ವಿಭಜನೆಯ ಕೊಳಕು ತಂತ್ರಕ್ಕೆ ಮರಳಿದ ಕಾಂಗ್ರೆಸ್: ಜೆಪಿ ನಡ್ಡಾ ಕಿಡಿ
ನವದೆಹಲಿ, ಅಕ್ಟೋಬರ್ 17: ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯನ್ನು ಮರುಸ್ಥಾಪಿಸುವ ಬಗ್ಗೆ ಬೇಡಿಕೆ ಇರಿಸಿರುವ ಕಾಂಗ್ರೆಸ್ ವಿರುದ್ಧ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಕಿಡಿಕಾರಿದ್ದಾರೆ. ಇದು ಚರ್ಚಿಸಲು ಸರಿಯಾದ ಆಡಳಿತ ಕಾರ್ಯಸೂಚಿಯಲ್ಲ ಎಂದಿರುವ ನಡ್ಡಾ, ಕಾಂಗ್ರೆಸ್ ಬಿಹಾರ ಚುನಾವಣೆಗೂ ಮುನ್ನ ತನ್ನ ಭಾರತವನ್ನು ಬಿಭಜಿಸುವ ಕೊಳಕು ತಂತ್ರಕ್ಕೆ ಮರಳಿದೆ ಎಂದು ಟೀಕಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಜನತೆಗೆ ವಿಶೇಷ ಸ್ಥಾನಮಾನ ಹಾಗೂ ಹಕ್ಕುಗಳನ್ನು ಮರಳಿ ನೀಡಲು ಕಾಂಗ್ರೆಸ್ ಬದ್ಧವಾಗಿದೆ ಎಂದು ಹಿರಿಯ ನಾಯಕ ಪಿ. ಚಿದಂಬರಂ ಹೇಳಿದ್ದರು. 2019ರ ಆಗಸ್ಟ್ 5ರಂದು ನರೇಂದ್ರ ಮೋದಿ ಸರ್ಕಾರ ತೆಗೆದುಕೊಂಡ ನಿರ್ಧಾರವು ಅಸಾಂವಿಧಾನಿಕ ಹಾಗೂ ನಿರಂಕುಶವಾಗಿದ್ದು, ಅದನ್ನು ಮರಳಿ ಸ್ಥಾಪಿಸಬೇಕಿದೆ ಎಂದಿದ್ದರು.
ಜಮ್ಮು & ಕಾಶ್ಮೀರ: ಕೇಂದ್ರದ ವಿರುದ್ಧ ಹೋರಾಟಕ್ಕೆ ಹೊಸ ಮೈತ್ರಿಕೂಟ ರಚನೆ
ಇದರ ಕುರಿತು ಟ್ವಿಟ್ಟರ್ನಲ್ಲಿ ಪ್ರತಿಕ್ರಿಯಿಸಿದ ಜೆಪಿ ನಡ್ಡಾ, 'ಕಾಂಗ್ರೆಸ್ಗೆ ಮಾತನಾಡಲು ಯಾವುದೇ ಉತ್ತಮ ಆಡಳಿತಾತ್ಮಕ ಸಂಗತಿಗಳು ಇಲ್ಲದ ಬಿಹಾರ ಚುನಾವಣೆಗೂ ಮುನ್ನ ತನ್ನ ಭಾರತವನ್ನು ವಿಭಜಿಸುವ ಕೊಳಕು ತಂತ್ರಗಳಿಗೆ ಮರಳಿದೆ. ಶ್ರೀ ರಾಹುಲ್ ಗಾಂಧಿ ಅವರು ಪಾಕಿಸ್ತಾನವನ್ನು ಹೊಗಳುತ್ತಾರೆ ಮತ್ತು ಚಿದಂಬರಂ ಅವರು ವಿಧಿ 370 ವಾಪಸ್ ಬರಬೇಕೆಂದು ಬಯಸುತ್ತಾರೆ. ನಾಚಿಕೆಗೇಡು' ಎಂದು ಟೀಕಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಆರು ರಾಜಕೀಯ ಪಕ್ಷಗಳು ಜತೆಗೂಡಿ ಮೈತ್ರಿಕೂಟವೊಂದನ್ನು ರಚಿಸಿದ್ದು, ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಮರಳಿ ತರುವ ಹೋರಾಟವನ್ನು ಮಾಡುವುದಾಗಿ ತಿಳಿಸಿದ್ದವು. ಇದನ್ನು ಕಾಂಗ್ರೆಸ್ ಸ್ವಾಗತಿಸಿದ್ದು, ಕಾಶ್ಮೀರದಲ್ಲಿ 370ನೇ ವಿಧಿಯನ್ನು ಮರಳಿ ತರುವ ಬೇಡಿಕೆಯನ್ನು ಬೆಂಬಲಿಸುವುದಾಗಿ ತಿಳಿಸಿದೆ.
ಜಮ್ಮು ಮತ್ತು ಕಾಶ್ಮೀರದ ಮುಖ್ಯ ವಾಹಿನಿಯ ಪ್ರಾದೇಶ ಪಕ್ಷಗಳು ಜಮ್ಮು, ಕಾಶ್ಮೀರ ಮತ್ತು ಲಡಾಖ್ನ ಜನರ ಹಕ್ಕುಗಳನ್ನು ಮರಳಿ ಸ್ಥಾಪಿಸಲು ಸಾಂವಿಧಾನಿಕ ಹೋರಾಟಕ್ಕೆ ಜತೆಗೂಡಿವೆ. ಇದು ಉತ್ತಮ ಬೆಳವಣಿಗೆಯಾಗಿದ್ದು, ಭಾರತದ ಎಲ್ಲ ಜನರೂ ಸ್ವಾಗತಿಸಬೇಕು ಎಂದು ಚಿದಂಬರಂ ಹೇಳಿದ್ದರು.