ಗಾಢನಿದ್ರೆ, ಸುಂದರ ಕನಸು, ಸಾವಿರ ಸಾವಿನ ಕಹಿ ನೆನಪಿಗೆ 35 ವರ್ಷ!
ಭೂಪಾಲ್, ಡಿಸೆಂಬರ್.02: ಕಣ್ಣು ಮುಚ್ಚಿ ಮಲಗಿದ್ದ ಆ ಜನರನ್ನು ಗಾಢನಿದ್ರೆ ಆವರಿಸಿತು. ಸುಮಧುರವಾದ ಕನಸುಗಳನ್ನು ಕಾಣುತ್ತಿದ್ದ ಕಣ್ಣುಗಳು ತನ್ನದೇ ಪ್ರಪಂಚದಲ್ಲಿ ವಿಹರಿಸುತ್ತಿದ್ದವು. ಬದುಕಿನ ಜಂಜಾಟವನ್ನು ಮರೆತು ನಿದ್ರೆಗೆ ಜಾರಿದ್ದ ಜನರು ಎಚ್ಚರಗೊಂಡಾಗ ಭಯಭೀತರಾಗಿದ್ದರು. ತಮಗೆ ಅರವಿಲ್ಲದೇ ತಮ್ಮಲ್ಲಿ ಆಗುತ್ತಿರುವ ಬದಲಾವಣೆಯಿಂದ ಎಲ್ಲರ ಎದೆಯಲ್ಲೂ ನಡುಕ ಹುಟ್ಟಿತ್ತು.
ಕಣ್ಣು ತೆರೆದ ಜನರ ಕಣ್ಣಿನಲ್ಲಿ ಉರಿ ಉರಿ, ಉಸಿರಾಡುವುದೇ ತಪ್ಪೋನೋ ಎನ್ನುವಂತಾ ವಾತಾವರಣ. ಉಸಿರಾಡಿದರೆ ಎಲ್ಲಿ ಏನಾಗುತ್ತದೆಯೋ ಎಂಬ ಆತಂಕ. ನೋಡ ನೋಡುತ್ತಿದ್ದಂತೆ ಆಸ್ಪತ್ರೆಗಳತ್ತ ಓಡಿ ಬಂದ ಜನರು. ವಾತಾವರಣದಲ್ಲಿನ ಬದಲಾವಣೆಯನ್ನು ಗುರುತಿಸುವಲ್ಲಿ ಆರಂಭದಲ್ಲಿ ವೈದ್ಯರೂ ಸಹ ವಿಫಲರಾಗಿದ್ದರು. ಏನಾಗುತ್ತದೆ ಎಂಬುದು ಅರಿವಿಗೆ ಬರುವ ಹೊತ್ತಿಗಾಗಲೇ ಸಮಯ ಮೀರಿ ಹೋಗಿತ್ತು.
ಪ್ರತಿತಿಂಗಳು ಇವರ ಖಾತೆಗೆ ಪ್ರಧಾನಿ ಮೋದಿಯಿಂದ ಸಾವಿರ ಸಾವಿರ ಜಮೆ!
ಉಸಿರಾಡಿದ ತಪ್ಪಿಗೆ ಕೆಲವೇ ಕೆಲವು ಗಂಟೆಗಳಲ್ಲಿ ನೂರಾರು ಮಂದಿ ಪ್ರಾಣ ಚೆಲ್ಲಿದರು. ಆಸ್ಪತ್ರೆಗಳಲ್ಲಿ ದಾಖಲಾಗಿದ್ದ ಸಾವಿರಾರು ಮಂದಿ ಪ್ರಾಣ ಉಳಿಸಿಕೊಳ್ಳಲು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರು. ಬದುಕಿನ ಮೌಲ್ಯ ತಿಳಿದುಕೊಳ್ಳುವ ಮುನ್ನವೇ ಪುಟ್ಟ ಪುಟ್ಟ ಕಂದಮ್ಮಗಳು ಸಾವಿನ ಮನೆ ಸೇರಿದ್ದವು. ಇಷ್ಟೆಲ್ಲ ದುರ್ಘಟನೆಗೆ ಕಾರಣವಾಗಿದ್ದೇ ಭೂಪಾಲ್ ನ ಅನಿಲ ದುರಂತ. 1984ರ ಡಿಸೆಂಬರ್.02ರಂದು ನಡೆದ ದೇಶದ ಅತಿದೊಡ್ಡ ಅನಿಲ ದುರಂತ ಸಂಭವಿಸಿ 35 ವರ್ಷಗಳೇ ಕಳೆದಿವೆ.(ಚಿತ್ರಕೃಪೆ: ಬಿಬಿಸಿ )
ಕಪ್ಪುಚುಕ್ಕೆಯಾಗಿ ಕಾಡುತಿರುವ ಅನಿಲ ದುರಂತ
