ಬಿಜೆಪಿ ವಿರುದ್ಧ ಹಾರ್ದಿಕ್ ಪಟೇಲ್ 'ಶಕುನಿ'ಯಾಟಕ್ಕೆ ಮೊದಲ ಹಿನ್ನಡೆ!
Recommended Video
ಜಿಗ್ನೇಶ್ ಮೆವಾನಿ, ಅಲ್ಪೇಶ್ ಠಾಕೂರ್ ಅವರನ್ನು ಜೊತೆಗೆ ಸೇರಿಸಿಕೊಂಡು ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲಾಗದೇ ಕೈಕೈ ಹಿಸುಕಿಕೊಳ್ಳುತ್ತಿರುವ ಪಾಟಿದಾರ್ ಅನಾಮತ್ ಆಂದೋಲನ ಸಮಿತಿಯ ನಾಯಕ ಹಾರ್ದಿಕ್ ಪಟೇಲ್, ಬಿಜೆಪಿ ವಿರುದ್ದ ಶಕುನಿಯಾಟ ಆಡಲು ಹೋಗಿ ಸದ್ಯದ ಮಟ್ಟಿಗೆ ಮುಖಭಂಗ ಅನುಭವಿಸಿದ್ದಾರೆ.
ಗುಜರಾತ್ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಖಾತೆ ಹಂಚಿಕೆಯ ವಿಚಾರದಲ್ಲಿ ತೆಗೆದ ಕ್ಯಾತೆಯನ್ನು ರಾಷ್ಟ್ರ ಮಟ್ಟದಲ್ಲಿ ಸುದ್ದಿಮಾಡುವಲ್ಲಿ ಯಶಸ್ವಿಯಾದ ಹಾರ್ದಿಕ್, ಅಷ್ಟೇ ವೇಗದಲ್ಲಿ ಹಿನ್ನಡೆ ಅನುಭವಿಸಿದ್ದಾರೆ.
ಗುಜರಾತ್ ನಲ್ಲಿ ತಿಳಿಯಾದ ಮುನಿಸು, ಪಟೇಲ್ ಅಧಿಕಾರ ಸ್ವೀಕಾರ
ನಿಮ್ಮ ಅಸಮಾಧಾನ ಏನೇ ಇದ್ದರೂ ಅದನ್ನು ಸರಿಪಡಿಸೋಣ, ಮೊದಲು ಅಧಿಕಾರ ಸ್ವೀಕರಿಸಿ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಕಟ್ಟುನಿಟ್ಟಿನ ಸೂಚನೆಗೆ ತಲೆಬಾಗಿದ ನಿತಿನ್ ಪಟೇಲ್ ಭಾನುವಾರ (ಡಿ 31) ಅಧಿಕಾರ ಸ್ವೀಕರಿಸಿಕೊಂಡಿದ್ದಾರೆ.
ಜೊತೆಗೆ, ತಾವು ಬಯಸಿದ್ದ ಹಣಕಾಸು ಸಚಿವ ಸ್ಥಾನವನ್ನು ನೀಡುವ ಖಚಿತ ಭರವಸೆ ಅಮಿತ್ ಶಾ ನೀಡಿದ ನಂತರ ನಿತಿನ್ ಪಟೇಲ್, ಶಾ ಮತ್ತು ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ್ದಾರೆ. ಆ ಮೂಲಕ, ಪಕ್ಷದ ಆಂತರಿಕ ವಿಚಾರದಲ್ಲಿ ಕಡ್ಡಿಯಾಡಿಸಲು ಬಂದ ಹಾರ್ದಿಕ್ ಪಟೇಲ್ ಪ್ರಯತ್ನಕ್ಕೆ ಫಲ ಸಿಗದಂತೆ ನೋಡಿಕೊಳ್ಳುವಲ್ಲಿ ಅಮಿತ್ ಶಾ ಯಶಸ್ವಿಯಾಗಿದ್ದಾರೆ.
