ಭೀಮಾ ಕೊರೆಗಾಂವ್: ಪ್ರಗತಿಪರರ ಗೃಹಬಂಧನ ಅವಧಿ ಮತ್ತೆ ವಿಸ್ತರಣೆ
ನವದೆಹಲಿ, ಸೆಪ್ಟೆಂಬರ್ 28: ಭೀಮಾ ಕೊರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಪ್ರಗತಿಪರರ ಗೃಹಬಂಧನದ ಅವಧಿಯನ್ನು ಸುಪ್ರೀಂಕೋರ್ಟ್ ಮತ್ತೆ ನಾಲ್ಕು ವಾರಗಳ ಕಾಲ ವಿಸ್ತರಿಸಿದೆ.
ಐವರು ಪ್ರಗತಿಪರರ ಬಂಧನವನ್ನು ಪ್ರಶ್ನಿಸಿ ಇತಿಹಾಸಕಾರ್ತಿ ರೊಮಿಲಾ ಥಾಪರ್ ಸಲ್ಲಿಸಿದ್ದ ಅರ್ಜಿಯನ್ನು ಶುಕ್ರವಾರ ವಿಚಾರಣೆಗೆ ಒಳಪಡಿಸಲಾಯಿತು. ಸೆಪ್ಟೆಂಬರ್ 20ರಂದು ವಿಚಾರಣೆ ನಡೆಸಿದ್ದ ನ್ಯಾಯಪೀಠ ತೀರ್ಪನ್ನು ಸೆ.28ಕ್ಕೆ ಕಾಯ್ದಿರಿಸಿತ್ತು.
ಏನಿದು ಭೀಮಾ ಕೊರೆಗಾಂವ್ ವಿವಾದ? ವಿಚಾರವಾದಿಗಳ ಬಂಧನ ಏಕೆ?
ವಿಚಾರವಾದಿಗಳ ಬಂಧನ ಪ್ರಕರಣವನ್ನು ವಿಶೇಷ ತನಿಖಾ ದಳಕ್ಕೆ ಒಪ್ಪಿಸಬೇಕು ಎಂಬ ಅರ್ಜಿದಾರರ ಕೋರಿಕೆಯನ್ನು ನ್ಯಾಯಪೀಠ ತಳ್ಳಿಹಾಕಿತು. ಆರೋಪಿಗಳು ಯಾವ ತನಿಖಾ ಸಂಸ್ಥೆ ತನಿಖೆ ನಡೆಸಬೇಕು ಎಂಬುದನ್ನು ಆಯ್ಕೆ ಮಾಡುವಂತಿಲ್ಲ. ಈ ತನಿಖೆಯನ್ನು ತನಿಖಾಧಿಕಾರಿಯೇ ಮುಂದುವರಿಸಲಿ ಎಂದು ಹೇಳಿತು.
ಇದು ಸರ್ಕಾರದ ನಿಲುವುಗಳು, ರಾಜಕೀಯ ಪಕ್ಷವೊಂದರ ವಿರುದ್ಧ ಅಸಮ್ಮತಿ ಹೊಂದಿದ್ದಾರೆ ಎಂಬ ಕಾರಣಕ್ಕೆ ಮಾತ್ರವೇ ಇವರನ್ನು ಬಂಧಿಸಿರುವ ಪ್ರಕರಣವಲ್ಲ ಎಂದ ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್, ವಿಚಾರಣಾ ನ್ಯಾಯಾಲಯದಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಬಹುದು ಎಂದು ತೀರ್ಪು ನೀಡಿ, ಅವರ ಗೃಹಬಂಧನದ ಅವಧಿಯನ್ನು ನಾಲ್ಕು ವಾರಗಳವರೆಗೆ ವಿಸ್ತರಿಸಿದರು.
ದಲಿತರ ಭೀಮಾ ಕೋರೆಗಾಂವ್ ಕದನದ ಇತಿಹಾಸ
ನ್ಯಾಯಮೂರ್ತಿಗಳಲ್ಲಿ ಭಿನ್ನ ಅಭಿಪ್ರಾಯ
Justice Chandrachud, while dissenting with the majority judgment, asserted that technicality should not be allowed to override substantive justice.
— MumbaiRisesToSaveDemocracy (@MumbaiRises) 28 September 2018
He added that voices of opposition could not be muzzled because it is a dissent.
#BhimaKoregaon
ಪ್ರಧಾನಿಯ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂಬ ಆರೋಪ ಕೇಳಿಬಂದಾಗ ಅದನ್ನು ತನಿಖೆಗೆ ಒಳಪಡಿಸಲೇಬೇಕು. ಆದರೆ, ಅದು ದಾಖಲೆಗಳಿಲ್ಲ ಅಸ್ಪಷ್ಟ ಆರೋಪವಾಗಿರಬಹುದು ಎಂದು ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದರು.
ಮಾವೋವಾದಿ ಜತೆ ನಂಟು ಶಂಕೆ, ಹಲವು ವಿಚಾರವಾದಿಗಳ ಬಂಧನ, ಆಕ್ರೋಶ
ಬಂಧಿತರಲ್ಲಿ ಒಬ್ಬರಾದ ಸುಧಾ ಭಾರದ್ವಾಜ್ ಅವರು ಬರೆದಿದ್ದಾರೆ ಎನ್ನಲಾದ ಪತ್ರವು ಮಾಧ್ಯುಮಗಳಲ್ಲಿ ಪ್ರಸಾರವಾಗಿರುವುದು ಸರಿಯಲ್ಲ. ಕೆಲವು ನಿರ್ದಿಷ್ಟ ಮಾಹಿತಿಗಳ ಬಹಿರಂಗ ನ್ಯಾಯಬದ್ಧ ತನಿಖೆಗೆ ತೊಡಕುಂಟುಮಾಡುತ್ತದೆ ಎಂದ ಚಂದ್ರಚೂಡ್, ವಿದ್ಯುನ್ಮಾನ ಮಾಧ್ಯಮಗಳ ಮುಂದೆ ಪೊಲೀಸರು ಹೇಳಿಕೆ ನೀಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ಪುಣೆ ಪೊಲೀಸರ ವಿರುದ್ಧ ಹರಿಹಾಯ್ದ ಅವರು, ಈ ಬಗ್ಗೆ ಎಸ್ಐಟಿ ತನಿಖೆ ಆಗಬೇಕು. ಸರ್ಕಾರದ ವಿರುದ್ಧ ಅಸಮ್ಮತಿ ಹೊಂದುವುದು ಪ್ರಬಲ ಪ್ರಜಾಪ್ರಭುತ್ವದ ಸಂಕೇತ ಎಂದು ಅವರು ಹೇಳಿದರು.'
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರನ್ನು ಸಹ ಒಳಗೊಂಡಿದ್ದ ನ್ಯಾಯಪೀಠ 2:1 ರ ಅಭಿಪ್ರಾಯದ ಆಧಾರದಲ್ಲಿ ತೀರ್ಪು ನೀಡಿತು.