ಮಧ್ಯಪ್ರದೇಶ ರಾಜ್ಯ ರಾಜಧಾನಿಯಾಗಿರುವ ಭೂಪಾಲ್ ನಲ್ಲಿ ಇಂಥದೊಂದು ಅನಿಲ ದುರಂತ ನಡೆದು ಹೋಗುತ್ತದೆ ಎಂದು ಯಾರೂ ಕೂಡಾ ಊಹಿಸಿರಲಿಲ್ಲ. ಭಾರತದ ಅತಿದೊಡ್ಡ ನಗರಗಳ ಪೈಕಿ 17ನೇ ಸ್ಥಾನದಲ್ಲಿರುವ ಭೂಪಾಲ್, ಆಗ ಕೆರೆಗಳ ನಗರಿ ಎಂದೇ ಪ್ರಸಿದ್ಧಿ ಪಡೆದಿತ್ತು. ಎಲ್ಲವೂ ಚೆನ್ನಾಗಿಯೇ ಇತ್ತು. ಆ ರಾತ್ರಿ ನಡೆದ ಅನಿಲ ದುರಂತವೊಂದು ಈ ನಗರವಷ್ಟೇ ಅಲ್ಲದೇ ದೇಶದ ಇತಿಹಾಸದಲ್ಲಿ ಕಪ್ಪುಚುಕ್ಕೆಯಾಗಿ ಉಳಿದು ಬಿದ್ದಿದೆ.
ಆ ರಾತ್ರಿ ಉಸಿರಾಡಿದ ಜನರೇ ಉಸಿರು ನಿಲ್ಲಿಸಿದರು!
ಭೂಪಾಲ್ ನಲ್ಲಿ 1984, ಡಿಸೆಂಬರ್.02 ಮತ್ತು 03ರ ಮಧ್ಯರಾತ್ರಿ ನಡೆದ ದುರ್ಘಟನೆಯಿದು. ಅಂದು ರಾತ್ರಿ ಗಾಳಿಯಲ್ಲಿ ಜವರಾಯನೇ ಸೇರಿಕೊಂಡು ಬಿಟ್ಟಿದ್ದನು. ಮಿಥೈಲ್ ಐಸೋಸಿನೇಟ್ ಎಂದ ವಿಷಕಾರಿ ಅನಿಲ ಪ್ರತಿಯೊಬ್ಬರ ಮನೆಯಲ್ಲೂ ಸಾವಿನ ನಗಾರಿ ಬಾರಿಸಿತು. ಒಂದು ರಾತ್ರಿ ಕಳೆದ ಬೆಳಕು ಮೂಡುವುದರಲ್ಲೇ ಶಾಂತವಾಗಿದ್ದ ಭೂಪಾಲ್ ನಗರವೇ ಸ್ಮಶಾನದಂತೆ ಆಗಿ ಬಿಟ್ಟಿತು. ಎಲ್ಲೆಲ್ಲೂ ಸಾವಿನ ಸುದ್ದಿ, ನೋವು, ಸಂಕಟ, ಕಣ್ಣೀರು. ಅದೊಂದು ರಾತ್ರಿ ವಿಷಾನಿಲವನ್ನು ಉಸಿರಾಡಿದ ಸಾವಿರ ಸಾವಿರ ಜನರು ತಮ್ಮ ಉಸಿರನ್ನೇ ಚೆಲ್ಲಿ ಬಿಟ್ಟರು.
ಅನಿಲ ದುರಂತಕ್ಕೆ ಕಾರಣವಾಗಿದ್ದ ಕಂಪನಿಯ ಹಿನ್ನೆಲೆ
ಭೂಪಾಲ್ ನಲ್ಲಿ ಸ್ಥಾಪನೆಗೊಂಡ ಯೂನಿಯನ್ ಕಾರ್ಬೈಡ್ ಇಂಡಿಯಾ ಲಿಮಿಟೆಡ್ ಕಂಪನಿ ರಾಸಾಯನಿಕ ವಸ್ತುಗಳನ್ನು ಉತ್ಪಾದಿಸುವ ಕಂಪನಿಯಾಗಿತ್ತು. ಸೆವಿನ್ ಎಂಬ ಕೀಟನಾಶಕ ಉತ್ಪಾದನೆಗೆ ಮೀಥೈಲ್ ಐಸೋಸಿನೇಟ್ ಎಂದ ವಿಷಕಾರಿ ಅನಿಲದ ಅಗತ್ಯವಿದ್ದು, ಅದಕ್ಕಾಗಿ 1979ರಲ್ಲಿ ಮೀಥೈಲ್ ಐಸೋಸಿನೇಟ್ (MIC) ಉತ್ಪಾದನಾ ಸ್ಥಾವರವನ್ನು ಸ್ಥಾಪಿಸಲಾಯಿತು. ಹೀಗೆ ಸ್ಥಾಪಿಸಿದ ಮೀಥೈಲ್ ಐಸೋಸಿನೇಟ್ ಸ್ಥಾವರದಲ್ಲಿ ಅನಿಲವನ್ನು ಭೂಮಿಯೊಳಗೆ ಸಂಗ್ರಹಿಸಿಡಲಾಗುತ್ತದೆ. ಅಳತೆಗೂ ಮೀರಿ ಅನಿಲ ಸಂಗ್ರಹಿಸಿದ್ದೇ ಅನಾಹುತಕ್ಕೆ ಕಾರಣವಾಯಿತು ಎಂದು ಘಟನೆಯ ನಂತರ ತಿಳಿದು ಬಂದಿದೆ.
