'ನಕ್ಸಲವಾದವನ್ನು ಬೆಂಬಲಿಸುವವರಿಂದ ಛತ್ತೀಸ್ ಘಡ ಉದ್ಧಾರವಾಗುವುದಿಲ್ಲ'
ರಾಯ್ ಪುರ (ಛತ್ತೀಸ್ ಘಡ), ನವೆಂಬರ್ 10 : "ಯಾವ ಪಕ್ಷಕ್ಕೆ ನಕ್ಸಲವಾದದಲ್ಲಿ ಕ್ರಾಂತಿ ಕಾಣಿಸುತ್ತದೆಯೋ ಅಂಥ ಪಕ್ಷ ಛತ್ತೀಸ್ ಘಡದ ಅಭಿವೃದ್ಧಿಯನ್ನು ಮಾಡಲು ಸಾಧ್ಯವಿಲ್ಲ" ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು 'ನಗರ ನಕ್ಸಲ'ರನ್ನು ಬೆಂಬಲಿಸುತ್ತಿರುವ ಕಾಂಗ್ರೆಸ್ ಪಕ್ಷವನ್ನು ಜರಿದಿದ್ದಾರೆ.
ಛತ್ತೀಸ್ ಘಡದ ರಾಯ್ ಪುರದಲ್ಲಿ ಬಿಜೆಪಿಯ ಚುನಾವಣಾ ಪ್ರಣಾಳಿಕೆಯನ್ನು ಶನಿವಾರ ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಛತ್ತೀಸ್ ಘಡದ ಮುಖ್ಯಮಂತ್ರಿ ರಮಣ್ ಸಿಂಗ್ ಮುಂತಾದವರಿದ್ದರು.
3 ರಾಜ್ಯಗಳ ಚುನಾವಣೆ: ರಾಜಸ್ಥಾನದಲ್ಲಿ ಕಾಂಗ್ರೆಸ್ ಪಾರುಪತ್ಯ Infographics
ಛತ್ತೀಸ್ ಘಡದಲ್ಲಿ ನವೆಂಬರ್ 12, ಸೋಮವಾರದಂದು ಒಂದೇ ಹಂತದಲ್ಲಿ ವಿಧಾನಸಭೆಗೆ ಮತದಾನ ನಡೆಯುತ್ತಿದ್ದು, ಡಿಸೆಂಬರ್ 11ರಂದು ಫಲಿತಾಂಶ ಹೊರಬೀಳಲಿದೆ. 90 ಸೀಟುಗಳಿರುವ ವಿಧಾನಸಭೆಯಲ್ಲಿ ಬಹುಮತ ಗಳಿಸಲು 46 ಸೀಟುಗಳ ಅಗತ್ಯವಿದೆ.
ಕಳೆದ 15 ವರ್ಷಗಳಲ್ಲಿ ಛತ್ತೀಸ್ ಘಡದ ಮುಖ್ಯಮಂತ್ರಿ ರಮಣ ಸಿಂಗ್ ಅವರು ಇಡೀ ರಾಜ್ಯದ ರೂಪುರೇಷೆಗಳನ್ನೇ ಬದಲಿಸಿದ್ದಾರೆ, ನಕ್ಸಲೀಯರನ್ನು ದಮನ ಮಾಡುವಲ್ಲಿ ಅವರು ಬಹುತೇಕ ಯಶಸ್ವಿಯಾಗಿದ್ದಾರೆ ಎಂದು ರಮಣ ಸಿಂಗ್ ಮೇಲೆ ಅಮಿತ್ ಶಾ ಅವರು ಪ್ರಶಂಸೆಯ ಸುರಿಮಳೆಗರೆದರು.
ಯೋಗಿ ಆದಿತ್ಯನಾಥ್ ಪ್ರಚಾರ : ಬಿಜೆಪಿ ಪರವಾಗಿ ಸ್ಟಾರ್ ಕ್ಯಾಂಪೇನರ್ ಆಗಿ ಪ್ರಚಾರ ಮಾಡುತ್ತಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕೂಡ ಛತ್ತೀಸ್ ಘಡದ ಲೋಮ್ರಿಯಲ್ಲಿ ರಮಣ ಸಿಂಗ್ ಪರ ಪ್ರಚಾರ ಮಾಡಿ, ರಾಷ್ಟ್ರದ ಭದ್ರತೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂದು ಕಾಂಗ್ರೆಸ್ಸನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಮೂರು ದಿನದಲ್ಲಿ 4.75 ಕೋಟಿ ಮತದಾರರನ್ನು ತಲುಪಲಿರುವ ಬಿಜೆಪಿ!
