ಅಂದು ಮುಫ್ತಿ,ಇಂದು ಶರದ್ ಪವಾರ್: ಅಧಿಕಾರಕ್ಕಾಗಿ, ಮುಂದೆ ಓವೈಸಿಯೂ ಬಿಜೆಪಿಗೆ ಓಕೆ?
ಭಾರತೀಯ ಜನತಾ ಪಕ್ಷದ ಇಂದಿನ ಕಾಲಘಟ್ಟದ ನಾಯಕರು ಅಪರೂಪಕ್ಕೆ ಜನಸಂಘ, ಶ್ಯಾಂಪ್ರಸಾದ್ ಮುಖರ್ಜಿ ಮತ್ತಿತರ ಪೂರ್ವಜರ ತತ್ವ, ಸಿದ್ದಾಂತಗಳ ಬಗ್ಗೆ ಭಾಷಣ ಮಾಡುವುದುಂಟು. ನಮ್ಮ ಪಕ್ಷದ ಎಲ್ಲಾ ಮುಖಂಡರು, ಕಾರ್ಯಕರ್ತರಲ್ಲಿ ಅದು ರಕ್ತಗತವಾಗಿದೆ ಎಂದು ಸಾರುತ್ತಾ ಬರುತ್ತಿರುವುದನ್ನೂ ನೋಡಿದ್ದೇವೆ, ಕೇಳಿದ್ದೇವೆ.
ಆದರೆ, ದೇಶದ ಸದ್ಯದ ರಾಜಕೀಯ ಬೆಳವಣಿಗೆಗಳನ್ನು ನೋಡಿದರೆ, ಬಿಜೆಪಿ ತನ್ನ ಹಿಂದಿನ ತತ್ವ, ಸಿದ್ದಾಂತಗಳಿಗೆ ಬದ್ದವಾಗಿದಿಯೇ ಎನ್ನುವ ಪ್ರಶ್ನೆ ಕಾಡುವುದು ಸಹಜ. ಈ ಪ್ರಶ್ನೆ ಮೂಡಲು ಕಾರಣವಾದ ಹಲವಾರು ವಿದ್ಯಮಾನಗಳಿಗೆ, 2014ರಿಂದ ಈಚೆಗೆ ಹಲವು ಸಾಕ್ಷಿಗಳು ಲಭ್ಯವಾಗುತ್ತವೆ.
ಬಹಳ ಹಿಂದಕ್ಕೆ ಹೋಗುವುದು ಬೇಡ; ಅಟಲ್, ಆಡ್ವಾಣಿಯವರ ಕಾಲದ ಬಿಜೆಪಿ ಮತ್ತು ಮೋದಿ, ಶಾ ಕಾಲದ ಈಗಿನ ಬಿಜೆಪಿಗೆ ಸ್ವಾಮ್ಯತೆಯಿದೆಯೇ ಎನ್ನುವುದು ಬಿಜೆಪಿಯ ಕಾರ್ಯಕರ್ತರಿಗೇ ಕಾಡುತ್ತಿರುವ ಪ್ರಶ್ನೆ.
ಅಂದು ದೇವೇಗೌಡ್ರು, ಇಂದು ಶರದ್ ಪವಾರ್: ಬಕ್ರಾ ಆಗಿದ್ದು ಯಾರು?
