ಭಾರತ್ ಬಂದ್ ರೌಂಡ್ ಅಪ್: ಬಿಜೆಪಿ ವಿರುದ್ಧ 'ಕೈ', ಕಾಲು, ಮೆದುಳು
ಭಾರತ್ ಬಂದ್ ಎಂದು ಇಡೀ ದೇಶದಾದ್ಯಂತ ಆಯ್ತಲ್ಲ, ಅದು ಯಶಸ್ವಿಯಾಯಿತಾ? ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಹಾಗೂ ಡಾಲರ್ ವಿರುದ್ಧ ರುಪಾಯಿ ಮೌಲ್ಯದ ಕುಸಿತ ವಿರೋಧಿಸಿ ಕೇಂದ್ರ ಸರಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ವಿರುದ್ಧ ಕರೆ ನೀಡಿದ್ದ ಬಂದ್ ಗತಿ ಏನಾಯಿತು?
ರಾಜಸ್ತಾನದಲ್ಲಿ ಇನ್ನೇನು ಚುನಾವಣೆ ಕಣ್ಣೆದುರೇ ಇಟ್ಟುಕೊಂಡಿರುವ ಬಿಜೆಪಿ ನೇತೃತ್ವದ ರಾಜ್ಯ ಸರಕಾರ ತಾನು ಹಾಕುತ್ತಿದ್ದ ತೆರಿಗೆಯನ್ನು ಅಲ್ಪ ಪ್ರಮಾಣದಲ್ಲಿ ಇಳಿಸಿತು. ಇದು ಯಾರ ಗೆಲುವು? ಬಂದ್ ಗೆ ಕರೆ ನೀಡಿದ ವಿಪಕ್ಷಗಳದೋ ಅಥವಾ ಚುನಾವಣೆ ಎದುರಿಗೆ ಇರುವಾಗ ಇಂಥ ಕೆಲಸ ಮಾಡಿದ್ದಕ್ಕೆ ಪ್ಲಸ್ ಆಗಲಿರುವ ವಸುಂಧರಾ ರಾಜೇ ನೇತೃತ್ವದ ಬಿಜೆಪಿಗೋ ತಿಳಿಯುವುದಕ್ಕೆ ಹೆಚ್ಚು ರಾಜಕೀಯ ಪಾಂಡಿತ್ಯ ಬೇಡ.
ಇಂಧನ ಮೇಲಿನ ತೆರಿಗೆ ಇಳಿಸಲು ಸಾಧ್ಯವೇ ಇಲ್ಲ: ಕೇಂದ್ರ ಸ್ಪಷ್ಟನೆ
ಇನ್ನು ಟಿಡಿಪಿ ನೇತೃತ್ವದ ಸರಕಾರವಿರುವ ಆಂಧ್ರಪ್ರದೇಶದಲ್ಲೂ ಪೆಟ್ರೋಲ್ ಬೆಲೆ ಇಳಿಸಲಾಗಿದೆ. ಚಂದ್ರಬಾಬು ನಾಯ್ಡು ಅವರು ಬಿಜೆಪಿ ಪಾಲಿನ ಹಳೆ ಗೆಳೆಯ. ಅವರಿಗೆ ಹಾಸಿ ಹೊದ್ದುಕೊಳ್ಳುವಷ್ಟು ಆರ್ಥಿಕ ಸವಾಲುಗಳು ಇದ್ದಾಗಲೂ ಇಂಥ ನಿರ್ಧಾರ ಮಾಡಿದ್ದಾರೆ. ಅಲ್ಲಿಗೆ ವಿಪಕ್ಷಗಳ ಸಾಲಿನಿಂದ ಚಂದ್ರಬಾಬು ನಾಯ್ಡು ಅವರಿಗೊಂದು ಪ್ಲಸ್ ಆಯಿತು.
