ಹೇಮಾಮಾಲಿನಿ ದಿನಾ ಕುಡೀತಾರೆ, ಹಾಗಂತ... : ವಿವಾದಾತ್ಮಕ ಹೇಳಿಕೆ
ರೈತರ ಆತ್ಮಹತ್ಯೆಯ ಬಗ್ಗೆ ಮಾತನಾಡುತ್ತಿದ್ದ ಮಹಾರಾಷ್ಟ್ರದ ಪಕ್ಷೇತರ ಶಾಸಕ ಬಚ್ಚು ಕಡು ಹೇಮಾ ಮಾಲಿನಿಯವರ ಹೆಸರನ್ನು ವಿವಾದಕ್ಕೆಳೆದು ತಂದಿರುವುದು ಚರ್ಚೆಗೆ ಗ್ರಾಸವಾಗಿದೆ.
ನಾಂದೇಡ್ , ಏಪ್ರಿಲ್ 14: ರೈತರ ಆತ್ಮಹತ್ಯೆಗೆ ಕುಡಿತವೇ ಕಾರಣ ಎನ್ನುವುದಾದರೆ, ಹೇಮಾ ಮಾಲಿನಿ ದಿನಾ ಕುಡಿಯುತ್ತಾರೆ, ಅವರೇನು ಆತ್ಮಹತ್ಯೆ ಮಾಡಿಕೊಂಡಿದ್ದಾರಾ..? ಎಂಬ ವಿವಾದಾತ್ಮಕ ಹೇಳಿಕೆ ನೀಡಿದ ಮಹಾರಾಷ್ಟ್ರದ ಶಾಸಕರೊಬ್ಬರು ಇದೀಗ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ!
ಮಹಾರಾಷ್ಟ್ರದ ಅಚಲ್ ಪುರ ಕ್ಷೇತ್ರದ ಪಕ್ಷೇತರ ಶಾಸಕ ಓಂ ಪ್ರಕಾಶ್ ಬಾಬಾರಾವ್ ಕಡು (ಬಚ್ಚು ಕಡು) ಎಂಬುವವರು ನಾಂದೇಡ್ ನಲ್ಲಿ ನಡೆದ ಸಭೆಯೊಂದರಲ್ಲಿ ಮಾತನಾಡುತ್ತಿದ್ದ ಸಮಯದಲ್ಲಿ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮಹಾರಾಷ್ಟ್ರದಲ್ಲಿ ಹೆಚ್ಚಿರುವ ರೈತರ ಆತ್ಮಹತ್ಯೆ ಸಮಸ್ಯೆಯ ಬಗ್ಗೆ ಮಾತನಾಡುತ್ತಿದ್ದ ಅವರು, ರೈತರ ಆತ್ಮಹತ್ಯೆಗೆ ಕುಡಿತವೂ ಕಾರಣವಲ್ಲ, ಸಾಲವೂ ಕಾರಣವಲ್ಲ ಎಂದಿದ್ದಾರೆ.[ಸಾವಿನ ಮನೆಯಲ್ಲೂ ಲಂಚಾವತಾರ, ಇದೆಂಥ ವಿಪರ್ಯಾಸ!]
"ಕುಡಿತ ಕಾರಣವಾಗಿದ್ದರೆ ಹೇಮಾ ಮಾಲಿನಿ ಸಹ ದಿನಾ ಕುಡಿಯುತ್ತಾರೆ, ಹಾಗಾದರೆ ಅವರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ?, ರೈತರ ಆತ್ಮಹತ್ಯೆಗೆ ಅವರ ಅತಿಯಾದ ಖರ್ಚು ವೆಚ್ಚವೇ ಕಾರಣ ಎಂದಾದರೆ, ನಿತಿನ್ ಗಡ್ಕರಿ ತಮ್ಮ ಮಗನ ಮದುವೆಗೆಂದು 4 ಕೋಟಿ ಹಣ ವೆಚ್ಚ ಮಾಡಿದ್ದಾರೆ, ಅವರೇನು ಆತ್ಮಹತ್ಯೆ ಮಾಡಿಕೊಂಡಿದ್ದಾರಾ?" ಎಂದು ಸಹ ಪ್ರಶ್ನಿಸಿದ್ದಾರೆ.[ವಿಜಯಪುರದಲ್ಲಿ ಸಾಲಬಾಧೆಗೆ ರೈತ ಆತ್ಮಹತ್ಯೆ]
"ಬೆಳೆಗಳ ಉತ್ಪಾದನೆ ಹೆಚ್ಚಾದರೂ ಅವರ ಆದಾಯ ಮಾತ್ರ ಹೆಚ್ಚುತ್ತಿಲ್ಲ. ಇದೇ ರೈತರ ಆತ್ಮಹತ್ಯೆಗೆ ಮುಖ್ಯ ಕಾರಣ. ಬೇರೆ ಯಾವ ಕಾರಣವೂ ಅಲ್ಲ" ಎಂದು ಕಡು ಹೇಳಿದ್ದಾರೆ.
ಒಟ್ಟಿನಲ್ಲಿ ಕನಸಿನ ಕನ್ಯೆ, ಬಿಜೆಪಿ ಸಂಸದೆ ಹೇಮಾ ಮಾಲಿನಿಯವರನ್ನು ಸುಖಾಸುಮ್ಮನೆ ವಿವಾದಕ್ಕೆಳೆದು ತಂದಿರುವ ಕಡು ಬಗ್ಗೆ ಹೇಮಾ ಮಾಲಿನಿ ಅವರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವರ್ಷದ ಹಿಂದೆ ಆರ್ ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್, "ಬಿಹಾರದಲ್ಲಿ ಹೇಮಾ ಮಾಲಿನಿಯ ಕೆನ್ನೆಯಷ್ಟೇ ಮೃದುವಾದ ರಸ್ತೆ ಮಾಡುತ್ತೇವೆಂದು" ಹೇಳಿ ವಿವಾದ ಸೃಷ್ಟಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.