ಬಿಹಾರ ಹೈ ಡ್ರಾಮಾ : ರೆಬೆಲ್ ಸಿಎಂ ಮಾಂಝಿ ಉಚ್ಛಾಟನೆ
ಪಾಟ್ನಾ, ಫೆ. 7: ಬಿಹಾರ ರಾಜ್ಯ ಸರ್ಕಾರವನ್ನು ರಿಮೋಟ್ ಕಂಟ್ರೋಲ್ನಂತೆ ನಿಯಂತ್ರಿಸುತ್ತಿರುವ ನಿತೀಶ್ ಕುಮಾರ್ ಮತ್ತೆ ತಾವೇ ಮುಖ್ಯಮಂತ್ರಿಯಾಗಲು ಎಲ್ಲ ಸಿದ್ಧತೆ ನಡೆಸಿದ್ದಾರೆ. ಅಲ್ಪಕಾಲ ಮುಖ್ಯಮಂತ್ರಿಯಾಗಿದ್ದ ಜಿತನ್ ರಾಮ್ ಮಾಂಝಿ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ.
ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕಾಗ ಹೀನಾಯ ಸೋಲಿನ ನೈತಿ ಹೊಣೆ ಹೊತ್ತು ನಿತೀಶ್ ಕುಮಾರ್ ಮಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ದಲಿತ ಸಮುದಾಯದ ಜಿತನ್ ರಾಮ್ ಮಾಂಝಿ ಅವರನ್ನು ಸಿಎಂ ಕುರ್ಚಿ ಮೇಲೆ ಕುಳ್ಳಿರಿಸಿದ್ದರು. ಆದರೆ, ಈಗ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿರುವ ಕಾರಣ ತಾವೇ ನೇರ ಮುಂದಾಳತ್ವ ವಹಿಸಲು ನಿತೀಶ್ ಯೋಚಿಸುತ್ತಿದ್ದಾರೆ ಎನ್ನಲಾಗಿದೆ.
ಈ ಮಧ್ಯೆ ಶನಿವಾರ ಸಚಿವ ಸಂಪುಟ ಸಭೆ ನಡೆಸಿದ ಮುಖ್ಯಮಂತ್ರಿ ಮಾಂಝಿ ವಿಧಾನಸಭೆಯನ್ನು ವಿಸರ್ಜನೆಗೊಳಿಸುವ ಪ್ರಸ್ತಾಪ ಇಟ್ಟಿದ್ದರು. ಆದರೆ, ಏಳು ಇಬ್ಬರು ಸಚಿವರು ಮಾತ್ರ ಇದಕ್ಕೆ ಬೆಂಬಲ ವ್ಯಕ್ತಪಡಿಸಿದರು. 22 ಸಚಿವರು ವಿರೋಧ ವ್ಯಕ್ತಪಡಿಸಿದರು. ಇದಕ್ಕೂ ಮೊದಲು ನಿತೀಶ್ರನ್ನು ಅವರ ನಿವಾಸದಲ್ಲಿಯೇ ಭೇಟಿ ಮಾಡಿದ್ದ ಮಾಂಝಿ ತಾವು ಮುಖ್ಯಮಂತ್ರಿಯಾಗಿ ಮುಂದುವರಿಯಲು ಅವಕಾಶ ಕೋರಿದ್ದರು. ಆದರೆ, ನಿತೀಶ್ ನಿರಾಕರಿಸಿದ್ದಾರೆ. [ಮೋದಿ ವಿರುದ್ಧ ಸಿಡಿದೆಡ್ಡ ಜನತಾ ಪರಿವಾರ]
ಬಿಹಾರದಲ್ಲಿ ನಡೆಯುತ್ತಿರುವ ರಾಜಕೀಯ ಹೈ ಡ್ರಾಮಾದ ಪ್ರಮುಖ 10 ಬೆಳವಣಿಗೆಗಳು ಹೀಗಿವೆ.
1) ಮಾಂಝಿ ಅವರನ್ನು ಕೆಳಗಿಳಿಸಿ ತಾವು ಮುಖ್ಯಮಂತ್ರಿ ಹುದ್ದೆಗೇರುವ ನಿತೀಶ್ ಪ್ರಯತ್ನ ಜೆಡಿಯುದಲ್ಲಿ ಬಿರುಕು ಮೂಡಿಸಿದೆ. ಜೆಡಿಯು ಈಗಾಗಲೇ ಬಿಹಾರದಲ್ಲಿ ಅಲ್ಪಸಂಖ್ಯಾತ ಸರ್ಕಾರವಾಗಿ ಮುಂದುವರಿಯುತ್ತಿದೆ.
2) ಶನಿವಾರ ಮುಖ್ಯಮಂತ್ರಿ ಮಾಂಜಿ ಹಾಗೂ ನಿತೀಶ್ ಇಬ್ಬರೂ ಭೇಟಿ ಮಾಡಿ ಚರ್ಚಿಸಿದರು. ನಂತರ ಮಾಂಝಿ ಅವರು ಸಚಿವ ಸಂಪುಟ ಸಭೆ ನಡೆಸಿದರು. ಇತ್ತ ನಿತೀಶ್ ಹಾಗೂ ಪಕ್ಷದ ಮುಖಂಡ ಶರದ್ ಯಾದವ್ ಪಕ್ಷದ ಕಾನೂನು ತಜ್ಞರನ್ನು ಕರೆದು ಚರ್ಚಿಸಿದರು.
