ಉ.ಪ್ರದೇಶ ಅಭೂತಪೂರ್ವ ಜನಾದೇಶ: ಗುಜರಾತ್ ನಲ್ಲಿ ಗರಿಗೆದರಿದ ಬಿಜೆಪಿ!
ಯಾವುದೇ ವಿಧಾನಸಭಾ ಚುನಾವಣೆಯಲ್ಲಾಗಲಿ ಪ್ರಮುಖ ವಿಷಯವಾಗುವುದು ಆಯಾಯ ರಾಜ್ಯಗಳ ಸ್ಥಳೀಯ ಸಮಸ್ಯೆಗಳೇ ಹೊರತು, ಬೇರೆ ರಾಜ್ಯದ ಮತ್ತು ರಾಷ್ಟ್ರಮಟ್ಟದ ಸಮಸ್ಯೆಗಳಲ್ಲ ಎನ್ನುವುದು ವಾಸ್ತವತೆ.
ಆದರೂ, ದೇಶದ ಅತಿಹೆಚ್ಚು ಲೋಕಸಭಾ ಕ್ಷೇತ್ರವನ್ನು ಹೊಂದಿರುವ ಉತ್ತರಪ್ರದೇಶದ ಸ್ಥಳೀಯ ಸಂಸ್ಥೆಯ ಚುನಾವಣೆಯ ಫಲಿತಾಂಶ, ಗುಜರಾತ್ ನಲ್ಲಿ ಸ್ವಲ್ಪಮಟ್ಟಿಗಾದರೂ, ಮತದಾರರ ಮೂಡ್ ಅನ್ನು ಬದಲಿಸುವ ಶಕ್ತಿಯನ್ನು ಹೊಂದಿದೆ ಎನ್ನುವುದು ರಾಜಕೀಯ ಪಂಡಿತರ ಲೆಕ್ಕಾಚಾರ.
ಯುಪಿ: 16ರಲ್ಲಿ 12 ಮೇಯರ್ ಸ್ಥಾನ ಗೆದ್ದ ಬಿಜೆಪಿ, ಬಿಎಸ್ಪಿಗೆ 2 ಸ್ಥಾನ
ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾದ ನಂತರ ನಡೆದ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿನ ಬಿಜೆಪಿಯ ಅಭೂತಪೂರ್ವ ಜಯಭೇರಿ, ಖುದ್ದು ಯೋಗಿ ಸರಕಾರಕ್ಕೆ ಮತದಾರ ಸರ್ಟಿಫಿಕೇಟ್ ಕೊಟ್ಟಿದ್ದು ಒಂದೆಡೆಯಾದರೆ, ಅಸೆಂಬ್ಲಿ ಚುನಾವಣಾ ಹೊಸ್ತಿಲಲ್ಲಿರುವ ಗುಜರಾತ್ ನಲ್ಲೂ ಪಕ್ಷ ಅಧಿಕಾರ ಉಳಿಸಿಕೊಳ್ಳಲು ಪರೋಕ್ಷವಾಗಿ ಇನ್ನಷ್ಟು ಶಕ್ತಿನೀಡಿದಂತಾಗಿದೆ.
ಅದರಲ್ಲೂ ಪ್ರಮುಖವಾಗಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರತಿನಿಧಿಸುವ ಲೋಕಸಭಾ ಕ್ಷೇತ್ರ ಅಮೇಠಿಯಲ್ಲಿ ಕಾಂಗ್ರೆಸ್ ಭಾರೀ ಮುಖಭಂಗ ಅನುಭವಿಸಿದ್ದು, ಒಟ್ಟಾರೆ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ.
ಉತ್ತರಪ್ರದೇಶ ಚುನಾವಣೆಗೆ ಹೋಲಿಸಿದರೆ ಗುಜರಾತಿನ ಮಾರ್ಕೆಟ್ ಡೌನ್!
ಗುಜರಾತ್ ಚುನಾವಣೆಗೆ ಒಂದು ವಾರ ಬಾಕಿಯಿರುವಾಗಲೇ ಹೊರಬಿದ್ದಿರುವ ಉತ್ತರಪ್ರದೇಶದ ಸ್ಥಳೀಯ ಸಂಸ್ಥೆಯ ಚುನಾವಣಾ ಫಲಿತಾಂಶ, ಗುಜರಾತ್ ಮತದಾರರಿಗೆ ನೇರವಾಗಿ ಪರಿಣಾಮ ಬೀರದಿದ್ದರೂ, ರಾಹುಲ್ ನೇತೃತ್ವದಲ್ಲಿ ನಡೆಯುತ್ತಿರುವ ಪಕ್ಷದ ಪ್ರಚಾರಕ್ಕೆ ತುಸು ಹಿನ್ನಡೆಯಾಗಿರುವುದಂತೂ ಸತ್ಯ ಎನ್ನುವುದು ರಾಜಕೀಯ ಲೆಕ್ಕಾಚಾರ. ಮುಂದೆ ಓದಿ..
