ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು: ಪ್ರಧಾನಿ ಮೋದಿಗೆ ಭಾರೀ ರಿಲೀಫ್
ಸಹಾರಾ ಡೈರಿಯಲ್ಲಿ ಪ್ರಧಾನಿ ಮೋದಿ ಕಿಕ್ ಬ್ಯಾಕ್ ಪಡೆದಿದ್ದರು ಎನ್ನುವ ಆರೋಪದಡಿಯಲಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ವಿಚಾರಣೆಗೆ ಅನರ್ಹ ಎಂದು ಪ್ರಕಟಿಸಿ ಆದೇಶ ನೀಡಿದೆ.
ನವದೆಹಲಿ, ಜ 11: ಸಹಾರಾ ಡೈರಿ ಪ್ರಕರಣವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ದ ಬಹುದೊಡ್ಡ ಅಸ್ತ್ರವಾಗಿ ಬಳಸಿಕೊಳ್ಳಲು ತಯಾರಿ ನಡೆಸುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ ಮುಖಭಂಗವಾಗಿದೆ.
ಸಹಾರಾ ಮತ್ತು ಬಿರ್ಲಾ ಸಂಸ್ಥೆಗಳ ಡೈರಿಗಳಲ್ಲಿ ಪ್ರಧಾನಿ ಮೋದಿ ಅವರ ಹೆಸರು ಉಲ್ಲೇಖವಾಗಿರುವುದರಿಂದ, ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸಬೇಕೆಂದು ಕೋರಲಾಗಿದ್ದ ಸಾರ್ವಜನಿಕ ಹಿತಾಶಕ್ತಿ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ವಿಚಾರಣೆಗೆ ಅನರ್ಹ ಎಂದು ಪ್ರಕಟಿಸಿ, ಅರ್ಜಿಯನ್ನು ವಜಾಗೊಳಿಸಿದೆ. (ಪ್ರಧಾನಿ ಮೋದಿ ಶೈಕ್ಷಣಿಕ ಪದವಿ ದಾಖಲೆ ಬಿಡುಗಡೆ)
ಪ್ರಧಾನಿ ಮೋದಿ ಸಹಾರಾ ಕಂಪೆನಿಯಿಂದ ಕೋಟ್ಯಾಂತರ ರೂಪಾಯಿ ಕಿಕ್ ಬ್ಯಾಕ್ ಪಡೆದಿದ್ದರು ಎಂದು, ಈ ವಿಚಾರದಲ್ಲಿ ರಾಜಕೀಯ ತಂತ್ರಗಾರಿಕೆ ರೂಪಿಸಲು ಹೊರಟಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಸುಪ್ರೀಂ ತೀರ್ಪಿನಿಂದ ಭಾರೀ ಹಿನ್ನಡೆಯಾಗಿದೆ.
ಅರ್ಜಿಗೆ ಸಂಬಂಧಪಟ್ಟ ದಾಖಲೆಗಳು ಅಸ್ಪಷ್ಟ, ವಿಚಾರಣೆಗೆ ಯೋಗ್ಯವಾದುದಲ್ಲ ಎಂದು ಈ ಹಿಂದೆ ಕೂಡಾ ನ್ಯಾಯಾಲಯ ಆದೇಶ ನೀಡಿತ್ತು. ಆದರೆ, ತನಿಖೆ ನಡೆಸಬೇಕೆಂದು ಕೋರಿ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಪಿಐಎಲ್ ಸಲ್ಲಿಸಿದ್ದರು.
ಬುಧವಾರ (ಜ 11) ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಡೈರಿಯಲ್ಲಿ ಮೋದಿ ಎನ್ನುವ ಹೆಸರು ಉಲ್ಲೇಖವಾಗಿದ್ದರೂ ಮಾಹಿತಿ ಸಂಪೂರ್ಣವಾಗಿಲ್ಲ. ಇದನ್ನು ದಾಖಲೆಯಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ಮುಂದೆ ಓದಿ..
ಸರ್ವೋಚ್ಚ ನ್ಯಾಯಾಲಯ
ಡೈರಿಯಲ್ಲಿನ ಮಾಹಿತಿಯನ್ನು ಸಾಕ್ಷಿಯೆಂದು ಪರಿಗಣಿಸಲು ಸಾಧ್ಯವಿಲ್ಲ, ಯಾಕೆಂದರೆ ಅದು ಗೊಂದಲಮಯವಾಗಿದೆ. ಇದನ್ನೇ ಪ್ರಮುಖ ಸಾಕ್ಷಿಯನ್ನಾಗಿ ಪರಿಗಣಿಸಿ ದೇಶದ ನ್ಯಾಯಾಂಗ ವ್ಯವಸ್ಥೆ ಕೆಲಸ ನಿರ್ವಹಿಸಲು ಸಾಧ್ಯವಿಲ್ಲ. ಒಂದು ವೇಳೆ, ಇಂತಹ ಅಸ್ಪಷ್ಟ ದಾಖಲೆಗಳನ್ನು ಸಾಕ್ಷಿಯೆಂದು ಪರಿಗಣಿಸಿದರೆ ನಮ್ಮ ವ್ಯವಸ್ಥೆಗೆ ಧಕ್ಕೆತಂದಂತೆ - ಸರ್ವೋಚ್ಚ ನ್ಯಾಯಾಲಯ.