ಸಾರ್ವಜನಿಕ ಆಸ್ತಿಗೆ ಹಾನಿ, ಮಗುವೊಂದರ ಸಾವು
ಇನ್ನು ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ಬಿಹಾರ, ಒಡಿಶಾ, ಕೇರಳ, ಪಶ್ಚಿಮ ಬಂಗಾಲ, ಗುಜರಾತ್ ನ ಕೆಲವು ಭಾಗದಲ್ಲಿ ಬಂದ್ ನ ಆಚರಣೆ ಆಗಿದೆ. ಕರ್ನಾಟಕದಲ್ಲಂತೂ ಜೆಡಿಎಸ್-ಕಾಂಗ್ರೆಸ್ ನ ಮೈತ್ರಿ ಸರಕಾರವೇ ಇದ್ದು, ಬಂದ್ ಬಿಸಿಯಾಗಿ ಕಾಣುವಂತೆ ಮಾಡುವಲ್ಲಿ ಸಫಲವಾಗಿದೆ. ಇನ್ನೊಂದು ವಿಷಯ: ಪೆಟ್ರೋಲ್-ಡೀಸೆಲ್ ಬೆಲೆ ಈ ಪರಿ ಏರಿಕೆ ಆಗಿದೆ ಅನ್ನೋದು ನಿಜದ ವಿಚಾರ. ಜನ ಸಾಮಾನ್ಯರಿಗೆ ಇದು ಹೊರೆ ಎನ್ನುವುದರಲ್ಲೂ ಅನುಮಾನವಿಲ್ಲ. ಇಂಥ ಆರ್ಥಿಕ ಸವಾಲುಗಳನ್ನು ಸರಿಯಾಗಿ ನಿರ್ವಹಿಸಬೇಕಾದದ್ದು ಕೇಂದ್ರ ಸರಕಾರದ ಮಹತ್ವದ ಜವಾಬ್ದಾರಿ. ಹಲವು ಕಡೆ ಸಾರ್ವಜನಿಕರೇ ಬಂದ್ ಬೆಂಬಲಿಸಿರುವುದೂ ನಿಜ. ಕೆಲವು ಕಡೆ ಕಾಂಗ್ರೆಸ್ ಸೇರಿದಂತೆ ಇತರ ವಿಪಕ್ಷಗಳವರು ಬಲವಂತವಾಗಿ ಬಂದ್ ಮಾಡಿರುವುದು ಕೂಡ ಅಷ್ಟೇ ಸತ್ಯ. ಸಾರ್ವಜನಿಕ ಆಸ್ತಿಗೆ ಹಾನಿಯಾಗಿರುವುದು, ಸಂಚಾರಕ್ಕೆ ಸಮಸ್ಯೆ ಆಗಿರುವುದು, ರೈಲಿನಲ್ಲೇ ಮಗುವನ್ನು ಹಡೆದಿರುವುದು, ಆಸ್ಪತ್ರೆಗೆ ಕರೆದೊಯ್ಯುವಾಗ ಮಗುವೊಂದು ಸಾವನ್ನಪ್ಪಿರುವುದು ಇವೆಲ್ಲ ಇಂದಿನ ಬಂದ್ ನಿಂದ ಆದ ಅನಾಹುತಗಳ ಪಟ್ಟಿಯಲ್ಲಿವೆ.
ರಾಜ್ಯದಲ್ಲಿ ಬಂದ್ ಪರಿಣಾಮಕಾರಿಯಾಗಿತ್ತು
ಉಡುಪಿಯಲ್ಲಿ ಬಿಜೆಪಿ ನಗರಾಧ್ಯಕ್ಷನ ಮೇಲೆ ಆದ ಹಲ್ಲೆ, ಬೆಂಗಳೂರಿನಲ್ಲಿ ಮಧ್ಯಾಹ್ನದವರೆಗೆ ಚಿತ್ರಮಂದಿರಗಳ ಪ್ರದರ್ಶನ ರದ್ದು, ಕ್ಯಾಬ್ ಸೇವೆಗಳು ಇಲ್ಲದಿದ್ದದ್ದು, ಸಾರ್ವಜನಿಕ ಸಂಚಾರಕ್ಕೆ ಸಮಸ್ಯೆ ಆಗಿದ್ದು, ಶಾಲಾ-ಕಾಲೇಜುಗಳಿಗೆ ರಜಾ ಘೋಷಣೆ, ಅಂಗಡಿಗಳು ಸೇರಿದಂತೆ ಹೋಟೆಲ್ ಗಳಿಗೆ ಬೀಗ ಹಾಕಿದ್ದು ಹಾಗೂ ಹಾಕಿಸಿದ್ದು, ಹಲವು ಖಾಸಗಿ ಕಂಪೆನಿಗಳು ರಜಾ ಘೋಷಣೆ ಮಾಡಿದ್ದು...ಇವೆಲ್ಲವೂ ಕರ್ನಾಟಕದ ವಿದ್ಯಮಾನಗಳು. ಕಾಂಗ್ರೆಸ್-ಜೆಡಿಎಸ್ ನಿಂದ ಬಂದ್ ಗೆ ಬೆಂಬಲವಿತ್ತು ಅನ್ನೋ ಮಾತು ಪಕ್ಕಕ್ಕಿಟ್ಟು ಹೇಳುವುದಾದರೆ ವಿವಿಧ ಕನ್ನಡಪರ ಸಂಘಟನೆಗಳು, ಆಟೋ-ಟ್ಯಾಕ್ಸಿ ಚಾಲಕರು-ಮಾಲೀಕರು, ಚಿತ್ರಮಂದಿರ-ಹೋಟೆಲ್ ಗಳ ಮಾಲೀಕರು ಕೂಡ ಬೆಂಬಲ ಸೂಚಿಸಿದ್ದರಿಂದ ರಾಜ್ಯದಲ್ಲಿ ಬಂದ್ ಪರಿಣಾಮಕಾರಿಯಾಗಿತ್ತು.
