ಹೊಸ ಕಚೇರಿ ಬಿಜೆಪಿ ಸೋಲಿಗೆ ಕಾರಣವಾಗುತ್ತಾ? ಇದು ಅನ್ಲಕ್ಕಿ ಕಚೇರಿಯಂತೆ!
ನವದೆಹಲಿ, ಜುಲೈ 26: ಕೇಂದ್ರ ದೆಹಲಿಯ ದೀನ ದಯಾಳ ಉಪಾಧ್ಯಾಯ ರಸ್ತೆಯಲ್ಲಿರುವ ಐದು ಮಹಡಿ ಕಟ್ಟಡದಲ್ಲಿರುವ ಪಕ್ಷದ ಕೇಂದ್ರ ಕಚೇರಿ ಬಿಜೆಪಿ ಪಾಲಿಗೆ ಅದೃಷ್ಟಹೀನವಾಗಿ ಪರಿಣಮಿಸಿದೆಯೇ?
ಹೌದು ಎಂಬ ಭಾವನೆ ಅಲ್ಲಿರುವ ಪಕ್ಷದ ಅನೇಕ ಮುಖಂಡರಲ್ಲಿ ಮೂಡಿದೆ. ಇದಕ್ಕೆ ಕಾರಣ ಸಾಲು ಸಾಲು ಸೋಲುಗಳು.
ಹೀಗಾಗಿ ಮುಂಬರುವ ಲೋಕಸಭೆ ಚುನಾವಣೆ ವೇಳೆಗೆ ತನ್ನ ಸಮರಾಭ್ಯಾಸದ ಕೇಂದ್ರವನ್ನು ಸ್ಥಳಾಂತರಿಸಲು ಬಿಜೆಪಿ ಮುಂದಾಗಿದೆ.
ಲೋಕಸಭೆ ಚುನಾವಣೆ ಗೆಲ್ಲಲು ವಾಟ್ಸ್ಆಪ್ ಮೊರೆ ಹೋಗಲಿದೆ ರಾಜ್ಯ ಬಿಜೆಪಿ
ಮುಂಬರುವ 2019ರ ಲೋಕಸಭೆ ಚುನಾವಣೆಯ ಸಕಲ ತಯಾರಿಗಳನ್ನು ನಡೆಸುವ ಯುದ್ಧ ಕೊಠಡಿಯನ್ನಾಗಿ ಬಿಜೆಪಿ ದೆಹಲಿಯ ಅಶೋಕ ರಸ್ತೆಯಲ್ಲಿರುವ ತನ್ನ ಹಳೆಯ ಕೇಂದ್ರ ಕಚೇರಿಯನ್ನೇ ಬಳಸಿಕೊಳ್ಳಲು ಉದ್ದೇಶಿಸಿದೆ.
ನೂತನ ಕೇಂದ್ರ ಕಚೇರಿಯು ಬಿಜೆಪಿಗೆ ನಕಾರಾತ್ಮಕವಾಗಿ ಪರಿಗಣಿಸುತ್ತಿದ್ದು, 2019ರ ಲೋಕಸಭೆ ಚುನಾವಣೆಯನ್ನು ಎದುರಿಸುವ ಯೋಜನೆಗಳು ಮತ್ತು ತಯಾರಿಯನ್ನು ಈ ಕಟ್ಟಡದಲ್ಲಿ ನಡೆಸುವುದು ಬೇಡ ಎಂಬ ಅನಿಸಿಕೆ ಬಿಜೆಪಿಯ ಕೆಲವು ಮುಖಂಡರಲ್ಲಿ ಉಂಟಾಗಿದೆ.
ಬಹುಮಹಡಿ ಕಟ್ಟಡದ ತನ್ನ ಹೊಸ ಕಚೇರಿಗೆ ಫೆಬ್ರುವರಿಯಲ್ಲಿ ಸ್ಥಳಾಂತರ ಹೊಂದಿದ ಬಳಿಕ ಬಿಜೆಪಿ ಸತತ ಸೋಲುಗಳನ್ನು ಕಂಡಿದೆ. ಉತ್ತರ ಪ್ರದೇಶದ ಫುಲ್ಪುರ್, ಗೋರಖ್ಪುರ ಮತ್ತು ಕೈರಾಣಗಳಲ್ಲಿನ ಉಪಚುನಾವಣೆಗಳಲ್ಲಿ ಸೋಲು ಎದುರಾಗಿದೆ.
ಮೋದಿ ಸೋಲಿಸಲು ಶಿವಸೇನೆಯ ಹೊಸ ಆಯುಧ- ಹಿಂದುತ್ವ, ಅಯೋಧ್ಯೆ!
