PM ವಿರುದ್ಧ Comment,Dislike ಹೆಚ್ಚಿರುವ ವಿಡಿಯೋ ಡಿಲೀಟ್: ಹೀಗ್ಯಾಕೆ?
ನವದೆಹಲಿ, ಸಪ್ಟೆಂಬರ್.06: ಭಾರತೀಯ ಜನತಾ ಪಕ್ಷವು ಪ್ರತಿಕ್ರಿಯೆ(Comments)ಗಳನ್ನು ಮತ್ತು ವಿರೋಧಗಳನ್ನು (Dislikes) ಯಾರಿಗೂ ಕಾಣದಂತೆ ನಿಷ್ಕ್ರಿಯಗೊಳಿಸಬಹುದು. ಆದರೆ ಪ್ರಜೆಗಳ ಧ್ವನಿಯನ್ನು ನಿಷ್ಕ್ರಿಯಗೊಳಿಸುವುದಕ್ಕೆ ಸಾಧ್ಯವಿಲ್ಲ ಎಂದು ಸಂಸದ ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.
ದೇಶದ ಪ್ರಜೆಗಳ ಅಭಿಪ್ರಾಯಗಳನ್ನು ನೀವು ನಿಷ್ಕ್ರಿಯಗೊಳಿಸಬಹುದು ಆದರೆ ಅವರ ಧ್ವನಿಗಳಿಗೆ ನಾವು ಶಕ್ತಿಯಾಗಿ ನಿಲ್ಲುತ್ತೇವೆ. ಜಗತ್ತಿನ ಎದುರು ನಿಮ್ಮ ಅಭಿಪ್ರಾಯಗಳನ್ನು ಬಿಚ್ಚಿಡುವ ಕೆಲಸವನ್ನು ನಾವು ಮಾಡುತ್ತೇವೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಮೋದಿ ಮನ್ಕಿ ಬಾತ್: 2.5ಲಕ್ಷ ಮಂದಿಯಿಂದ ಡಿಸ್ಲೈಕ್
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ಕಾರ್ಯಕ್ರಮದ ವಿಡಿಯೋಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬಂದಿರುವ ದಿಸ್ ಲೈಕ್ ಮತ್ತು ವಿರೋಧಿ ಕಾಮೆಂಟ್ ಗಳನ್ನು ತೆಗೆದು ಹಾಕಲು ಬಿಜೆಪಿ ತೀರ್ಮಾನಿದ ಬೆನ್ನಲ್ಲೇ ರಾಹುಲ್ ಗಾಂಧಿಯವರು ಈ ರೀತಿ ಟ್ವೀಟ್ ಮಾಡಿದ್ದಾರೆ.
ಜೆಇಇ, ನೀಟ್ ಕುರಿತು ಮನ್ ಕೀ ಬಾತ್ ನಲ್ಲಿಲ್ಲ ಮಾತು
ಕಳೆದ ಆಗಸ್ಟ್.30ರಂದು ನಡೆದ 68ನೇ ಮನ್ ಕೀ ಬಾತ್ ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪ್ರಮುಖ ಸಮಸ್ಯೆ ಮತ್ತು ವಿಚಾರಗಳ ಬಗ್ಗೆ ಮಾತನಾಡಲಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಜೆಇಇ ಮತ್ತು ನೀಟ್ ಪರೀಕ್ಷೆ ಮುಂದೂಡುವಂತೆ ದೇಶಾದ್ಯಂತ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದರು. ಈ ಬಗ್ಗೆ ಒಂದು ಮಾತನಾಡದ ಪ್ರಧಾನಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು.