ಶೀಲಾ ದೀಕ್ಷಿತ್ ಹೆಸರು ಕೂಡಾ ಡೈರಿಯಲ್ಲಿ
ಸಹಾರಾ ಡೈರಿಯಲ್ಲಿ ದೆಹಲಿಯ ಸಿಎಂ ಆಗಿದ್ದ ಶೀಲಾ ದೀಕ್ಷಿತ್ ಹೆಸರು ಕೂಡಾ ಉಲ್ಲೇಖವಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಶೀಲಾ, ಇದೊಂದು ಬುಲ್ಶಿಟ್ ಎಂದಿದ್ದರು. ಉತ್ತರಪ್ರದೇಶ ಚುನಾವಣೆಯ ಹೊಸ್ತಿಲಲ್ಲಿ ರಾಹುಲ್ ಮತ್ತೆ ಮತ್ತೆ ಡೈರಿ ವಿಚಾರವನ್ನು ಪ್ರಸ್ತಾವಿಸುತ್ತಿದ್ದಾರೆ. ಶೀಲಾ ದೀಕ್ಷಿತ್, ಉತ್ತರಪ್ರದೇಶದಲ್ಲಿ ಕಾಂಗ್ರೆಸ್ಸಿನ ಸಿಎಂ ಅಭ್ಯರ್ಥಿ.
ಮೋದಿ ಸಿಎಂ ಆಗಿದ್ದ ವೇಳೆ
ಪಿಎಂ ಮೋದಿ, ಗುಜರಾತ್ ಸಿಎಂ ಆಗಿದ್ದ ವೇಳೆ ಸಹಾರಾ ಕಂಪನಿಯಿಂದ 25 ಕೋಟಿ ರುಪಾಯಿ ಕಿಕ್ ಬ್ಯಾಕ್ ಪಡೆದಿದ್ದಾರೆಂದು ಆರೋಪಿಸಿದ್ದರು. ಈ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಾಕ್ಸಮರ ಮುಂದುವರಿಯುತ್ತಲೇ ಇದೆ.
ಭ್ರಷ್ಟಾಚಾರ ಶುರುವಾಗಿರುವುದೇ ಕಾಂಗ್ರೆಸ್ ನಿಂದ
ರಾಜಕೀಯದಲ್ಲಿ ಭ್ರಷ್ಟಾಚಾರ ಎನ್ನುವುದು ಶುರುವಾಗಿರುವುದೇ ಕಾಂಗ್ರೆಸ್ ನವರಿಂದ. ಕಳೆದ ಕೆಲವು ದಶಕಗಳಿಂದ ಬೆಳಗ್ಗೆ ಪೇಪರ್ ತೆಗೆದಾಗ ಬರುತ್ತಿದ್ದದ್ದು ಕಾಂಗ್ರೆಸ್ಸಿನ ಭ್ರಷ್ಟಾಚಾರ. ಇಂತವರ ಬಾಯಿಯಿಂದ ಮೋದಿ ಬಗ್ಗೆ ಹೇಳಿಕೆ ಬರುವುದು ಬಹುದೊಡ್ದ ತಮಾಷೆ - ಪ್ರಲ್ಹಾದ್ ಜೋಷಿ.
ದಿನೇಶ್ ಗುಂಡೂರಾವ್
ನ್ಯಾಯಾಲಯದ ಆದೇಶದ ಬಗ್ಗೆ ನಾನು ಮಾತನಾಡುವುದಿಲ್ಲ, ಈ ಬಗ್ಗೆ ಇನ್ನೂ ಹೆಚ್ಚಿನ ದಾಖಲೆ ಸಂಗ್ರಹಿಸುತ್ತೇವೆ. ಸಹಾರಾ ಡೈರಿಯಲ್ಲಿ ಗುಜರಾತ್ ಸಿಎಂ ಮೋದಿ ಎಂದು ಸ್ಪಷ್ಟವಾಗಿ ಉಲ್ಲೇಖವಾಗಿದೆ - ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್.