3) ಶೀಘ್ರ ವಿಧಾನಸಭೆ ಚುನಾವಣೆ ನಡೆಯಲಿರುವ ಕಾರಣ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಬೇಕು ಎಂದು ಪಕ್ಷದ ಹಲವು ಮುಖಂಡರು ಬಯಸಿದ್ದಾರೆ. ಹೀಗಾದರೆ ಚುನಾವಣೆ ಎದುರಿಸುವುದು ಸುಲಭ ಎಂಬುದು ಅವರ ಅಭಿಪ್ರಾಯ. [ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ರಾಜಿನಾಮೆ]
4) ನಿತೀಶ್ ಕುಮಾರ್ ಕರೆದ ಸಭೆಯನ್ನು ಮಾಂಝಿ ಅಕ್ರಮ ಎಂದು ತಿರಸ್ಕರಿಸಿದ್ದಾರೆ. ತಾವು ಮುಖ್ಯಮಂತ್ರಿಯಾಗಿರುವ ಕಾರಣ ತಮಗೆ ಮಾತ್ರ ಪಕ್ಷದ ಶಾಸಕರ ಸಭೆ ನಡೆಸುವ ಅಧಿಕಾರವಿದೆ ಎಂದು ತಿಳಿಸಿದ್ದಾರೆ.
5) ತಮ್ಮ ಸರ್ಕಾರದ ಇಬ್ಬರು ಸಚಿವರನ್ನು ವಜಾಗೊಳಿಸಿದ ಆದೇಶ ಪತ್ರವನ್ನು ಸಹಿಗಾಗಿ ರಾಜ್ಯಪಾಲರಿಗೆ ಮಾಂಜಿ ಕಳುಹಿಸಿದ್ದರು. ಈ ಇಬ್ಬರೂ ಸಚಿವರು ನಿತೀಶ್ ಕುಮಾರ್ ಅವರಿಗೆ ನಿಷ್ಠೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
6) ಮಧ್ಯ ಪ್ರವೇಶಿಸಿರುವ ಶರದ್ ಯಾದವ್ ಅವರು ಮಾಂಜಿ ಹಾಗೂ ನಿತೀಶ್ ಕುಮಾರ್ ಅವರಿಬ್ಬರನ್ನೂ ಚರ್ಚೆಗಾಗಿ ಆಹ್ವಾನಿಸಿದ್ದರು. ಇಬ್ಬರ ನಡುವೆ ಉದ್ಭವಿಸಿರುವ ವಿವಾದ ಕಡಿಮೆ ಮಾಡುವುದು ಅವರ ಉದ್ದೇಶ ಎಂದು ಮೂಲಗಳು ತಿಳಿಸಿವೆ.
7) ಅಧಿಕಾರ ಬಿಟ್ಟುಕೊಡಲು ಮೀನ ಮೇಷ ಎಣಿಸಿದ ಜಿತನ್ ಕುಮಾರ್ ಮಾಂಝಿ ಅವರನ್ನು ಉಚ್ಛಾಟನೆ ಮಾಡಿ ಆದೇಶ ಹೊರಡಿಸಲಾಯಿತು.
8) ಕೆಲ ದಿನಗಳ ಹಿಂದಷ್ಟೇ ಎಚ್ಚರಿಕೆ ನೀಡಿದ್ದ ಮಾಂಜಿ, ತಮ್ಮನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆಯಲು ಯತ್ನಿಸಿದ್ದರೆ ಪಕ್ಷ ತೊರೆದು ಬಿಜೆಪಿ ಸೇರುವುದಾಗಿ ಎಚ್ಚರಿಕೆ ನೀಡಿದ್ದರು. ಬಿಜೆಪಿ ಈಗಾಗಲೇ ಹಲವು ರಾಜ್ಯಗಳಲ್ಲಿ ಗೆಲುವು ಸಾಧಿಸಿರುವ ಕಾರಣ ಬಿಹಾರದಲ್ಲೂ ಅಧಿಕಾರಕ್ಕೇರುವ ಸಂಭವನೀಯತೆ ಇದೆ.
9) ಮೋದಿ ಅಲೆಗೆ ಬಿಹಾರದಲ್ಲಿ ಜೆಡಿಯು ಅತ್ಯಂತ ಕಡಿಮೆ ಸಾಧನೆ ಮಾಡಿದಾಗ ನಿತೀಶ್ ಕುಮಾರ್ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಿದ್ದರು.
10) ಬೆಂಬಲ ವಾಪಸ್ ಪಡೆದ ಬಿಜೆಪಿಗೆ ತಿರುಗೇಟು ನೀಡಲು ಹಾಗೂ ಅಧಿಕಾರ ಉಳಿಸಿಕೊಳ್ಳಲು ತಾವು ಇದುವರೆಗೆ ಕಟುವಾಗಿ ಟೀಕಿಸುತ್ತಿದ್ದ ಲಾಲು ಪ್ರಸಾದ್ ಯಾದವ್ ಜೊತೆ ಕೈಜೋಡಿಸಿದ್ದರು. ಅವಲ ಬೆಂಬಲದಿಂದ ಅಲ್ಪಸಂಖ್ಯಾತ ಸರ್ಕಾರ ನಡೆಸುತ್ತಿದ್ದರು.