ಅಮೇಠಿಯಲ್ಲಿ ಕಾಂಗ್ರೆಸ್ ಮತ್ತು ಗೋರಖಪುರದಲ್ಲಿ ಸೋಲು
ಅಮೇಠಿಯಲ್ಲಿ ಕಾಂಗ್ರೆಸ್ ಮತ್ತು ಗೋರಖಪುರದಲ್ಲಿ ಬಿಜೆಪಿ ಅಭ್ಯರ್ಥಿಗಳ ಸೋಲು, ರಾಹುಲ್ ಗಾಂಧಿ ಮತ್ತು ಯೋಗಿ ಆದಿತ್ಯನಾಥ್ ಅವರಿಗೆ ಮುಜುಗರ ತಂದರೂ, ಬಿಜೆಪಿ ಒಟ್ಟಾರೆ ಸ್ಥಳೀಯ ಸಂಸ್ಥೆ ಚುನಾವಣೆ ಗೆದ್ದಿರುವುದರಿಂದ, ಬಿಜೆಪಿಗಿಂತ ಕಾಂಗ್ರೆಸ್ಸಿಗೇ ಇದರ ಎಫೆಕ್ಟ್ ಜಾಸ್ತಿ. ಯಾಕೆಂದರೆ, ಗಾಂಧಿ ಮತ್ತು ನೆಹರೂ ಕುಟುಂಬದ ರಾಜಕೀಯ ಕರ್ಮಭೂಮಿಯಾಗಿರುವ ಈ ಕ್ಷೇತ್ರವನ್ನು ಉಳಿಸಿಕೊಳ್ಳುವಷ್ಟೂ ಕಾಂಗ್ರೆಸ್ ಶಕ್ತವಾಗಿಲ್ಲ ಎಂದು ಬಿಜೆಪಿ ಪ್ರಚಾರ ಮಾಡಬಹುದು.
ಗುಜರಾತ್ ಚುನಾವಣೆಗೂ ನೇರವಾದ ಸಂಬಂಧವಿಲ್ಲ
ರಾಹುಲ್ ಗಾಂಧಿಯವರು ಅಮೇಠಿಯಲ್ಲೇ ತಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲಾಗಲಿಲ್ಲ. ಇನ್ನು ಇವರ ನೇತೃತ್ವದಲ್ಲಿ ಕಾಂಗ್ರೆಸ್, ಗುಜರಾತ್ ಚುನಾವಣೆಯನ್ನು ಎದುರಿಸುತ್ತಿದೆ. ಒಟ್ಟು ಹದಿನಾರು ಮೇಯರ್ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಬಿಜೆಪಿ ಹದಿನಾಲ್ಕು ಸ್ಥಾನದಲ್ಲಿ ಗೆದ್ದಿದೆ. ಕಾಂಗ್ರೆಸ್ ಈ ಚುನಾವಣೆಯಲ್ಲಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಈಗಾಗಲೇ ಮೇಲೆ ಹೇಳಿದಂತೆ, ಉ.ಪ್ರದೇಶದ ಈ ಚುನಾವಣಾ ಫಲಿತಾಂಶಕ್ಕೂ, ಗುಜರಾತ್ ಚುನಾವಣೆಗೂ ನೇರವಾದ ಸಂಬಂಧವಿಲ್ಲದಿದ್ದರೂ, ಕಾಂಗ್ರೆಸ್ ಪರವಿರುವ ಮತದಾರ ಮತ್ತೊಮ್ಮೆ ಯೋಚನೆ ಮಾಡುವಂತಾಗಿದೆ ಎನ್ನುವ ಅಭಿಪ್ರಾಯ ಅಲ್ಲಲ್ಲಿ ವ್ಯಕ್ತವಾಗುತ್ತಿದೆ.
