'ಬಿಜೆಪಿಯಲ್ಲೇ ಕಿಂಗ್ ಇದ್ದಾರೆ, ಕಿಂಗ್ ಮೇಕರ್ ಬೇಕಾಗಿಲ್ಲ'
ನವದೆಹಲಿ, ಮೇ 7: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇರುವ ಬೃಹತ್ ಬೆಂಬಲದ ಕಾರಣದಿಂದ ಬಿಜೆಪಿ ಭಾರಿ ಬಹುಮತ ಪಡೆದುಕೊಂಡು ಸ್ವತಂತ್ರವಾಗಿಯೇ ಸರ್ಕಾರ ರಚಿಸಲಿದೆ ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಹೇಳಿದರು.
ಎನ್ಡಿಟಿವಿಯೊಂದಿಗೆ ಸಂದರ್ಶನದಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಮತ್ತೆ ಸರ್ಕಾರ ರಚಿಸಲು ಬಿಜೆಪಿಗೆ ಯಾರ ಸಹಾಯದ ಅಗತ್ಯವೂ ಬೇಕಾಗುವುದಿಲ್ಲ. ಅದರ ಬಗ್ಗೆ ವಿಶ್ವಾಸವಿದೆ ಎಂದರು.
ಆದರೆ, ಸೋಮವಾರ ನೀಡಿದ ಸಂದರ್ಶನದಲ್ಲಿ ಅವರು ಇದಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿದ್ದರು. 'ಲೋಕಸಭಾ ಚುನಾವಣೆಯಲ್ಲಿ ಬಹುಮತ ಸಿಗಬೇಕೆಂದರೆ ಮೈತ್ರಿ ಮಾಡಿಕೊಳ್ಳುವುದು ಬಿಜೆಪಿಗೆ ಅನಿವಾರ್ಯವಾಗಬಹುದು. ಅಕಸ್ಮಾತ್ 271 ಕ್ಷೇತ್ರಗಳಲ್ಲಿ ಗೆದ್ದರೆ ನಾವು ನಿಜಕ್ಕೂ ಸಂತಸ ಪಡುತ್ತೇವೆ. ಇಲ್ಲವೆಂದರೂ ನಾವು ಎನ್ ಡಿಎ ಜೊತೆ ಸೇರಿ ಆಡಳಿತ ನಡೆಸುತ್ತೇವೆ' ಎಂದು ರಾಮ್ ಮಾಧವ್ ಹೇಳಿದ್ದರು.
ಬಿಜೆಪಿಗೆ ಬಹುಮತ ಸಿಗೋದು ಡೌಟು ಎಂದ ಬಿಜೆಪಿಯ ಪ್ರಮುಖ ನಾಯಕ
2014 ರ ಚುನಾವಣೆಯಲ್ಲಿ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಕ್ಲೀನ್ ಸ್ವೀಪ್ ಮಾಡಿದ್ದ ಬಿಜೆಪಿ ಈ ಬಾರಿ ಹಲವು ಕ್ಷೇತ್ರಗಳಲ್ಲಿ ಸೋಲಲಿದೆ ಎಂದು ಸಮೀಕ್ಷೆಗಳು ಹೇಳಿವೆ. ಆದರೂ ಸರ್ಕಾರದ ಪರ ಅಲೆ ಇರುವುದರಿಂದ ಬಿಜೆಪಿ, ಎನ್ ಡಿಎ ಮೈತ್ರಿ ಕೂಟದ ಇತರ ಪಕ್ಷಗಳೊಂದಿಗೆ ಸೇರಿ ಸರ್ಕಾರ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.
ಮಿತ್ರ ಪಕ್ಷಗಳ ಬೆಂಬಲವೂ ಬೇಕಾಗೊಲ್ಲ
'ಮೋದಿ ಅವರ ಪರವಾಗಿ ಅದ್ಭುತವಾದ ವಾತಾವರಣವಿದೆ. ಇದರಿಂದ ಬಿಜೆಪಿ ಲಾಭ ಪಡೆದುಕೊಳ್ಳಲಿದೆ. ನಮ್ಮ ಮಿತ್ರಪಕ್ಷಗಳು ಸಂತೋಷದಿಂದ ಇದ್ದರೆ ಅದಕ್ಕೆ ಮೋದಿಜಿ ಅವರೇ ಕಾರಣ ಎಂಬುದನ್ನು ನೆನಪಿಟ್ಟುಕೊಳ್ಳಬೇಕು' ಎಂದು ಹೇಳಿದರು.
'ಕಳೆದ ಲೋಕಸಭೆ ಚುನಾವಣೆಗಿಂತಲೂ ಹೆಚ್ಚಿನ ಸ್ಥಾನಗಳನ್ನು ಬಿಜೆಪಿ ಗೆದ್ದುಕೊಳ್ಳಲಿದೆ. ಸರ್ಕಾರ ರಚಿಸಲು ನಮಗೆ ಯಾರ ಬೆಂಬಲವೂ ಬೇಕಾಗುವುದಿಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿ ಎಲ್ಲರನ್ನೂ ಜತೆಗೆ ಕರೆದೊಯ್ಯಲಿದ್ದಾರೆ' ಎಂದರು.
