ಉತ್ತರ ಪ್ರದೇಶದ ಕೈರಾನಾ ಕ್ಷೇತ್ರದಲ್ಲಿ ಬಿಜೆಪಿಗೆ ಭಾರೀ ಮುಖಭಂಗ
ನವದೆಹಲಿ, ಮೇ 31 : ಇತ್ತೀಚೆಗೆ ಗೋರಖಪುರ ಮತ್ತು ಫುಲ್ಪುರ ಲೋಕಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದ ಭಾರತೀಯ ಜನತಾ ಪಕ್ಷಕ್ಕೆ ಉತ್ತರ ಪ್ರದೇಶದಲ್ಲಿ ಮತ್ತೊಂದು ಮುಖಭಂಗ ಉಂಟಾಗಿದೆ.
ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದರೂ, ಭಾರೀ ಪ್ರತಿಷ್ಠೆಯ ಕಣವೆನಿಸಿದ್ದ ಕೈರಾನಾ ಲೋಕಸಭಾ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದಿಂ ಬೆಂಬಲ ಪಡೆದಿದ್ದ ರಾಷ್ಟ್ರೀಯ ಲೋಕ ದಳದ ಅಭ್ಯರ್ಥಿ ತಬಸ್ಸುಮ್ ಹಸನ್ ಅವರು ಬಿಜೆಪಿಯ ಅಭ್ಯರ್ಥಿ ಮೃಗಾಂಕಾ ಸಿಂಗ್ ಅವರನ್ನು ಭಾರೀ ಮತಗಳ ಅಂತರದಿಂದ ಸೋಲಿಸಿ ಲೋಕಸಭೆ ಪ್ರವೇಶಿಸಿದ್ದಾರೆ.
10 ರಾಜ್ಯಗಳಲ್ಲಿ ಲೋಕಸಭೆ, ವಿಧಾನಸಭೆ ಉಪಚುನಾವಣೆ ಫಲಿತಾಂಶ 2018 LIVE
ಬಿಜೆಪಿಯ ಸಂಸದ ಹುಕುಂ ಸಿಂಗ್ ಅವರ ಅಕಾಲಿಕ ನಿಧನದ ನಂತರ ನಡೆದಿದ್ದ ಉಪಚುನಾವಣೆ ಇದು. ಆರಂಭದಿಂದಲೂ ಎಸ್ಪಿ-ಆರ್ಎಲ್ಡಿಯ ಅಭ್ಯರ್ಥಿ ತಬಸ್ಸುಮ್ ಅವರು ಮುನ್ನಡೆ ಕಾಯ್ದುಕೊಂಡೇ ಬಂದಿದ್ದರು. ಪ್ರತಿ ಸುತ್ತಿನ ನಂತರವೂ ಅವರ ಗೆಲುವಿನ ಅಂತರ ಹೆಚ್ಚುತ್ತಲೇ ಹೋಯಿತು.
ಗೋರಖಪುರದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಫುಲ್ಪುರದಲ್ಲಿ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಅವರು ತೆರವುಗೊಳಿಸಿದ್ದರಿಂದ ಕೆಲ ತಿಂಗಳ ಹಿಂದೆ ಉಪಚುನಾವಣೆ ನಡೆದಿತ್ತು. ಅದರಲ್ಲಿ ಎಸ್ಪಿ ಮತ್ತು ಬಿಎಸ್ಪಿ ಜಂಟಿಯಾಗಿ ಸ್ಪರ್ಧಿಸಿ ಬಿಜೆಪಿಗೆ ಮಣ್ಣು ಮುಕ್ಕಿಸಿದ್ದವು. ಈಗ ಅದೇ ರೀತಿ ಫಲಿತಾಂಶ ಪುನರಾವರ್ತನೆಯಾಗಿದೆ.
ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತು ಯೋಗಿ ಆದಿತ್ಯನಾಥ ಅವರ ಪ್ರಭಾವ ಮತ್ತು ಜನಪ್ರಿಯತೆ ಕಡಿಮೆಯಾಗುತ್ತಿರುವುದು ಈ ಫಲಿತಾಂಶಗಳಿಂದ ವೇದ್ಯವಾಗಿದೆ. ಇತ್ತೀಚೆಗೆ ಇಂಡಿಯಾ ಟುಡೇ ಮತ್ತು ಎಬಿಪಿ ನ್ಯೂಸ್ ನಡೆಸಿದ ಚುನಾವಣಾಪೂರ್ವ ಸಮೀಕ್ಷೆಯಲ್ಲಿ ಕೂಡ ಉತ್ತರ ಭಾರತದಲ್ಲಿ ಬಿಜೆಪಿ ಜನಪ್ರಿಯತೆ ಕುಸಿಯುತ್ತಿರುವುದು ಕಂಡುಬಂದಿದೆ.
ಮುಜಫರ್ ನಗರದಲ್ಲಿ ನಡೆದ ಕೋಮು ಗಲಭೆಯ ನಂತರ ಕೋಮುಸೂಕ್ಷ್ಮವಾಗಿರುವ ಕೈರಾನಾ ಲೋಕಸಭಾ ಕ್ಷೇತ್ರದಲ್ಲಿ ಎಲ್ಲ ಸಮುದಾಯದವರಿಗೆ ಮಾನ್ಯವಾಗುವಂಥ ಅಭ್ಯರ್ಥಿಯನ್ನು ನಿಲ್ಲಿಸುವುದು ಎಸ್ ಪಿ ಮತ್ತು ಆರ್ ಜೆಡಿಗೆ ಸವಾಲಾಗಿತ್ತು. ಕಡೆಗೆ ತಬಸ್ಸುಮ್ ಹಸನ್ ಅವರನ್ನು ಆಯ್ಕೆ ಮಾಡಲಾಗಿತ್ತು.
ರಾಷ್ಟ್ರೀಯ ಲೋಕ ದಳದ ಅಭ್ಯರ್ಥಿ ತಬಸ್ಸುಮ್ ಹಸನ್ ಅವರಿಗೆ ಸಮಾಜವಾದಿ ಪಕ್ಷ, ಕಾಂಗ್ರೆಸ್ ಮತ್ತು ದಲಿತ ನಾಯಕಿ ಮಾಯಾವತಿ ಅವರ ಭರ್ಜರಿ ಬೆಂಬಲ ಸಿಕ್ಕಿದ್ದರಿಂದ 401,464 ಮತಗಳನ್ನು ಪಡೆದು ಜಯಶಾಲಿಯಾಗಿದ್ದಾರೆ. ಬಿಜೆಪಿಯ ಮೃಗಾಂಕಾ ಅವರಿಗೆ ಅವರ ತಂದೆಯ ಸಾವಿನ ಅನುಕಂಪವೇನೂ ಗಿಟ್ಟಿಲ್ಲ. ಯಾವುದೇ ಇತರ ಮೈತ್ರಿ ಪಕ್ಷಗಳ ಬೆಂಬಲವಿಲ್ಲದೆ 352,173 ಪಡೆದು ಅವರು ಸೋಲೊಪ್ಪಿಕೊಂಡಿದ್ದಾರೆ.
ಈ ಫಲಿತಾಂಶ ಮುಂಬರುವ 2019ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಒಂದು ದಿಕ್ಸೂಚಿಯನ್ನು ಒದಗಿಸಿದೆ. ವಿರೋಧ ಪಕ್ಷಗಳೆಲ್ಲ ಒಂದಾಗಿ, ಒಗ್ಗಟ್ಟಿನಿಂದ ಹೋರಾಟ ನಡೆಸಿದರೆ ಭಾರತೀಯ ಜನತಾ ಪಕ್ಷಕ್ಕೆ ಎಂಥ ಸಂಕಷ್ಟವನ್ನು ತರಬಲ್ಲವು ಎಂಬುದನ್ನು ತೋರಿಸಿಕೊಟ್ಟಿವೆ. ನೂಪುರ್ ನಲ್ಲಿಯೂ ಸೋತಿರುವ ಬಿಜೆಪಿಗೆ ಈ ಸೋಲು ತಕ್ಕ ಪಾಠ.