"ಕಲಂ 370ರದ್ದು; 'ಯುಗಪುರುಷ' ಮೋದಿಗೆ ಭಾರತರತ್ನ ಸಿಗಲಿ"
ನವದೆಹಲಿ, ಆಗಸ್ಟ್ 06: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ ವಿಧೇಯಕ 370 ರದ್ದುಗೊಳಿಸುವ ಮೂಲಕ ಕಣಿವೆ ರಾಜ್ಯದಲ್ಲಿ ಶಾಂತಿ, ಅಭಿವೃದ್ಧಿಗೆ ಪೂರಕ ವಾತಾವರಣ ಸೃಷ್ಟಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಭಾರತ ರತ್ನ ಪ್ರಶಸ್ತಿ ನೀಡುವಂತೆ ಬಿಜೆಪಿ ಸಂಸದರೊಬ್ಬರು ಆಗ್ರಹಿಸಿದ್ದಾರೆ.
ಮಧ್ಯಪ್ರದೇಶದ ರತ್ಲಂ ಲೋಕಸಭಾ ಕ್ಷೇತ್ರದ ಸಂಸದ ಗುಮಾನ್ಸಿಂಗ್ ಅವರು ಲೋಕಸಭಾ ಕಲಾಪದ ಶೂನ್ಯವೇಳೆಯಲ್ಲಿ ಮಾತನಾಡಿ, "ನರೇಂದ್ರ ಮೋದಿಯವರು ಯುಗಪುರುಷ. ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಪುರಸ್ಕರಿಸಬೇಕು. ಆರ್ಟಿಕಲ್370 ರದ್ದುಗೊಳಿಸುವಂಥ ಕಠಿಣ ನಿರ್ಧಾರ ತೆಗೆದುಕೊಳ್ಳಲು ಅವರಿಂದ ಮಾತ್ರ ಸಾಧ್ಯ. ಅನೇಕ ದೇಶಗಳು ಈಗಾಗಲೇ ಮೋದಿಯವರನ್ನು ಗೌರವಿಸಿವೆ. ಜಮ್ಮುಕಾಶ್ಮೀರದ ವಿಚಾರದಲ್ಲಿ ಅವರು ಇಂದು ತೆಗೆದುಕೊಂಡ ನಿರ್ಧಾರದಿಂದ ನಮ್ಮ ದೇಶದ ಕೋಟ್ಯಂತರ ಜನರಿಗೆ ಸಂತೋಷವಾಗಿದೆ. ಹಾಗೇ ನಮ್ಮ ದೇಶದ ಅತ್ಯುನ್ನತ ಗೌರವವನ್ನು ಅವರಿಗೆ ನೀಡಬೇಕು" ಎಂದರು.
ಮೋದಿ-ಶಾ ಕಲಂ 370 ರದ್ದು ಮಾಡಲು 5 ಕಾರಣಗಳು
ಬಿಜೆಪಿ ಸಂಸದರ ಪೈಕಿ ರವಿ ಕಿಶನ್, ಪ್ರಜ್ಞಾ ಸಿಂಗ್ ಠಾಕೂರ್, ವಿಜಯ್ ಕುಮಾರ್ ದುಬೇ ಹಾಗೂ ವಿಷ್ಣು ದತ್ ಶರ್ಮ ಅವರು ಮಾತನಾಡಿ, ಸರ್ಕಾರದ ನಿರ್ಧಾರ ಐತಿಹಾಸಿಕವಾಗಿದ್ದು, ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರು ಹೊಸ ಮಾರ್ಗ ತೋರಿಸಿದ್ದಾರೆ ಎಂದರು.
ರಷ್ಯಾದ ಆರ್ಡರ್ ಆಫ್ ಸೈಂಟ್ ಆಂಡ್ರ್ಯೂ ಅಪೊಸ್ಲೆ ಗೌರವಕ್ಕೆ ಪಾತ್ರವಾಗಿರುವ ಮೋದಿ ಅವರು ಜಾಗತಿಕ ಮಟ್ಟದಲ್ಲಿ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಯುನೈಟೆಡ್ ಅರಬ್ ಎಮಿರೇಟ್ಸ್ ನೀಡುವ ಜಾಯೇದ್ ಪ್ರಶಸ್ತಿ, ಫಿಲಿಫ್ ಕೊಟ್ಲರ್ ಅಧ್ಯಕ್ಷೀಯ ಪ್ರಶಸ್ತಿ, ಸಿಯೋಲ್ ಶಾಂತಿ ಪುರುಸ್ಕಾರಗಳೂ ಮೋದಿ ಅವರಿಗೆ ಸಂದಿವೆ.
ಅಮಿತ್ ಶಾ ಮಂಡಿಸಿದ ವಿಧೇಯಕಗಳ ಪರ 125 ಹಾಗೂ ವಿರೋಧವಾಗಿ 61 ಧ್ವನಿ ಮತಗಳು ಬಿದ್ದವು. ಜಮ್ಮು ಮತ್ತು ಕಾಶ್ಮೀರ, ಲಡಾಕ್ ಪ್ರತ್ಯೇಕ ಕೇಂದ್ರಾಡಳಿತ ವಿಧೇಯಕ, ಕಾಶ್ಮೀರದಲ್ಲಿನ ಆರ್ಥಿಕವಾಗಿ ಹಿಂದುಳಿದವರಿಗೆ ಶೇ10ರಷ್ಟು ಮೀಸಲಾತಿ ನೀಡುವ Jammu and Kashmir Reservation Bill, 2019 ಬಿಲ್ ಕೂಡಾ ಪಾಸ್ ಆಗಿದೆ.
ಏಕರೂಪ ನಾಗರಿಕ ಸಂಹಿತೆ ಜಾರಿ ಮೋದಿ-ಶಾ ಮುಂದಿನ ಗುರಿ?
ಜಮ್ಮುಮತ್ತು ಕಾಶ್ಮೀರ ಹೊಸ ಕೇಂದ್ರಾಡಳಿತ ಪ್ರದೇಶವಾಗಿದ್ದರೂ ವಿಧಾನಸಭೆ ಹೊಂದಲಿದೆ, ಲಡಾಕ್ ಹೊಸ ಕೇಂದ್ರಾಡಳಿತ ಪ್ರದೇಶವಾಗಲಿದ್ದು, ಯಾವುದೇ ವಿಧಾನಸಭೆ ಹೊಂದಿರುವುದಿಲ್ಲ. ಈಗ ಜಮ್ಮು ಮತ್ತು ಕಾಶ್ಮೀರದಲ್ಲಿ ಪುದುಚೇರಿಯಂತೆ ಚುನಾವಣೆ ಎದುರಿಸಿ ಜನಾದೇಶ ಪಡೆದ ಸರ್ಕಾರ ರಚನೆಯಾಗಿ ಹೊಸ ಮುಖ್ಯಮಂತ್ರಿ ಹೊಂದಬಹುದು. ಆದರೆ, ಲಡಾಕ್ ಮಾತ್ರ ಅಂಡಮಾನ್ ಮತ್ತು ನಿಕೋಬಾರ್ ಇನ್ನಿತರ ಕೇಂದ್ರಾಡಳಿತ ಪ್ರದೇಶಗಳಂತೆ ಉಳಿಯಲಿದೆ.