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಪಡೆದುಕೊಳ್ಳುವುದು ಸಾಧ್ಯವಾಗಿಲ್ಲ. ಜಮ್ಮು ಮತ್ತು ಕಾಶ್ಮೀರದಲ್ಲಿ ಪಿಡಪಿಯೊಂದಿಗಿನ ಮೈತ್ರಿ ಕಡಿದುಕೊಳ್ಳಬೇಕಾಯಿತು. ಆಂಧ್ರಪ್ರದೇಶದಲ್ಲಿ ತೆಲುಗು ದೇಶಂ ಪಾರ್ಟಿಯೊಂದಿಗಿನ ನಂಟು ಬಿಟ್ಟುಹೋಯಿತು. ಅಲ್ಲದೆ ಶಿವಸೇನಾದೊಂದಿಗಿನ ಸುದೀರ್ಘ ಸಂಬಂಧ ಮುರಿದುಹೋಯಿತು.
ಈ ಎಲ್ಲ ವೈಫಲ್ಯಗಳು ಹೊಸ ಕಚೇರಿಗೆ ಬಂದ ಬಳಿಕವೇ ಎದುರಾಗಿರುವುದರಿಂದ, ಹೊಸ ಕಚೇರಿ ತಮ್ಮ ಪಾಲಿಗೆ ಶಾಪವಾಗಿ ಪರಿಣಮಿಸಿದೆ ಎಂಬ ತೀರ್ಮಾನಕ್ಕೆ ಮುಖಂಡರು ಬಂದಿದ್ದಾರೆ.
ಹೊಸ ಕಚೇರಿಗೆ ಸ್ಥಳಾಂತರವಾಗಿ ನಾಲ್ಕು ತಿಂಗಳು ಕಳೆದರೂ ತನ್ನ ಹಳೆಯ ಕೇಂದ್ರ ಕಚೇರಿಯನ್ನು ಅದು ತೆರವುಗೊಳಿಸಿಲ್ಲ.
ಇತ್ತೀಚಿನವರೆಗೂ ಹಳೆಯ ಕಚೇರಿಯಿಂದಲೇ ಪಕ್ಷದ ಕಾರ್ಯಗಳನ್ನು ನಡೆಸುತ್ತಿದ್ದೆವು. ರಾಷ್ಟ್ರೀಯ ಚುನಾವಣೆಯ ಸಿದ್ಧತೆಗಳನ್ನು ನಡೆಸಲು ಅಗತ್ಯವಾದ ಎಲ್ಲ ಸೌಕರ್ಯಗಳೂ ಅಲ್ಲಿ ಲಭ್ಯವಿದೆ ಎಂದು ಪಕ್ಷದ ಮುಂಡರೊಬ್ಬರು ತಿಳಿಸಿದ್ದಾರೆ.
2009ರಲ್ಲಿ ಎಲ್ಕೆ ಅಡ್ವಾಣಿ ಪ್ರಧಾನಿ ಅಭ್ಯರ್ಥಿಯಾಗಿದ್ದ ಚುನಾವಣೆ ವೇಳೆ ತುಘಲಕ್ ಕ್ರೆಸೆಂಟ್ನಲ್ಲಿರುವ ಸಚಿವ ಅನಂತಕುಮಾರ್ ಅವರ ಬಂಗಲೆ ಬಿಜೆಪಿಯ ಚುನಾವಣಾ ತಯಾರಿಯ ಕೇಂದ್ರವಾಗಿತ್ತು.
2014ರಲ್ಲಿ ಭರ್ಜರಿ ದಿಗ್ವಿಜಯ ಸಾಧಿಸುವ ವೇಳೆ ಶ್ರೀಪಾದ್ ಯೆಸ್ಸೊ ನಾಯಕ್ ಅವರ ಲೋಧಿ ಎಸ್ಟೇಟ್ ಬಂಗಲೆಯಲ್ಲಿ ಚುನಾವಣಾ ತಯಾರಿ ನಡೆದಿತ್ತು.
ಅಶೋಕ ರಸ್ತೆಯಲ್ಲಿರುವ ಕಚೇರಿ ಹೆಚ್ಚು ಅನುಕೂಲಕರವಾಗಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಈ ಕಾರಣದಿಂದ ಅಲ್ಲಿಗೆ ಸ್ಥಳಾಂತರ ಮಾಡಲಾಗುವುದು ಎಂದು ಮುಖಂಡರೊಬ್ಬರು ಹೇಳಿದ್ದಾರೆ.