ಪ್ರತಿ ವರ್ಷ ಆಗಸ್ಟ್ ನಲ್ಲಿ ಸಾಮಾಜಿಕ ನ್ಯಾಯ ಸಪ್ತಾಹ : ಮೋದಿ
ನವದೆಹಲಿ ಆಗಸ್ಟ್ 08: ಭಾರತೀಯ ಜನತಾ ಪಕ್ಷ ಈ ಸಾಲಿನ ಆಗಸ್ಟ್ 15 ರಿಂದ 30 ನೇ ತಾರೀಖಿನ ವರೆಗೆ "ಸಾಮಾಜಿಕ ನ್ಯಾಯದ ಪಾಕ್ಷಿಕ" ಹಾಗೂ ಮುಂದಿನ ವರ್ಷದಿಂದ ಆಗಸ್ಟ್ 1 ರಿಂದ 9 ರ ವರೆಗೆ "ಸಾಮಾಜಿಕ ನ್ಯಾಯ ಸಪ್ತಾಹ" ವನ್ನು ಆಚರಿಸುವ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದಾರೆ.
ನವದೆಹಲಿಯಲ್ಲಿಂದು ಬಿಜೆಪಿ ಪಾರ್ಲಿಮೆಂಟರಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾದ ಅನಂತಕುಮಾರ್ ಈ ವಿಷಯ ತಿಳಿಸಿದರು. ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವಕ್ಕೆ ಏಕಮತದಿಂದ ಶ್ಲಾಘಿಸಲಾಯಿತು ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವದಲ್ಲಿ ಸಂಸತ್ ಅಧಿವೇಶನದಲ್ಲಿ ಓಬಿಸಿ ರಾಷ್ಟ್ರಿಯ ಆಯೋಗಕ್ಕೆ ಸಂವಿಧಾನಿಕ ಮಾನ್ಯತೆಯನ್ನು ದೊರಕಿಸುವ ಮಸೂದೆ ಎರಡೂ ಸದನದಲ್ಲೂ ಅಂಗೀಕಾರವಾಗಿದೆ. ಅಲ್ಲದೆ, ಪರಿಶಿಷ್ಟ ಜಾತಿ ಹಾಗೂ ಪಂಗಡದ ಹಕ್ಕುಗಳನ್ನು ರಕ್ಷಿಸುವ ಮಸೂದೆಗೆ ಲೋಕಸಭೆಯಲ್ಲಿ ಅಂಕಿತ ದೊರಕಿದೆ. ಇಂತಹ ಎರಡೂ ಐತಿಹಾಸಿಕ ಮಸೂದೆಗಳನ್ನು ಜಾರಿಗೊಳಿಸುವ ಮೂಲಕ ಸಾಮಾಜಿಕ ನ್ಯಾಯದ ಅಧಿವೇಶನ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಹೇಳಿದರು.
2014 ರಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ನಂತರ ನಡೆದ ಮೊದಲ ಸಂಸದೀಯ ಪಕ್ಷದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು, ದೇಶದ ಗ್ರಾಮೀಣ ಪ್ರದೇಶದ ಜನರು, ರೈತರು, ಕಾರ್ಮಿಕರು ಹಾಗೂ ದೇಶದ ಹಿಂದುಳಿದ ಸಮಾಜದ ಅಭಿವೃದ್ದಿಗಾಗಿ ಕಾರ್ಯಕ್ರಮಗಳನ್ನು ರೂಪಿಸುವ ಭರವಸೆಯನ್ನು ನೀಡಿದ್ದರು. ಈ ಭರವಸೆಗಳ ಈಡೇರಿಕೆಗೆ ನಾವು ಬದ್ದರಾಗಿದ್ದೇವೆ ಎಂದರು.
