ರಫೇಲ್ ಡೀಲ್ ಹಗರಣದಲ್ಲಿ ರಾಬರ್ಟ್ ವದ್ರಾನನ್ನು ಎಳೆತಂದ ಬಿಜೆಪಿ
ನವದೆಹಲಿ, ಸೆಪ್ಟೆಂಬರ್ 25 : ರಫೇಲ್ ಯುದ್ಧ ವಿಮಾನ ಖರೀದಿ ಹಗರಣ ಭಾರತೀಯ ಜನತಾ ಪಕ್ಷ ಮತ್ತು ಕಾಂಗ್ರೆಸ್ ನಡುವೆ ಮಹಾಯುದ್ಧಕ್ಕೆ ಕಾರಣವಾಗಿದ್ದು, ಇದೀಗ ಹೊಸ ತಿರುವನ್ನು ಪಡೆದುಕೊಂಡಿದ್ದು, ಬಿಜೆಪಿ ಪಕ್ಷ ನೇರವಾಗಿ ಸೋನಿಯಾ ಗಾಂಧಿ ಅವರ ಅಳಿಯನನ್ನೇ ಹಗರಣದಲ್ಲಿ ಎಳೆದು ತಂದಿದ್ದಾರೆ.
ತಮ್ಮ ವ್ಯಾಪಾರಿ ಸ್ನೇಹಿತ ಸಂಜಯ್ ಭಂಡಾರಿ ಎಂಬುವವನಿಗಾಗಿ ರಫೇಲ್ ಡೀಲ್ ಅನ್ನು ಪಡೆದುಕೊಳ್ಳಲು ಮೊದಲು ಆಸಕ್ತಿ ವಹಿಸಿದ್ದು ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವದ್ರಾ ಎಂದು ಬಿಜೆಪಿಯ ಹಿರಿಯ ನಾಯಕ ಗಜೇಂದ್ರ ಸಿಂಗ್ ಶೇಖಾವತ್ ಅವರು ಗಂಭೀರ ಆರೋಪ ಮಾಡಿದ್ದಾರೆ.
ವಂಚನೆ ಪ್ರಕರಣ: ಸೋನಿಯಾ ಗಾಂಧಿ ಅಳಿಯನಿಗೆ ಮತ್ತೆ ಸಂಕಷ್ಟ
ಇದೇ ಬಗೆಯ ಆರೋಪವನ್ನು ಹೊರಿಸಿರುವ ಬಿಜೆಪಿಯ ವಕ್ತಾರ ಸಂಬಿತ್ ಪಾತ್ರಾ ಅವರು, 2016ರಲ್ಲಿ ಸಂಜಯ್ ಭಂಡಾರಿ ಮೇಲೆ ದಾಳಿ ಆಗಾದ, ರಫೇಲ್ ಡೀಲ್ ಗೆ ಸಂಬಂಧಿತ ರಹಸ್ಯ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು. ರಫೇಲ್ ಗೆ ಸಂಬಂಧಿತ ಮುಖ್ಯ ದಾಖಲೆಗಳು ಸಂಜಯ್ ಭಂಡಾರಿ ಬಳಿ ಬಂದಿದ್ದು ಹೇಗೆ ಎಂದು ಪ್ರಶ್ನಿಸಿದ್ದಾರೆ. ಭಂಡಾರಿಯ ಆಫ್ಸೆಟ್ ಇಂಡಿಯಾ ಸೊಲ್ಯುಷನ್ಸ್ ಕಂಪನಿಯನ್ನು 2014ರಲ್ಲಿ ಮೋದಿ ಕಂಪನಿ ಮುಚ್ಚಿಸಿತ್ತು.
ರಾಬರ್ಟ್ ವದ್ರಾ ಮತ್ತು ಸಂಜಯ್ ಭಂಡಾರಿ ಅವರನ್ನು ಮಧ್ಯವರ್ತಿಗಳನ್ನಾಗಿ ಮಾಡಿಕೊಂಡು ರಫೇಲ್ ಡೀಲ್ ಅನ್ನು ತಮ್ಮ ವಶ ಮಾಡಿಕೊಳ್ಳಬೇಕೆಂದು ಕಾಂಗ್ರೆಸ್ ಭಾರೀ ಪ್ರಯತ್ನ ನಡೆಸಿತ್ತು. ಅದು ಸಾಧ್ಯವಾಗದಿದ್ದರಿಂದ ರಾಹುಲ್ ಗಾಂಧಿ ಅವರು ಬಿಜೆಪಿಯ ಮೇಲೆ ಸಲ್ಲದ ಆರೋಪಗಳನ್ನು ಮಾಡಿ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದು ಶೇಖಾವತ್ ಆರೋಪಿಸಿದ್ದಾರೆ.
ರಫೇಲ್ ವಿವಾದದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಆರು ಸಂಗತಿಗಳು
8 ಲಕ್ಷ ರುಪಾಯಿ ಮೌಲ್ಯದ ಎಮಿರೇಟ್ಸ್ ವಿಮಾನ ಟಿಕೆಟ್ ಗಳನ್ನು ರಾಬರ್ಟ್ ವದ್ರಾರಿಂದ ಸಂಜಯ್ ಭಂಡಾರಿಗೆ ಕಳುಹಿಸಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಭಂಡಾರಿಗೆ ಎರಡು ಈಮೇಲ್ ಕಳುಹಿಸಲಾಗಿತ್ತು. ಮೊದಲನೇ ಈಮೇಲನ್ನು 2012ರ ಆಗಸ್ಟ್ 7ರಂದು ಕಳುಹಿಸಲಾಗಿದ್ದರೆ, ಎರಡನೇ ಈಮೇಲ್ ನಲ್ಲಿ ರಾಬರ್ಟ್ ವದ್ರಾ ಅವರ ಪ್ರಯಾಣದ ವಿವರಗಳಿವೆ ಎಂದು ಸಂಬಿತ್ ಪಾತ್ರಾ ವಿವರಣೆ ನೀಡಿದ್ದಾರೆ.
