ಬಿಜೆಪಿ ನನ್ನ ಪಕ್ಷ, ಲಾಲೂ ನನ್ನ ಕುಟುಂಬ: ಶತ್ರುಘ್ನ ಸಿನ್ಹಾ
ಪಾಟ್ನಾ, ಜೂನ್ 14: "ಬಿಜೆಪಿ ನನ್ನ ಪಕ್ಷವಾಗಿದ್ದಿರಬಹುದು. ಆದರೆ ಆರ್ ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಮತ್ತು ಅವರ ಮಕ್ಕಳು ನನ್ನ ಕುಟುಂಬದವರಿದ್ದ ಹಾಗೆ" ಎಂದು ಬಿಜೆಪಿ ಮುಖಂಡ ಶತ್ರುಘ್ನ ಸಿನ್ಹಾ ಹೇಳಿದ್ದಾರೆ.
ಆರ್ ಜೆಡಿ ಪಕ್ಷದ ಮುಖಂಡರು ಏರ್ಪಡಿಸಿದ್ದ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಕುರಿತು ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ಆವರು ಈ ರೀತಿ ಹೇಳಿದರು.
ಅತ್ತ ಜೈಲಿನಲ್ಲಿ ಲಾಲೂ, ಇತ್ತ ಪುತ್ರರ ನಡುವೆ ಕಿರಿಕ್ : ಅಡ್ವಾಂಟೇಜ್ ಬಿಜೆಪಿ?
"ಲಾಲೂ ಜೀ, ರಾಬ್ರಿ ಜೀ, ತೇಜಸ್ವಿ, ತೇಜ್, ಮಿಸಾ ಎಲ್ಲರೂ ನನ್ನ ಕುಟುಂಬದ ಸ್ನೇಹಿತರು, ಅವರು ನೀಡಿದ ಆಮಂತ್ರಣದ ಮೇರೆಗೆ ನಾನು ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದೇನೆ. ಅದು(ಬಿಜೆಪಿ) ನನ್ನ ಪಕ್ಷ. ಇದು ನನ್ನ ಕುಟುಂಬ" ಎಂದು ಅವರು ಹೇಳಿದರು.
ಇತ್ತೀಚಿನ ಕೆಲವು ದಿನಗಳಿಂದ ಶತ್ರುಘ್ನ ಸಿನ್ಹಾ ಬಿಜೆಪಿ ತೊರೆದು ಆರ್ ಜೆಡಿಗೆ ಸೇರುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
"ಬಿಹಾರಕ್ಕಾಗಿ ಶತ್ರುಘ್ನ ಸಿನ್ಹಾ ಭಳಲ ಕೊಡುಗೆ ನೀಡಿದ್ದಾರೆ. ಆದ್ದರಿಂದಲೇ ಅವರನ್ನು ಬಿಹಾರಿ ಬಾಬು ಎಂದು ಕರೆಯಲಾಗುತ್ತದೆ. ಬಿಜೆಪಿಯ ನಿಷ್ಠಾವಂತ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ. ಆದರೆ ಅವರನ್ನು ಬಿಜೆಪಿ ನಡೆಸಿಕೊಳ್ಳುತ್ತಿರುವ ರೀತಿ ಸರಿಯಿಲ್ಲ" ಎಂದು ಇದೇ ಸಂದರ್ಭದಲ್ಲಿ ಲಾಲೂ ಪ್ರಸಾದ್ ಪುತ್ರ ತೇಜಸ್ವಿ ಯಾದವ್ ಹೇಳಿದರು.
ಶತ್ರುಘ್ನ ಸಿನ್ಹಾ ಆರ್ ಜೆಡಿ ಸೇರುವ ವದಂತಿ ಕುರಿತು ಪ್ರತಿಕ್ರಿಯೆ ನೀಡಿದ ಯಾದವ್, 'ಅವರ ಕೆಲಸಗಳನ್ನು ನೋಡಿದರೆ ಅವರನ್ನು ಯಾರಾದರೂ ತಮ್ಮ ಪಕ್ಷಕ್ಕೆ ಬರುವಂತೆ ಕೇಳುತ್ತಾರೆ. ಆದರೆ ಅಂತಿಮ ನಿರ್ಧಾರ ಅವರಿಗೇ ಬಿಟ್ಟಿದ್ದು' ಎಂದರು.