ರಾಜ್ಯಸಭೆಯಿಂದ 51 ಸಂಸದರು ನಿವೃತ್ತಿ, ಯಾರಿಗೆ ಲಾಭ?
ನವದೆಹಲಿ, ಫೆಬ್ರವರಿ 15: ರಾಜ್ಯಸಭೆಯ 51 ಸದಸ್ಯರು ನಿವೃತ್ತಿ ಅಂಚಿನಲ್ಲಿದ್ದಾರೆ. ಏಪ್ರಿಲ್ ತಿಂಗಳಿನಲ್ಲಿ 51 ಸಂಸದರು ನಿವೃತ್ತರಾಗಲಿದ್ದು, ಆ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ಇದಕ್ಕಾಗಿ ರಣತಂತ್ರ ರೂಪಿಸತೊಡಗಿವೆ.
ಬಹುತೇಕ ಸ್ಥಾನಗಳು ಕಾಂಗ್ರೆಸ್ ಹಾಗೂ ಬಿಜೆಪಿ ಗಳಿಸುವ ನಿರೀಕ್ಷೆಯಿದೆ. 245 ಸದಸ್ಯಬಲದ ಸದನದಲ್ಲಿ ತೃಣಮೂಲ ಕಾಂಗ್ರೆಸ್ ಹಾಗೂ ವೈಎಸ್ಆರ್ ಕಾಂಗ್ರೆಸ್ ಪಕ್ಷ ಕೂಡಾ ಲಾಭದ ನಿರೀಕ್ಷೆಯಲ್ಲಿವೆ. ಮೇಲ್ಮನೆಯಲ್ಲಿ ಬಿಜೆಪಿಗೆ ಬಹುಮತ ಇಲ್ಲ. ಬಿಜು ಜನತಾದಳ ಹಾಗೂ ವೈಎಸ್ಆರ್ಸಿಪಿ ಬೆಂಬಲ ಪಡೆದುಕೊಳ್ಳುವುದು ಆಡಳಿತಾರೂಢ ಪಕ್ಷಕ್ಕೆ ಅನಿವಾರ್ಯ.
ರಾಜ್ಯಸಭೆಯಲ್ಲಿ 82 ಸದಸ್ಯರನ್ನು ಹೊಂದಿರುವ ಬಿಜೆಪಿಗೆ ತೆರವಾಗುವ 51 ಸ್ಥಾನಗಳ ಪೈಕಿ 13 ಸ್ಥಾನ ಗಳಿಸುವ ಸಾಧ್ಯತೆಯಿದೆ. ಒಡಿಶಾದಲ್ಲಿ ಮೂರು ಸ್ಥಾನಗಳು ತೆರವಾಗಲಿದ್ದು, ಈ ಪೈಕಿ ಎರಡು ಬಿಜೆಡಿ ಪಾಲಾಗಲಿದ್ದು, ಉಳಿದ ಒಂದು ಬಿಜೆಪಿಗೆ ಸಿಗಲಿದೆ. ಏಪ್ರಿಲ್ ನಲ್ಲಿ ಆಂಧ್ರದಿಂದ ನಾಲ್ಕು ಸ್ಥಾನಗಳು ತೆರವಾಗಲಿದ್ದು, ವೈಎಸ್ಆರ್ ಕಾಂಗ್ರೆಸ್ ಪಡೆದುಕೊಳ್ಳಲಿದೆ. ಹಿಮಾಚಲ ಪ್ರದೇಶ ಹಾಗೂ ಹರ್ಯಾಣದಲ್ಲಿ ತಲಾ ಒಂದು ಸ್ಥಾನಗಳು ಬಿಜೆಪಿಗೆ ಲಾಭವಾಗಲಿವೆ.
ಆದರೆ, 46 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್ ಪಕ್ಷ 10 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಕಾಂಗ್ರೆಸ್ ಪಕ್ಷದ 11 ಸದಸ್ಯರು ಏಪ್ರಿಲ್ ನಲ್ಲಿ ನಿವೃತ್ತರಾಗುತ್ತಿದ್ದಾರೆ. ಮಹಾರಾಷ್ಟ್ರದಿಂದ 7, ತಮಿಳುನಾಡಿನಿಂದ 6, ಬಿಹಾರ ಹಾಗೂ ಪಶ್ಚಿಮ ಬಂಗಾಳದಿಂದ ತಲಾ 5, ಆಂಧ್ರ ಹಾಗೂ ಗುಜರಾತ್ನಿಂದ ತಲಾ 4, ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ಹಾಗೂ ಒಡಿಶಾದಿಂದ ತಲಾ 3, ಜಾರ್ಖಂಡ್ ಹಾಗೂ ಛತ್ತೀಸ್ಗಢದಿಂದ ತಲಾ 2, ಅಸ್ಸಾಂ, ಮಣಿಪುರ, ಹರ್ಯಾಣ ಮತ್ತು ಹಿಮಾಚಲ ಪ್ರದೇಶಗಳ ತಲಾ 1ಸ್ಥಾನಗಳು ತೆರವಾಗಲಿವೆ.