ಮಣಿಪುರ ಮತ್ತೆ ಬಿಜೆಪಿ ವಶಕ್ಕೆ, ಅಮಿತ್ ಶಾ ಸಂಧಾನ ಸಫಲ
ಇಂಪಾಲ, ಜೂನ್ 24: ಅಲ್ಪಮತಕ್ಕೆ ಕುಸಿದಿದ್ದ ಬಿರೇನ್ ಸಿಂಗ್ ನೇತೃತ್ವದ ಸರ್ಕಾರವನ್ನು ಭಾರತೀಯ ಜನತಾ ಪಕ್ಷ (ಬಿಜೆಪಿ) ಕೊನೆಗೂ ಉಳಿಸಿಕೊಂಡಿದೆ.
ರಿವರ್ಸ್ ಆಪರೇಷನ್ ಕಮಲ ಮೂಲಕ ಅಧಿಕಾರ ಸ್ಥಾಪನೆಯತ್ತ ಹೆಜ್ಜೆ ಇಟ್ಟಿದ್ದ ಕಾಂಗ್ರೆಸ್ಸಿಗೆ ಅಮಿತ್ ಶಾ ಅಡ್ಡ ನಿಂತಿದ್ದಾರೆ. ಬಿಜೆಪಿ ನೇತೃತ್ವದ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದಿದ್ದ ನ್ಯಾಷನಲ್ ಪೀಪಲ್ಸ್ ಪಾರ್ಟಿಯ ಮನ ಓಲೈಸುವಲ್ಲಿ ಗೃಹ ಸಚಿವ ಅಮಿತ್ ಶಾ ಸಫಲರಾಗಿದ್ದಾರೆ.
ಈಶಾನ್ಯ ಎನ್ಡಿಎ ಮೈತ್ರಿಕೂಟದ ಟ್ರಬಲ್ ಶೂಟರ್ ಆಗಿರುವ ಹಿಮಂತ ಶರ್ಮ ಅವರು ಎನ್ ಪಿಪಿಯ ನಾಲ್ವರು ಶಾಸಕರು, ಮೂವರು ರೆಬೆಲ್ ಬಿಜೆಪಿ ಶಾಸಕರ ಜೊತೆ ಮಾತುಕತೆ ನಡೆಸಿ ನಂತರ ಅಮಿತ್ ಶಾ ಜೊತೆ ಸಭೆ ನಡೆಸಿ ಸರ್ಕಾರ ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ.
ಅಮಿತ್ ಶಾ ಅವರ ಜೊತೆ ಸಭೆ ನಡೆಸಿದ ಬಳಿಕ ಎನ್ ಪಿಪಿಯ ಸಂಗ್ಮಾ ಕೊನ್ರಾಡ್, ಡಿಸಿಎಂ ವೈ ಜಾಯ್ ಕುಮಾರ್ ಸಿಂಗ್ ಅವರು ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
2017ರ ವಿಧಾನಸಭೆ ಚುನಾವಣೆಯಲ್ಲಿ 60 ಸ್ಥಾನಗಳ ಪೈಕಿ ಕಾಂಗ್ರೆಸ್ ಪಕ್ಷ 28 ಸ್ಥಾನ ಪಡೆದು ಅತಿ ಹೆಚ್ಚು ಸ್ಥಾನ ಗಳಿಸಿದ ಪಕ್ಷ ಎನಿಸಿಕೊಂಡಿತ್ತು. ಬಿಜೆಪಿ 21 ಸ್ಥಾನ ಮಾತ್ರ ಗಳಿಸಲು ಸಾಧ್ಯವಾಗಿತ್ತು.
ಆದರೆ, ನ್ಯಾಷನಲ್ ಪೀಪಲ್ಸ್ ಪಾರ್ಟಿ(ಎನ್ ಪಿಪಿ), ನಾಗಾ ಪೀಪಲ್ಸ್ ಫ್ರಂಟ್ (ಎನ್ ಪಿಎಫ್) ಹಾಗೂ ಲೋಕ್ ಜನಸಕ್ತಿ ಪಾರ್ಟಿ (ಎಲ್ ಜೆಪಿ) ಬೆಂಬಲದಿಂದ ಸಮ್ಮಿಶ್ರ ಸರ್ಕಾರವನ್ನು ಬಿಜೆಪಿಯ ಸ್ಥಾಪಿಸಿತ್ತು. ಬಿರೇನ್ ಸಿಂಗ್ ಮುಖ್ಯಮಂತ್ರಿಯಾದರು. ಒಬ್ಬ ಪಕ್ಷೇತರ ಹಾಗೂ ಟಿಎಂಸಿ ಶಾಸಕ ಕೂಡಾ ಬಿಜೆಪಿ ಬೆಂಬಲಕ್ಕೆ ನಿಂತಿದ್ದರು.
ಆದರೆ, ಇತ್ತೀಚೆಗೆ ಎನ್ ಪಿಪಿ ನಾಲ್ವರು ಶಾಸಕರು ಬೆಂಬಲ ಹಿಂಪಡೆದು, ಕಾಂಗ್ರೆಸ್ ಜೊತೆಗೂಡಿ 'ಸೆಕ್ಯುಲರ್ ಪ್ರೋಗ್ರೆಸೀವ್ ಫ್ರಂಟ್' ಎಂಬ ಹೊಸ ಮೈತ್ರಿಕೂಟ ರಚನೆಗೆ ಕಾರಣರಾಗಿದ್ದರು. ತೃಣಮೂಲ ಕಾಂಗ್ರೆಸ್ನ ಒಬ್ಬರು, ಒಬ್ಬರು ಪಕ್ಷೇತರ ಶಾಸಕರು ಈ ಮೈತ್ರಿಕೂಟ ಬೆಂಬಲಿಸಿದ್ದರು.
60 ಸದಸ್ಯ ಬಲದ ಮಣಿಪುರ ವಿಧಾನಸಭೆಯಲ್ಲಿ ಬಿಜೆಪಿ 21, ಕಾಂಗ್ರೆಸ್ 28, ಎನ್ಪಿಎಫ್ 4, 1 ಟಿಎಂಸಿ, ಒಬ್ಬರು ಪಕ್ಷೇತರ ಶಾಸಕರು ಇದ್ದಾರೆ. ಕಾಂಗ್ರೆಸ್ಗೆ ಇತರ ಪಕ್ಷಗಳ ಜೊತೆ ಸೇರಿ ಮೈತ್ರಿಕೂಟ ಮಾಡಿಕೊಂಡಿದ್ದು ಬಿಜೆಪಿಗೆ ಸಂಕಷ್ಟ ತಂದಿತ್ತು.