ದಶಕದ ಬಳಿಕ ಬಿಜೆಪಿಯಿಂದ ಆರೆಸ್ಸೆಸಿಗೆ ಮರಳಿದ ರಾಮಲಾಲ್
ನವದೆಹಲಿ, ಜುಲೈ 14: ಮಹತ್ವದ ಬೆಳವಣಿಗೆಯೊಂದರಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ(ಸಂಘಟನೆ) ರಾಮಲಾಲ್ ಅವರು ಭಾರತೀಯ ಜನತಾ ಪಕ್ಷ(ಬಿಜೆಪಿ)ಯ ಉನ್ನತ ಹುದ್ದೆಯಿಂದ ಮುಕ್ತಗೊಂಡು ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರೆಸ್ಸೆಸ್) ಗೆ ಮರಳಿದ್ದಾರೆ.
ದಶಕಗಳ ಕಾಲ ಬಿಜೆಪಿಯಲ್ಲಿದ್ದ ರಾಮಲಾಲ್ ಅವರ ಹುದ್ದೆಗೆ ವಿ ಸತೀಶ್ ಅಥವಾ ಬಿ.ಎಲ್ ಸಂತೋಷ್ ಅವರನ್ನು ನೇಮಕ ಮಾಡುವ ಸಾಧ್ಯತೆಯಿತ್ತು. ಬಿಜೆಪಿ ಜಂಟಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್.ಸಂತೋಷ್ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಆಗಿ ಅಮಿತ್ ಶಾ ಅವರು ನೇಮಕ ಮಾಡಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಆದೇಶ ಹೊರಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿ ರಾಮಲಾಲ್ ಅವರು ಪ್ರತಿಕ್ರಿಯಿಸಿ:
'ದಾಯಿತ್ವ ಪರಿವರ್ತನೆ ಸಂಘದಲ್ಲಿ ಸ್ವಾಭಾವಿಕ ಪ್ರಕ್ರಿಯೆ ಆಗಿದೆ, ದಾಯಿತ್ವ, ಕ್ಷೇತ್ರ ಯಾವುದೇ ಇರಲಿ, ಭಾರತ ಮಾತೆಯ ಸೇವೆಯೇ ಎಲ್ಲರ ಮುಂದಿರುವ ಒಂದೇ ಕಾರ್ಯ' ಎಂದಿದ್ದಾರೆ.
ಬಿ.ಎಲ್.ಸಂತೋಷ್ ಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಪದೋನ್ನತಿ
ಸೆಪ್ಟೆಂಬರ್ 2017ರಲ್ಲಿ ಅಮಿತ್ ಶಾ ಅವರಿಗೆ ಬರೆದ ಪತ್ರ ಸೇರಿದಂತೆ ಎರಡು ಬಾರಿ ತಮ್ಮ ಜವಾಬ್ದಾರಿಯಿಂದ ಕೆಳಗಿಳಿಯಲು ರಾಮ್ ಲಾಲ್ ಬಯಸಿದ್ದರು. ಆದರೆ, ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳನ್ನು ಮುಂದಿಟ್ಟುಕೊಂಡು ರಾಮ್ ಲಾಲ್ ಅವರನ್ನು ಸಂಘಟನೆಯ ಹೊಣೆಯಿಂದ ಮುಕ್ತಗೊಳಿಸಲು ಅಮಿತ್ ಶಾ ಇಚ್ಛಿಸಿರಲಿಲ್ಲ. ಹೀಗಾಗಿ, ಅವರ ಮನವಿಯನ್ನು ತಳ್ಳಿ ಹಾಕುತ್ತಾ ಬಂದಿದ್ದರು.
ವಿಜಯವಾಡದಲ್ಲಿ ನಡೆದ ಪ್ರಾಂತ ಪ್ರಚಾರಕ ಬೈಠಕ್ ನಲ್ಲಿ ರಾಮ್ ಲಾಲ್ ಅವರನ್ನು ಆರೆಸ್ಸೆಸ್ ಗೆ ಮರಳಿ ಕರೆಸಿಕೊಳ್ಳಲು ನಿರ್ಧರಿಸಲಾಯಿತು ಎಂದು ಪ್ರಚಾರ ಉಸ್ತುವಾರಿ ಅರುಣ್ ಕುಮಾರ್ ಹೇಳಿದರು.
2009ರಲ್ಲಿ ಅಖಿಲ ಭಾರತೀಯ ಸ್ನೇಹ್ ಸಂಪರ್ಕ್ ಪ್ರಮುಖ್ ಆಗಿ ರಾಮ್ ಲಾಲ್ ಕಾರ್ಯ ನಿರ್ವಹಿಸಿದ್ದರು. ಸಂಘದ ಪ್ರಮುಖರಲ್ಲಿ ಒಬ್ಬರೆನಿಸಿದ್ದ ಅವರಿಗೆ ಬಿಜೆಪಿಯ ಪ್ರಧಾನ ಕಾರ್ಯದರ್ಶಿ(ಸಂಘಟನೆ) ಜವಾಬ್ದಾರಿ ಹುಡುಕಿಕೊಂಡು ಬಂದಿತ್ತು.