ಉನ್ನಾವೋ ಪ್ರಕರಣ: ಬಿಜೆಪಿ ಶಾಸಕನ ಮೇಲೆ ಚಾರ್ಜ್ ಶೀಟ್!
ಲಕ್ನೋ, ಜುಲೈ 11: ಉತ್ತರ ಪ್ರದೇಶದ ಉನ್ನಾವೋ ಕ್ಷೇತ್ರದ ಬಿಜೆಪಿ ಶಾಸಕ ಕುಲ್ದೀಪ್ ಸಿಂಗ್ ಸೆನ್ಗಾರ್ ಅವರ ವಿರುದ್ಧ ಸಿಬಿಐ ತನಿಖಾ ತಂಡವು ಇಂದು ವಿಶೇಷ ಸಿಬಿಐ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದೆ.
ಪ್ರಕರಣದ ತನಿಖೆ ನಡೆಸಲು ಉತ್ತರ ಪ್ರದೇಶ ಸರ್ಕಾರ ರಚಿಸಿದ್ದ ವಿಶೇಷ ತನಿಖಾ ದಳದ ಸೂಚನೆ ಮೇರೆಗೆ ಶಾಸಕರ ವಿರುದ್ಧ ಎಫ್ ಐಆರ್ ದಾಖಲಿಸಿತ್ತು. ಆದರೆ, ತ್ವರಿತ ಗತಿಯಲ್ಲಿ ಪ್ರಕರಣದ ತನಿಖೆಗೆ ತೀವ್ರ ಒತ್ತಡ ಬಂದ ಹಿನ್ನಲೆಯಲ್ಲಿ ಅತ್ಯಾಚಾರ ಪ್ರಕರಣವನ್ನು ಸಿಬಿಐ(ಕೇಂದ್ರ ತನಿಖಾ ದಳ)ಗೆ ವಹಿಸಲಾಗಿತ್ತು.
40 ಕೊಲೆಗೈದ ಗ್ಯಾಂಗ್ ಸ್ಟರ್ ಬಜರಂಗಿ ಹಿಂದಿನ ಕಥೆ!
ಕಳೆದ ವರ್ಷ ಜೂನ್ 04ರಂದು ಉನ್ನಾವೋವಿನಲ್ಲಿರುವ ತಮ್ಮ ನಿವಾಸದಲ್ಲಿ ಕುಲದೀಪ್ ಅವರು ಅಪ್ರಾಪ್ತ(16 ವರ್ಷ ವಯಸ್ಸಿನ) ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿದ್ದಾರೆ. ಕ್ರಿಮಿನಲ್ ಸಂಚು, ಐಪಿಸಿ ಸೆಕ್ಷನ್ 3 ಹಾಗೂ 4, The Protection of Children from Sexual Offences Act ಪೋಸ್ಕೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ.
ಕತುವಾ, ಉನ್ನಾವೋ ಅತ್ಯಾಚಾರದ ಬಗ್ಗೆ ಮೌನ ಮುರಿದ ಮೋದಿ
ಸಂತ್ರಪ್ತ ಬಾಲಕಿಯ ಕುಟುಂಬಸ್ಥರು ಲಕ್ನೋದಲ್ಲಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಿವಾಸದ ಮುಂದೆ ಆತ್ಮಹತ್ಯೆಗೆ ಯತ್ನಿಸಿದ್ದರು.ಈ ಘಟನೆ ಬಳಿಕ ಸಂತ್ರಸ್ತೆ ತನ್ನ ತಂದೆಯನ್ನು ಕಳೆದುಕೊಂಡಳು, ಆದರೂ ತನಗಾದ ನೋವಿನ ಬಗ್ಗೆ ಹೇಳಿಕೊಳ್ಳಲು ಸಾಧ್ಯವಾಗಿರಲಿಲ್ಲ. ತನಿಖೆಯನ್ನು ಸಿಬಿಐಗೆ ವಹಿಸಿದ ಬಳಿಕ ಬಾಲಕಿ ತನ್ನ ನೋವನ್ನು ತೋಡಿಕೊಂಡಳು, ಈಗ ಶಾಸಕರ ಮೇಲೆ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಪ್ರಕರಣದ ವಿವರ ಮುಂದೆ ಓದಿ...