ಗುಜರಾತ್ ಸರ್ಕಾರದಲ್ಲಿ ಬಿರುಕು ಮೂಡಿಸುತ್ತಿರುವ ಹಾರ್ದಿಕ್
ಖಾತೆ ಹಂಚಿಕೆಯ ವಿಚಾರದಲ್ಲಿ ನಿತಿನ್ ಪಟೇಲ್ ಅಸಮಾಧಾನವನ್ನು ಎನ್ ಕ್ಯಾಷ್ ಮಾಡಿಕೊಳ್ಳಲು ಮುಂದಾಗಿದ್ದ ಹಾರ್ದಿಕ್ ಪಟೇಲ್, ಸಮುದಾಯದ ಕೆಲವೊಂದು ಮುಖಂಡರನ್ನು ನಿತಿನ್ ಪಟೇಲ್ ನಿವಾಸಕ್ಕೆ ಕಳುಹಿಸಿ, ಬಿಜೆಪಿ ವಿರುದ್ದ ಎತ್ತಿಕಟ್ಟುವ ಕೆಲಸಕ್ಕೆ ಮುಂದಾಗಿದ್ದರು. ಸರಿಯಾದ ಸಮಯಕ್ಕೆ ಖಾತೆ ಹಂಚಿಕೆ ವಿವಾದ ಬಗೆಹರಿಸಿದ ಅಮಿತ್ ಶಾ, ಮುಂದೆ ಓದಿ..
ಹಣಕಾಸು ಖಾತೆಗೆ ಹಠ ಹಿಡಿದಿದ್ದ ನಿತಿನ್ ಪಟೇಲ್
ಕಳೆದ ಸರಕಾರದಲ್ಲಿ ಹಣಕಾಸು, ನಗರಾಭಿವೃದ್ದಿ, ಪೆಟ್ರೋಲಿಯಂ ಖಾತೆಯನ್ನು ನಿಭಾಯಿಸಿದ್ದ ನಿತಿನ್ ಪಟೇಲಿಗೆ ಈ ಬಾರಿ ರಸ್ತೆ, ಕಟ್ಟಡ ನಿರ್ಮಾಣ ಮತ್ತು ಆರೋಗ್ಯ ಖಾತೆಯನ್ನು ನೀಡಲಾಗಿತ್ತು. ಹಣಕಾಸು ಖಾತೆಯನ್ನು ಸೌರಭ್ ಪಟೇಲ್ ಮತ್ತು ಪೆಟ್ರೋಲಿಯಂ ಖಾತೆಯನ್ನು ಖುದ್ದು ಸಿಎಂ ವಿಜಯ್ ರೂಪಾಣಿ ತನ್ನ ಬಳಿಯೇ ಇಟ್ಟುಕೊಂಡಿದ್ದರು.
ಪಟೇಲ್ ಸಮುದಾಯದ ಆಕ್ರೋಶದ ಸಾಧ್ಯತೆ
ನಿತಿನ್ ಪಟೇಲ್ ಗೆ ಸಿಎಂ ಹುದ್ದೆ ನೀಡದಿದ್ದರೆ, ಗುಜರಾತ್ ಬಂದಿಗೆ ಕರೆನೀಡುವುದಾಗಿ ಸರ್ದಾರ್ ಪಟೇಲ್ ಗ್ರೂಪ್ ಎಚ್ಚರಿಕೆ ನೀಡಿತ್ತು. ಈ ವೇಳೆ, ಹಣಕಾಸು ಖಾತೆಯನ್ನೂ ನೀಡದಿದ್ದರೆ, ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಗುವ ಸಾಧ್ಯತೆಯನ್ನು ಅರಿತ, ಅಮಿತ್ ಶಾ, ನಿತಿನ್ ಪಟೇಲ್ ಬಯಸಿದಂತೆ ವಿತ್ತ ಖಾತೆಯ ಭರವಸೆ ನೀಡಿದ್ದಾರೆ.
