ನೂರಾರು ಮಕ್ಕಳು ಸಾಯುತ್ತಿದ್ದರೆ ಬಿಜೆಪಿ ಸಚಿವರಿಗೆ ಕ್ರಿಕೆಟ್ ಚಿಂತೆ!
ನವದೆಹಲಿ, ಜೂನ್ 17: ಬಿಹಾರದಲ್ಲಿ ಅಕ್ಯೂಟ್ ಎನ್ಸೆಫಾಲಿಟಿಸ್ ಸಿಂಡ್ರೋಮ್ ಅಥವಾ ಮಿದುಳಿನ ಉರಿಯೂತ ಕಾಯಿಲೆಯಿಂದ 120ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿದ್ದಾರೆ. ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿರುವ ಇಂತಹ ಗಂಭೀರ ಸಮಸ್ಯೆಗೆ ಪರಿಹಾರ ಸಿಗದೆ ಬಡ ಪೋಷಕರು ಕಂಗಾಲಾಗಿದ್ದಾರೆ. ಆದರೆ, ಬಿಹಾರದ ಆರೋಗ್ಯ ಸಚಿವ, ಬಿಜೆಪಿಯ ಮಂಗಲ್ ಪಾಂಡೆ ಅವರಿಗೆ ಈ ಸಂಕಷ್ಟದ ನಡುವೆಯೂ ಕ್ರಿಕೆಟ್ ಬಗ್ಗೆ ಯೋಚನೆ ಇತ್ತು.
ಬಿಹಾರದಲ್ಲಿ 100 ಮಕ್ಕಳ ಸಾವಿಗೆ ಕಾರಣವಾದ ಎಇಎಸ್ ಸೋಂಕು ಎಂದರೇನು?
ರಾಜ್ಯದಲ್ಲಿ ವ್ಯಾಪಿಸಿರುವ ಮಹಾಮಾರಿಯ ಬಗ್ಗೆ ಚರ್ಚಿಸಲು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್, ಕೇಂದ್ರ ಆರೋಗ್ಯ ಖಾತೆಯ ರಾಜ್ಯ ಸಚಿವ ಅಶ್ವಿನ್ ಕುಮಾರ್ ಚೌಬೆ ಹಾಗೂ ಬಿಹಾರದ ಆರೋಗ್ಯ ಸಚಿವ ಮಂಗಲ್ ಪಾಂಡೆ ಭಾನುವಾರ ಸಭೆ ನಡೆಸಿದ್ದರು. ಇದೇ ಸಂದರ್ಭದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ವಿಶ್ವಕಪ್ ಏಕದಿನ ಪಂದ್ಯ ನಡೆಯುತ್ತಿತ್ತು.
ಬಿಹಾರದಲ್ಲಿ ನಿಗೂಢ ಕಾಯಿಲೆ: ಮೃತ ಮಕ್ಕಳ ಸಂಖ್ಯೆ 83 ಕ್ಕೆ ಏರಿಕೆ
ಮಕ್ಕಳ ಜೀವ ಬಲಿಪಡೆದುಕೊಳ್ಳುತ್ತಿರುವ ಈ ಮಾರಕ ಕಾಯಿಲೆಗೆ ಪರಿಹಾರ ಕಂಡುಕೊಳ್ಳುವ ಸಂಬಂಧ ಗಂಭೀರ ಚರ್ಚೆ ನಡೆಯುವ ಸಂದರ್ಭದಲ್ಲಿಯೇ ಕೇಂದ್ರ ಸಚಿವರ ಪಕ್ಕ ಕುಳಿತಿದ್ದ ಪಾಂಡೆ, 'ಕಿತ್ನೆ ವಿಕೆಟ್ಸ್ ಗಯೇ?' (ಎಷ್ಟು ವಿಕೆಟ್ ಹೋಯಿತು?) ಎಂದು ಕೇಳಿದ್ದಾರೆ. ಅವರ ಎದುರು ಕುಳಿತವರೊಬ್ಬರು ನಾಲ್ಕು ವಿಕೆಟ್ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಈ ವಿಡಿಯೋ ವೈರಲ್ ಆಗಿದ್ದು, ಪಾಂಡೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮಕ್ಕಳ ಸರಣಿ ಸಾವಿನಂತಹ ಗಂಭೀರ ಸಮಸ್ಯೆ ಕಾಡುತ್ತಿರುವಾಗ ಅದರ ಬಗ್ಗೆ ತಲೆಕೆಡಿಸಿಕೊಳ್ಳದೆ ಸಚಿವರು ಕ್ರಿಕೆಟ್ ಕುರಿತು ಯೋಚಿಸುತ್ತಿದ್ದಾರೆ ಎಂದು ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಿದ್ದಾರೆ.