ಕೊರೊನೊವೈರಸ್ ಸೋಂಕಿತರ ಚಿಕಿತ್ಸೆಗೆ ಬೆಂಗಳೂರಿನಲ್ಲೇ 'ಲಸಿಕೆ' ಸಿದ್ಧ!
ನವದೆಹಲಿ, ಜುಲೈ.12: ಜಗತ್ತಿಗೆ ವ್ಯಾಪಿಸಿರುವ ನೊವೆಲ್ ಕೊರೊನಾವೈರಸ್ ಸೋಂಕು ನಿವಾರಣೆಗೆ ಲಸಿಕೆ ಕಂಡು ಹಿಡಿಯುವಲ್ಲಿ ವಿಶ್ವದ ಸಾಂಕ್ರಾಮಿಕ ರೋಗತಜ್ಞರು ಮತ್ತು ವಿಜ್ಞಾನಿಗಳು ಪ್ರಯೋಗಗಳನ್ನು ನಡೆಸುತ್ತಿದ್ದಾರೆ. ಇದರ ನಡುವೆ ಸೋಂಕಿತರ ಮುಖದಲ್ಲಿ ಮಂದಹಾಸ ಮೂಡಿಸುವಂತಾ ಸಿಹಿಸುದ್ದಿ ಹೊರಬಿದ್ದಿದೆ.
Recommended Video
ಬೆಂಗಳೂರು ಮೂಲದ ಬಯೋಫಾರ್ಮಾಟಿಕಲ್ ವಲಯದ ಪ್ರಸಿದ್ಧ ಬಯೋಕಾನ್ ಸಂಸ್ಥೆಯು ಸಿದ್ಧಪಡಿಸಿರುವ ಲಸಿಕೆಯನ್ನು ಕೊರೊನಾವೈರಸ್ ಸೋಂಕಿತರ ಚಿಕಿತ್ಸೆಗೆ ಬಳಸುವುದಕ್ಕೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಅನುಮತಿ ನೀಡಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲೇ ಇರುವ ಬಯೋಕಾನ್ ಪಾರ್ಕ್ ನಲ್ಲಿ ಮನುಷ್ಯನ ದೇಹದಲ್ಲಿರುವ ಅಭಿಧಮನಿ ಚಿಕಿತ್ಸೆಗೆ ಅಗತ್ಯವಿರುವ ಲಸಿಕೆಯನ್ನು ರೂಪಿಸುವುದು ಮತ್ತು ಉತ್ಪಾದನೆ ಆಗಲಿದೆ.
ಕೊರೊನಾವೈರಸ್ ಸೋಂಕಿತರಲ್ಲಿ ಗೋಚರಿಸುವ ಲಕ್ಷಣಗಳು ಯಾವುವು?
ಕೊರೊನಾವೈರಸ್ ಸೋಂಕು ತಗಲಿ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ತುರ್ತು ಪರಿಸ್ಥಿತಿಯಲ್ಲಿ ಇಟೋಲಿಝುಮಬ್ ಲಸಿಕೆ ಅಥವಾ ಮಾತ್ರೆಯನ್ನು ಚಿಕಿತ್ಸೆಗೆ ಬಳಸಿಕೊಳ್ಳಬಹುದು ಎಂದು ಡಿಸಿಜಿಐ ಸಮ್ಮತಿ ಸೂಚಿಸಿದೆ.
ಕೊರೊನಾವೈರಸ್ ರೋಗಿಗಳ ಚಿಕಿತ್ಸೆಗೆ ಇಟೋಲಿಝುಮಬ್ ಬಳಕೆ
ತುರ್ತು ಪರಿಸ್ಥಿತಿಯಲ್ಲಿ ನೊವೆಲ್ ಕೊರೊನಾವೈರಸ್ ಸೋಂಕಿತರಿಗೆ ಇಟೋಲಿಝುಮಬ್ 25ಎಂಜಿ ಮಾತ್ರೆ ಅಥವಾ ಇಟೋಲಿಝುಮಬ್ 5ಎಂಎಲ್ ಲಸಿಕೆಯನ್ನು ನೀಡುವುದಕ್ಕೆ ಸಲಹೆ ನೀಡಲಾಗಿದೆ. ಅಸಲಿಗೆ ಇಟೋಲಿಝುಮಬ್ ವಿಶ್ವದಾದ್ಯಂತ ಕೊರೊನಾವೈರಸ್ ಸೋಂಕಿತರ ಚಿಕಿತ್ಸೆಗೆ ಬಳಸುವುದಕ್ಕೆ ಅನುಮತಿ ಪಡೆದುಕೊಂಡ ಮೊದಲ ನೊವೆಲ್ ಬಯೋಜಿಕ್ ಥೆರಿಪಿ ಆಗಿದೆ.
ಉಸಿರಾಟ ಸಂಬಂಧಿತ ರೋಗಿಗಳಿಗೆ ಈ ಮದ್ದಿನಿಂದ ಚಿಕಿತ್ಸೆ
ಕೊರೊನಾವೈರಸ್ ಸೋಂಕಿತರಲ್ಲೂ ಹೆಚ್ಚಾಗಿ ಉಸಿರಾಟ ತೊಂದರೆಯಂತಾ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಇಟೋಲಿಝುಮಬ್ ಲಸಿಕೆಯನ್ನು ಸೋಂಕಿತರ ಚಿಕಿತ್ಸೆಗೆ ಬಳಸಲು ಒಪ್ಪಿಗೆ ನೀಡಲಾಗಿದೆ. ಅಸಲಿಗೆ ಇಟೋಲಿಝುಮಬ್ ಔಷಧವನ್ನು ಸಾಮಾನ್ಯವಾಗಿ ಉಸಿರಾಟ ತೊಂದರೆ ಹಾಗೂ ಶ್ವಾಸಕೋಶದ ಸಮಸ್ಯೆ ಎದುರಿಸುತ್ತಿರುವ ರೋಗಿಗಳ ಚಿಕಿತ್ಸೆಗೆ ಬಳಸಿಕೊಳ್ಳಲಾಗುತ್ತದೆ.
