ಉಪಚುನಾವಣೆ ಫಲಿತಾಂಶ: ಎಂಥ ವಿರೋಧಾಭಾಸ!
ಲೋಕಸಭಾ ಚುನಾವಣೆಯಲ್ಲಿ ಕಂಡುಬಂದ ಮೋದಿ ಅಲೆ ಮಾಯವಾಯಿತೆ? ಕೇಂದ್ರ ಸರ್ಕಾರದ ನೂರು ದಿನದ ಕಾರ್ಯಕ್ರಮಗಳು ಜನರಿಗೆ ತೃಪ್ತಿ ನೀಡಿಲ್ಲವೇ? ರಾಹುಲ್ ಗಾಂಧಿ ಪ್ರಚಾರದಲ್ಲಿ ವಿಶೇಷವಾಗಿ ತೊಡಗಿಕೊಳ್ಳದಿದ್ದರೂ ಕಾಂಗ್ರೆಸ್ ಸಾಧನೆಗೆ ಕಾರಣಗಳೇನು? ಎಂಬ ಹಲವಾರು ಪ್ರಶ್ನೆಗಳು ನಿಮ್ಮನ್ನು ಕಾಡುತ್ತಿದ್ದರೆ ಈ ಸ್ಟೋರಿ ಓದಿ...
ಒಂಭತ್ತು ರಾಜ್ಯಗಳ ಉಪಚುನಾವಣೆ ಫಲಿತಾಂಶ ಬಿಜೆಪಿಗೆ ನಿರಾಸೆ ತಂದಿದೆ. ಅದರಲ್ಲೂ ಗುಜರಾತ್, ರಾಜಸ್ಥಾನ ಮತ್ತು ಉತ್ತರ ಪ್ರದೇಶದಲ್ಲಿ ಬಿಜೆಪಿ ಸಾಕಷ್ಟು ಹಿನ್ನಡೆ ಅನುಭವಿಸಿರುವುದು ಸ್ಪಷ್ಟವಾಗಿದ್ದು ಪಕ್ಷ ಚಿಂತಿಸಬೇಕಾದ ಅಗತ್ಯ ಎದುರಾಗಿದೆ.(ಉಪಚುನಾವಣೆ: ಬಿಜೆಪಿ ಸೋಲಿಗೆ ಕಾರಣಗಳೇನು?)
ಪ್ರಮುಖ ಮೂರು ರಾಜ್ಯಗಳಲ್ಲಿ ಬಿಜೆಪಿ ಹೊಂದಿದ್ದ 23 ಸ್ಥಾನಗಳಲ್ಲಿ ಈ ಬಾರಿ ಉಳಿಸಿಕೊಳ್ಳಲು ಸಾಧ್ಯವಾಗಿದ್ದು 15 ಸ್ಥಾನ ಮಾತ್ರ. ಇದಕ್ಕೆ ಪೂರಕವೆಂಬಂತೆ ನರೇಂದ್ರ ಮೋದಿ ಇಲ್ಲದೇ ಬಿಜೆಪಿಗೇ ಶಕ್ತಿಯೇ ಇಲ್ಲವೆ? ಎಂಬ ಗಂಭೀರ ಪ್ರಶ್ನೆ ಮೂಡಲು ಕಾರಣವಾಗಿದೆ.(ಯಾರಿಗೆ ಲಾಭ? ಯಾರಿಗೆ ನಷ್ಟ? ಲೆಕ್ಕಾಚಾರ ಶುರು)
ಇನ್ನೊಂದು ಬಗೆಯಲ್ಲಿ ಹೇಳುವುದಾದರೆ ಕಾಂಗ್ರೆಸ್ ಉತ್ತಮ ಸಾಧನೆ ಮಾಡಿದೆ. ರಾಜಸ್ಥಾನ ಮತ್ತು ಮೋದಿ ತವರು ಗುಜರಾತ್ನಲ್ಲಿ ಬಿಜೆಪಿಯಿಂದ 6 ಸ್ಥಾನ ಕಸಿದುಕೊಂಡಿದೆ. ಕಳೆದ ಲೋಕಸಭಾ ಚುನಾವಣಾ ಸೋಲಿನಿಂದ ಕಂಗಟ್ಟಿದ್ದ ಪಕ್ಷ ಪುಟಿದು ನಿಂತಿದೆ. ಈ ಎಲ್ಲ ಬದಲಾವಣೆಗಳಿಗೆ ಕಾರಣಗಳೇನು ಎಂಬುದರ ಮೇಲಿನ ಒಂದು ಸಣ್ಣ ವಿಮರ್ಶಾತ್ಮಕ ನೋಟ ಇಲ್ಲಿದೆ...
