ಉಪ ಚುನಾವಣೆ ಎಂದರೆ ಬಿಜೆಪಿ ಬೆಚ್ಚಿಬೀಳುವುದೇಕೆ?
ನವದೆಹಲಿ, ನವೆಂಬರ್ 08: 2014ರಿಂದ ಇಲ್ಲಿ ತನಕ ನಡೆದಿರುವ ಉಪ ಚುನಾವಣೆ ಫಲಿತಾಂಶಗಳನ್ನು ಅವಲೋಕಿಸಿದರೆ ಭಾರತೀಯ ಜನತಾ ಪಕ್ಷಕ್ಕೂ ಅಗಿಬರಲ್ಲ ಎಂಬ ಅಂಶ ತಿಳಿದು ಬರುತ್ತದೆ.
ಸರಿಯಾಗಿ ಹೇಳಬೇಕೆಂದರೆ 2014ರಿಂದ 2018ರ ಅವಧಿಯಲ್ಲಿ ನಡೆದಿರುವ 23 ಲೋಕಸಭಾ ಉಪ ಚುನಾವಣೆಗಳ ಪೈಕಿ ಬಿಜೆಪಿ ಕೇವಲ 4ರಲ್ಲಿ ಮಾತ್ರ ಜಯಶಾಲಿಯಾಗಿದೆ.
ಉಪ ಚುನಾವಣೆ ಸೋಲು : ಯಡಿಯೂರಪ್ಪ ನಾಯಕತ್ವ ಬದಲಾವಣೆ ಇಲ್ಲ
ಬಿಜೆಪಿಗೆ ಉಪ ಚುನಾವಣೆಯಲ್ಲಿ ಗೆಲುವು ಮರೀಚಿಕೆಯಾಗಿದ್ದು, ಈ ಬಗ್ಗೆ ಏನು ಮಾಡುವುದು ಎಂಬುದು ಇನ್ನೂ ತಿಳಿದು ಬಂದಿಲ್ಲ. ಬಿಜೆಪಿ ಸೋಲು, ಕಾಂಗ್ರೆಸ್ಸಿಗೆ ಬಲ ತಂದಿದೆ. ಬಹುತೇಕ ಕಾಂಗ್ರೆಸ್ ಅಥವಾ ಕಾಂಗ್ರೆಸ್ ಮಿತ್ರಪಕ್ಷಗಳು ಬಿಜೆಪಿ ವಿರುದ್ಧ ಜಯ ಗಳಿಸಿವೆ.ಕೆಲವೆಡೆ ಪ್ರಾದೇಶಿಕ ಪಕ್ಷಗಳು ಅಚ್ಚರಿ ಮೂಡಿಸಿವೆ. ಇದರಿಂದಾಗಿ, 2019ರ ಲೋಕಸಭೆ ಚುನಾವಣೆಗೆ ಅಣಿಯಾಗುತ್ತಿರುವ ಬಿಜೆಪಿಗೆ ಈ ಫಲಿತಾಂಶಗಳು ಆತ್ಮವಿಶ್ವಾಸವನ್ನು ಕುಗ್ಗಿಸಿವೆ ಎನ್ನಬಹುದು.
ಚುನಾವಣಾ ಹೊಸ್ತಿಲಲ್ಲಿ ಅಮಿತ್ ಶಾ- ವಸುಂಧರಾ ರಾಜೆ ಭೀಕರ ಮನಸ್ತಾಪ
ಬಿಜೆಪಿ ಪ್ರಾಬಲ್ಯವಿದ್ದ ಕ್ಷೇತ್ರಗಳಲ್ಲೂ ಸೋಲು: 2018ರಲ್ಲಿ ಕರ್ನಾಟಕದಲ್ಲಿ ನಡೆದ ಮೂರು ಲೋಕಸಭೆ ಉಪ ಚುನಾವಣೆ ಪೈಕಿ ಬಳ್ಳಾರಿಯಲ್ಲಿ ಬಿಜೆಪಿ ಗೆಲುವಿನ ನಿರೀಕ್ಷೆಯಿತ್ತು. ಆದರೆ, ಬಿಜೆಪಿಯಲ್ಲಿ ಅಭ್ಯರ್ಥಿ, ಮಾಜಿ ಸಂಸದೆ ಜೆ ಶಾಂತಾ ಅವರು ಸೋತಿದ್ದಷ್ಟೇ ಅಲ್ಲ, ಕಾಂಗ್ರೆಸ್ ಎದುರಾಳಿಗೆ ದಾಖಲೆಯ ಗೆಲುವಿನ ಕಾಣಿಕೆ ನೀಡಿದರು.
ಉತ್ತರಪ್ರದೇಶದಲ್ಲಿ ಭಾರಿ ಹೊಡೆತ
ಬಿಜೆಪಿ ಪ್ರಾಬಲ್ಯವಿದ್ದ ಗೋರಖ್ ಪುರ್ ಹಾಗೂ ಫುಲ್ ಪುರ್ ಕ್ಷೇತ್ರದಲ್ಲಿ ಬಿಜೆಪಿಯನ್ನು ಮಣಿಸಲು ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜವಾದಿ ಪಕ್ಷಗಳು ಒಂದಾಗಿ ನಡೆಸಿದ ಕಾರ್ಯಾಚರಣೆ ಫಲ ನೀಡಿತು.
