್ಠತೆಯಂತಹ ಮೂರ್ಖತನದ ಭಾರತ ಅಡಿಯಲ್ಲಿ ಪುಡಿಯಾಗುತ್ತದೆ' ಎಂದು ಮನೋಜ್ ಕೆ.ಎಂ. ಎಂಬುವವರು ಟೀಕಿಸಿದ್ದಾರೆ.