ಒರಿಸ್ಸಾದಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ: ಬಿಜೆಪಿಯಿನ್ನೂ ಉತ್ತುಂಗಕ್ಕೇರಿಲ್ಲ
ಒರಿಸ್ಸಾದ ರಾಜಧಾನಿ ಭುವನೇಶ್ವರದಲ್ಲಿ ಶನಿವಾರ (ಏ15) ದಿಂದ ಎರಡು ದಿನಗಳ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಆರಂಭ. ಬಿಜೆಪಿಯಿನ್ನೂ ಉತ್ತುಂಗಕ್ಕೇರಿಲ್ಲ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅಭಿಪ್ರಾಯ.
ಭುವನೇಶ್ವರ, ಏ 15: ಒರಿಸ್ಸಾದ ರಾಜಧಾನಿ ಭುವನೇಶ್ವರದಲ್ಲಿ ಶನಿವಾರ (ಏ15) ದಿಂದ ಎರಡು ದಿನಗಳ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಆರಂಭವಾಗಿದೆ.
ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಸಾಧನೆ ತೋರಿದ್ದರೂ, ಬಿಜೆಪಿಯಿನ್ನೂ ಉತ್ತುಂಗಕ್ಕೇರಿಲ್ಲ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಐದು ರಾಜ್ಯಗಳಲ್ಲಾದ ಸೋಲನ್ನು ಸ್ವೀಕರಿಸುವುದನ್ನು ಬಿಟ್ಟು ವಿರೋಧ ಪಕ್ಷಗಳು ಇವಿಎಂ ದೂರುತ್ತಿರುವುದು ಹಾಸ್ಯಾಸ್ಪದ ಎಂದಿರುವ ಅಮಿತ್ ಶಾ, ಮುಂಬರುವ ಚುನಾವಣೆಯಲ್ಲೂ ವಿರೋಧ ಪಕ್ಷಗಳಿಗೆ ಸೋಲು ಕಟ್ಟಿಟ್ಟಬುತ್ತಿ ಎಂದಿದ್ದಾರೆ.
ಬಿಜೆಪಿಯ ಸಾಧನೆ ಇನ್ನೂ ಎತ್ತರಕ್ಕೇರಬೇಕಿದೆ. ದೇಶದ ಎಲ್ಲಾ ರಾಜ್ಯಗಳಲ್ಲಿ ಬಿಜೆಪಿಯ ಮುಖ್ಯಮಂತ್ರಿಗಳು ಇರಬೇಕೆಂದು ಅಮಿತ್ ಶಾ ಆಶಯ ವ್ಯಕ್ತ ಪಡಿಸಿದ್ದಾರೆ. ಜೊತೆಗೆ, ತಿಂಗಳಿನ 25ದಿನ ಬೂತ್ ಮಟ್ಟದಲ್ಲಿ ಕೆಲಸ ಮಾಡಿ, ಕಾರ್ಯಕರ್ತರನ್ನು ಒಗ್ಗೂಡಿಸಿ ಎಂದು ಮುಖಂಡರಿಗೆ ಕರೆನೀಡಿದ್ದಾರೆ.
ಕೇರಳ, ತ್ರಿಪುರಾ ಮತ್ತು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಸಂಘ ಪರಿವಾರದ ಮುಖಂಡರು/ಕಾರ್ಯಕರ್ತರ ಮೇಲೆ ದಾಳಿ ನಡೆಯುತ್ತಿದ್ದರೂ, ಬಿಜೆಪಿ ಶಾಂತಿಯುತವಾಗಿ ಪ್ರತಿಭಟಿಸುತ್ತಿದೆ. ಈ ರಾಜ್ಯಗಳಲ್ಲೂ ಬಿಜೆಪಿ ಅರಳುವ ದಿನ ದೂರವಿಲ್ಲ ಎಂದು ಅಮಿತ್ ಶಾ ಸಭೆಯಲ್ಲಿ ಹೇಳಿದರು.
ಶನಿವಾರ ಪೂರ್ವಾಹ್ನ 11.30ಕ್ಕೆ ಆರಂಭವಾದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಅಮಿತ್ ಶಾ, ಪ್ರಧಾನಿ ಮೋದಿ, ಎಲ್ ಕೆ ಆಡ್ವಾಣಿ, ಅರುಣ್ ಜೇಟ್ಲಿ ಸೇರಿದಂತೆ 13 ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರ ಸಚಿವರುಗಳು ಭಾಗವಹಿಸಿದ್ದರು. ರಾಜ್ಯದಿಂದ ಯಡಿಯೂರಪ್ಪ, ಅರವಿಂದ ಲಿಂಬಾವಳಿ ಮುಂತಾದವರು ಭಾಗವಹಿಸಿದ್ದರು.
ಒರಿಸ್ಸಾದಲ್ಲಿ ನವೀನ್ ಪಟ್ನಾಯಕ್ ವಿರುದ್ದದ ಆಡಳಿತ ವಿರೋಧಿ ಅಲೆ ಮತ್ತು ಇತ್ತೀಚಿನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಗಣನೀಯ ಸಾಧನೆ ಮಾಡಿದ ಹಿನ್ನಲೆಯಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿಗೆ ಒರಿಸ್ಸಾವನ್ನು ಆಯ್ಕೆ ಮಾಡಲಾಗಿದೆ. (ಚಿತ್ರ: ಟ್ವಿಟ್ಟರ್)