ಎಚ್ಚರಿಕೆಯ ಹೆಜ್ಜೆಯನ್ನು ಇಡಬೇಕಾಗದ ಬಿಜೆಪಿ
ಜಿದ್ದಾಜಿದ್ದಿನ ಪೈಪೋಟಿಯ ನಂತರ ಮತ್ತೆ ಅಧಿಕಾರ ಉಳಿಸಿಕೊಂಡಿರುವ ಬಿಜೆಪಿ, ಆಡಳಿತಾತ್ಮಕವಾಗಿ ಮತ್ತು ಪಕ್ಷದ ಆಂತರಿಕ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆಯನ್ನು ಇಡಬೇಕಾಗಿದೆ. ಕಾಂಗ್ರೆಸ್ ಮತ್ತು ಮೂವರು ಯುವಕರಿಂದ (ಅಲ್ಪೇಶ್, ಜಿಗ್ನೇಶ್, ಹಾರ್ದಿಕ್) ಮುಂದೊದಗಬಹುದಾದ ರಾಜಕೀಯ ಆಟದ ಲೆಕ್ಕಾಚಾರವನ್ನು ಅರಿತಿರುವ ಅಮಿತ್ ಶಾ, ನಿತಿನ್ ಪಟೇಲ್ ವಿಚಾರದಲ್ಲಿ ಯಾವುದೇ ರಿಸ್ಕ್ ತೆಗೆದುಕೊಳ್ಳದೇ, ಅವರು ಕೇಳಿದ ಹುದ್ದೆಯನ್ನು ಕೊಟ್ಟುಬಿಡಲು ನಿರ್ಧರಿಸಿದ್ದಾರೆ.
ನನ್ನ ಗೌರವ ಮತ್ತು ಸ್ವಾಭಿಮಾನದ ಪ್ರಶ್ನೆ ಎಂದ ನಿತಿನ್ ಪಟೇಲ್
ಅಧಿಕಾರ ಬಯಸಿ ನಾನು ಅಪಸ್ವರ ಎತ್ತುತ್ತಿಲ್ಲ, ಇದು ನನ್ನ ಗೌರವ ಮತ್ತು ಸ್ವಾಭಿಮಾನದ ಪ್ರಶ್ನೆ ಎಂದ ನಿತಿನ್ ಪಟೇಲ್ ಹೇಳಿಕೆಯ ಹಿಂದೆ 'ಪಟೇಲ್ ಸಮುದಾಯ' ಮತ್ತಷ್ಟು ತಿರುಗಿಬೀಳುವ ಸಾಧ್ಯತೆಯನ್ನು ಅರಿತ ಅಮಿತ್ ಶಾ, ಸದ್ಯದ ಮಟ್ಟಿಗೆ ಪರಿಸ್ಥಿತಿಗೆ ತೇಪೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಹಾರ್ದಿಕ್ ಪಟೇಲ್ ಮೊದಲ ಪ್ರಯತ್ನದಲ್ಲೇ ಹಿನ್ನಡೆ
ಹತ್ತು ಶಾಸಕರನ್ನು ಜೊತೆಗೆ ಕರೆದುಕೊಂಡು ಬಂದರೆ, ಕಾಂಗ್ರೆಸ್ಸಿನಲ್ಲಿ ಉತ್ತಮ ಹುದ್ದೆ ನೀಡುವುದಾಗಿ ಹಾರ್ದಿಕ್ ಪಟೇಲ್ ನೀಡಿದ ಓಪನ್ ಆಫರಿಗೆ, ಅಮಿತ್ ಶಾ ಪ್ರತಿತಂತ್ರ ರೂಪಿಸಿ, ನಿತಿನ್ ಪಟೇಲ್ ಗೆ ಹಣಕಾಸು ಖಾತೆ ನೀಡಿ, ಕೂಡಲೇ ಅಧಿಕಾರ ಸ್ವೀಕರಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗಾಗಿ, ಹಾರ್ದಿಕ್ ಪಟೇಲ್ ಮೊದಲ ಪ್ರಯತ್ನದಲ್ಲೇ ಹಿನ್ನಡೆ ಅನುಭವಿಸಿದ್ದಾರೆ.