ಯುದ್ದಕ್ಕೆ ಮುನ್ನವೇ ಶರಣು: ಬಿಹಾರ ಸಿಎಂ ಮಾಂಝಿ ರಾಜೀನಾಮೆ
ಪಾಟ್ನಾ, ಫೆ 20: ಅತ್ಯಂತ ನಾಟಕೀಯ ಬೆಳವಣಿಗೆಯೊಂದರಲ್ಲಿ ಬಿಹಾರದ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಶುಕ್ರವಾರ (ಫೆ 20) ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಸದನದಲ್ಲಿ ವಿಶ್ವಾಸಮತ ಸಾಬೀತು ಪಡಿಸುವ ಮುನ್ನವೇ ರಾಜ್ಯಪಾಲ ಕೇಸರಿನಾಥ ತ್ರಿಪಾಠಿಯವರನ್ನು ಭೇಟಿ ಮಾಡಿದ ಮಾಂಝಿ ತನ್ನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಬಿಹಾರ ಅಸೆಂಬ್ಲಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.
ತನ್ನನ್ನು ಬೆಂಬಲಿಸುತ್ತಿರುವ ಶಾಸಕರಿಗೆ ಜೀವಬೆದರಿಕೆ ಕರೆಗಳು ಬರುತ್ತಿವೆ. ವಿಶ್ವಾಸಮತವನ್ನು ಗೌಪ್ಯವಾಗಿ ನಡೆಸಿದ್ದಲ್ಲಿ 140ಕ್ಕೂ ಹೆಚ್ಚು ಶಾಸಕರ ಬೆಂಬಲ ನನಗೆ ಸಿಗುತ್ತಿತ್ತು ಎಂದು ಮಾಂಝಿ ಹೇಳಿದ್ದಾರೆ (ರೆಬೆಲ್ ಸಿಎಂ ಮಾಂಝಿ ಉಚ್ಚಾಟನೆ)
ಭೀಷ್ಮ ಪಿತಾಮಹ ನಿತೀಶ್ ಕುಮಾರ್ ನನಗೆ ಆಡಳಿತ ನಡೆಸಲು ಸಹಕಾರವೇ ನೀಡಲಿಲ್ಲ, ನನ್ನನ್ನು ರಿಮೋಟ್ ಕಂಟ್ರೋಲ್ ನಂತೆ ಬಳಸಿಕೊಳ್ಳಲು ನೋಡಿದ್ದರು ಎಂದು ಮಾಂಝಿ, ನಿತೀಶ್ ಕುಮಾರ್ ವಿರುದ್ದ ಕಿಡಿಕಾರಿದ್ದಾರೆ.
ಬಿಜೆಪಿಯ ಮಾತನ್ನು ಕೇಳಿಕೊಂಡು ಮಾಂಝಿ ತನ್ನ ರಾಜಕೀಯ ಜೀವನವನ್ನೇ ಕತ್ತಲಿಗೆ ತಳ್ಳಿಕೊಂಡಿದ್ದಾರೆ. ಇದು ಅವರ ಸ್ವಯಂಕೃತ ಅಪರಾಧ, ಜೆಡಿಯು ಅಥವಾ ನನ್ನನ್ನು ದೂರಿದರೆ ಬಿಹಾರದ ಜನತೆ ಅವರನ್ನು ನಂಬುವ ಸ್ಥಿತಿಯಲ್ಲಿ ಇಲ್ಲ ಎಂದು ನಿತೀಶ್ ಕುಮಾರ್ ಲೇವಡಿ ಮಾಡಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕಾದ ಹೀನಾಯ ಸೋಲಿನ ನೈತಿಕ ಹೊಣೆ ಹೊತ್ತು ನಿತೀಶ್ ಕುಮಾರ್ ಮಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಮಹಾದಲಿತ ಸಮುದಾಯದ ಜಿತನ್ ರಾಮ್ ಮಾಂಝಿ ಅವರನ್ನು ಸಿಎಂ ಕುರ್ಚಿ ಮೇಲೆ ಕುಳ್ಳಿರಿಸಿದ್ದರು.