ಪ್ರಮಾಣವಚನದ ವೇಳೆ ಜೈಶ್ರೀರಾಂ ಘೋಷಣೆ: ಖಡಕ್ ಉತ್ತರ ನೀಡಿದ ಓವೈಸಿ
ನವದೆಹಲಿ, ಜೂನ್ 18: ಹದಿನೇಳನೇ ಲೋಕಸಭೆಯ ನೂತನ ಸದಸ್ಯರ ಪ್ರಮಾಣವಚನ ಸ್ವೀಕಾರ ಎರಡನೇ ದಿನಕ್ಕೂ ಮುಂದುವರಿದಿದೆ. ರಾಜ್ಯಗಳ ಹೆಸರಿನ ವರ್ಣಮಾಲೆ ಕ್ರಮವಾಗಿ ಪ್ರಮಾಣವಚನ ಬೋಧಿಸಲಾಗುತ್ತಿದೆ.
ತೆಲಂಗಾಣದ ಹೈದರಾಬಾದ್ ಕ್ಷೇತ್ರದ ಸಂಸದ, ಎಐಎಂಐಎಂ ಪಕ್ಷದ ಅಸಾದುದ್ದೀನ್ ಓವೈಸಿ ಮಂಗಳವಾರ ಪ್ರಮಾಣವಚನ ಸ್ವೀಕರಿಸಿದರು. ಈ ವೇಳೆ, ಜೈಶ್ರೀರಾಂ, ವಂದೇ ಮಾತರಂ ಮತ್ತು ಭಾರತ್ ಮಾತಾಕೀ ಜೈ ಎನ್ನುವ ಘೋಷಣೆ ಲೋಕಸಭೆಯಲ್ಲಿ ಮೊಳಗಿದೆ.
ಪ.ಬಂಗಾಳದ ಬಿಜೆಪಿ ಸಂಸದನ ಪ್ರಮಾಣವಚನದ ವೇಳೆ ಮೊಳಗಿದ ಜೈಶ್ರೀರಾಂ ಘೋಷಣೆ
ಇನ್ನಷ್ಟು ಜೋರಾಗಿ ಕೂಗಿ ಎಂದು ಕೈಯಲ್ಲೇ ಸನ್ನೆ ಮಾಡಿದ ಓವೈಸಿ, ಉರ್ದು ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಇದಾದ ನಂತರ, ಜೈಭೀಮ್.. ಜೈಭೀಮ್.. ತಕ್ಬೀರ್ ಅಲ್ಲಾಹು ಅಕ್ಬರ್, ಜೈಹಿಂದ್ ಎಂದು ಹೇಳಿ, ತನ್ನ ಸೀಟಿಗೆ ಓವೈಸಿ ವಾಪಸ್ ಆದರು.
ಇದಾದ ನಂತರ ಸಂಸತ್ತಿನ ಹೊರಗೆ ಮಾಧ್ಯಮದವರೊಂದಿಗೆ ಮಾತನಾಡಿದ ಓವೈಸಿ, ನನ್ನನ್ನು ನೋಡಿದಾಗ ಅವರಿಗೆಲ್ಲಾ ಶ್ರೀರಾಮ, ಭಾರತದ ನೆನಪಾಗುತ್ತಿರುವುದು ನನಗೆ ಸಂತೋಷ ತಂದಿದೆ ಎಂದು ಓವೈಸಿ ತಿರುಗೇಟು ನೀಡಿದ್ದಾರೆ.
ಇದೇ ರೀತಿ, ಸಂವಿಧಾನ ಮತ್ತು ಮುಜಫರ್ ನಗರದಲ್ಲಿ ಮಕ್ಕಳು ಸಾವನ್ನಪ್ಪುತ್ತಿರುವ ಕಡೆಗೂ ಇವರು ಚಿತ್ತ ಹರಿಸಲಿ ಎಂದು ಓವೈಸಿ ಹೇಳಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಓವೈಸಿ, ಬಿಜೆಪಿಯ ಡಾ. ಭಗವಂತ್ ರಾವ್ ವಿರುದ್ದ 282,186 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ರಾಹುಲ್ ಗಾಂಧಿ ವಯನಾಡಿನಲ್ಲಿ ಗೆದ್ದಿದ್ದೇ ಮುಸ್ಲಿಮರಿಂದ: ಓವೈಸಿ
ಅಧಿವೇಶನದ ಮೊದಲ ದಿನ ಸಚಿವ, ಪಶ್ಚಿಮ ಬಂಗಾಳದ ಬಾಬುಲ್ ಸುಪ್ರಿಯೋ ಪ್ರಮಾಣವಚನ ಸ್ವೀಕರಿಸುವ ವೇಳೆ 'ಜೈಶ್ರೀರಾಂ' ಘೋಷಣೆಯನ್ನು ಆಡಳಿತದ ಪಕ್ಷದವರು ಕೂಗಿದ್ದರು.