ಕಳಚಿದ ಮತ್ತೊಂದು ಕೊಂಡಿ: ಇನ್ನೆಲ್ಲಿಯ 'ಕಾಂಗ್ರೆಸ್ ಮುಕ್ತ್ ಭಾರತ್' ಮಿಸ್ಟರ್ ಅಮಿತ್ ಶಾ?
2014ರ ಲೋಕಸಭಾ ಚುನಾವಣೆಯ ವೇಳೆ, ಎಲ್ಲೆಲ್ಲೂ ಮೋದಿ ಹವಾ ಇದ್ದ ಕಾಲವದು. 'ಅಬ್ ಕೀ ಬಾರ್ ಮೋದಿ ಸರ್ಕಾರ್' ಎನ್ನುವ ಘೋಷವಾಕ್ಯದ ಜೊತೆಗೆ 'ಕಾಂಗ್ರೆಸ್ ಮುಕ್ತ್ ಭಾರತ್' ಎನ್ನುವ ಘೋಷಣೆಯೂ ಬಿಜೆಪಿಯವರಿಂದ ಮೊಳಗುತ್ತಿತ್ತು.
'ಕಾಂಗ್ರೆಸ್ ಮುಕ್ತ್ ಭಾರತ್' ಎನ್ನುವ ಬಿಜೆಪಿಯ ಘೋಷಣೆ, ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ಅಂತರವನ್ನು ಹೆಚ್ಚಿಸಿದ್ದು ಒಂದೆಡೆಯಾದರೆ, ಮೋದಿ - 1 ಅವಧಿಯಲ್ಲಿ, ಬಿಜೆಪಿ, ಉತ್ತಮ ಸಾಧನೆಯನ್ನೂ ತೋರಲಾರಂಭಿಸಿತು. ಹಲವು ರಾಜ್ಯಗಳ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿಗೆ ಮೇಲುಗೈ ಸಾಧಿಸಿತು. ಇದರಿಂದ, ಸ್ಪೂರ್ತಿ ಪಡೆದ ಬಿಜೆಪಿ, ಹೋದಲ್ಲಿ, ಬಂದಲೆಲ್ಲಾ, ಸ್ವರ್ಗಕ್ಕೆ ಮೂರೇ ಗೇಣು ಎಂದು ಬೀಗಲಾರಂಭಿಸಿತು.
2014ರಲ್ಲಿ ನಡೆದ ಎಂಟು ರಾಜ್ಯಗಳ ಅಸೆಂಬ್ಲಿ ಚುನಾವಣೆಯಲ್ಲಿ ಅರುಣಾಚಲ ಪ್ರದೇಶ ಹೊರತು ಪಡಿಸಿ, ಮಿಕ್ಕೆಲ್ಲಾ ಕಡೆ ಎನ್ಡಿಎ ಮೈತ್ರಿಕೂಟ ಜಯಭೇರಿ ಬಾರಿಸಿತು. ಆಂಧ್ರ, ಮಹಾರಾಷ್ಟ್ರ, ಹರಿಯಾಣ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ, ಒರಿಸ್ಸಾ, ಸಿಕ್ಕಿಂನಲ್ಲಿ ಕಾಂಗ್ರೆಸ್ಸೇತರ ಸರಕಾರ ಅಧಿಕಾರಕ್ಕೆ ಬಂತು.
