ಕೇಂದ್ರ ಸಚಿವರನ್ನು ಕಚೇರಿಗೆ ಕರೆಸಿ, ಎಚ್ಚರಿಕೆ ಕೊಟ್ಟು ಕಳುಹಿಸಿದ ಬಿಜೆಪಿ ಅಧ್ಯಕ್ಷ ನಡ್ಡಾ
ನವದೆಹಲಿ, ಫೆ 17: ತಮ್ಮ ಪಕ್ಷದ ಮುಖಂಡರು ನೀಡುತ್ತಿರುವ ಬೇಕಾಬಿಟ್ಟಿ ಹೇಳಿಕೆಯಿಂದ ಪಕ್ಷಕ್ಕಾಗುತ್ತಿರುವ ಮುಜುಗರವನ್ನು ತಪ್ಪಿಸಲು ಕೊನೆಗೂ ಬಿಜೆಪಿ ಮುಂದಾದಂತಿದೆ.
"ದೆಹಲಿಯಲ್ಲಿ ನಮಗೆ ಎದುರಾದ ಸೋಲು, ನಮ್ಮ ಮುಖಂಡರ ಪ್ರಚೋದನಾಕಾರಿ ಹೇಳಿಕೆಯಿಂದ" ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಇತ್ತೀಚೆಗೆ ಹೇಳಿದ್ದರು. ಇದರ ಬೆನ್ನಲ್ಲೇ, ಪಕ್ಷದ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ದಾ, ಹಿರಿಯ ಸಚಿವರೊಬ್ಬರನ್ನು ಕರೆಸಿ, ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆಂದು ವರದಿಯಾಗಿದೆ.
ಶಾಹಿನ್ ಬಾಗ್-ಅಮಿತ್ ಶಾ ನಿವಾಸದತ್ತ ಸಿಎಎ ವಿರೋಧಿ ಹೋರಾಟಗಾರರು
ಮೋದಿ ಸರಕಾರದಲ್ಲಿ ವಿವಾದಕಾರಿ ಹೇಳಿಕೆ ನೀಡುವುದರಲ್ಲಿ ಎತ್ತಿದ ಕೈಯಾಗಿರುವ ಸಚಿವ ಗಿರಿರಾಜ್ ಸಿಂಗ್ ಅವರನ್ನು ನಡ್ಡಾ, ಬಿಜೆಪಿ ಕೇಂದ್ರ ಕಚೇರಿಗೆ ಕರೆಸಿ, ವಿವಾದಕಾರಿ ಹೇಳಿಕೆಯನ್ನು ನೀಡಬಾರದು ಎನ್ನುವ ಎಚ್ಚರಿಕೆಯನ್ನು ನೀಡಿದ್ದಾರೆ.
ಹಲವು ರಾಜ್ಯಗಳಲ್ಲಿ ಸೋತು ಹೈರಾಣವಾಗಿರುವ ಬಿಜೆಪಿ, ಮಿತ್ರಪಕ್ಷದೊಂದಿಗೆ ಅಧಿಕಾರ ನಡೆಸುತ್ತಿರುವ ರಾಜ್ಯ, ಬಿಹಾರದ ಅಸೆಂಬ್ಲಿ ಚುನಾವಣೆ ಇದೇ ವರ್ಷ ನಡೆಯಬೇಕಿದೆ. ಹಾಗಾಗಿ, ಬಿಹಾರ ಮೂಲದವರಾದ ಗಿರಿರಾಜ್ ಸಿಂಗ್ ಅವರನ್ನು ನಡ್ಡಾ ಕರೆಸಿ, ಮನಃಬಂದತೇ ಹೇಳಿಕೆ ನೀಡದಂತೆ ಸೂಚಿಸಿದ್ದಾರೆಂದು ತಿಳಿದುಬಂದಿದೆ.
"ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ ಮೂಲಕ ಶಾಹೀನ್ ಬಾಗ್ ಆತ್ಮಾಹುತಿ ದಾಳಿಕೋರರನ್ನು ಹುಟ್ಟುಹಾಕುತ್ತಿದೆ. ಶಾಹೀನ್ ಬಾಗ್ ನಲ್ಲಿ ದೇಶದ ವಿರುದ್ದ ದೊಡ್ಡ ಸಂಚನ್ನು ರೂಪಿಸಲಾಗುತ್ತಿದೆ" ಎನ್ನುವ ವಿವಾದಕಾರಿ ಹೇಳಿಕೆಯನ್ನು ಇತ್ತೀಚೆಗೆ ಗಿರಿರಾಜ್ ಸಿಂಗ್ ನೀಡಿದ್ದರು.
ದೆಹಲಿ ಸೋಲು: ತಮ್ಮದೇ ಪಕ್ಷದ ಮುಖಂಡರ ವಿರುದ್ದ ಕಿಡಿಕಾರಿದ ಕಾಂಗ್ರೆಸ್ ಶಾಸಕ ಹ್ಯಾರಿಸ್
"ಗೋಲಿಮಾರೋ, ಇಂಡಿಯಾ ವರ್ಸಸ್ ಪಾಕಿಸ್ತಾನ, ಇಂತಹ ನಮ್ಮ ಮುಖಂಡರ ಹೇಳಿಕೆಯಿಂದ, ನಾವು ದೆಹಲಿ ಚುನಾವಣೆಯಲ್ಲಿ ಸೋಲುವಂತಾಯಿತು" ಎಂದು ಅಮಿತ್ ಶಾ, ಬಿಜೆಪಿ ಸೋಲನ್ನು ಹೀಗೆ ವಿಶ್ಲೇಷಿಸಿದ್ದರು.