ಕಾಂಗ್ರೆಸ್ ಬೇಡಿಕೆಯಂತೆ ಈ ಹಗರಣದ ತನಿಖೆಯನ್ನು ಜಂಟಿ ಸಂಸದೀಯ ಸಮಿತಿಗೆ ಒಪ್ಪಿಸಲು ಕೇಂದ್ರ ಸರಕಾರ ಸುತಾರಾಂ ಸಿದ್ಧವಿಲ್ಲ. 58 ಸಾವಿರ ಕೋಟಿ ರುಪಾಯಿಯ ರಫೇಲ್ ಒಪ್ಪಂದವಾದಾಗ ಅಂದು ರಾಷ್ಟ್ರಪತಿಯಾಗಿದ್ದ ಒಲ್ಲಾಂಡ್ ಅವರು ಮಾಡಿದ ಆರೋಪಕ್ಕೆ ಫ್ರಾನ್ಸ್ ಸರಕಾರ ಮತ್ತು ಡಸಾಲ್ಟ್ ಕಂಪನಿ ಈಗಾಗಲೆ ಸ್ಪಷ್ಟೀಕರಣವನ್ನು ನೀಡಿರುವುದರಿಂದ ತನಿಖೆಯ ಅಗತ್ಯವೇ ಇಲ್ಲ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಕಡ್ಡಿ ಮುರಿದಂತೆ ಹೇಳಿದ್ದಾರೆ.
ರಫೇಲ್, ರಿಲಯನ್ಸ್, ಫ್ರೆಂಚ್ ಸಿನಿಮಾ: ಏನಿದು ರಾಹುಲ್ ಆರೋಪ?
ಇನ್ನು ಕೆಲವೇ ತಿಂಗಳುಗಳಲ್ಲಿ ಲೋಕಸಭೆ ಚುನಾವಣೆ ಮತ್ತು ನಾಲ್ಕು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ, ಬೇರೆ ಯಾವುದೇ ವಿಷಯ ಇಲ್ಲದ್ದರಿಂದ, ರಫೇಲ್ ಯುದ್ಧ ವಿಮಾನದ ವಿಷಯ ಹಿಡಿದುಕೊಂಡು ಆಡಳಿತ ಪಕ್ಷದ ಮೇಲೆ ಕಾಂಗ್ರೆಸ್ ಸಲ್ಲದ ಆರೋಪಗಳನ್ನು ಮಾಡುತ್ತಿದೆ ಎಂದು ಸಿಂಗ್ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ನಾಯಕರು ಕೇಂದ್ರ ಜಾಗೃತ ಆಯುಕ್ತರನ್ನು ಭೇಟಿ ಮಾಡಿ ರಫೇಲ್ ಫೈಟರ್ ಜೆಟ್ ಹಗರಣದಲ್ಲಿ ನಡೆದಿರುವ ಭಾರೀ ಭ್ರಷ್ಟಾಚಾರವನ್ನು ತನಿಖೆಗಾಗಿ ನೋಂದಾಯಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇದಕ್ಕೂ ಮೊದಲು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಅವರನ್ನು ಕೂಡ ಭೇಟಿ ಮಾಡಿದ ಕಾಂಗ್ರೆಸ್ ನಿಯೋಗ, ರಫೇಲ್ ಹಗರಣಕ್ಕೆ ಸಂಬಂಧಿಸಿದಂತೆ ವರದಿಯನ್ನು ಸಂಸತ್ತಿಗೆ ಸಲ್ಲಿಸಬೇಕೆಂದು ಆಗ್ರಹಿಸಿತು.
ರಫೇಲ್ ಒಪ್ಪಂದ: ವಿವಾದದ ನಡುವೆ ಮರೆಯಾದ ಸೂಕ್ಷ್ಮ ಸತ್ಯಗಳು
ರಫೇಲ್ ಯುದ್ಧ ವಿಮಾನ ಖರೀದಿ ಹಗರಣ ಭಾರತ ಅತೀದೊಡ್ಡ ರಕ್ಷಣಾ ಹಗರಣವಾಗಿದ್ದು, ಹಲವಾರು ಕಹಿಸತ್ಯಗಳನ್ನು ಪ್ರತಿದಿನ ಹೊರಹಾಕುತ್ತಿದೆ. ಭಾರೀ ಭ್ರಷ್ಟಾಚಾರ ನಡೆದಿದ್ದರೂ ಕೇಂದ್ರ ರಕ್ಷಣಾ ಸಚಿವಾಲಯ ಯಾವುದೇ ಉತ್ತರವನ್ನೂ ನೀಡುತ್ತಿಲ್ಲ. ಈ ಯುದ್ಧ ವಿಮಾನ ನಿರ್ಮಾಣದ ಬಗ್ಗೆ ಏನೂ ಗೊತ್ತಿಲ್ಲದ ಅನಿಲ್ ಅಂಬಾನಿಯನ್ನು ಸಾಲದಿಂದ ಮೇಲೆತ್ತಲು ಅವರಿಗೆ ಈ ಡೀಲ್ ಕೊಡಿಸಲಾಯಿತು ಎಂದು ಕಾಂಗ್ರೆಸ್ ಆಡಿಟರ್ ಜನರಲ್ ಅವರಿಗೆ ದೂರು ನೀಡಿದೆ.