ನಾನು ದೀಪಿಕಾ ಪಡುಕೋಣೆ ಅಭಿಮಾನಿ, ಟ್ರೋಲ್ಗಳನ್ನು ಖಂಡಿಸುತ್ತೇನೆ: ಕೇಂದ್ರ ಸಚಿವ
ದುರ್ಗ್ (ಛತ್ತೀಸ್ಗಢ), ಜನವರಿ 15: ನಟಿ ದೀಪಿಕಾ ಪಡುಕೋಣೆ ತಮ್ಮ 'ಛಪಾಕ್' ಸಿನಿಮಾದ ಪ್ರಚಾರದ ನಡುವೆ ಇತರರನ್ನು ಕಡೆಗಣಿಸಿ ಜೆಎನ್ಯುದ ನಿರ್ದಿಷ್ಟ ಗುಂಪಿನ ವಿದ್ಯಾರ್ಥಿಗಳ ಜತೆಗೆ ಗುರುತಿಸಿಕೊಂಡಿದ್ದು, ಅವರಿಗೆ ಹಿನ್ನಡೆಯಾಗಿ ಪರಿಣಮಿಸಿದೆ ಎಂದು ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಹೇಳಿದರು.
ಛತ್ತೀಸಗಢದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಆರೋಪಿಗಳೆಂದು ಗುರುತಿಸಲಾಗಿರುವ ಗುಂಪಿನಲ್ಲಿದ್ದ ಕೆಲವು ವ್ಯಕ್ತಿಗಳನ್ನು ದೀಪಿಕಾ ಭೇಟಿ ಮಾಡಿದ್ದರು ಎಂದರು.
ತುಕ್ಡೆ ತುಕ್ಡೆ ಗ್ಯಾಂಗ್ ಜತೆ ನಿಂತ ದೀಪಿಕಾ ಪಡುಕೋಣೆ: ಸ್ಮೃತಿ ಇರಾನಿ ಕಿಡಿ
ಜೆಎನ್ಯುಗೆ ಭೇಟಿ ನೀಡಿದ್ದಕ್ಕೆ ದೀಪಿಕಾ ಪಡುಕೋಣೆ ವಿರುದ್ಧ ಅವಹೇಳನಾಕಾರಿ ಪದಗಳನ್ನು ಬಳಸುತ್ತಿರುವುದಕ್ಕೆ ಟ್ರೋಲಿಗರ ವಿರುದ್ಧ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಜೆಎನ್ಯುದಲ್ಲಿ ನಡೆದ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರ ಮೇಲಿನ ಹಲ್ಲೆ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ದೀಪಿಕಾ ಪಡುಕೋಣೆ ಭಾಗಿಯಾಗಿದ್ದರು. ಇದು ಬಿಜೆಪಿ ಮತ್ತು ಅದರ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ದೇಶ ವಿರೋಧಿ ಚಚಟುವಟಿಕೆ ನಡೆಸುತ್ತಿರುವವರ ಪರ ದೀಪಿಕಾ ಪಡುಕೋಣೆ ಕೈಜೋಡಿಸಿದ್ದಾರೆ ಎಂದು ಕಿಡಿಕಾರಿದ್ದರು. ಕೇಂದ್ರ ಸಚಿವರಾದ ಸ್ಮೃತಿ ಇರಾನಿ ಸೇರಿದಂತೆ ಅನೇಕರು ದೀಪಿಕಾ ಅವರನ್ನು ಟೀಕಿಸಿದ್ದರು.
ಕಿರಿ ಮಗಳಿಗೆ ದೀಪಿಕಾ ಪಾತ್ರದ ಹೆಸರು
ಸಾಮಾಜಿಕ ಮಾಧ್ಯಮಗಳಲ್ಲಿ ದೀಪಿಕಾ ಪಡುಕೋಣೆ ಅವರನ್ನು ಟ್ರೋಲ್ ಮಾಡುತ್ತಿರುವುದರ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ದೀಪಿಕಾ ಪಡುಕೋಣೆ ಅವರ ದೊಡ್ಡ ಅಭಿಮಾನಿ. 'ಯೇ ಜವಾನಿ ಹೈ ದೀವಾನಿ' ಸಿನಿಮಾದಲ್ಲಿನ ಅವರ ಪಾತ್ರ ನೋಡಿ ನನ್ನ ಕಿರಿಯ ಮಗಳಿಗೆ ನೈನಾ ಎಂಬ ಹೆಸರನ್ನೂ ಇಟ್ಟಿದ್ದೆ' ಎಂದು ಹೇಳಿದರು.