ಮೂರು ಟ್ಯಾಂಕರ್ ಗಳಲ್ಲಿ ಮೀಥೈಲ್ ಐಸೋಸಿನೇಟ್ ಸಂಗ್ರಹ
UCIL ಕಂಪೆನಿಯಲ್ಲಿ ಮೀಥೈಲ್ ಐಸೋಸಿನೇಟ್ ಅನಿಲ ಸಂಗ್ರಹಿಸಿಡಲೆಂದು E610, E611, E619 ಟ್ಯಾಂಕರ್ ಗಳನ್ನು ಇರಿಸಲಾಗಿತ್ತು. ಒಂದೊಂದು ಟ್ಯಾಂಕರ್ ನಲ್ಲಿ 15 ಸಾವಿರ ಗ್ಯಾಲನ್ ದ್ರಾವಣವನ್ನು ಸಂಗ್ರಹಿಸಿ ಇಡಬಹುದಿತ್ತು. ನಂತರ ಜಡ ಸಾರಜನಕದ ಒತ್ತಡವನ್ನು ಬಳಸಿಕೊಂಡು ಸಂಗ್ರಹಿಸಿದ್ದ MIC ದ್ರಾವಣವನ್ನು ಹೊರಗಡೆ ಪಂಪ್ ಮಾಡಲಾಗುತ್ತಿತ್ತು.
E610 ಟ್ಯಾಂಕರ್ ನಲ್ಲಿ ಒತ್ತಡ ತಡೆಯುವ ಸಾಮರ್ಥ್ಯ ಇರಲಿಲ್ಲ
1984ರ ಅಕ್ಟೋಬರ್ ನಲ್ಲಿ E610 ಟ್ಯಾಂಕರ್, ಜಡ ಸಾರಜನಕ ಒತ್ತಡವನ್ನು ತಡೆಯುವ ಸಾಮರ್ಥ್ಯ ಕಳೆದುಕೊಂಡಿತ್ತು. 40 ಟನ್ MIC ದ್ರಾವಣವಿದ್ದ ಟ್ಯಾಂಕರ್ ಹಾಗೂ ಅದರ ಪೈಪ್ ಗಳಲ್ಲಿನ ನ್ಯೂನತೆ ಸರಿಪಡಿಸಲು ದುರಸ್ಥಿ ಕಾರ್ಯ ನಡೆಸಲಾಗುತ್ತಿತ್ತು. ಡಿಸೆಂಬರ್.01ರಂದು E610 ಟ್ಯಾಂಕ್ ನಲ್ಲಿದ್ದ MIC ದ್ರಾವಣವನ್ನು ಪೈಪ್ ಗಳ ಮೂಲಕ ಪಂಪ್ ಮಾಡುವ ಪ್ರಯತ್ನ ನಡೆಸಲಾಗಿತ್ತು. ಆದರೆ ಪ್ರಯತ್ನ ಸಫಲವಾಗಿರಲಿಲ್ಲ.
ನೀರು ಸೇರಿಕೊಂಡಿದ್ದಕ್ಕೆ ಸಂಭವಿಸಿತಾ ದುರಂತ?