ಜಾರ್ಖಂಡ್ ಫಲಿತಾಂಶ: ಬಿಜೆಪಿ ಮಿತ್ರಪಕ್ಷಗಳಿಂದ ಶೂನ್ಯ ಸಂಪಾದನೆ
2015ರಲ್ಲಿ ನಡೆದ ದೆಹಲಿ ಮತ್ತು ಬಿಹಾರ ಅಸೆಂಬ್ಲಿ ಚುನಾವಣೆಯಲ್ಲೂ ಯುಪಿಎ ಮೈತ್ರಿಕೂಟ ಹಿನ್ನಡೆ ಅನುಭವಿಸಿತು. ದೆಹಲಿಯಲ್ಲಿ ಕಾಂಗ್ರೆಸ್ ಸೋತಿತು ಎನ್ನುವುದಕ್ಕಿಂತ, ಬಿಜೆಪಿ ಮುಖಭಂಗ ಅನುಭವಿಸಿದ್ದೇ ಹೈಲೆಟ್ ಆಗಿದ್ದು, ಯಾಕೆಂದರೆ, ಮೋದಿ ಚರಿಸ್ಮಾ ವರ್ಕೌಟ್ ಆಗದೇ ಇದ್ದದ್ದು. ಇದಾದ ನಂತರ, ಅಮಿತ್ ಶಾ/ಮೋದಿಯ 'ಕಾಂಗ್ರೆಸ್ ಮುಕ್ತ್ ಭಾರತ್' ಕನಸಿಗೆ ಒಂದೊಂದಾಗಿ ಏಟು ಬೀಳಲಾರಂಭಿಸಿತು.
2016ರಲ್ಲಿ ಐದು ರಾಜ್ಯಗಳ ಚುನಾವಣೆ
2016ರಲ್ಲಿ ಐದು ರಾಜ್ಯಗಳ ಚುನಾವಣೆ ನಡೆಯಿತು. ತಮಿಳುನಾಡಿನಲ್ಲಿ ಎಐಎಡಿಎಂಕೆ ಮತ್ತು ಅಸ್ಸಾಂನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂತು. ಇನ್ನು, ಪಶ್ಚಿಮ ಬಂಗಾಳ, ಪುದುಚೇರಿ, ಕೇರಳದಲ್ಲಿ ಬಿಜೆಪಿಯೇತರ ಪಕ್ಷಗಳು ಗದ್ದುಗೆಗೆ ಏರಿದವು. ಅಸ್ಸಾಂನಲ್ಲಿ ಅಧಿಕಾರಕ್ಕೆ ಬಂದಿದ್ದು ಬಿಜೆಪಿಯ ಸಾಧನೆಯಾಗಿತ್ತು.
ಬಿಜೆಪಿಗೆ ಸಿಕ್ಕ ಬಹುದೊಡ್ಡ ಜಯ ಎಂದರೆ ಅದು ಉತ್ತರಪ್ರದೇಶ
2017ರಲ್ಲಿ ನಡೆದ ಪಂಜಾಬ್ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಮುಖಭಂಗ ಅನುಭವಿಸಿತು. ಕಾಂಗ್ರೆಸ್ ಅಲ್ಲಿ ಅಧಿಕಾರಕ್ಕೇರಿತು. ಗುಜರಾತ್ ಚುನಾವಣೆಯನ್ನು ಬಿಜೆಪಿ ಪ್ರಯಾಸದಿಂದ ಗೆದ್ದಿತು. ಗೋವಾದಲ್ಲಿ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಬಿಜೆಪಿ ಸರಕಾರ ಅಧಿಕಾರಕ್ಕೆ ಬಂತು. ಆ ವರ್ಷ ಬಿಜೆಪಿಗೆ ಸಿಕ್ಕ ಬಹುದೊಡ್ಡ ಜಯ ಎಂದರೆ ಅದು ಉತ್ತರಪ್ರದೇಶ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಾಂಡ್ ನಲ್ಲಿ.
