2047ರ ತನಕ ಬಿಜೆಪಿಗೆ ಅಧಿಕಾರ ಎಂದು ರಾಮ್ ಮಾಧವ್ ಹೇಳಿದ್ದೇಕೆ?
ಅಗರ್ತಲ, ಜೂನ್ 09: 2047ರವರೆಗೂ ಕೇಂದ್ರದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ)ವೇ ಅಧಿಕಾರದಲ್ಲಿರಲಿದೆ, ಉತ್ತಮ ಆಡಳಿತ ನೀಡಲಿದೆ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ವಿಶ್ವಾಸ ವ್ಯಕ್ತಪಡಿಸಿದ್ದು ತಿಳಿದಿರಬಹುದು. ಈ ರೀತಿ ಹೇಳಿಕೆ ನೀಡಲು ಕಾರಣವೇನು? ಎಂಬುದರ ಬಗ್ಗೆ ಚರ್ಚೆಯಾಗುತ್ತಿದೆ.
'ಕಾಂಗ್ರೆಸ್ಸಿನ ಆಡಳಿತ ಅವಧಿಯನ್ನು ಮೋದಿ ನೇತೃತ್ವದ ಬಿಜೆಪಿ ಮುರಿಯಲಿದೆ' ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಹೇಳಿದ್ದಾರೆ. ತ್ರಿಪುರಾದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡುತ್ತಾ, ಬಿಜೆಪಿ ಗೆಲ್ಲಲು ಈ ಬಾರಿ ಕಾರಣವಾದ ಅಂಶವೇ ಪಕ್ಷವನ್ನು ಮುನ್ನಡೆಸಲಿದೆ.
ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲು ಬಾಲಾಕೋಟ್ ದಾಳಿ ಸೇರಿದಂತೆ ಮಿಲಿಟರಿ ಬಲವನ್ನು ಬಳಕೆ ಮಾಡಲಿಲ್ಲ. ನಮ್ಮ ಧ್ಯೇಯ ಉದ್ದೇಶ ಇದ್ದಿದ್ದು, ಸಾರ್ವಜನಿಕರಲ್ಲಿ ರಾಷ್ಟ್ರೀಯತೆ, ದೇಶಪ್ರೇಮದ ಜಾಗೃತಿ.
ರಾಷ್ಟ್ರೀಯತೆ ಎಂಬುದು ಬಿಜೆಪಿಯ ಡಿಎನ್ಎಯಲ್ಲೇ ಇದೆ. ಇದು ಬಿಜೆಪಿಯ ಅಸ್ಮಿತೆಯಾಗಿದೆ. ಚುನಾವಣೆ ಇರಲಿ, ಇಲ್ಲದಿರಲಿ, ಬಿಜೆಪಿಯೆಂದರೆ ರಾಷ್ಟ್ರೀಯತೆ, ರಾಷ್ಟ್ರೀಯತೆ ಎಂದರೆ ಬಿಜೆಪಿ ಇದೆ ಮುಂದಿನ ದಿನಗಳಲ್ಲಿ ದೇಶ ಹಾಗೂ ಪಕ್ಷದ ಬೆಳವಣಿಗೆಗೆ ಕಾರಣವಾಗಲಿದೆ ಎಂದಿದ್ದಾರೆ.
ನವಭಾರತ ನಿರ್ಮಿಸಲಿರುವ ಪ್ರಧಾನಿ ಮೋದಿಯವರ ಮೇಲೆ ವಿಶ್ವಾಸವಿಟ್ಟು, ಮತದಾರರು ಆದೇಶ ನೀಡಿದ್ದಾರೆ, ಅವರೆಲ್ಲರಿಗೂ ನಮ್ಮ ಅಭಿನಂದನೆ ಎಂದಿದ್ದಾರೆ. 2022ರ ವೇಳೆ ನಾವು ನಿರ್ಮಿಸುವ ನವಭಾರತದಲ್ಲಿ ಎಲ್ಲರಿಗೂ ಉದ್ಯೋಗ ಹಾಗೂ ಎಲ್ಲರಿಗೂ ವಸತಿ ದೊರಕಲಿದೆ, ಮುಂದಿನ ಬಜೆಟ್ ನಲ್ಲೂ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗಿದೆ ಎಂದರು. ಸ್ವತಂತ್ರ ಭಾರತದ ಚರಿತ್ರೆಯಲ್ಲೇ 1950ರಿಂದ 1977ರವರೆಗೆ ನಿರಂತರವಾಗಿ ಆಡಳಿತ ನಡೆಸುವ ಮೂಲಕ ಕಾಂಗ್ರೆಸ್ ಬರೆದಿರುವ ದಾಖಲೆಯನ್ನು ಮೋದಿಯವರು ಮುರಿಯುತ್ತಾರೆ ಎಂದು ರಾಮ್ ಮಾಧವ್ ಹೇಳಿದರು.