ಗುಜರಾತ್,ಹಿಮಾಚಲಕ್ಕೂ ವ್ಯಾಪಿಸಿದ ಹಕ್ಕಿ ಜ್ವರ, ಹಲವು ಕಾಗೆಗಳ ಸಾವು
ಅಹಮದಾಬಾದ್, ಜನವರಿ 08:ಹಕ್ಕಿ ಜ್ವರ ಗುಜರಾತ್, ಹಿಮಾಚಲಪ್ರದೇಶಕ್ಕೂ ವ್ಯಾಪಿಸಿದೆ. ಮೆಹ್ಸಾನದಲ್ಲಿ ಕಾಗೆಗಳು ಸತ್ತುಬಿದ್ದಿವೆ.
ಗುಜರಾತ್ನ ಮೆಹ್ಸಾನಾ ಜಿಲ್ಲೆಯಲ್ಲಿ ಗುರುವಾರ ನಾಲ್ಕು ಕಾಗೆಗಳು ಶವವಾಗಿ ಪತ್ತೆಯಾಗಿವೆ. ಮೆಹ್ಸಾನಾದ ಮೊಧೇರಾ ಗ್ರಾಮದಲ್ಲಿರುವ ಪ್ರಸಿದ್ಧ ಸೂರ್ಯ ದೇವಾಲಯದ ಆವರಣದಲ್ಲಿ ಕಾಗೆಗಳು ಸತ್ತಿವೆ. ಈ ಕುರಿತಂತೆ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದ್ದು, ಸತ್ತ ಕಾಗೆಗಳ ಮೃತದೇಹಗಳನ್ನು ಪಕ್ಷಿ ಜ್ವರ ಅಥವಾ ಇತರ ಕಾರಣಗಳಿಂದ ಸಾವನ್ನಪ್ಪಿದೆಯೆ ಎಂದು ಪರೀಕ್ಷಿಸಲು ಭೋಪಾಲ್ ಮೂಲದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇರಳದಿಂದ ರಾಜ್ಯಕ್ಕೂ ವಕ್ಕರಿಸಿದ ಹಕ್ಕಿ ಜ್ವರ?
ಗುಜರಾತ್ ಮಾತ್ರವಲ್ಲದೇ ನಿನ್ನೆ ಮಧ್ಯಪ್ರದೇಶದ ಇಂದೋರ್, ಅಗರ್, ಮಾಲ್ವಾ ಮತ್ತು ಮಾಂಡ್ಸೌರ್ ಜಿಲ್ಲೆಗಳಲ್ಲಿ ಇತ್ತೀಚೆಗೆ ಕೆಲವು ಕಾಗೆಗಳಲ್ಲಿ ಹಕ್ಕಿ ಜ್ವರ ವೈರಸ್ ಪತ್ತೆಯಾಗಿದೆ.
ಈ ಕುರಿತಂತೆ ಮೆಹ್ಸಾನಾದ ಪಶುಸಂಗೋಪನಾ ಅಧಿಕಾರಿ ಡಾ.ಭರತ್ ದೇಸಾಯಿ ಅವರು, 'ಏವಿಯಾನ್ ಫ್ಲೂ ಸಂದರ್ಭದಲ್ಲಿ, ಹೆಚ್ಚಿನ ಸಂಖ್ಯೆಯ ಪಕ್ಷಿಗಳು ಇದ್ದಕ್ಕಿದ್ದಂತೆ ಸಾಯುತ್ತವೆ. ಆದರೆ ಕಾಗೆಗಳ ಸಾವಿಗೆ ನಿಖರ ಕಾರಣ ತಿಳಿಯಬೇಕಿದೆ.
ಇದು ಏವಿಯನ್ ಇನ್ಫ್ಲುಯೆನ್ಸ ಪ್ರಕರಣದಂತೆ ಕಾಣಿಸದಿದ್ದರೂ, ನಾವು ಕಾಗೆಗಳ ದೇಹಗಳನ್ನು ವಿವರವಾದ ವಿಶ್ಲೇಷಣೆಗಾಗಿ ಭೋಪಾಲ್ ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ ಎಂದು ದೇಸಾಯಿ ತಿಳಿಸಿದ್ದಾರೆ.
ಇನ್ನು ಅತ್ತ ಕಾಂಗೆಗಳ ಸಾವಿನ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಗುಜರಾತ್ ಪಶುಸಂಗೋಪನಾ ಇಲಾಖೆ ಬುಧವಾರ ಕಣ್ಗಾವಲು ನಡೆಸಲು ರಾಜ್ಯದಾದ್ಯಂತ ಎಚ್ಚರಿಕೆ ನೀಡಿದೆ. ಆದಾಗ್ಯೂ, ಪಶುಪಾಲನಾ ಸಚಿವ ಕುನ್ವರ್ಜಿ ಬವಾಲಿಯಾ ಅವರು, ಗುಜರಾತ್ ನಲ್ಲಿ ಈವರೆಗೂ ಹಕ್ಕಿ ಜ್ವರ ಪ್ರಕರಣಗಳು ವರದಿಯಾಗಿಲ್ಲ. ಆದಾಗ್ಯೂ ರಾಜ್ಯಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ ಎಂದು ಹೇಳಿದ್ದಾರೆ.
ಕೊರೊನಾ ವೈರಸ್ ಮಧ್ಯೆ ದೇಶದ ಜನರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ದೇಶದ ಹಲವು ಭಾಗಗಳಲ್ಲಿ ಹಕ್ಕಿ ಜ್ವರ (H5N8) ಸೋಂಕು ಕಾಣಿಸಿಕೊಂಡಿದ್ದು, ಇದೀಗ ರಾಜ್ಯದಲ್ಲಿಯೂ ಸೋಂಕು ಹರಡಿಸರುವ ಭೀತಿ ಎದುರಾಗಿದೆ. ಕೇರಳದ ಆಲಪ್ಪುರ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಬಾತುಕೋಳಿಗಳಲ್ಲಿ ಹಕ್ಕಿಜ್ವರ (H5N8) ಸೋಂಕು ದೃಢಪಟ್ಟಿದೆ.