ಪೌರತ್ವ ಕಾಯ್ದೆ ಬಗ್ಗೆ ರಾಹುಲ್ ಗಾಂಧಿಗೆ ಎಳ್ಳಷ್ಟೂ ಜ್ಞಾನವಿಲ್ಲವೇ? ಏನಿದು ಬಿಜೆಪಿ ವ್ಯಂಗ್ಯ
ಮಧ್ಯಪ್ರದೇಶ, ಛತ್ತೀಸಗಢ, ರಾಜಸ್ಥಾನದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿತು
ಬಿಜೆಪಿಯ ಕಾಂಗ್ರೆಸ್ ಮುಕ್ತ್ ಭಾರತ್ ಕನಸಿಗೆ ಏಟು ಬೀಳಲಾರಂಭವಾಗಿದ್ದು 2018ರ ನಂತರ. ಹಿಂದಿ ಹೃದಯ ಭಾಗವಾದ ಮಧ್ಯಪ್ರದೇಶ, ಛತ್ತೀಸಗಢ, ರಾಜಸ್ಥಾನದಲ್ಲಿ ಬಿಜೆಪಿ ಅಧಿಕಾರವನ್ನು ಕಳೆದುಕೊಂಡಿತು. ಈ ಎಲ್ಲಾ ಕಡೆ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಜೊತೆಗೆ, ಕರ್ನಾಟಕದಲ್ಲೂ, ಅತಿದೊಡ್ಡ ಪಕ್ಷವಾದರೂ ಅಧಿಕಾರಕ್ಕೆ ಬರಲು ಸಾಧ್ಯವಾಗಲಿಲ್ಲ. ತೆಲಂಗಾಣದಲ್ಲಿ, ಯಾವ ಮೈತ್ರಿಕೂಟದ ಜೊತೆಗೂ ಗುರುತಿಸಿಕೊಳ್ಳದ TRS ಅಧಿಕಾರಕ್ಕೆ ಬಂತು.
ಮಹಾರಾಷ್ಟ್ರದಲ್ಲಿ ಬಿಜಿಪಿ ಅಧಿಕಾರ ಕಳೆದುಕೊಂಡಿತು
2019ರಲ್ಲಿ ನಡೆದ ಚುನಾವಣೆಯಲ್ಲೂ ಬಿಜೆಪಿ ಸಾಧನೆ ಗಣನೀಯವಾಗಿರಲಿಲ್ಲ. ಹರಿಯಾಣದಲ್ಲಿ ಪ್ರಯಾಸದಿಂದ ಅಧಿಕಾರಕ್ಕೆ ಬಂತು. ಆಂಧ್ರದಲ್ಲಿ ವೈಎಸ್ಆರ್, ಒರಿಸ್ಸಾದಲ್ಲಿ ಬಿಜೆಡಿ ಪ್ರಾಬಲ್ಯ ಮೆರೆಯಿತು. ಮಹಾರಾಷ್ಟ್ರದಲ್ಲಿ ಬಿಜಿಪಿ ಅಧಿಕಾರ ಕಳೆದುಕೊಂಡಿತು. ಶಿವಸೇನೆ -ಎನ್ಸಿಪಿ-ಕಾಂಗ್ರೆಸ್ ಮೈತ್ರಿ ಸರಕಾರ ಅಧಿಕಾರಕ್ಕೆ ಬಂತು.
ಇನ್ನೆಲ್ಲಿಯ ಕಾಂಗ್ರೆಸ್ ಮುಕ್ತ್ ಭಾರತ್?
ಹಾಲೀ ವರ್ಷದಲ್ಲಿ ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ಬಂದಿದ್ದು ಮಾತ್ರ ಬಿಜೆಪಿಯ ಸಾಧನೆ. ಕಳೆದ ಎರಡು ವರ್ಷಗಳಲ್ಲಿ ಬಿಜೆಪಿ ತನ್ನ ಹಿಡಿತದಲ್ಲಿದ್ದ ಪ್ರಮುಖ ನಾಲ್ಕು ರಾಜ್ಯಗಳನ್ನು ಕಳೆದುಕೊಂಡಿದೆ. ಅದಕ್ಕೆ ಇನ್ನೊಂದು ಸೇರ್ಪಡೆಯಾಗಲಿದೆ. ಅದು, ಮತಎಣಿಕೆ ಜಾರಿಯಲ್ಲಿರುವ ಜಾರ್ಖಂಡ ಅಸೆಂಬ್ಲಿ ಚುನಾವಣೆ. ಅಲ್ಲಿಗೆ, ಪ್ರಮುಖ ಐದು ರಾಜ್ಯಗಳನ್ನು ಬಿಜೆಪಿ ಕಳೆದುಕೊಂಡಂತಾಗಿದೆ. ಹಾಗಾಗಿ, ಇನ್ನೆಲ್ಲಿಯ ಕಾಂಗ್ರೆಸ್ ಮುಕ್ತ್ ಭಾರತ್?