ಮಲಾಲ ಯೂಸೂಫಜೈ ಕಾಶ್ಮೀರ ಟ್ವೀಟ್ ಗೆ ಕರಂದ್ಲಾಜೆ ತೀಕ್ಷ್ಣ ಪ್ರತಿಕ್ರಿಯೆ
ಪಾಕಿಸ್ತಾನ ಮೂಲದ ನೊಬೆಲ್ ವಿಜೇತೆ ಹಾಗೂ ಶಿಕ್ಷಣ ಹಕ್ಕುಗಳ ಹೋರಾಟಗಾರ್ತಿ ಮಲಾಲ ಯೂಸೂಫಜೈ ವಿಶ್ವಸಂಸ್ಥೆಗೆ ಮನವಿ ಮಾಡಿದ್ದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಶಾಂತಿ ನೆಲೆಸಬೇಕು ಹಾಗೂ ಮಕ್ಕಳು ಮತ್ತೆ ಶಾಲೆಗೆ ಹೋಗುವಂತೆ ಆಗಬೇಕು ಎಂದಿದ್ದರು. ಮಲಾಲ ಮನವಿಗೆ ಬಿಜೆಪಿಯ ಮುಖಂಡರು ಹಾಗೂ ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸಲು ಕೆಲಸ ಮಾಡಬೇಕು. ಕಾಶ್ಮೀರಿಗಳ ಧ್ವನಿ ಕೇಳಿಸಿಕೊಳ್ಳಬೇಕು ಹಾಗೂ ಅಲ್ಲಿನ ಮಕ್ಕಳು ಕ್ಷೇಮವಾಗಿ ಶಾಲೆಗೆ ಹೋಗಿ, ಬರುವಂತಾಗಬೇಕು ಎಂದು ನಾಯಕರಿಗೆ ಮನವಿ ಮಾಡುತ್ತೇನೆ. ವಿಶ್ವ ಸಂಸ್ಥೆಯ ಸಾಮಾನ್ಯ ಸಭೆ ಹಾಗೂ ಅದರ ಆಚೆಗೂ ಪ್ರಯತ್ನಿಸಬೇಕು ಎಂದು ಶನಿವಾರ ಮಲಾಲ ಟ್ವೀಟ್ ಮಾಡಿದ್ದರು.
ಕಾಶ್ಮೀರದ ಮಕ್ಕಳು, ಮಹಿಳೆಯರ ಬಗ್ಗೆ ಆತಂಕವಿದೆ ಎಂದ ಮಲಾಲಾ
ಭಾನುವಾರದಂದು ಸಂಸದೆ ಶೋಭಾ ಕರಂದ್ಲಾಜೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. 'ನೊಬೆಲ್ ವಿಜೇತೆ ಮಲಾಲಾ ಅವರಲ್ಲಿ ನನ್ನದೊಂದು ಪ್ರಾಮಾಣಿಕ ಮನವಿ, ಪಾಕಿಸ್ತಾನದ ಅಲ್ಪಸಂಖ್ಯಾತರ ಜತೆ ಸ್ವಲ್ಪ ಸಮಯ ಮಾತನಾಡಲಿ. ಬಲಂತದ ಮತಾಂತರದ ವಿರುದ್ಧ ಹಾಗೂ ಅವರದೇ ಸ್ವಂತ ದೇಶದಲ್ಲಿ ಅಲ್ಪಸಂಖ್ಯಾತ ಹೆಣ್ಣುಮಕ್ಕಳಿಗೆ ಆಗುತ್ತಿರುವ ಕಿರುಕುಳದ ಬಗ್ಗೆ ಮಾತನಾಡಲಿ' ಎಂದಿದ್ದಾರೆ ಶೋಭಾ ಕರಂದ್ಲಾಜೆ.
ಅಭಿವೃದ್ಧಿಯ ಕಾರ್ಯಸೂಚಿಯನ್ನು ಕಾಶ್ಮೀರಕ್ಕೂ ವಿಸ್ತರಿಸಲಾಗಿದೆಯೇ ವಿನಾ ದಮನ ಮಾಡುತ್ತಿಲ್ಲ! ಎಂದು ಶೋಭಾ ಕರಂದ್ಲಾಜೆ ಟ್ವೀಟ್ ಮಾಡಿದ್ದಾರೆ.
ಇಪ್ಪತ್ತೆರಡು ವರ್ಷದ ಮಲಾಲ ಸದ್ಯಕ್ಕೆ ಯುನೈಟೆಡ್ ಕಿಂಗ್ ಡಮ್ ನಲ್ಲಿ ಇದ್ದಾರೆ. ಏಳು ವರ್ಷಗಳ ಹಿಂದೆ ಪಾಕಿಸ್ತಾನದ ಸ್ವಾಟ್ ಕಣಿವೆಯಲ್ಲಿ ತಾಲಿಬಾನ್ ಉಗ್ರರಿಂದ ಮಲಾಲ ಮೇಲೆ ಹತ್ಯಾ ಯತ್ನ ನಡೆದಿತ್ತು. ಇನ್ನು ಕಾಶ್ಮೀರಲ್ಲಿ ಸದ್ಯದ ಪರಿಸ್ಥಿತಿ ಬಗ್ಗೆ ಆಕೆ ತೀವ್ರ ಕಳವಳ ಇದೆ ಎಂದು ಹೇಳಿದ್ದಾರೆ.