ಸಂತ್ರಸ್ತೆಯ ತಂದೆ ದುರ್ಮರಣ
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಲಕ್ನೋ ನಿವಾಸದ ಮುಂದೆ ನ್ಯಾಯಕ್ಕಾಗಿ ಆಗ್ರಹಿಸಿ ಸಂತ್ರಸ್ತೆಯ ಕುಟುಂಬ ಆತ್ಮಹತ್ಯೆಗೆ ಯತ್ನಿಸಿತ್ತು.ಈ ಸಂದರ್ಭದಲ್ಲಿ ಸಂತ್ರಸ್ತೆಯ ತಂದೆಯನ್ನು ಬಂಧಿಸಲಾಗಿತ್ತು ಮತ್ತು ಅವರು ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದರು.
ನಂತರ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಸಂತ್ರಸ್ತೆ ತಂದೆ ಸಾವನ್ನಪ್ಪಲು ಆಘಾತ ಮತ್ತು ಸೆಪ್ಟಿಸೆಮಿಯಾ ಕಾರಣ ಎಂದು ಹೇಳಲಾಗಿತ್ತು. ಈ ಘಟನೆ ಬೆನ್ನಲ್ಲೆ 6 ಜನ ಪೊಲೀಸರನ್ನು ಅಮಾನತು ಮಾಡಲಾಗಿತ್ತು. ಮತ್ತು 4 ಜನ ಆರೋಪಿಗಳನ್ನು ಸಂತ್ರಸ್ತೆಯ ತಂದೆಗೆ ಜೈಲಿನಲ್ಲಿ ಹೊಡೆದ ಕಾರಣಕ್ಕೆ ಬಂಧಿಸಲಾಗಿತ್ತು.ಭಯದಿಂದ ಬಾಯಿ ಬಿಡಲಿಲ್ಲ
"2017 ಜೂನ್ 4 ರಂದು ನನಗೆ ಕೆಲಸ ಕೊಡಿಸುವುದಾಗಿ ನನ್ನನ್ನು ಅವರ ಮನೆಗೆ ಕರೆಸಿಕೊಂಡ ಸನ್ಗಾರ್ ನನ್ನ ಮೇಲೆ ಅತ್ಯಾಚಾರ ಎಸಗಿದರು. ಅವರ ಕೋಣೆಯ ಹೊರಗೆ ಹಲವರಿದ್ದುದು ನನಗೆ ಗೊತ್ತಿತ್ತು. ಆದ್ದರಿಂದ ನಾನು ಜೋರಾಗಿ ಕೂಗಿಕೊಂಡೆ. ಆದರೆ ಯಾರೂ ನನಗೆ ಸಹಾಯ ಮಾಡಲಿಲ್ಲ. ನಾನು ಜೋರಾಗಿ ಅಳುವುದಕ್ಕೆ ಶುರುಮಾಡಿದೆ. ನನ್ನ ಕಣ್ಣಿರನ್ನು ಒರೆಸುತ್ತ, 'ನಿನಗೆ ಒಳ್ಳೆಯ ಕೆಲಸ ನೀಡುತ್ತೇನೆ' ಎಂದರು.
ನಾನು ಪೊಲೀಸರಿಗೆ ದೂರು ನೀಡುತ್ತೇನೆ ಎಂದೆ. ದೂರು ನೀಡಿದರೆ ನಿನ್ನ ತಂದೆ ಮತ್ತು ತಮ್ಮನ್ನು ಕೊಲ್ಲುತ್ತೇನೆ ಎಂದು ಬೆದರಿಕೆ ಒಡ್ಡಿದರು. ನಂತರ ಮನೆಗೆ ಬಂದು ಈ ವಿಷಯವನ್ನು ಮೊದಲು ನಾನು ಮನೆಯಲ್ಲಿ ಹೇಳಿರಲಿಲ್ಲ. ಆದರೆ ನಂತರ ಅಮ್ಮನಿಗೆ ಹೇಳಿದೆ. ಅಮ್ಮ ಆಘಾತಗೊಂದರು. ಸದ್ಯಕ್ಕೆ ಸುಮ್ಮನಿರು ಎಂದು ಬಾಯಿ ಮುಚ್ಚಿಸಿದರು." ಎಂದು ಸಂತ್ರಸ್ಥೆ ಆ ಕರಾಳ ದಿನವನ್ನು ನೆನಪಿಸಿಕೊಂಡಿದ್ದಾರೆ.ನಿರಂತರ ಅತ್ಯಾಚಾರ
ಏಳು ದಿನಗಳ ನಂತರ ನಾನು ಯಾವುದೋ ಕೆಲಸಕ್ಕೆಂದು ಮನೆಯಿಂದ ಆಚೆ ಹೋಗಿದ್ದಾಗ ಒಂದು ಎಸ್ ಯುವಿಯಲ್ಲಿ ಮೂವರು ಬಂದು ನನ್ನನ್ನು ಎಳೆದುಕೊಂಡು ಹೋಗಿ ಆ ವಾಹನದಲ್ಲೇ ಅತ್ಯಾಚಾರ ಮಾಡಿದರು. ನಂತರ ಒಂಬತ್ತು ದಿನಗಳ ಕಾಲ ನನ್ನ ಮೇಲೆ ನಿರಂತರ ಅತ್ಯಾಚಾರ ನಡೆಯಿತು. ನಂತರ ನನ್ನನ್ನು 60,000 ರೂಪಾಯಿಗೆ ಮಾರಲು ಪ್ರಯತ್ನಿಸಿದರು.