ಸಿ.ಟಿ.ರವಿಗೆ ಈ ವಿಚಾರ ಮುಂಚೆ ಗೊತ್ತಿರಲಿಲ್ಲವಾ?
ಬಿಜೆಪಿಯ ಶಾಸಕ ಸಿ.ಟಿ.ರವಿ ಅವರು ನೀಡಿದ ಹೇಳಿಕೆ: ಪುಕ್ಕಟೆ ತೈಲ ನೀಡುವುದಕ್ಕೆ ಇರಾನ್-ಇರಾಕ್ ನಲ್ಲಿ ನಮ್ಮ ಮಾವಂದಿರು ಇಲ್ಲ ಎಂಬುದು ಕುತೂಹಲಕರವಾಗಿತ್ತು ಹಾಗೂ ಅದರಲ್ಲಿ ಸತ್ಯವೂ ಇತ್ತು. ಆದರೆ ಕಾಂಗ್ರೆಸ್ ನೇತೃತ್ವದ್ದೋ ಅಥವಾ ಬಿಜೆಪಿ ಹೊರತಾದ ಬೇರೆ ಯಾವುದೇ ಸರಕಾರ ಇದ್ದಿದ್ದರೂ ಸಿ.ಟಿ.ರವಿ ಅವರಿಗೆ ಈ ಮಾತು ನೆನಪಾಗುತ್ತಿತ್ತಾ? ಅಂದರೆ ಇರಾನ್ ಅಥವಾ ಇರಾಕ್ ನಿಂದ ತೈಲ ಆಮದು ಮಾಡಿಕೊಳ್ಳುತ್ತದೆ ಭಾರತ. ಯಾವುದೇ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೂ ಇಂಥದ್ದೇ ಸಮಸ್ಯೆ ಆಗುತ್ತದೆ. ಆಲಸಿತನದಿಂದಲೋ ಅಥವಾ ಮೂರ್ಖತನದಿಂದಲೋ ಈಗಿನ ಸನ್ನಿವೇಶವನ್ನು ಸೃಷ್ಟಿಸಿದರೆ ಅದಕ್ಕೆ ಸರಕಾರದ ನೇತೃತ್ವ ವಹಿಸಿಕೊಂಡ ಪಕ್ಷದ ನಾಯಕತ್ವವನ್ನು ಪ್ರಶ್ನಿಸಬೇಕು. ಪ್ರಧಾನಿ ನರೇಂದ್ರ ಮೋದಿ ಅವರು, ಪೆಟ್ರೋಲ್ ಬೆಲೆ ಏರಿಕೆ- ರುಪಾಯಿ ಮೌಲ್ಯ ಕುಸಿತಕ್ಕೆ ಕಾಂಗ್ರೆಸ್ ಪಕ್ಷ ಕಾರಣ. ಬಿಜೆಪಿಯು ಅಧಿಕಾರಕ್ಕೆ ಬಂದರೆ ಈ ರೀತಿಯ ಸನ್ನಿವೇಶ ಎದುರಾಗುವುದಿಲ್ಲ ಎಂದು ಭರವಸೆ, ಆಶ್ವಾಸನೆ ನೀಡಿ ಗದ್ದುಗೆ ಏರಿದವರು. ನಾಲ್ಕೇ ವರ್ಷಕ್ಕೆ ಹೇಳಿಕೆ ನೀಡಿದ್ದಾರೆ: ಕೇಂದ್ರ ಸರಕಾರದಿಂದ ಯಾವುದೇ ಸೆಸ್ ಇಳಿಸಲು ಸಾಧ್ಯವಿಲ್ಲ. ಇರಾನ್-ಇರಾಕ್ ನಲ್ಲಿ ಬಿಟ್ಟಿಯಾಗಿ ತೈಲ ಸಿಗಲ್ಲ ಎಂಬುದು ಸಿ.ಟಿ.ರವಿ ಅವರಿಗೆ ಈಗ ನೆನಪಾಗುತ್ತಿದೆ.
