ಮೋದಿ-ನಿರ್ಮಲ್ ಸಿಂಗ್ ಗುಪ್ತ ಮಾತುಕತೆ, ಕಾಶ್ಮೀರದಲ್ಲಿ ಬಿಜೆಪಿ ಸ್ವತಂತ್ರ ಸರ್ಕಾರ?
ನವದೆಹಲಿ, ಜುಲೈ 12: ಕಾಶ್ಮೀರದಲ್ಲಿ ಬಿಜೆಪಿ-ಪಿಡಿಪಿ ಮೈತ್ರಿ ಮುರಿದುಬಿದ್ದಿದ್ದು, ರಾಜ್ಯಪಾಲರ ಆಡಳಿತ ಜಾರಿಯಲ್ಲಿದೆ. ಆದರೆ ಹೊಸ ಬೆಳವಣಿಗೆಗಳನ್ನು ಗಮನಿಸಿದರೆ ಬಿಜೆಪಿ ಕಾಶ್ಮೀರದಲ್ಲಿ ಸ್ವತಂತ್ರವಾಗಿ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿರುವುದು ಸ್ಪಷ್ಟವಾಗುತ್ತದೆ.
ನಿನ್ನೆ ಸಂಜೆ ಕಾಶ್ಮೀರದ ಬಿಜೆಪಿ ಮುಖಂಡ ನಿರ್ಮಲ್ ಸಿಂಗ್ ಅವರು ಪ್ರಧಾನಿ ಮೋದಿ ಅವರನ್ನು ತುರ್ತಾಗಿ ಭೇಟಿ ಆಗಿ ಗುಪ್ತ ಮಾತುಕತೆ ನಡೆಸಿದ್ದು, ಬಿಜೆಪಿಯು ಕಾಶ್ಮೀರದಲ್ಲಿ ಸ್ವತಂತ್ರವಾಗಿ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿದೆ ಎಂದೇ ಈ ಭೇಟಿಯನ್ನು ವಿಶ್ಲೇಷಿಸಲಾಗುತ್ತಿದೆ.
ಬಂಡಾಯ ಶಾಸಕರಿಗೆ ಗಾಳ, ಕಾಶ್ಮೀರದಲ್ಲಿ ಸೆಪ್ಟೆಂಬರ್ ಗೆ ಬಿಜೆಪಿ ಸರಕಾರ?
ನಿರ್ಮಲ್ ಸಿಂಗ್ ಅವರು ಅಮಿತ್ ಶಾ ಅವರನ್ನೂ ಭೇಟಿ ಮಾಡಿ ಈ ಬಗ್ಗೆ ಮಾತುಕತೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಪಿಡಿಪಿ ಪಕ್ಷದ ಅತೃಪ್ತ ಶಾಸಕರು ಹಾಗೂ ಇತರ ಕೆಲವು ಶಾಸಕರನ್ನು ಒಟ್ಟುಗೂಡಿಸಿಕೊಂಡು ಬಿಜೆಪಿ ಸ್ವತಂತ್ರ್ಯವಾಗಿ ಅಧಿಕಾರ ಹಿಡಿಯಲು ಸಜ್ಜಾಗಿದೆ.
ನಿನ್ನೆ ಸಂಜೆ ನಿರ್ಮಲ ಸಿಂಗ್ ಅವರನ್ನು ಭೇಟಿ ಮಾಡಿದ ಪ್ರಧಾನಿ ನಿನ್ನೆ ಬೆಳಿಗ್ಗೆ ಕಾಶ್ಮೀರದ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಹದೇವ್ ಅವರನ್ನು ಭೇಟಿ ಮಾಡಿ ಇದೇ ವಿಷಯ ಮಾತನಾಡಿದ್ದಾರೆ.
ಕಾಶ್ಮೀರದಲ್ಲಿ ಸರ್ಕಾರ ರಚಿಸಲು 44 ಶಾಸಕರ ಬಲ ಬೇಕಿದ್ದು ಬಿಜೆಪಿಗೆ ಸದ್ಯಕ್ಕೆ 25 ಸ್ವಂತ ಶಾಸಕರ ಬಲ ಮಾತ್ರವೇ ಇದೆ. ಆದರೆ ಪಿಡಿಪಿಯ ಸುಮಾರು 14 ಶಾಸಕರು ಪಕ್ಷದ ವಿರುದ್ಧ ತಿರುಗಿ ಬಿದ್ದಿದ್ದು, ಇವರು ಬಿಜೆಪಿಗೆ ಬೆಂಬಲ ನೀಡುವ ಸಾಧ್ಯತೆ ಇದೆ. ಜೊತೆಗೆ ಪಕ್ಷೇತರರರು, ಮತ್ತು ಇತರ ಸಣ್ಣ ಪಕ್ಷಗಳು ಸೇರಿಸಿದಲ್ಲಿ ಬಿಜೆಪಿಗೆ ಸರ್ಕಾರ ರಚಿಸಲು ಮ್ಯಾಜಿಕ್ ಸಂಖ್ಯೆ ದೊರೆಯುತ್ತದೆ.
ಬಿಜೆಪಿ ವಿರುದ್ದ ಎಲ್ಲಾ ಪಕ್ಷಗಳನ್ನು ಒಗ್ಗೂಡಿಸುವ ರಾಹುಲ್ ಪ್ರಯತ್ನಕ್ಕೆ ಭಾರೀ ಹಿನ್ನಡೆ?
ಆದರೆ ಈ ಕಾರ್ಯ ಕಷ್ಟವೇ ಇದ್ದು, ಆಗಸ್ಟ್ ಅಂತ್ಯದ ವೇಳೆಗೆ ಬಿಜೆಪಿಯು ಕಾಶ್ಮೀರದಲ್ಲಿ ಸರ್ಕಾರ ರಚಿಸುತ್ತದೆ ಎಂದೇ ಹೇಳಲಾಗುತ್ತಿದೆ. ಹಾಗೇನಾದರೂ ಬಿಜೆಪಿ ಕಾಶ್ಮೀರದಲ್ಲಿ ಸರ್ಕಾರ ರಚಿಸಿದಲ್ಲಿ ಕಾಶ್ಮೀರಕ್ಕೆ ಮೊದಲ ಹಿಂದೂ ಅಜೆಂಡಾ ದೊರಕಿದಂತಾಗುತ್ತದೆ. ಅಷ್ಟೆ ಅಲ್ಲದೆ ರಾಜರ ಆಳ್ವಿಕೆ (1947) ನಂತರ ಮೊದಲ ಬಾರಿಗೆ ಹಿಂದೂ ಒಬ್ಬರು ಮುಖ್ಯಮಂತ್ರಿ ಆದಂತಾಗುತ್ತದೆ.