ಕಾಂಗ್ರೆಸ್ ಪಕ್ಷ ತಮ್ಮ ಸ್ವಾರ್ಥಕ್ಕಾಗಿ ನಕ್ಸಲೀಯರನ್ನು ಎತ್ತಿಕಟ್ಟುತ್ತಿದ್ದಾರೆ. ಆ ಈ ಪ್ರದೇಶದಲ್ಲಿ ಜನರಿಗೆ ಕಂಟಕಪ್ರಾಯವಾಗಿರುವ ನಕ್ಸಲ್ ವಾದವನ್ನು ಹತ್ತಿಕ್ಕಲು ಬಿಜೆಪಿ ಎಲ್ಲ ಪ್ರಯತ್ನಗಳನ್ನು ನಡೆಸಿದೆ. ಕಾಂಗ್ರೆಸ್ ತಮ್ಮ ರಾಜಕೀಯ ಲಾಭಕ್ಕಾಗಿ ರಾಷ್ಟ್ರೀಯ ಭದ್ರತೆಯನ್ನೇ ಪಣಕ್ಕಿಡಲು ಸಜ್ಜಾಗಿದೆ ಎಂದು ಯೋಗಿ ಆದಿತ್ಯನಾಥ್ ವಾಗ್ದಾಳಿ ನಡೆಸಿದರು.
ಛತ್ತೀಸ್ ಘಡ, ಜಾರ್ಖಂಡ್, ಈಶಾನ್ಯ ರಾಜ್ಯಗಳು ಅಥವಾ ಜಮ್ಮು ಕಾಶ್ಮೀರವೇ ಆಗಲಿ ಕಾಂಗ್ರೆಸ್ ಪಕ್ಷ ರಾಷ್ಟ್ರೀಯ ಭದ್ರತೆಯನ್ನು ಪಣಕ್ಕಿಟ್ಟಿದೆ. ಆದರೆ, ಬಿಜೆಪಿಗೆ ದೇಶದ ರಕ್ಷಣೆಯೇ ಮೊದಲ ಆದ್ಯತೆ. ಭಾರತದ ಭದ್ರತೆಗೆ ಧಕ್ಕೆ ಬರುವುದನ್ನು ನಾವೆಂದೂ ಸಹಿಸಿಕೊಳ್ಳುವುದಿಲ್ಲ. ರಾಷ್ಟ್ರೀಯ ಭದ್ರತೆಯೊಂದಿಗೆ ಆಟವಾಡಲು ಯಾರಿಗೂ ಅಧಿಕಾರವಿಲ್ಲ ಎಂದು ಅವರು ಕಾಂಗ್ರೆಸ್ ಪಕ್ಷಕ್ಕೆ ಎಚ್ಚರಿಕೆ ನೀಡಿದರು.
ಚುನಾವಣೆಗೆ ತಿಂಗಳಿಲ್ಲ,ಛತ್ತೀಸ್ ಗಢದಲ್ಲಿ ಪಕ್ಷಾಂತರಕ್ಕೆ ಎಲ್ಲೆಯಿಲ್ಲ!
ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಪ್ರಪ್ರಥಮ ಬಾರಿಗೆ ಪ್ರಧಾನಿಯೊಬ್ಬರು 2022ರೊಳಗಾಗಿ ಯಾವುದೇ ಬಡವ ಭಾರತದಲ್ಲಿ ಸೂರಿಲ್ಲದೆ ಇರುವುದಿಲ್ಲ ಎಂದು ವಾಗ್ದಾನ ನೀಡಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರಕಾರ ಇಲ್ಲದಿದ್ದರೆ ಛತ್ತೀಸ್ ಘಡದಲ್ಲಿ ಬಡವರಿಗೆ ಈಗ ಸಿಗುತ್ತಿರುವ ಮನೆಗಳು ಸಿಗುತ್ತಿರಲಿಲ್ಲ ಎಂದು ಛತ್ತೀಸ್ ಘಡದ ಲೋಮ್ರಿಯಲ್ಲಿ ಯೋಗಿ ನುಡಿದರು.