ಸಂಸತ್ತಿನ ಅಧಿವೇಶನದಲ್ಲಿ ಅಂಗೀಕಾರವಾದ ಐತಿಹಾಸಿಕ ಮಸೂದೆಗಳ ಬಗ್ಗೆ ಮಾತನಾಡಿದ ಅವರು, ಎನ್ ಸಿ ಬಿ ಸಿ ಮಸೂದೆಯು ಎರಡೂ ಸದನದಲ್ಲೂ ಅಂಗೀಕಾರವಾಗಿದೆ. ಎಸ್ ಸಿ ಎಸ್ ಟಿ ಮಸೂದೆ ಲೋಕಸಭೆಯಲ್ಲಿ ಬಹುಮತಗಳಿಂದ ಅಂಗೀಕಾರವಾಗಿದೆ. ಈ ಮೂಲಕ ಈ ಬಾರಿಯ ಅಧಿವೇಶನ ಸಾಮಾಜಿಕ ನ್ಯಾಯದ ಅಧಿವೇಶನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು. ಅಲ್ಲದೆ, ಎಸ್ ಸಿ ಎಸ್ ಟಿ ಮಸೂದೆ ರಾಜ್ಯಸಭೆಯಲ್ಲೂ ಬಹುಮತದಿಂದ ಅಂಗೀಕಾರವಾಗಲಿದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು.
ದೇಶಕ್ಕೆ ಸ್ವಾತಂತ್ರ ದೊರೆತ 70 ವರ್ಷಗಳ ನಂತರ 2 ಐತಿಹಾಸಿಕ ಮಸೂದೆಗಳನ್ನು ಅಧಿವೇಶನದಲ್ಲಿ ಅಂಗೀಕರಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಬಿಜೆಪಿ ಪಾರ್ಲಿಮೆಂಟರಿ ಪಾರ್ಟಿ ಸಭೆಯಲ್ಲಿ ಮಾತನಾಡುತ್ತ, ಈ ಬಾರಿಯ ಆಗಸ್ಟ್ 15 ರಿಂದ 30 ರ ವರೆಗಿನ ಅವಧಿಯನ್ನು ಸಾಮಾಜಿಕ ನ್ಯಾಯದ ಪಾಕ್ಷಿಕವನ್ನಾಗಿ (Social Justice Fortnight) ಆಚರಿಸುವ ಘೋಷಣೆಯನ್ನು ಮಾಡಿದ್ದಾರೆ ಎಂದರು. ಈ ಹಿನ್ನಲೆಯಲ್ಲಿ ಬಿಜೆಪಿ ಪಕ್ಷದ ಮುಖಾಂತರ ದೇಶಾದ್ಯಂತ ರ್ಯಾಲಿಗಳನ್ನು ಹಮ್ಮಿಕೊಂಡು ದೇಶದ ಪ್ರತಿಯೊಬ್ಬ ಪ್ರಜೆಗೂ ನಮ್ಮ ಸರಕಾರ ಹಿಂದುಳಿದ ವರ್ಗಗಳ ಅಭಿವೃದ್ದಿಗಾಗಿ ಕೈಗೊಂಡ ಕಾರ್ಯಕ್ರಮಗಳನ್ನು ತಲುಪಿಸಲಿದ್ದೇವೆ ಎಂದರು. ಅಲ್ಲದೆ, ಪ್ರತಿವರ್ಷ ಆಗಸ್ಟ್ ತಿಂಗಳ 1 ನೇ ತಾರೀಖಿನಿಂದ 9 ರ ವರೆಗೆ ಸಾಮಾಜಿಕ ನ್ಯಾಯದ ಸಪ್ತಾಹವನ್ನಾಗಿ ಆಚರಿಸಲೂ ತಿರ್ಮಾನಿಸಲಾಗಿದೆ ಎಂದರು.
ಅಲ್ಲದೆ, ಜಲಗಾಂವ್ ಹಾಗೂ ಸಾಂಗ್ಲಿಯಲ್ಲಿ ಬಿಜೆಪಿ ಗೆಲುವಿನ ಬಗ್ಗೆ ಹರ್ಷವ್ಯಕ್ತಪಡಿಸುತ್ತಾ ಸಕಾರಾತ್ಮಕವಾಗಿ ಸಭೆ ಮುಕ್ತಾಯವಾಯಿತು ಎಂದರು.