ಮಣಿಪುರದಲ್ಲೂ ಗದ್ದುಗೆ ಹಿಡಿಯಲಿದೆ ಕಮಲ ಪಕ್ಷ
ಇಂಫಾಲ್, ಮಾರ್ಚ್ 13: ಮಣಿಪುರದಲ್ಲೂ ಬಿಜೆಪಿ ಅಧಿಕಾರ ಹಿಡಿಯಲಿದೆ. ನಾಗಾ ಪೀಪಲ್ ಫ್ರಂಟ್, ನ್ಯಾಷನಲ್ ಪೀಪಲ್ಸ್ ಪಾರ್ಟಿ ಹಾಗೂ ಲೋಕ್ ಜನ್ ಶಕ್ತಿ ಪಾರ್ಟಿ ಮತ್ತು ಪಕ್ಷ ಇನ್ನೂ ಬಹಿರಂಗ ಪಡಿಸದ ಇನ್ನೊಬ್ಬ ಶಾಸಕರ ಬೆಂಬಲದೊಂದಿಗೆ ಬಿಜೆಪಿ ಮಣಿಪುರದಲ್ಲಿ ಅಧಿಕಾರ ಹಿಡಿಯಲು ಮುಂದಾಗಿದೆ.
ಪ್ರಾದೇಶಿಕ ಪಕ್ಷಗಳ ಪ್ರತಿನಿಧಿಗಳ ಜತೆಗೆ ಭಾನುವಾರ ಸಂಜೆ ಮಣಿಪುರ ರಾಜ್ಯಪಾಲೆ ನಜ್ಮಾ ಹೆಪ್ತುಲ್ಲಾ ಅವರನ್ನು ಭೇಟಿ ಮಾಡಿದ ಬಿಜೆಪಿ ನಾಯಕರು, 60 ಸದಸ್ಯ ಬಲದ ವಿಧಾನಸಭೆಯಲ್ಲಿ ಅಗತ್ಯವಿರುವ 31 ಬೆಂಬಲಿತ ಶಾಸಕರ ಪಟ್ಟಿಯನ್ನು ನೀಡಿದ್ದಾರೆ.
ಭಾನುವಾರ ಬೆಳಗ್ಗೆ ಪಕ್ಷೇತರ ಶಾಸಕ ಅಶಾದ್ ಉದ್ದೀನ್ ನ ಅಪಹರಣ ಸುದ್ದಿಯೊಂದಿಗೆ ನಾಟಕೀಯ ಬೆಳವಣಿಗೆ ಆರಂಭ ಪಡೆದಿತ್ತು. ಆ ಶಾಸಕ ಬೆಂಬಲ ಕಾಂಗ್ರೆಸ್ ಪರ ಎಂದು ಕೈ ಪಕ್ಷ ಹೇಳಿಕೊಂಡಿತು.[ಗೋವಾದ ಮುಖ್ಯಮಂತ್ರಿಯಾಗಿ ಮನೋಹರ್ ಪರಿಕ್ಕರ್ ನೇಮಕ]
ಇನ್ನು ಸಂಜೆ ವೇಳೆಗೆ ಅಂಡ್ರೋ ಕ್ಷೇತ್ರದಿಂದ ಆಯ್ಕೆಯಾದ ಕಾಂಗ್ರೆಸ್ ನ ಟಿ.ಶಿವಕುಮಾರ್ ಬಿಜೆಪಿ ಮುಖಂಡ ಹಿಮಂತ ಬಿಸ್ವಾ ಶರ್ಮಾ ಜತೆಗೆ ರಾಜಭವನದಲ್ಲಿ ಕಾಣಿಸಿಕೊಂಡು, ತನ್ನ ಬೆಂಬಲ ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ ಎಂದು ತಿಳಿಸಿದರು.
ಇದೇ ವೇಳೆಗೆ ಕಾಂಗ್ರೆಸ್ ಬಣ ಮತ್ತಷ್ಟು ದುರ್ಬಲವಾಗಿದ್ದು ಟಿಎಂಸಿ ಶಾಸಕ ಟಿ.ರೊಬಿಂದ್ರೋ ಸಿಂಗ್ ಬಿಜೆಪಿ ಬೆಂಬಲಕ್ಕೆ ಜಿಗಿದಾಗ. ಈ ಶಾಸಕರ ಬೆಂಬಲ ತಮಗೆ ದೊರೆಯುತ್ತದೆ ಎಂದು ಕಾಂಗ್ರೆಸ್ ಮುಖಂಡರು ಬಲವಾಗಿ ನಂಬಿದ್ದರು.
"ನಮಗೆ ಸರಕಾರ ರಚನೆಗೆ ಅಗತ್ಯವಿರುವ 31 ಶಾಸಕರ ಬೆಂಬಲವಿದೆ. ಮೂವತ್ತೊಂದನೇ ಶಾಸಕರ ಬೆಂಬಲದ ಪತ್ರ ಶೀಘ್ರದಲ್ಲೇ ರಾಜ್ಯಪಾಲರನ್ನು ತಲುಪತ್ತದೆ" ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರಾದೇಶಿಕ ಪಕ್ಷಗಳ ಪ್ರತಿನಿಧಿಗಳು ಹಾಜರಿದ್ದರು.[ಜ್ಯೋತಿಷ್ಯ: ಗುರುಬಲದಲ್ಲಿ ಇನ್ನಷ್ಟು ಎತ್ತರಕ್ಕೆ ಏರಿದ ನರೇಂದ್ರ ಮೋದಿ]
ಮಣಿಪುರದಲ್ಲಿ ಬಿಜೆಪಿ 21 ಸ್ಥಾನ ಗಳಿಸಿದೆ. ಇದೀಗ ಎನ ಪಿಎಫ್ ನ 4, ಎಲ್ ಜೆಪಿ ಹಾಗೂ ಟಿಎಂಸಿಯ ತಲಾ ಒಂದು, ಎನ್ ಪಿಪಿಯ ನಾಲ್ಕು ಸದಸ್ಯರ ಬೆಂಬಲದ ಜತೆಗೆ ಮ್ಯಾಜಿಕ್ ನಂಬರ್ ತಲುಪಲಿದೆ.