ರಾಹುಲ್ ಪ್ರಚಾರ ಮಾಡದಿದ್ದರೂ ಕಾಂಗ್ರೆಸ್ ಸಾಧನೆ
ಕಳೆದ ಲೋಕಸಭಾ ಚುನಾವಣೆಯಲ್ಲಿ ಕೇಳಿಬಂದ ಆರೋಪ-ಪ್ರತ್ಯಾರೋಪಗಳ ಗಲಾಟೆ ಈ ಬಾರಿ ಇರಲಿಲ್ಲ. ಕಾಂಗ್ರಸ್ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಪ್ರಚಾರ ಕಣದಿಂದ ದೂರವೇ ಉಳಿದಿದ್ದರು. ಇತ್ತ ನರೇಂದ್ರ ಮೋದಿ, ಅಮಿತ್ ಷಾ ಸಹ ಜನರ ಬಳಿಗೆ ತೆರಳಲಿಲ್ಲ. ಆದರೆ ಫಲಿತಾಂಶ ಕಾಂಗ್ರೆಸ್ ಪರವಾಗಿ ಬಂದಿತ್ತು.
ಮೋದಿ, ಷಾ ಇಲ್ಲದೇ ಸೊರಗಿದ ಬಿಜೆಪಿ
ನರೇಂದ್ರ ಮೋದಿ ಮತ್ತು ಅಮಿತ್ ಷಾ ಪ್ರಚಾರ ಕಣದಿಂದ ದೂರ ಉಳಿದಿದ್ದೇ ಬಿಜೆಪಿಗೆ ಮುಳುವಾಯಿತೆ? ಯಾವುದೇ ವ್ಯಕ್ತಿಗಳನ್ನು ನಂಬಿಕೊಳ್ಳದೇ, ತಳಮಟ್ಟದಿಂದ ಪಕ್ಷ ಸಂಘಟನೆ ಮಾಡಬೇಕಾದ್ದು ಮುಖಂಡರ ಕರ್ತವ್ಯ ಎಂಬ ಸ್ಪಷ್ಟ ಸಂದೇಶವನ್ನು ಜನರು ಸ್ಪಷ್ಟವಾಗಿ ರವಾನಿಸಿದ್ದಾರೆ.
ಬಿಜೆಪಿಗಿದು ಎರಡನೇ ಹೊಡೆತ
ತಿಂಗಳ ಹಿಂದೆ ಬಿಹಾರದಲ್ಲಿ ಲಾಲು ಪ್ರಸಾದ್ ಯಾದವ್ ಮತ್ತು ನೀತಿಶ್ ಕುಮಾರ್ ಹೊಂದಾಣಿಕೆಯ ಮುಂದೆ ಬಿಜೆಪಿ ಮಂಡಿಯೂರಿತ್ತು. ಕರ್ನಾಟಕದ ಉಪಚುನಾವಣೆ ಫಲಿತಾಂಶದಲ್ಲೂ ದಕ್ಕಿದ್ದು ಅಷ್ಟಕಷ್ಟೇ, ಈಗ ಗುಜರಾತ್, ರಾಜಸ್ಥಾನದಲ್ಲೂ ಕಮಲಕ್ಕೆ ಬಲವಾದ ಹೊಡೆತ ಬಿದ್ದಿದೆ.
