ರಫೇಲ್ ಒಪ್ಪಂದ; ಹಣ ಪಾವತಿ ಆರೋಪ ನಿರಾಧಾರ ಎಂದ ಬಿಜೆಪಿ
ನವದೆಹಲಿ, ಏಪ್ರಿಲ್ 6: ಫ್ರಾನ್ಸ್ ಭಾರತದ ನಡುವಿನ 36 ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಭಾರತದ ಮಧ್ಯವರ್ತಿಯೊಬ್ಬರಿಗೆ ಒಂದು ಮಿಲಿಯನ್ ಯುರೋ ಹಣ ನೀಡಿತ್ತು ಎಂದು ಫ್ರಾನ್ಸ್ನ ಮೀಡಿಯಾಪಾರ್ಟ್ ಆನ್ಲೈನ್ ಪತ್ರಿಕೆ ವರದಿ ಮಾಡಿದ್ದು, ಈ ಆರೋಪ ಆಧಾರವಿಲ್ಲದ್ದು ಎಂದು ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ನಿರಾಕರಿಸಿದ್ದಾರೆ.
Recommended Video
ಈ ಒಪ್ಪಂದದ ಕುರಿತು ತನಿಖೆಗೆ ಆಗ್ರಹಿಸಿರುವ ಕಾಂಗ್ರೆಸ್ ಕುರಿತು ಕಿಡಿಕಾರಿರುವ ಅವರು, "ಲೋಕಸಭಾ ಚುನಾವಣೆಗೆ ಮುನ್ನವೂ ಇದೇ ತಂತ್ರವನ್ನು ಕಾಂಗ್ರೆಸ್ ಹೂಡಿತ್ತು. ಆದರೆ ಅದು ಕೂಡ ಫಲಿಸಿರಲಿಲ್ಲ. ಈಗ ಇಂಥದ್ದೇ ಆರೋಪವನ್ನು ಮತ್ತೆ ಮಾಡುತ್ತಿದೆ" ಎಂದಿದ್ದಾರೆ.
ರಫೇಲ್ ಒಪ್ಪಂದದಲ್ಲಿ ಭಾರತದ ಮಧ್ಯವರ್ತಿಗೆ 1 ಮಿಲಿಯನ್ ಯುರೋ ಹಣ: ಫ್ರಾನ್ಸ್ ಪತ್ರಿಕೆ ಸ್ಫೋಟಕ ವರದಿ
ಭಾರತಕ್ಕೆ ರಫೇಲ್ ಯುದ್ಧ ವಿಮಾನಗಳನ್ನು ಮಾಡಿಕೊಡುತ್ತಿರುವ ಫ್ರಾನ್ಸ್ನ ವಿಮಾನ ತಯಾರಕ ಸಂಸ್ಥೆ ಡಸಾಲ್ಟ್, ಭಾರತ-ಫ್ರಾನ್ಸ್ ನಡುವೆ 36 ರಫೇಲ್ ಯುದ್ಧ ವಿಮಾನಕ್ಕೆ ಒಪ್ಪಂದ ನಡೆದ ಕೆಲವೇ ಸಮಯದ ಬಳಿಕ ಭಾರತದಲ್ಲಿನ ಮಧ್ಯವರ್ತಿಯೊಬ್ಬರಿಗೆ ಒಂದು ಮಿಲಿಯನ್ ಯುರೋ ಹಣ ನೀಡಿತ್ತು ಎಂದು ಫ್ರಾನ್ಸ್ನ 'ಮೀಡಿಯಾಪಾರ್ಟ್' ಆನ್ಲೈನ್ ಪತ್ರಿಕೆ ವರದಿ ಮಾಡಿತ್ತು. ಈ ಮಧ್ಯವರ್ತಿಯು ಮತ್ತೊಂದು ರಕ್ಷಣಾ ಒಪ್ಪಂದದಲ್ಲಿ ಭಾರತದಲ್ಲಿ ಅಕ್ರಮ ಹಣ ವರ್ಗಾವಣೆ ನಡೆಸಿದ ಆರೋಪ ಎದುರಿಸುತ್ತಿದ್ದಾನೆ ಎಂದು ವರದಿ ತಿಳಿಸಿತ್ತು. ರಫೇಲ್ ಜೆಟ್ನ 50 ಪಡಿಯಚ್ಚುಗಳನ್ನು ತಯಾರಿಸಲು ಹಣ ಪಾವತಿಸಿರುವುದಾಗಿ ಡಸಾಲ್ಟ್ ಹೇಳಿತ್ತು.
