ಸದನಕ್ಕೆ ಅವಮಾನ: ರಾಹುಲ್ ಗಾಂಧಿ ವಿರುದ್ಧ ಬಿಜೆಪಿಯಿಂದ ಹಕ್ಕುಚ್ಯುತಿ ನಿರ್ಣಯ
ನವದೆಹಲಿ, ಫೆಬ್ರವರಿ 12: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಲೋಕಸಭೆಯಲ್ಲಿ ಶುಕ್ರವಾರ ರಾತ್ರಿ ಬಿಜೆಪಿಯ ಕೆಲವು ಸಂಸದರು ಹಕ್ಕುಚ್ಯುತಿ ಉಲ್ಲಂಘನೆ ನಿರ್ಣಯಕ್ಕೆ ಮುಂದಾಗಿದ್ದಾರೆ.
ಬಿಜೆಪಿ ಸಂಸದರಾದ ಸಂಜಯ್ ಜೈಸ್ವಾಲ್, ನಿಶಿಕಾಂತ್ ದುಬೆ, ಪಿಪಿ ಚೌಧರಿ ಮತ್ತು ಮೀನಾಕ್ಷಿ ಲೇಖಿ ಅವರು ಫೆಬ್ರವರಿ 11ರಂದು ಗಂಭೀರ ಹಕ್ಕುಚ್ಯುತಿ ಉಲ್ಲಂಘನೆ ಮತ್ತು ಸದನದ ನಿಂದನೆ ಮಾಡಲಾಗಿದೆ ಎಂದು ನೋಟಿಸ್ ನೀಡಿದ್ದು, ಅದನ್ನು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಸ್ವೀಕರಿಸಿದ್ದಾರೆ.
ಚೀನಾಕ್ಕೆ ಯಾವ ಭೂಮಿಯನ್ನೂ ಬಿಟ್ಟುಕೊಟ್ಟಿಲ್ಲ: ರಕ್ಷಣಾ ಸಚಿವಾಲಯ
ಕೇಂದ್ರ ಸರ್ಕಾರದ ಮೂರು ಕಠಿಣ ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆಯ ವೇಳೆ ಜೀವ ಕಳೆದುಕೊಂಡ ರೈತರಿಗೆ ಸಂತಾಪ ಸೂಚಿಸಲು ಕೆಳ ಸದನದಲ್ಲಿ ಗುರುವಾರ ಬಜೆಟ್ ಕುರಿತಾದ ಚರ್ಚೆಯ ತಮ್ಮ ಭಾಷಣದ ವೇಳೆ ರಾಹುಲ್ ಗಾಂಧಿ ಎರಡು ನಿಮಿಷದ ಮೌನಕ್ಕೆ ಕರೆ ನೀಡಿದ್ದರು. ಈ ಕುರಿತು ಹಕ್ಕುಚ್ಯುತಿ ನಿರ್ಣಯಕ್ಕೆ ಬಿಜೆಪಿ ಮುಂದಾಗಿದೆ.
ಚೀನಾಕ್ಕೆ ಭೂಮಿ ಕೊಟ್ಟವರು ಯಾರೆಂದು ನಿಮ್ಮ ಅಜ್ಜನನ್ನು ಕೇಳಿ: ರಾಹುಲ್ಗೆ ತಿರುಗೇಟು
ಎದ್ದು ನಿಂತಿದ್ದ ವಿಪಕ್ಷ ಸಂಸದರು
ರಾಹುಲ್ ಗಾಂಧಿ ಅವರು ಕರೆ ನೀಡಿದಾಗ ಎನ್ಸಿಪಿ, ಡಿಎಂಕೆ ಮತ್ತು ಟಿಎಂಸಿ ಸೇರಿದಂತೆ ವಿರೋಧಪಕ್ಷಗಳ ಸಂಸದರು ಎದ್ದು ನಿಂತಿದ್ದರೆ ಆಡಳಿತ ಪಕ್ಷದ ಸದಸ್ಯರು ಅದಕ್ಕೆ ಸ್ಪಂದಿಸಿರಲಲ್ಲ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಸ್ಪೀಕರ್ ಬಿರ್ಲಾ, ಸೀಟುಗಳಲ್ಲಿ ಕುಳಿತುಗೊಳ್ಳುವಂತೆ ಸದಸ್ಯರಿಗೆ ಸೂಚಿಸಿದ್ದರು.
ಲಿಖಿತ ರೂಪದಲ್ಲಿ ನೀಡಿ
'ನೀವು ಏನನ್ನಾದರೂ ಚರ್ಚಿಸಲು ಬಯಸಿದ್ದರೆ ನನಗೆ ಲಿಖಿತ ರೂಪದಲ್ಲಿ ನೀಡಿ. ನಾನು ಸಮಯ ನೀಡುತ್ತೇನೆ. ಆದರೆ ಈಗ ನನಗೆ ಸದನ ನಡೆಸಲು ಬಿಡಿ. ಎಲ್ಲರೂ ರೈತರ ಬಗ್ಗೆ ಗೌರವ ಹೊಂದಿದ್ದಾರೆ. ಆದರೆ ನನಗೆ ನಿಯಮ ಮತ್ತು ಶಿಷ್ಟಾಚಾರಗಳಿಗೆ ಅನುಗುಣವಾಗಿ ಸದನ ನಡೆಸುವ ಜವಾಬ್ದಾರಿ ಇದೆ' ಎಂದು ಬಿರ್ಲಾ ಹೇಳಿದ್ದರು.
ಸದನಕ್ಕೆ ಅವಮಾನ
'ಇದೇ ಮೊದಲ ಬಾರಿಗೆ ಸಂಸದರೊಬ್ಬರು ಎಲ್ಲರೂ ಎದ್ದು ನಿಂತು ಮೌನಾಚರಣೆ ಮಾಡುವಂತೆ ಆದೇಶಿಸಿದ್ದಾರೆ. ಕೆಲವು ಸಂಸದರು ಅದನ್ನು ಅನುಸರಿಸಿದ್ದಾರೆ ಕೂಡ. ಲೋಕಸಭೆಯು ಇದರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಆದೇಶ ನೀಡಿದ ರಾಹುಲ್ ಗಾಂಧಿ ಮತ್ತು ಅದನ್ನು ಅನುಸರಿಸಿದ ಎಲ್ಲ ಸಂಸದರ ವಿರುದ್ಧ ಹಕ್ಕುಚ್ಯುತಿ ನಿರ್ಣಯ ನೋಟಿಸ್ ನೀಡಲಾಗುವುದು. ಅವರು ಸದನವನ್ನು ಅವಮಾನಿಸಿದ್ದಾರೆ' ಎಂದು ಸಂಸದ ಸಂಜಯ್ ಜೈಸ್ವಾಲ್ ತಿಳಿಸಿದ್ದಾರೆ.
ಮಹುವಾ ವಿರುದ್ಧ ಹಕ್ಕುಚ್ಯುತಿ
ಲೋಕಸಭೆಯಲ್ಲಿ ಸೋಮವಾರ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರ ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ ಟಿಎಂಸಿ ಸಂಸದೆ ಮಹುವಾ ಮೋಯಿತ್ರಾ ವಿರುದ್ಧ ಬಿಜೆಪಿ ಸಂಸದರಾದ ದುಬೆ ಮತ್ತು ಚೌಧರಿ ಅವರು ಹಕ್ಕುಚ್ಯುತಿ ನಿರ್ಣಯಕ್ಕೆ ಮುಂದಾಗಿದ್ದರು.