ಆದರೆ ಅಷ್ಟರಲ್ಲಿ ನಾನು ನಾಪತ್ತೆಯಾಗಿದ್ದೇನೆಂದು ನನ್ನ ತಾಯಿ ಪೊಲೀಸರಿಗೆ ದೂರು ನೀದಿದ್ದರು. ಈ ವಿಷಯ ತಿಳಿಯುತ್ತಿದ್ದಂತೆಯೇ ಅವರು ನನ್ನನ್ನು ಜೂನ್ 20 ರಂದು ಮನೆಯ ಬಳಿ ಬಿಟ್ಟು ಹೋದರು. ಈ ಕೃತ್ಯ ಎಸಗಿದ ಶುಭಂ ಸಿಂಗ್, ಬ್ರಿಜೇಶ್ ಯಾದವ್ ಮತ್ತು ಅವಧ್ ನಾರಾಯಣ್ ಅವರನ್ನು ಬಂಧಿಸಲಾಯಿತು.
ಸಿಬಿಐ ಬಂದ ಬಳಿಕ ತನಿಖೆ ಚುರುಕು
2017 ರ ಜೂನ್ 20 ರಂದು ಮಾಖಿ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ದೂರು ದಾಖಲಿಸಲಾಯ್ತು. ಆದರೆ ಈ ವಿಷಯದಲ್ಲಿ ಸೆನ್ಗಾರ್ ಸಹ ಆರೋಪಿ ಎಂಬುದು ಮೊದಲು ಗೊತ್ತಿರಲಿಲ್ಲ. ಈ ವಿಷಯ ತಿಳಿದಾಗ ದೂರು ದಾಖಲಿಸಿಕೊಳ್ಳಲು ಪೊಲೀಸರು ನಿರಾಕರಿಸಿದರು. ಅಲ್ಲದೆ ಸೆನ್ಗಾರ್ ಅವರ ಕಡೆಯವರಿಂದ ಸಾಕಷ್ಟು ಬೆದರಿಕೆ ಕರೆಗಳೂ ಬಂದವು. ಆದರೆ ಈ ವಿಷಯ ಮಾಧ್ಯಮಗಳಲ್ಲೂ ಸದ್ದು ಮಾಡಿದ್ದರಿಂದ ನಂತರ ದೂರು ದಾಖಲಿಸಿಕೊಳ್ಳಲಾಯ್ತು. ವಿಶೇಷ ತನಿಖಾ ದಳದಿಂದ ಆರೋಪಿ ವಿರುದ್ಧ ಎಫ್ ಐಆರ್ ದಾಖಲಾಗಿತ್ತು. ನಂತರ ಸಿಬಿಐಗೆ ಪ್ರಕರಣ ವಹಿಸಲಾಯಿತು. ಈಗ ವಿಶೇಷ ನ್ಯಾಯಾಲಯದಲ್ಲಿ ಬುಧವಾರ(ಜುಲೈ 11)ದಂದು ಶಾಸಕನ ವಿರುದ್ಧ ಚಾರ್ಜ್ ಶೀಟ್ ಹಾಕಲಾಗಿದೆ.