ಯೋಗಿ ಆದಿತ್ಯನಾಥ್ ಬಾಯಿಗಿಲ್ಲ ಬೀಗ
ಯೋಗಿ ಆದಿತ್ಯನಾಥನ ಕಠೋರ ಶಬ್ದಗಳು, ಉತ್ತರ ಪ್ರದೇಶ ಬಿಜೆಪಿ ನಾಯಕರ ಅರ್ಥವಿಲ್ಲದ ಹೇಳಿಕೆಗಳೇ ವಿಜೃಂಭಿಸಿದವು. ನರೇಂದ್ರ ಮೋದಿ ಸರ್ಕಾರದ ಯೋಜನೆಗಳು ಅಥವಾ ಕಾರ್ಯಕ್ರಮಗಳು ಈ ಗಲಾಟೆಗಳ ನಡುವೆ ಜನರ ಕಿವಿಗೆ ಬೀಳಲಿಲ್ಲ. ಕಾಂಗ್ರೆಸ್ ಇಲ್ಲಿ ತನ್ನ ರಣತಂತ್ರವನ್ನು ಚೆನ್ನಾಗಿಯೇ ಬಳಸಿಕೊಂಡಿತು.
'ಗಾಂಧಿ'ಗಳ ಹೊರತಾದ ಕಾಂಗ್ರೆಸ್
ಉಪಚುನಾವಣೆ ಫಲಿತಾಂಶ ಕಾಂಗ್ರೆಸ್ನಲ್ಲಿ ಹೊಸ ಚಿಂತನೆಗೆ ಕಾರಣವಾಗಿದೆ. ಗಾಂಧಿಗಳ ಹೊರತಾದ ಕಾಂಗ್ರೆನ್ನು ಜನ ಕೈ ಹಿಡಿಯುತ್ತಾರೆ ಎಂಬ ಅಭಿಪ್ರಾಯ ಮೂಡಿದ್ದರೆ ತಪ್ಪಲ್ಲ. ಗುಜರಾತ್ ಮತ್ತು ರಾಜಸ್ಥಾನದ ಫಲಿತಾಂಶಗಳೇ ಇದಕ್ಕೆ ಸಾಕ್ಷಿ ಎನ್ನಬಹುದು.
ಕಾಂಗ್ರೆಸ್ಗೆ ನಾಯಕತ್ವ ಪ್ರಶ್ನೆ
ಉಪಚುನಾವಣಾ ಫಲಿತಾಂಶ ಕಾಂಗ್ರೆಸ್ ಪರವಾಗಿದ್ದರೂ ರಾಹುಲ್ ಗಾಂಧಿ ನಾಯಕತ್ವ ಕುರಿತು ಪ್ರಶ್ನೆ ಎದುರಾಗಿದೆ. ಕಾಂಗ್ರಸ್ ಮುನ್ನಡೆಸಬೇಕಾದವರು ಉಪಚುನಾವಣಾ ಪ್ರಚಾರ ಕಣದಿಂದ ದೂರ ಉಳಿದಿದ್ದು ಯಾಕೆ? ಎಂಬ ಪ್ರಶ್ನೆಯೂ ಮೂಡುತ್ತದೆ. ಆದರೆ ಪಕ್ಷದ ನೇತೃತ್ವವಹಿಸುವ ನಾಯಕನ ಅಗತ್ಯ ಖಂಡಿತವಾಗಿಯೂ ಕಾಂಗ್ರೆಸ್ಗಿದೆ.
ಯುಪಿ ಮೇಲೆ ರಾಹುಲ್ ಆಸಕ್ತಿ ಕಳೆದುಕೊಂಡರೆ?
