ಮೋದಿ ಪ್ರಧಾನಿ ಅಭ್ಯರ್ಥಿಯಾಗಿದ್ದು ದುರಂತ : ಅರುಂಧತಿ
ಕೊಚ್ಚಿ, ನ 11: ಗುಜರಾತ್ ಮುಖ್ಯಮಂತ್ರಿಯಾಗಿರುವ ನರೇಂದ್ರ ಮೋದಿಯನ್ನು ಬಿಜೆಪಿ ತನ್ನ ಪ್ರಧಾನಮಂತ್ರಿ ಅಭ್ಯರ್ಥಿಯನ್ನಾಗಿ ಮಾಡಿದ್ದು ಈ ದೇಶದ ಬಹುದೊಡ್ಡ ದುರಂತ ಮತ್ತು ನಾಚಿಕೆಗೇಡು ಎಂದು ಖ್ಯಾತ ಲೇಖಕಿ ಆರುಂಧತಿ ರಾಯ್ ಅಭಿಪ್ರಾಯ ಪಟ್ಟಿದ್ದಾರೆ.
ಮೋದಿಯನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಿದ್ದು ದುಃಖದ ವಿಷಯ. ವೈಯಕ್ತಿಕವಾಗಿ ಬಿಜೆಪಿಯ ಈ ನಿರ್ಧಾರದಿಂದ ನನಗೆ ತುಂಬಾ ನೋವಾಗಿದೆ ಎಂದ ಆರುಂಧತಿ ರಾಯ್, ಮುಂಬರುವ ಲೋಕಸಭಾ ಚುನಾವಣೆಯ ಜನಾಭಿಪ್ರಾಯ ಬರುವ ಮುನ್ನವೇ ಯಾರೂ ತಾನೇ ಮುಂದಿನ ಪ್ರಧಾನಿ ಎಂದು ನಡೆದುಕೊಳ್ಳ ಬೇಕಾಗಿಲ್ಲ ಎಂದು ಮೋದಿಗೆ ಟಾಂಗ್ ನೀಡಿದ್ದಾರೆ.
ಭಾನುವಾರ (ನ 10) ತನ್ನ 'The shape of the Beast' ಮತ್ತು 'The Broken Republic' ಪುಸ್ತಕದ ಮಲಯಾಳಂ ತರ್ಜುಮೆ ಕೃತಿಯನ್ನು ಬಿಡುಗೊಡೆಗೊಳಿಸಿ ಮಾತನಾಡುತ್ತಿದ್ದ ಆರುಂಧತಿ, ಕೇರಳದಲ್ಲಿ ಮುಸ್ಲಿಮರು ಸಂಪ್ರದಾಯಿವಾದಿಗಳ ದಾಳಿಗೆ ಒಳಗಾಗುತ್ತಿದ್ದಾರೆ. ನವದೆಹಲಿಯಲ್ಲಿ ಕೂತಿರುವವರಿಗೆ ಕೇರಳದಲ್ಲಿ ಏನು ನಡೆಯುತ್ತಿದೆ ಎಂದು ತಿಳಿದುಕೊಳ್ಳುವಷ್ಟು ವಿವೇಚನೆ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.
ನಾನು ನಕ್ಸಲರ ಪರ, ನಾನು ಹಿಂಸೆಗೆ ಪ್ರಚೋದನೆ ನೀಡುತ್ತೇನೆ ಎಂದು ಕೆಲವರು ನನ್ನನ್ನು ಟೀಕಿಸುತ್ತಾರೆ. ನನ್ನನ್ನು ಟೀಕಿಸುವವರು ಒಮ್ಮೆ ಆದಿವಾಸಿಗಳ ಸ್ಥಾನದಲ್ಲಿ ನಿಂತು ಹೇಳಿಕೆ ನೀಡಲಿ. ಅವರಿಗೆ ಸಿಗಬೇಕಾದ ನೀರು, ಭೂಮಿ ಮತ್ತು ಇತರ ಮೂಲಭೂತ ಸವಲತ್ತುಗಳನ್ನು ಅವರಿಂದ ಕಸಿದುಕೊಂಡು ಬಹುರಾಷ್ಟ್ರೀಯ ಕಂಪೆನಿಗಳಿಗೆ ಮಾರಿದರೆ ಅವರು ಹಿಂಸೆಗೆ ತಿರುಗದೇ ಇರುತ್ತಾರೆಯೇ ಎಂದು ಆರುಂಧತಿ ರಾಯ್ ಪ್ರಶ್ನಿಸಿದ್ದಾರೆ.
ಬಹುರಾಷ್ಟ್ರೀಯ ಕಂಪೆನಿಗಳು ಇವರ ಬಾಲ್ಯವನ್ನು ಕಸಿದುಕೊಂಡರು, ಮಹಿಳೆಯರು ಮಾನಭಂಗಕ್ಕೆ ಒಳಗಾದರು. ಇಂತಹ ದುಷ್ಕೃತ್ಯ ನಡೆಸುವ ಇವರಿಗೆ ಪೊಲೀಸ್ ಬಂದೋಬಸ್ತ್ ನೀಡಲಾಯಿತು. ಮಹಾತ್ಮಾ ಗಾಂಧಿಯ ಯಾವ ಶಾಂತಿಯುತ ಹೋರಾಟದ ಮೂಲಕ ಇವರಿಗೆ ಪಾಠ ಕಲಿಸಲು ಸಾಧ್ಯ ಹೇಳಿ ಎಂದು ಆರುಂಧತಿ ರಾಯ್ ತನ್ನ ಟೀಕಾಕಾರರನ್ನು ಪ್ರಶ್ನಿಸಿದ್ದಾರೆ.
ದೇಶದಲ್ಲಿ ಇನ್ನೂ 800 ಮಿಲಿಯನ್ ಜನರು ಹಸಿವಿನಿಂದ ಬಳಲುತ್ತಿದ್ದಾರೆ. ದೇಶದಲ್ಲಿ ಸಮಾನತೆ ತರುವುದು ಸಾಧ್ಯವಾಗದ ಮಾತು. ಇಲ್ಲಿ ಬಡವರು ಬಡವರಾಗಿಯೇ ಉಳಿಯುತ್ತಾರೆ ಮತ್ತು ಶ್ರೀಮಂತರು ಶ್ರೀಮಂತರಾಗಿಯೇ ಮೆರೆಯುತ್ತಾರೆಂದು ಆರುಂಧತಿ ರಾಯ್ ಬೇಸರ ವ್ಯಕ್ತ ಪಡಿಸಿದ್ದಾರೆ.