E610 ಟ್ಯಾಂಕರ್ ಗೆ ಹೊಂದಿಕೊಂಡಿದ್ದ ಪೈಪ್ ಗಳನ್ನು ದುರಸ್ಥಿ ಮಾಡಲಾಗುತ್ತಿತ್ತು. ಈ ಸಂದರ್ಭದಲ್ಲಿ ಮೊದಲೇ ಕೆಟ್ಟಿದ್ದ E610 ಟ್ಯಾಂಕರ್ ನಲ್ಲಿ ನೀರು ಸೇರಿಕೊಂಡಿದ್ದೇ ಅನಿಲ ದುರಂತಕ್ಕೆ ಕಾರಣ ಎನ್ನಲಾಗಿದೆ. ಮಧ್ಯರಾತ್ರಿ 12:30 ರ ವೇಳೆಗೆ ತಾಪಮಾನ ಹಾಗೂ ಒತ್ತಡ ಹೆಚ್ಚಿದ್ದು, ಟ್ಯಾಂಕ್ ನ ಸಿಮೆಂಟ್ ಪದರದಲ್ಲಿ ಬಿರುಕು ಕಾಣಿಸಿಕೊಂಡಿದೆ. ನಂತರದಲ್ಲಿ ಟ್ಯಾಂಕ್ ಗೆ ಹೊಂದಿಕೊಂಡಿದ್ದ ಕವಾಟ ತೆರೆದುಕೊಂಡಿದ್ದು, ಆ ಮೂಲಕ ವಿಷಾನಿಲ ಗಾಳಿಯಲ್ಲಿ ಸೇರಿಕೊಂಡಿದೆ.
ರಾತ್ರೋರಾತ್ರಿ ಭೂಪಾಲ್ ನ್ನು ವ್ಯಾಪಿಸಿಕೊಂಡ ವಿಷಾನಿಲ
ಗಾಳಿಯಲ್ಲಿ ಸೇರಿಕೊಂಡ ವಿಷಾನಿಲ ರಾತ್ರೋರಾತ್ರಿ ಭೂಪಾಲ್ ನ 8 ಕಿಲೋಮೀಟರ್ ವ್ಯಾಪ್ತಿಯನ್ನು ಆವರಿಸಿಕೊಂಡಿತು. ರಾತ್ರಿ ಮಲಗಿದ್ದ ಜನರಲ್ಲಿ ಕೆಮ್ಮು, ಕಣ್ಣುರಿ, ಉಸಿರಾಟ ತೊಂದರೆ ಕಾಣಿಸಿಕೊಂಡಿತು. ಆಸ್ಪತ್ರೆಗೆ ಧಾವಿಸಿದ ಬಂದ ಜನರಿಗೆ ಏನಾಗಿದೆ ಎಂಬುದು ವೈದ್ಯರಿಗೂ ಅರ್ಥವಾಗಲಿಲ್ಲ. ಮೀಥೈಲ್ ಐಸೋಸಿನೇಟ್ ವಿಷಾನಿಲದ ಪ್ರಭಾವ ಎಂದು ತಿಳಿಯುವ ಹೊತ್ತಿಗಾಗಲೇ ಕಾಲ ಮಿಂಚಿ ಹೋಗಿತ್ತು. ಅಂದು ವೈದ್ಯರ ಬಳಿಯೂ ಇದಕ್ಕೆ ಸರಿಯಾದ ಔಷಧಿ ಇರಲಿಲ್ಲ. ಹೀಗಾಗಿ ಸಾವಿನ ಸಂಖ್ಯೆ ಸಾವಿರದ ಗಡಿ ದಾಟಿತು.
ಅನಿಲ ದುರಂತದಲ್ಲಿ ಸಾವಿರ ಸಾವಿರ ಮಂದಿ ಸಾವು
ಸರ್ಕಾರಿ ದಾಖಲೆಗಳ ಪ್ರಕಾರ ಭೂಪಾಲ್ ಅನಿಲ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 3,787 ಎಂದು ಹೇಳಲಾಗುತ್ತಿದೆ. ಆದರೆ, ಇತ್ತೀಚಿಗೆ ಸಿಕ್ಕಿರುವ ಅಂಕಿ-ಅಂಶಗಳ ಪ್ರಕಾರ 8 ರಿಂದ 10 ಸಾವಿರ ಜನರು ಭೂಪಾಲ್ ಅಗ್ನಿ ದುರಂತದಲ್ಲಿ ಪ್ರಾಣ ಬಿಟ್ಟಿದ್ದಾರೆ ಎಂದು 2006ರಲ್ಲಿ ಸಾಮಾಜಿಕ ಹೋರಾಟಗಾರರು ಅಫಿಡಿವಿಟ್ ಸಲ್ಲಿಸಿದ್ದಾರೆ. ಇದಿಷ್ಟೇ ಅಲ್ಲದೇ, ಭೂಪಾಲ್ ಅನಿಲ ದುರಂತದಲ್ಲಿ 5,58,125 ಮಂದಿ ಗಾಯಗೊಂಡಿದ್ದು, ಸುಮಾರು 3,900ಕ್ಕೂ ಹೆಚ್ಚು ಮಂದಿ ಅಂಗವಿಕಲರಾಗಿದ್ದಾರೆ ಎಂದು ಸರ್ಕಾರವೇ ಹೇಳಿದೆ.