ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತನ ಅಮಾನುಷ ಹತ್ಯೆ
ಕೋಲ್ಕತಾ, ಜುಲೈ 28: ಪಶ್ಚಿಮ ಬಂಗಾಳದ ಡೈಮಂಡ್ ಹಾರ್ಬರ್ ಪ್ರದೇಶದ ಸಮೀಪ ಶುಕ್ರವಾರ ಬಿಜೆಪಿ ಕಾರ್ಯಕರ್ತನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಮಂದಿರ್ ಬಜಾರ್ ಪ್ರದೇಶದಲ್ಲಿ ರಾತ್ರಿ ಮನೆಗೆ ಮರಳುತ್ತಿದ್ದ ಶಕ್ತಿಪಾದ ಸರ್ದಾರ್ (45) ಅವರ ಮೇಲೆ ಅಪರಿಚಿತ ದುಷ್ಕರ್ಮಿಗಳು ದಾಳಿ ನಡೆಸಿದ್ದರು.
ಇದೇನಿದು? ಚುನಾವಣೆಯೋ, ಅಮಾನವೀಯತೆಯ ಪರಾಕಾಷ್ಠೆಯೋ..?
ರಸ್ತೆಯಲ್ಲಿ ರಕ್ತಸಿಕ್ತರಾಗಿ ಬಿದ್ದಿದ್ದ ಅವರನ್ನು ಆಸ್ಪತ್ರೆಗೆ ಕರೆತರಲಾಯಿತು. ಆದರೆ, ಅವರು ಆಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.
'ರಾಜಕೀಯ ಕಾರಣಗಳಿಂದಲೇ ಈ ಹತ್ಯೆ ನಡೆದಿದೆ. ಅವರು ಅಂಗಡಿ ಮುಚ್ಚಿ ಮನೆಗೆ ಮರಳುವಾಗ ಹರಿತವಾದ ಆಯುಧದಿಂದ ಇರಿದು ಕೊಲ್ಲಲಾಗಿದೆ.
ಶಕ್ತಿಪಾದ ಅವರು ತಮ್ಮ ಪ್ರದೇಶದಲ್ಲಿ ಬಿಜೆಪಿ ಕಾರ್ಯಕರ್ತನಾಗಿ ಸಕ್ರಿಯರಾಗಿದ್ದರು. ಇತ್ತೀಚೆಗೆ ನಡೆದ ಪಂಚಾಯತ್ ರಾಜ್ ಚುನಾವಣೆಯಲ್ಲಿಯೂ ಪ್ರಮುಖವಾಗಿ ತೊಡಗಿಸಿಕೊಂಡಿದ್ದರು.
ಈ ಹತ್ಯೆಯು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರು ಸುರಕ್ಷಿತರಾಗಿಲ್ಲ ಎನ್ನುವುದಕ್ಕೆ ಸ್ಪಷ್ಟ ನಿದರ್ಶನ' ಎಂದು ಬಿಜೆಪಿ ಕಾರ್ಯಕರ್ತರೊಬ್ಬರು ಹೇಳಿದ್ದಾರೆ.
ಈ ಹತ್ಯೆಗೆ ತೃಣಮೂಲ ಕಾಂಗ್ರೆಸ್ ಕಾರಣ ಎಂದು ಆರೋಪಿಸಿರುವ ಸ್ಥಳೀಯ ಬಿಜೆಪಿ, ಪೊಲೀಸರಿಗೆ ದೂರು ನೀಡಿದೆ.
ಶಕ್ತಿಪಾದನ ಕುಟುಂಬದ ಸದಸ್ಯರೂ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ವಿರುದ್ಧ ಆರೋಪ ಮಾಡಿದ್ದಾರೆ.