282 ಸೀಟುಗಳ ಸಾಧನೆಯನ್ನೂ ದಾಟುತ್ತೇವೆ: ಅಮಿತ್ ಶಾ ವಿಶ್ವಾಸ
ನಮ್ಮಲ್ಲೇ ಕಿಂಗ್ ಮೇಕರ್ ಇದ್ದಾರೆ
ಬಿಜೆಪಿ ಅಥವಾ ಕಾಂಗ್ರೆಸ್ ಹೊರತುಪಡಿಸಿ ಮತ್ತೊಂದು ಮೈತ್ರಿಕೂಟ ರಚನೆಗೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಪ್ರಯತ್ನಿಸುತ್ತಿದ್ದಾರೆ ಎಂಬುದನ್ನು ರಾಮ್ ಮಾಧವ್ ತಳ್ಳಿಹಾಕಿದರು.
'ತೆಲಂಗಾಣದ ಮುಖ್ಯಮಂತ್ರಿ, ಆಂಧ್ರಪ್ರದೇಶ ಮುಖ್ಯಮಂತ್ರಿ (ಚಂದ್ರಬಾಬು ನಾಯ್ಡು) ಮುಂತಾದ ಅನೇಕರು ಕಿಂಗ್ ಮೇಕರ್ ಆಗುವ ಕನಸು ಕಾಣುತ್ತಿದ್ದಾರೆ. ನಾವೇ ಕಿಂಗ್ ಹೊಂದಿರುವಾಗ ನಮಗೆ ಕಿಂಗ್ ಮೇಕರ್ನ ಅವಶ್ಯಕತೆ ಏನಿದೆ?' ಎಂದು ಹೇಳಿದರು.
ರಾಜೀವ್ ಗಾಂಧಿ ಹೆಸರಲ್ಲಿ ಚುನಾವಣೆ ಎದುರಿಸಿ: ಕಾಂಗ್ರೆಸ್ಗೆ ಮೋದಿ ಸವಾಲು
ಈಶಾನ್ಯ ರಾಜ್ಯಗಳಲ್ಲಿ ಭರ್ಜರಿ ಜಯ
ಬಂಗಾಳ, ಒಡಿಶಾ ಮತ್ತು ಈಶಾನ್ಯ ರಾಜ್ಯಗಳಲ್ಲಿ ತನ್ನ ಸೀಟುಗಳ ಬಲವನ್ನು ಹೆಚ್ಚಿಸಿಕೊಳ್ಳುವುದರ ಜತೆಗೆ, ಪಕ್ಷವು ಉತ್ತರ ಭಾರತದಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರಿಸಲಿದೆ. ಈ ರಾಜ್ಯಗಳಲ್ಲಿ ಮೋದಿ ಅವರಿಗೆ ಅಪಾರ ಬೆಂಬಲವಿದೆ. ಈ ಭಾಗಗಳಲ್ಲಿ ನಮಗೆ ಭರ್ಜರಿ ಫಲಿತಾಂಶ ಬರುವುದರಲ್ಲಿ ಸಂಶಯವೇ ಇಲ್ಲ. ಈಶಾನ್ಯದ 25 ಸೀಟುಗಳಲ್ಲಿ 18ರಲ್ಲಿ ನಾವು ಗೆಲ್ಲುತ್ತೇವೆ ಎಂದರು.
ಅಭಿವೃದ್ಧಿ ಕುರಿತೇ ಮಾತನಾಡುತ್ತಾರೆ
ಮೋದಿ ಅವರು ರಾಷ್ಟ್ರೀಯವಾದ, ರಾಷ್ಟ್ರೀಯ ಭದ್ರತೆ ಕುರಿತು ತಮ್ಮ ಭಾಷಣಗಳಲ್ಲಿ ಕೇವಲ ಐದು ನಿಮಿಷ ಮಾತನಾಡುತ್ತಾರೆ. ಉಳಿದ ಅವರ ರಾಜಕೀಯ ಮಾತುಗಳು ಅಭಿವೃದ್ಧಿ ಯೋಜನೆಗಳ ಕುರಿತಾಗಿ ಇರುತ್ತದೆ ಎಂದು, ಪ್ರಧಾನಿ ತಮ್ಮ ಪ್ರಚಾರ ಭಾಷಣಗಳಲ್ಲಿ ಸಾಧನೆಗಳ ಬದಲು ಸರ್ಜಿಕಲ್ ದಾಳಿ, ಬಾಲಕೋಟ್ ವೈಮಾನಿಕ ದಾಳಿ ಸೇರಿದಂತೆ ರಾಷ್ಟ್ರೀಯ ಭದ್ರತೆ ಮತ್ತು ರಾಷ್ಟ್ರವಾದಕ್ಕೆ ಸಂಬಂಧಿಸಿದ ವಿಚಾರಗಳ ಮೇಲೆಯೇ ಕೇಂದ್ರೀಕರಿಸಿರುತ್ತಾರೆ ಎಂಬ ಆರೋಪವನ್ನು ತಳ್ಳಿಹಾಕಿದರು.
ನಾವು ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸಿದ್ದೇವೆ. ಈ ಕಾರಣದಿಂದ ನಮಗೆ ಮತ ನೀಡಿ ಎಂದು ನಾವು ಹೇಳುತ್ತಿದ್ದೇವೆ. ಇಲ್ಲದಿದ್ದರೆ ಚುನಾವಣಾ ಆಯೋಗ ಬಹಳ ಸ್ವತಂತ್ರವಾಗಿದೆ ಎಂದು ಅವರು ಹೇಳುತ್ತಿದ್ದರು. ನಮ್ಮ ಮುಖ್ಯ ವಿಚಾರ ಐದು ವರ್ಷಗಳ ಸಾಧನೆಯ ವರದಿ ಮತ್ತು ಮೋದಿಜಿ ವ್ಯಕ್ತಿತ್ವ ಎಂದರು.