ಸಿಕ್ಕ ಅವಕಾಶ ಕಲ್ಲೆಸೆಯೋಣ ಎಂದುಕೊಂಡಿತು ಕಾಂಗ್ರೆಸ್
ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಕಾಂಗ್ರೆಸ್ ನಿಂದ ಪೂರ್ತಿ ತಂಡವೇ ಕಾಣಿಸಿಕೊಂಡು ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಎಷ್ಟು ಸಾಧ್ಯವೋ ಅಷ್ಟು ಹೀಗಳೆದಿದೆ. ಕಾಂಗ್ರೆಸ್ ಅಧ್ಯಕ್ಷರಾದ ರಾಹುಲ್ ಗಾಂಧಿ ಸ್ವತಃ ನೇತೃತ್ವ ವಹಿಸಿಕೊಂಡಿದ್ದಾರೆ. ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್ ಹಾಗೂ ಸೋನಿಯಾ ಗಾಂಧಿ ಸೇರಿದಂತೆ ಹಲವರು ಭಾಗವಹಿಸಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿದ್ದಾಗ ಮಾಡಿದ್ದ ಅನಾಹುತ ಎಲ್ಲವನ್ನೂ ನರೇಂದ್ರ ಮೋದಿ ಅವರು ಒಂದು ಅವಧಿಯಲ್ಲೇ ಮಾಡಿ ಮುಗಿಸಿದ್ದಾರೆ ಅನ್ನೋ ಹೀಗಳಿಕೆ ಕೇಳಿಬಂದಿದೆ. ಈ ಸರಕಾರ ಎಲ್ಲ ಮಿತಿಯನ್ನೂ ಮೀರಿದೆ ಎಂದಿದ್ದಾರೆ ಮನ್ ಮೋಹನ್ ಸಿಂಗ್. ಆದರೆ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಗೆ ಏನು ಕಾರಣ ಹಾಗೂ ಡಾಲರ್ ವಿರುದ್ಧ ರುಪಾಯಿ ಮೌಲ್ಯ ಕುಸಿಯಲು ಯಾವುದೆಲ್ಲ ಹಿನ್ನೆಲೆಯಿದೆ ಎಂಬುದು ಕಾಂಗ್ರೆಸ್ ಗೆ ಗೊತ್ತಿಲ್ಲದ್ದೇನಲ್ಲ. ಆದರೆ ಈ ಹಿಂದೆ ಮೋದಿ ಬಳಸಿಕೊಂಡ ಬಾಣವನ್ನು 'ಕೈ' ಬಿಗಿಯಾಗಿ ಹಿಡಿದುಕೊಂಡಿದೆ. ಒಂದು ದಿನದ ಭಾರತ ಬಂದ್ ಮುಗಿದಿದೆ. ಇನ್ನು ನಾಳೆ ಬೆಳಗಾದರೆ ಪೆಟ್ರೋಲ್ ಬಂಕ್ ಮುಂದೆ ಹೋಗುವ ನಮ್ಮಂಥ ಸಾಮಾನ್ಯ ಜನರು ಲೀಟರ್ ಪೆಟ್ರೋಲ್ ಗೆ ಎಷ್ಟು ಬೆಲೆ ಅಂತ ಕೇಳಲ್ಲ. ಏಕೆಂದರೆ ಅದೆಷ್ಟಾದರೂ ನಾವು ಹಾಕಿಸುವುದು ನೂರು ರುಪಾಯಿಗೇ. ಮುಂಚಿನಷ್ಟು ಮೈಲೇಜ್ ಬರ್ತಿಲ್ಲ ಅಂತ ಪೆಟ್ರೋಲ್ ಬಂಕ್ ನವರನ್ನು ಬಯ್ದುಕೊಳ್ತೀವಿ, ಅಷ್ಟೇ.