ಈ ಬೆನ್ನಲ್ಲೇ ರಫೇಲ್ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಕಾಂಗ್ರೆಸ್ ಫ್ರಾನ್ಸ್ ಮಾಧ್ಯಮಗಳ ವರದಿ ಉಲ್ಲೇಖಿಸಿ ಪ್ರಧಾನಿ ನರೇಂದ್ರ ಮೋದಿಯವರು ಇದಕ್ಕೆ ಉತ್ತರಿಸಬೇಕೆಂದು ಒತ್ತಾಯಿಸಿತ್ತು.
''ಫ್ರಾನ್ಸ್ನ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಎಎಫ್ಎ ನಡೆಸಿದ ತನಿಖೆಯು, 2016ರಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಡಸಾಲ್ಟ್ ಕಂಪೆನಿಯು ಡೆಫ್ಸಿಸ್ ಸಲ್ಯೂಷನ್ಸ್ ಎಂಬ ಮಧ್ಯವರ್ತಿಗೆ 1.1 ಮಿಲಿಯನ್ ಯುರೋ ಹಣವನ್ನು ಪಾವತಿಸಿದೆ. ಇದು 'ಗ್ರಾಹಕರಿಗೆ ನೀಡಿದ ಉಡುಗೊರೆ' ಎಂದು ಡಸಾಲ್ಟ್ನ ವೆಚ್ಚದಲ್ಲಿ ನಮೂದಿಸಲಾಗಿದೆ. ಭಾರತದ ಅತಿ ದೊಡ್ಡ ರಕ್ಷಣಾ ಒಪ್ಪಂದದಲ್ಲಿ ವಾಸ್ತವವಾಗಿ ಎಷ್ಟು ಪ್ರಮಾಣದ ಲಂಚ ಮತ್ತು ಕಮಿಷನ್ ವ್ಯವಹಾರ ನಡೆದಿದೆ ಎಂಬುದನ್ನು ತಿಳಿಯಲು ಸಂಪೂರ್ಣ ಮತ್ತು ಸ್ವತಂತ್ರ ತನಿಖೆ ಅಗತ್ಯವಿಲ್ಲವೇ? ಹಣ ಪಾವತಿಸಲಾಗಿದೆಯೇ, ಆಗಿದ್ದರೆ ಭಾರತ ಸರ್ಕಾರದಲ್ಲಿ ಯಾರಿಗೆ ಪಾವತಿಸಲಾಗಿದೆ? ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲ ಪ್ರಶ್ನಿಸಿದ್ದರು.
ಮಧ್ಯವರ್ತಿಗಳ ಉಪಸ್ಥಿತಿಯಿಂದ ಯುದ್ಧ ವಿಮಾನಗಳ ಖರೀದಿಯಲ್ಲಿ ರಕ್ಷಣಾ ಪರಿಕರಗಳ ಖರೀದಿ ಪ್ರಕ್ರಿಯೆ ನಿಯಮದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಕಾಂಗ್ರೆಸ್ ಸಮಗ್ರ ತನಿಖೆಗೂ ಒತ್ತಾಯಿಸಿತ್ತು.
ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, "ಕಾಂಗ್ರೆಸ್ ಏಕೆ ಮತ್ತೊಮ್ಮೆ ರಫೇಲ್ ವಿಷಯವನ್ನು ಎತ್ತುತ್ತಿದೆ? ಸುಪ್ರೀಂ ಕೋರ್ಟ್ ಹಾಗೂ ಸಿಎಜಿ ಈ ಒಪ್ಪಂದದಲ್ಲಿ ಯಾವುದೇ ದೋಷವಿಲ್ಲ ಎಂದು ಹೇಳಿದೆ. ಈಗಿನ ಫ್ರೆಂಚ್ ತನಿಖಾ ಸಂಸ್ಥೆಯ ಈ ವರದಿ ಆ ದೇಶದಲ್ಲಿನ ಕಾರ್ಪೊರೇಟ್ ವೈರತ್ವದ ಪರಿಣಾಮವಾಗಿರಬಹುದು. ಹೀಗಾಗಿ ಈ ಆರೋಪ ಸಂಪೂರ್ಣ ನಿರಾಧಾರ ಎಂದು ಸ್ಪಷ್ಟಪಡಿಸಿದ್ದಾರೆ. ಈ ಪ್ರಕರಣದಲ್ಲಿ ಆರೋಪಿತ ಸುಶೇನ್ ಗುಪ್ತಾ ಕಾಂಗ್ರೆಸ್ ಜೊತೆ ನಂಟುಹೊಂದಿದ್ದಾನೆ ಎಂದು ಆರೋಪಿಸಿದ್ದಾರೆ.