ಕೊರೊನಾವೈರಸ್ ನಿಂದ ಬಹುಅಂಗಾಂಗ ವೈಫಲ್ಯ
ನೊವೆಲ್ ಕೊರೊನಾವೈರಸ್ ಮಹಾಮಾರಿಯು ನೇರವಾಗಿ ಮನುಷ್ಯನ ದೇಹದಲ್ಲಿ ಇರುವ ರೋಗ ನಿರೋಧಕ ಕಣಗಳ ಮೇಲೆ ದಾಳಿ ನಡೆಸುತ್ತವೆ. ಇದರಿಂದ ರೋಗ ನಿರೋಧಕ ಶಕ್ತಿಯ ಪ್ರಮಾಣವು ಕುಗ್ಗುವುದರ ಜೊತೆಗೆ ನರ ಮಂಡಲ ಚೈತನ್ಯ ಕಳೆದುಕೊಳ್ಳುವ ಸಾಧ್ಯತೆಗಳಿರುತ್ತವೆ. ಮನುಷ್ಯನಲ್ಲಿರುವ ರೋಗ ನಿರೋಧಕ ಶಕ್ತಿ ಕಳೆದುಕೊಳ್ಳುವುದರಿಂದ ಬಹುಅಂಗಾಂಗ ವೈಫಲ್ಯದಂತಾ ಸಮಸ್ಯೆಗಳು ಕೂಡಾ ಕಾಣಿಸಿಕೊಳ್ಳುತ್ತವೆ. ಹೀಗಾಗಿ ಸೋಂಕಿತರು ಸಾವನ್ನಪ್ಪುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಸೋಂಕಿತರ ಚಿಕಿತ್ಸೆಗೆ ನಡೆಸಿದ ಪ್ರಯೋಗ ಯಶಸ್ವಿ
ಕೊರೊನಾವೈರಸ್ ಸೋಂಕಿತರ ಚಿಕಿತ್ಸೆಗೆ ಇಟೋಲಿಝುಮಬ್ ಬಳಸುವ ಮೊದಲು ಹಲವು ಹಂತಗಳಲ್ಲಿ ಈ ಲಸಿಕೆಯು ಎಷ್ಟರ ಮಟ್ಟಿಗೆ ಸೋಂಕಿತರ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದರ ಕುರಿತು ಪ್ರಯೋಗಗಳನ್ನು ನಡೆಸಲಾಗಿತ್ತು. ನವದೆಹಲಿ ಮತ್ತು ಮುಂಬೈನ ಹಲವು ಆಸ್ಪತ್ರೆಗಳಲ್ಲಿ ಉಸಿರಾಟ ತೊಂದರೆ ಮತ್ತು ಶ್ವಾಸಕೋಶಗಳಲ್ಲಿ ಸಮಸ್ಯೆ ಕಾಣಿಸಿಕೊಂಡ ರೋಗಿಗಳಿಗೆ ಇಟೋಲಿಝುಮಬ್ ಲಸಿಕೆ ನೀಡಲಾಗಿದ್ದು, ರೋಗಿಗಳಲ್ಲಿ ಕೊಂಚ ಚೇತರಿಕೆ ಕಂಡು ಬಂದಿರುವುದು ಪತ್ತೆಯಾಗಿದೆ.
ಸೋಂಕಿತರಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿ
ರೋಗ ನಿರೋಧಕ ಕಣಗಳ ಮೇಲೆ ದಾಳಿ ನಡೆಸಿರುವ ವೈರಸ್ ವಿರುದ್ಧ ಹೋರಾಡುವಂತಾ ಆ್ಯಂಟಿ ಸಿಟಿ-6 ಮೊನೊಕೊನಾಲ್ ಆ್ಯಂಟಿ ಬಾಡಿ ಇಟೋಲಿಝುಮಬ್, ಉಸಿರಾಟ ತೊಂದರೆ ಎದುರಿಸುತ್ತಿರುವ ರೋಗಿಗಳ ಚಿಕಿತ್ಸೆಯಲ್ಲಿ ಯಶಸ್ವಿ ಆಗಿದೆ. ಕೊರೊನಾವೈರಸ್ ಸೋಂಕಿತರಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುವಲ್ಲಿ ಇಟೋಲಿಝುಮಬ್ ಉತ್ತಮವಾಗಿ ಕೆಲಸ ಮಾಡಿರುವುದು ಗೊತ್ತಾಗಿದೆ. ಇಂಥದೊಂದು ಸಂಶೋಧನೆ ನಡೆಸಿರುವ ಕಂಪನಿ ಹಾಗೂ ಸಿಬ್ಬಂದಿ ಬಗ್ಗೆ ಬಯೋಕಾನ್ ಸಂಸ್ಥೆಯ ಎಕ್ಸಿಕ್ಯೂಟಿವ್ ಚೇರ್ ಪರ್ಸನ್ ಕಿರಣ್ ಮಜುಂದಾರ್ ಶಾವ್ ತಿಳಿಸಿದ್ದಾರೆ.