ಮನ್ ಕೀ ಬಾತ್ ಬಗ್ಗೆ ರಾಹುಲ್ ಗಾಂಧಿ ಟೀಕೆ
ಪ್ರಧಾನಮಂತ್ರಿ ನರೇಂದ್ರ ಮೋದಿಯವರು "ಪರೀಕ್ಷಾ ಪೇ ಚರ್ಚಾ"(ಪರೀಕ್ಷೆಗಳ ಬಗ್ಗೆ ಮಾತು) ನಡೆಸುತ್ತಾರೆ ಎಂಬ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳಿದ್ದರು. ಆದರೆ ಪ್ರಧಾನಿಯವರು "ಖಿಲೋನೇ ಪೇ ಚರ್ಚಾ"(ಆಟಿಕೆಗಳ ಬಗ್ಗೆ ಮಾತು)ಕ್ಕೆ ತಮ್ಮ 68ನೇ ಮನ್ ಕೀ ಬಾತ್ ನ್ನು ಸೀಮಿತರಾಗಿದ್ದಾರೆ ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದರು. ದೇಶವನ್ನು ಆಡಿಕೆಗಳ ಉತ್ಪಾದನೆ ಕೇಂದ್ರವನ್ನಾಗಿಸುವ ಮಾತುಗಳಿಗಷ್ಟೇ ಮನ್ ಕೀ ಬಾತ್ ಸೀಮಿತವಾಗಿದೆ. ಕೊರೊನಾವೈರಸ್ ಸೋಂಕು ಹರಡುವಿಕೆ ಭೀತಿ ನಡುವೆ 2020ನೇ ಸಾಲಿನ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(NEET) ಮತ್ತು ಜಂಟಿ ಪ್ರವೇಶ ಪರೀಕ್ಷೆ(JEE)ಗಳ ಬಗ್ಗೆ ಪ್ರಧಾನ ಮೋದಿಯವರು ಏಕೆ ಪ್ರಸ್ತಾಪಿಸಲಿಲ್ಲ ಎಂದು ರಾಹುಲ್ ಗಾಂಧಿ ಪ್ರಶ್ನೆ ಮಾಡಿದ್ದರು.
ಪ್ರಧಾನಿ ಮನ್ ಕೀ ಬಾತ್ ವಿಡಿಯೋಗೆ Dislike ಕ್ಲಿಕಿಸಿದ ಜನ
ಪ್ರಧಾನಮಂತ್ರಿ ನರೇಂದ್ರ ಮೋದಿಯವರು 68ನೇ ಮನ್ಕಿ ಬಾತ್ ಕಾರ್ಯಕ್ರಮವನ್ನು ಯೂಟ್ಯೂಬ್ ನಲ್ಲಿ 28 ಸಾವಿರ ಮಂದಿ ಲೈಕ್ ಮಾಡಿದ್ದು, ಆದರೆ 2.5 ಲಕ್ಷಕ್ಕೂ ಹೆಚ್ಚು ಮಂದಿ ಡಿಸ್ಲೈಕ್ ಮಾಡಿದ್ದರು. ಬಿಜೆಪಿ ಯೂಟ್ಯೂಬ್ ಚಾನೆಲ್ನಲ್ಲಿ 10 ಲಕ್ಷ ಮಂದಿ ಕಾರ್ಯಕ್ರಮವನ್ನು ವೀಕ್ಷಿಸಿದ್ದರು. 3.5 ಮಿಲಿಯನ್ ಸಬ್ಸ್ಕ್ರೈಬರ್ ಗಳು ಇದ್ದಾರೆ. ಸಾಕಷ್ಟು ಮಂದಿ ಯೂಸರ್ಗಳು ಕಾಮೆಂಟ್ ಮಾಡಿದ್ದರು. ಬಹಳ ಮಂದಿ ಪರೀಕ್ಷೆಯ ಕುರಿತು ಬರೆದುಕೊಂಡಿದ್ದರು.
ಮನ್ ಕೀ ಬಾತ್ ನಲ್ಲಿ ಪ್ರಧಾನಿ ಮೋದಿ ಹೇಳಿದ ಮಾತು
ಕರ್ನಾಟಕ ರಾಮನಗರ ಜಿಲ್ಲೆಯ ಚನ್ನಪಟ್ಟಣದ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಮನ್ ಕೀ ಬಾತ್ ನಲ್ಲಿ ಪ್ರಸ್ತಾಪಿಸಿದರು. ಆಟಿಕೆಗಳ ಉತ್ಪಾದನೆ ವಲಯವು ಅವನತಿಯತ್ತ ಸಾಗುತ್ತಿದೆ. ಆಟಿಕೆಗಳನ್ನು ಸಿದ್ಧಪಡಿಸುವ ಸಣ್ಣ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸುವತ್ತ ಹೆಚ್ಚು ಗಮನ ಹರಿಸಬೇಕಿದೆ. ದೇಶೀಯ ಆಟಿಕೆಗಳನ್ನು ಬಳಸುವುದನ್ನು ಕಲಿಯಬೇಕಿದೆ. ದೇಶೀ ಆಟಿಕೆಗಳ ಉತ್ಪಾದನಾ ಕೈಗಾರಿಕೆಗಳಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ದೇಶವೇ ಒಂದಾಗಿ ಕೆಲಸ ಮಾಡಬೇಕಿದೆ ಎಂದು ಪ್ರಧಾನಿ ಮೋದಿ ಕರೆ ನೀಡಿದರು.