ಗುಜರಾತ್ ಚುನಾವಣಾ ಪ್ರಚಾರಕ್ಕೆ ಯೋಗಿ ಆದಿತ್ಯನಾಥ್
ಉತ್ತರಪ್ರದೇಶದ ಸ್ಥಳೀಯ ಚುನಾವಣಾ ಫಲಿತಾಂಶದ ನಂತರ ಬಿಜೆಪಿ, ಯೋಗಿ ಆದಿತ್ಯನಾಥ್ ಅವರನ್ನು ಗುಜರಾತ್ ಚುನಾವಣಾ ಪ್ರಚಾರಕ್ಕೆ ಆಕ್ರಮಣಕಾರಿಯಾಗಿ ಬಳಸಿಕೊಳ್ಳುವ ಸಾಧ್ಯತೆಯಿಲ್ಲದಿಲ್ಲ. ಕಾಂಗ್ರೆಸ್ಸಿಗೆ ಉತ್ತರಪ್ರದೇಶದಲ್ಲಿ ಯಾವ ರೀತಿಯ ಜನಾದೇಶ ವ್ಯಕ್ತವಾಯಿತು ಎನ್ನುವುದನ್ನು ಮತ್ತು ತನ್ನ ಹಿಂದೂ ಧೋರಣೆಯನ್ನು ಯೋಗಿ ತನ್ನ ಭಾಷಣದಲ್ಲಿ ವಿವರಿಸಬಹುದು. ಯಾಕೆಂದರೆ, ರಾಹುಲ್ ಅವರ ಸೋಮನಾಥ್ ದೇವಾಲಯದ ಭೇಟಿಯ ನಂತರ ನಡೆದ ಘಟನೆ, ನಾನೂ ಹಿಂದೂ.. ನಾನೂ ಶಿವಭಕ್ತ ಎನ್ನುವ ಹೇಳಿಕೆಯಿಂದಾಗಿ, ಜಾತಿಧರ್ಮ ಲೆಕ್ಕಾಚಾರ, ಗುಜರಾತ್ ಚುನಾವಣೆಯ ವೇಳೆ ಮತ್ತೆ ಚರ್ಚೆಯ ವಿಷಯವಾಗಿದೆ.
ಮಹಾರಾಷ್ಟ್ರ, ಚಂಡೀಗಡ, ಒರಿಸ್ಸಾ ಸ್ಥಳೀಯ ಸಂಸ್ಥೆಯ ಚುನಾವಣಾ ಫಲಿತಾಂಶ
ಉತ್ತರಪ್ರದೇಶದ ಅಸೆಂಬ್ಲಿ ಚುನಾವಣೆಯ ವೇಳೆ, ಮಹಾರಾಷ್ಟ್ರ, ಚಂಡೀಗಡ, ಒರಿಸ್ಸಾ ಮುಂತಾದ ಕಡೆ ನಡೆದ ಸ್ಥಳೀಯ ಸಂಸ್ಥೆಯ ಚುನಾವಣಾ ಫಲಿತಾಂಶವನ್ನು ಬಿಜೆಪಿ ವ್ಯವಸ್ಥಿತವಾಗಿ ಬಳಸಿಕೊಂಡಿತ್ತು. ಈಗ ಉ.ಪ್ರದೇಶದ ಫಲಿತಾಂಶವನ್ನು ಬಿಜೆಪಿ ಇನ್ನುಳಿದಿರುವ ಚುನಾವಣಾ ಪ್ರಚಾರದ ವೇಳೆ ಬಳಸಿಕೊಳ್ಳುವುದರಲ್ಲಿ ಸಂದೇಹವೇ ಇಲ್ಲ. ಇದು ಸ್ವಲ್ಪಮಟ್ಟಿಗಾದರೂ ಬಿಜೆಪಿಗೆ ಲಾಭ ತಂದುಕೊಡುವ ಅಂಶ.
ಜಿಎಸ್ಟಿ ಮತ್ತು ಅಪನಗದೀಕರಣದ ಬಗ್ಗೆ ಟೀಕಿಸುತ್ತಿರುವ ಕಾಂಗ್ರೆಸ್
ಜಿಎಸ್ಟಿ ಮತ್ತು ಅಪನಗದೀಕರಣದ ಬಗ್ಗೆ ಟೀಕಿಸುತ್ತಿರುವ ಕಾಂಗ್ರೆಸ್ಸಿಗೆ ಉತ್ತರಪ್ರದೇಶದ ಫಲಿತಾಂಶ ಬಹುದೊಡ್ಡ ಹಿನ್ನಡೆ. ಉತ್ತರಪ್ರದೇಶದ ಫಲಿತಾಂಶಕ್ಕೂ ಗುಜರಾತ್ ಚುನಾವಣೆಗೂ ಸಂಬಂಧವಿಲ್ಲ, ಆದರೆ ನಾವು 150 ಸ್ಥಾನ ಗೆಲ್ಲುವುದು ಖಚಿತ ಎಂದು ಉ.ಪ್ರ ಚುನಾವಣೆಯ ಫಲಿತಾಂಶ ಹೊರಬರುತ್ತಿದ್ದಂತೇ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಿಶ್ವಾಸದ ಮಾತನ್ನಾಡಿದ್ದಾರೆ.