ಅಧಿಕಾರದ ವಿಚಾರ ಬಂದಾಗ, ಬಿಜೆಪಿ ತನ್ನ ಸಿದ್ದಾಂತವನ್ನು ಗಾಳಿಗೆ ತೂರುತ್ತಿದೆ ಎನ್ನುವ ಅಪವಾದಕ್ಕೆ ಹಿಂದೆಯೂ ಉದಾಹರಣೆಗಳು ಇದ್ದವೂ, ಇಂದಿನ ಮಹಾರಾಷ್ಟ್ರ ಬೆಳವಣಿಗೆ ಇದಕ್ಕೆ ಮತ್ತೊಂದು ಸೇರ್ಪಡೆಯಾಗಿದೆ. ಅಧಿಕಾರದ ಚುಕ್ಕಾಣಿ ಹಿಡಿಯಲು, ಬಿಜೆಪಿ ಯಾರ ಜೊತೆಯಾದರೂ, ಕೈಜೋಡಿಸುತ್ತಾ ಎನ್ನುವ ಸಂದೇಹ, ಮಹಾರಾಷ್ಟ್ರದ ಬೆಳವಣಿಯ ನಂತರ ಇನ್ನಷ್ಟು ಹೆಚ್ಚಾಗಲಿದೆ. ಕೆಲವೊಂದು ಸ್ಯಾಂಪಲ್:
ಪಿಡಿಪಿ ಮುಖ್ಯಸ್ಥೆಯಾಗಿದ್ದ ಮೆಹಬೂಬಾ ಮುಫ್ತಿ ಜೊತೆ ಸರಕಾರ ರಚನೆ
ಬಿಜೆಪಿಯ ಯಾವುದೇ ಸಿದ್ದಾಂತಗಳಿಗೆ ಹತ್ತಿರವಾಗಿರದ ಪೀಪಲ್ಸ್ ಡೆಮೊಕ್ರಾಟಿಕ್ ಪಾರ್ಟಿ (ಪಿಡಿಪಿ) ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡಿತ್ತು. ಪಿಡಿಪಿ ಮುಖ್ಯಸ್ಥೆಯಾಗಿದ್ದ ಮೆಹಬೂಬಾ ಮುಫ್ತಿ ಜೊತೆ ಕೈಜೋಡಿಸಿ, ಬಿಜೆಪಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಸರಕಾರವನ್ನೂ ರಚಿಸಿತು. 04.04.2016ರಲ್ಲಿ ಮೆಹಬೂಬಾ ಮುಫ್ತಿ, ಬಿಜೆಪಿಯ ಬೆಂಬಲದೊಂದಿಗೆ ಸಿಎಂ ಆದರು. ಜೂನ್ 2018ರಲ್ಲಿ ಬಿಜೆಪಿ ಬೆಂಬಲ ಹಿಂದಕ್ಕೆ ಪಡೆದಿದ್ದರಿಂದ ಅವರು ರಾಜೀನಾಮೆ ನೀಡಿದರು.
ಆಪರೇಷನ್ ಕಮಲ
ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರ ಅಧಿಕಾರದಲ್ಲಿದ್ದಾಗ, ನಡೆದ ಆಪರೇಷನ್ ಕಮಲದಿಂದಾಗಿ ಕುಮಾರಸ್ವಾಮಿ ಸರಕಾರ ಪತನಗೊಂಡಿತು. ಹದಿನೇಳು ಶಾಸಕರು ತಾವಿದ್ದ (ಕಾಂಗ್ರೆಸ್-ಜೆಡಿಎಸ್) ಪಕ್ಷಕ್ಕೆ ರಾಜೀನಾಮೆ ನೀಡಿದರು. ಈ ವಿಚಾರದಲ್ಲಿ ಸುಪ್ರೀಂಕೋರ್ಟ್ ತೀರ್ಪನ್ನು ನೀಡಿ, ಇವರೆಲ್ಲಾ ಮತ್ತೆ ಚುನಾವಣೆಗೆ ಸ್ಪರ್ಧಿಸಬಹುದೆಂದು ಆದೇಶ ನೀಡಿತು. ಇವರೆಲ್ಲರೂ, ಬಿಜೆಪಿ ಟಿಕೆಟಿನಿಂದ ಈಗ ಸ್ಪರ್ಧಿಸುತ್ತಿದ್ದಾರೆ.
ನಿದ್ದೆಯಿಂದ ಏಳುವ ಹೊತ್ತಿಗೆ ಮಹಾರಾಷ್ಟ್ರಕ್ಕೆ ಫಡ್ನವಿಸ್ ಸಿಎಂ, ಅಜಿತ್ ಪವಾರ್ ಡಿಸಿಎಂ!