ಕೀಳು ಪದಗಳನ್ನು ಬಳಸಬೇಡಿ
'ಈ ಪ್ರಕರಣದಲ್ಲಿ ದೀಪಿಕಾ ಪಡುಕೋಣೆ ಅವರನ್ನು ಯಾರಾದರೂ ನಿಂದಿಸಿದರೆ ಅಥವಾ ಕೆಟ್ಟ ಪದಗಳನ್ನು ಬಳಸಿದರೆ ಅವರನ್ನು ನಾನು ಖಂಡಿಸುತ್ತೇನೆ. ಯಾವುದೇ ವೇದಿಕೆಯಲ್ಲಿ ಅಂತಹ ಕೀಳು ಪದಗಳ ಬಳಕೆಯನ್ನು ಮಾಡಬಾರದು' ಎಂದು ಅಭಿಪ್ರಾಯಪಟ್ಟರು.
ದೀಪಿಕಾ ವಿರುದ್ಧ ರಾಘವೇಂದ್ರ ಔರಾದ್ಕರ್ ಟ್ವೀಟ್ ಪ್ರಕರಣಕ್ಕೆ ಟ್ವಿಸ್ಟ್
ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದ್ದರು
ಪೌರತ್ವ ತಿದ್ದುಪಡಿ ಕಾಯ್ದೆಯ ಕುರಿತಾದ ಪಕ್ಷದ ನಿಲುವನ್ನು ಸಮರ್ಥಿಸಿಕೊಂಡ ಅವರು, ದೇಶದ ಯಾವುದೇ ಜನರ ಪೌರತ್ವವನ್ನು ಕಿತ್ತುಕೊಳ್ಳುವ ಉದ್ದೇಶವನ್ನು ಈ ಕಾಯ್ದೆ ಹೊಂದಿಲ್ಲ ಎಂದು ಸ್ಪಷ್ಟನೆ ನೀಡಿದರು.
ಸಿಎಎ ವಿರುದ್ಧ ರಾಜಕೀಯ ಕಾರಣಕ್ಕಾಗಿ ವಿರೋಧಪಕ್ಷದಲ್ಲಿರುವ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಹಾಗೂ ಎಡಪಕ್ಷಗಳು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿವೆ ಎಂದು ಆರೋಪಿಸಿದರು. ಸಿಎಎ ಸಂಸತ್ನಲ್ಲಿ ಅಂಗೀಕಾರವಾಗುವ ಮುನ್ನವೇ ಗೃಹ ಸಚಿವ ಅಮಿತ್ ಶಾ ಅವರು ವಿರೋಧಪಕ್ಷಗಳ ಎಲ್ಲ ಸಂದೇಹಗಳಿಗೂ ಉತ್ತರಿಸಿದ್ದರು ಎಂದರು.
ಚೀನೀ, ಇಟಾಲಿಯನ್ ಭಾಷೆಯಲ್ಲಿ ಕಳಿಸುತ್ತೇವೆ
ಇದಕ್ಕೂ ಮುನ್ನ ದುರ್ಗ್ನಲ್ಲಿ ಸಿಎಎ ಪರ ಸಮಾವೇಶದಲ್ಲಿ ಮಾತನಾಡಿದ ಅವರು, 'ಹೊಸ ಪೌರತ್ವ ಕಾಯ್ದೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗದೆ ಇದ್ದರೆ ಅದರ ಇಟಾಲಿಯನ್ ಅನುವಾದದ ಪ್ರತಿಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಹಾಗೂ ಚೀನೀ ಅನುವಾದವನ್ನು ಎಡಪಕ್ಷಗಳಿಗೆ ಕಳುಹಿಸುತ್ತೇವೆ' ಎಂದು ವ್ಯಂಗ್ಯವಾಗಿ ಹೇಳಿದರು.