ಕೇಶವ್ ಪ್ರಸಾದ್ ಮೌರ್ಯ, ಯೋಗಿ ಆದಿತ್ಯಾನಾಥ್ ಅವರಿಗೆ ಇದರಿಂದ ತೀವ್ರ ಮುಖಭಂಗವಾಯಿತು. 2014ರಲ್ಲಿ 70 ಸೀಟು ಗೆದ್ದು ಬೀಗಿದ್ದ ಬಿಜೆಪಿಗೆ ಲೋಕಸಭೆಯಲ್ಲಿ ಹೆಚ್ಚಿನ ಸ್ಥಾನ ನೀಡುವ ಯುಪಿಯಲ್ಲೇ ಇಂಥ ಪರಿಸ್ಥಿತಿ ಎದುರಾಗುತ್ತೆ ಎಂದು ನಿರೀಕ್ಷಿಸಿರಲಿಲ್ಲ.
ಬಿಜೆಪಿಗೆ 10ರಲ್ಲಿ 6ರಲ್ಲಿ ಸೋಲು
2014ರಿಂದ ನಡೆದ 23 ಲೋಕಸಭೆ ಉಪ ಚುನಾವಣೆ ಪೈಕಿ 10 ಬಿಜೆಪಿ ಪ್ರಾಬಲ್ಯವಿದ್ದ ಹಾಗೂ ಗೆಲ್ಲುವ ನಿರೀಕ್ಷೆ ಹೊಂದಿದ್ದ ಕ್ಷೇತ್ರವಾಗಿತ್ತು. ಆದರೆ, ಈ ಪೈಕಿ 6 ಕ್ಷೇತ್ರವನ್ನು ಕಳೆದುಕೊಂಡು 4ರಲ್ಲಿ ಮಾತ್ರ ಗೆಲುವು ಸಾಧಿಸಿತು.
ಆದರೆ, ಬಿಜೆಪಿಗೆ ಹೋಲಿಸಿದರೆ ಕಾಂಗ್ರೆಸ್ 5 ಉಪ ಚುನಾವಣೆ ಗೆದ್ದುಕೊಂಡಿದೆ. ಅಮೃತಸರ್ ಲೋಕಸಭಾ ಕ್ಷೇತ್ರವನ್ನು ಪುನಃ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.
ಬಿಜೆಪಿಯಿಂದ ಸ್ಥಾನ ಕಸಿದುಕೊಂಡ ಕಾಂಗ್ರೆಸ್
ಬಿಜೆಪಿ ಹಿಡಿತದಲ್ಲಿದ್ದ ಮಧ್ಯಪ್ರದೇಶದ ರಟ್ಲಮ್, ಪಂಜಾಬಿನ ಗುರ್ ದಾಸ್ ಪುರ್, ರಾಜಸ್ಥಾನದ ಆಜ್ಮೇರ್, ಅಳ್ವಾರ್ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕಸಿದುಕೊಂಡಿದೆ. ಎಲ್ಲವೂ ಉಪ ಚುನಾವಣೆಯಲ್ಲಿ ಗಳಿಸಿದ ಗೆಲುವು ಎಂಬುದು ವಿಶೇಷ. ಉಪ ಚುನಾವಣೆಯಲ್ಲಿ ಸ್ಥಳೀಯ ಪಕ್ಷಗಳ ಜತೆ ಕಾಂಗ್ರೆಸ್ ಕೈಜೋಡಿಸಿ ಲಾಭ ಪಡೆದುಕೊಂಡರೆ, ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸುವ ಸಾಹಸದಲ್ಲಿ ಸೋಲು ಕಂಡಿದೆ.
ಉಪ ಚುನಾವಣೆಯಲ್ಲಿ ಟಿಎಂಸಿ ಯಶಸ್ಸು
2016ರಲ್ಲಿ ಅಸ್ಸಾಂನ ಲಖೀಂಪುರದಲ್ಲಿ ಬಿಜೆಪಿ ತನ್ನ ಸ್ಥನ ಉಳಿಸಿಕೊಂಡಿತ್ತು. ಮಧ್ಯಪ್ರದೇಶದಲ್ಲಿ ಶಾಹ್ದೋಲ್ ಸ್ಥಾನ ಕೂಡಾ ಲಭಿಸಿತ್ತು. ಆದರೆ, ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಮುಂದೆ ಬಿಜೆಪಿ ತಣ್ಣಗಾಯಿತು.
ಕೂಚ್ ಬಿಹಾರ್, ತಾಮ್ಲೂಕ್ ನಲ್ಲಿ ಟಿಎಂಸಿ ತನ್ನ ಪ್ರಾಬಲ್ಯ ಉಳಿಸಿಕೊಂಡಿತು. ಬಂಗಾಳದಲ್ಲಿ ನಾಲ್ಕು ಉಪ ಚುನಾವಣೆಗಳಲ್ಲಿ ಎಲ್ಲಾ ಸ್ಥಾನಗಳನ್ನು ಟಿಎಂಸಿ ಉಳಿಸಿಕೊಳ್ಳುವಲ್ಲಿ ಸಫಲವಾಗಿದೆ.