ಮತ್ತೆ, ಜೆಡಿಎಸ್ ಜೊತೆ ಹೊಂದಾಣಿಕೆಯ ಮಾತು
2006ರಲ್ಲಿ ಜೆಡಿಎಸ್ ಜೊತೆ ಮೈತ್ರಿ ಸರಕಾರ (ಕರ್ನಾಟಕ) ಬಿಜೆಪಿ ನಡೆಸಿತ್ತು. ಈಗ ಅಂದರೆ, 2019ರಲ್ಲಿ, ಒಂದು ವೇಳೆ, ಉಪಚುನಾವಣೆಯಲ್ಲಿ ಬಿಜೆಪಿಗೆ ನಿರೀಕ್ಷಿಸಿದಷ್ಟು ಸ್ಥಾನ ಸಿಗದೇ ಇದ್ದರೆ, ಮತ್ತೆ, ಜೆಡಿಎಸ್ ಜೊತೆ ಹೊಂದಾಣಿಕೆಯ ಮಾತು ಕೇಳಿಬರುತ್ತಿದೆ. ಯಡಿಯೂರಪ್ಪನವರ ಸರಕಾರ ಪತನಗೊಳ್ಳಲು ಬಿಡುವುದಿಲ್ಲ ಎನ್ನುವ ಹೇಳಿಕೆಯನ್ನು ಈಗಾಗಲೇ ದೇವೇಗೌಡ್ರು, ಕುಮಾರಸ್ವಾಮಿ ನೀಡುತ್ತಿದ್ದಾರೆ.
ಹರ್ಯಾಣ ಅಸೆಂಬ್ಲಿ ಚುನಾವಣೆಯ ಫಲಿತಾಂಶ
ಕೆಲವು ದಿನಗಳ ಹಿಂದೆ ಹರ್ಯಾಣ ಅಸೆಂಬ್ಲಿ ಚುನಾವಣೆಯ ಫಲಿತಾಂಶ ಅತಂತ್ರವಾದ ನಂತರ, ಬಿಜೆಪಿ ಇದೇ ತಂತ್ರಗಾರಿಕೆಯನ್ನು ಅಲ್ಲೂ ಬಳಸಿತ್ತು. ಚುನಾವಣಾ ಪ್ರಚಾರದ ವೇಳೆ, ಬಿಜೆಪಿ ವಿರುದ್ದ ಕಿಡಿಕಾರುತ್ತಿದ್ದ ದುಷ್ಯಂತ್ ಚೌತಾಲ ನೇತೃತ್ವದ ಜನನಾಯಕ ಜನತಾಪಾರ್ಟಿ ಜೊತೆ ಬಿಜೆಪಿ ಕೈಜೋಡಿಸಿತು. ಬಿಜೆಪಿಯ ಮನೋಹರ್ ಲಾಲ್ ಖಟ್ಟರ್ ಸಿಎಂ ಆದರು, ದುಷ್ಯಂತ್, ಡಿಸಿಎಂ ಆದರು.
ಮಹಾರಾಷ್ಟ್ರ. ಊಹಿಸಲೂ ಅಸಾಧ್ಯವಾದ ರಾಜಕೀಯ ಬೆಳವಣಿಗೆ
ಈಗ ಲೇಟೆಸ್ಟ್ ಸೇರ್ಪಡೆಯೆಂದರೆ ಮಹಾರಾಷ್ಟ್ರ. ಊಹಿಸಲೂ ಅಸಾಧ್ಯವಾದ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ತನ್ನ ಕಟ್ಟಾ ವಿರೋಧಿ ಶರದ್ ಪವಾರ್ ನೇತೃತ್ವದ ಎನ್ಸಿಪಿ ಜೊತೆ ಕೈಜೋಡಿಸಿದೆ. ಹಿಂದಿನ ರಾತ್ರಿ ಶಿವಸೇನೆಯ ಠಾಕ್ರೆ ಮುಖ್ಯಮಂತ್ರಿಯೆಂದೇ ಮೂರು ಪಕ್ಷಗಳು ಅಂತಿಮ ನಿರ್ಧಾರ ತೆಗೆದುಕೊಂಡಿದ್ದವು. ಆದರೆ, ಬಿಜೆಪಿ ಇಲ್ಲಿ ಎನ್ಸಿಪಿ ಜೊತೆ ಕೈಜೋಡಿಸಿ ಗದ್ದುಗೇರಿದೆ. ಈ ಎಲ್ಲಾ ವಿದ್ಯಮಾನಗಳನ್ನು ಅವಲೋಕಿಸಿದರೆ, ಬಿಜೆಪಿ ತನ್ನ ತತ್ವ, ಸಿದ್ದಾಂತಗಳಿಗೆ ಬದ್ದವಾಗಿದಿಯೇ ಎನ್ನುವ ಪ್ರಶ್ನೆ ಕಾಡುವುದು ಸಹಜ.