ಬಿಜೆಪಿಗೆ ಇದು ಅಸ್ತಿತ್ವದ ಪ್ರಶ್ನೆ ಅಲ್ಲವಾದ್ದರಿಂದ ಮೋದಿ ಮತ್ತು ಅಮಿತ್ ಷಾ ಪ್ರಚಾರ ಕಣಕ್ಕೆ ಧುಮುಕಲಿಲ್ಲ ಎನ್ನಬಹುದು. ಆದರೆ ಕಾಂಗ್ರೆಸ್ ಪರಿಸ್ಥಿತಿ ಹಾಗಿರಲಿಲ್ಲ ಆದರೂ ರಾಹುಲ್ ಗಾಂಧಿ ಆಸಕ್ತಿ ತೋರಲಿಲ್ಲ. 2009, 2012 ರ ಉತ್ತರ ಪ್ರದೇಶ ಉಪಚುನಾವಣೆ ಮತ್ತು ವಿಧಾನಸಭೇ ಚುನಾವಣೆಯಲ್ಲಿ ರಾಹುಲ್ ಪ್ರಚಾರ ಮಾಡಿದ್ದರು. ಅಲ್ಲದೇ ಕಳೇದ ಲೋಕಸಭಾ ಚುನಾವಣೆಯಲ್ಲಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡಿದ್ದರು. ಆದರೆ ಪಕ್ಷ ಮುಗ್ಗರಿಸಿತ್ತು. ಹಾಗಾಗಿ ಈ ಬಾರಿ ಆಸಕ್ತಿ ಕಳೆದುಕೊಂಡರು ಎಂಬ ಮಾತು ಇದೆ.
ಗುಜರಾತ್ ಕತೆ ಏನು?
ಮೋದಿ ತವರಿಗೆ ರಾಹುಲ್ ಭೇಟಿ ನೀಡಿದ್ದು ಮತ್ತು ಪ್ರಚಾರ ಮಾಡಿದ್ದು ಅಷ್ಟಕಷ್ಟೇ. ಲೋಕಸಭಾ ಚುನಾವಣೆ ವೇಳೆ ಮೋದಿ ಮೇಲೆ ವಾಗ್ದಾಳಿ ನಡೆಸಿ ಹೋದ ಸೋನಿಯಾ ಗಾಂಧಿ ಮತ್ತೆ ಅತ್ತ ಮುಖ ಹಾಕಿಲ್ಲ. ಆದರೂ ಕಾಂಗ್ರೆಸ್ ಉತ್ತಮ ಸಾಧನೆ ಮಾಡಿದೆ. ಗಾಂಧಿಗಳ ಹೊರತಾಗಿಯೂ ಪಕ್ಷವಿದೆ ಎಂಬ ಸಂದೇಶ ಜನರಿಂದ ಬಂದಿದೆ. ರಾಜಸ್ಥಾನದಲ್ಲೂ ಇಂಥಹದೇ ವರ್ತನೆ ಕಾಂಗ್ರೆಸ್ ಅಧಿನಾಯಕರಿಂದ ಕಂಡುಬಂದಿದ್ದರೂ ಜನ ಬದಲಾವಣೇ ಸೂಚಿಸಿದ್ದಾರೆ.
ಸಚಿನ್ ಪೈಲೆಟ್ ಬ್ಯಾಟಿಂಗ್
ರಾಜಸ್ಥಾನದಲ್ಲಿ ಕಾಂಗ್ರೆಸ್ ಮಾಡಿರುವ ಸಾಧನೆ ಶ್ರೇಯ ಸ್ಥಳೀಯ ನಾಯಕ ಸಚಿನ್ ಪೈಲೆಟ್ ಗೆ ಸಲ್ಲುತ್ತದೆ. ಸ್ಥಳೀಯ ಸಮಸ್ಯೆ ಇಟ್ಟುಕೊಂಡು ಕಾಂಗ್ರೆಸ್ ಮತ್ತೊಮ್ಮೆ ಸ್ಪರ್ಧೆ ಒಡ್ಡುವಂತೆ ಪಕ್ಷ ಸಂಘಟಿಸಿದ್ದು ಯುವ ನಾಯಕ ಸಚಿನ್ ಪೈಲೆಟ್ ಎಂಬುದರಲ್ಲಿ ಅನುಮಾನವಿಲ್ಲ.