ಬುಧವಾರ ಭಾರತ್ ಬಂದ್: ನಿಮಗೆ ತಿಳಿದಿರಬೇಕಾದ 5 ಸಂಗತಿಗಳು
ಬೆಂಗಳೂರು, ಜನವರಿ 6: ಬುಧವಾರದಂದು ಬಹುತೇಕ ಭಾರತ ಸ್ತಬ್ಧವಾಗಲಿದೆ. ಕೇಂದ್ರ ವ್ಯಾಪಾರ ಒಕ್ಕೂಟಗಳು ಕರೆ ನೀಡಿರುವ ಜನವರಿ 8ರ (ಬುಧವಾರ) ಅಖಿಲ ಭಾರತ ಬಂದ್ನಲ್ಲಿ ಲಕ್ಷಾಂತರ ಕಾರ್ಮಿಕರು ಪಾಲ್ಗೊಳ್ಳಲಿದ್ದಾರೆ. ಇದರಿಂದ ಜನಜೀವನ, ದೈನಂದಿನ ಚಟುವಟಿಕೆಗಳು ಅಸ್ತವ್ಯಸ್ತವಾಗುವ ಸಾಧ್ಯತೆ ಇದೆ.
ಜನವರಿ 08ರಂದು ಭಾರತ್ ಬಂದ್, ಯಾವ ಸೇವೆ ಲಭ್ಯ? ಯಾವ್ದು ಅಲಭ್ಯ?
ಈ ಬಂದ್ಗೆ ವ್ಯಾಪಾರ ಒಕ್ಕೂಟಗಳು ಮಾತ್ರವಲ್ಲದೆ ದೇಶದಾದ್ಯಂತ ಅನೇಕ ಸಂಘಟನೆಗಳು, ಸಂಘ ಸಂಸ್ಥೆಗಳು, ಒಕ್ಕೂಟಗಳು, ರಾಜಕೀಯ ಪಕ್ಷಗಳಿಂದ ಬೆಂಬಲ ವ್ಯಕ್ತವಾಗಿದೆ. ಸರ್ಕಾರಿ ನೌಕರರು, ಬ್ಯಾಂಕ್ ಉದ್ಯೋಗಿಗಳು, ಶಿಕ್ಷಕರು ಮತ್ತು ಉಕ್ಕು ಹಾಗೂ ರೈಲ್ವೆ ಒಳಗೊಂಡಂತೆ ವಿವಿಧ ವಲಯಗಳ ಲಕ್ಷಾಂತರ ಮಂದಿ ಈ ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ವಾರಾಂತ್ಯದಲ್ಲಿ ಭುಗಿಲೆದ್ದ JNU, ಕ್ಯಾಂಪಸಿನಲ್ಲಿ ನಡೆದಿದ್ದೇನು?
ಕೇಂದ್ರದಲ್ಲಿನ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರವು ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿ ತರುತ್ತಿದೆ ಎಂದು ಆರೋಪಿಸಿ ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಯಲಿದ್ದು, ಬುಧವಾರ ನೌಕರರು ಕಾರ್ಯಸ್ಥಾನದಿಂದ ದೂರವೇ ಉಳಿಯಲಿದ್ದಾರೆ. ಈ ಬಂದ್ ಏಕೆ? ಬಂದ್ನಿಂದ ಏನೇನಾಗಲಿದೆ? ನಿಮಗೆ ತಿಳಿದಿರಬೇಕಾದ ಐದು ಸಂಗತಿಗಳು ಇಲ್ಲಿವೆ.
ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿರುವವರು ಯಾರು?
ಕೈಗಾರಿಕಾ ವ್ಯಾಪಾರ ಒಕ್ಕೂಟಗಳಿಂದ ಹಿಡಿದು ಮಹಿಳಾ ಮತ್ತು ರೈತರ ಸಂಘಸಂಸ್ಥೆಗಳು, ಅನೇಕ ಸಂಘಟನೆಗಳು ಮುಷ್ಕರದಲ್ಲಿ ಪಾಲ್ಗೊಳ್ಳಲಿವೆ. ವಿವಿಧ ಎಡಪಕ್ಷಗಳು ಮತ್ತು ಕೇಂದ್ರ ವ್ಯಾಪಾರ ಒಕ್ಕೂಟಗಳು ಮುಷ್ಕರಕ್ಕೆ ತಮ್ಮ ಬೆಂಬಲ ಘೋಷಿಸಲಿವೆ.
ಅಖಿಲ ಭಾರತ ವ್ಯಾಪಾರ ಒಕ್ಕೂಟ ಕೇಂದ್ರ (ಎಐಯುಟಿಯುಸಿ), ಭಾರತೀಯ ವ್ಯಾಪಾರ ಒಕ್ಕೂಟಗಳ ಕೇಂದ್ರ (ಸಿಐಟಿಯು), ಅಖಿಲ ಭಾರತ ವ್ಯಾಪಾರ ಒಕ್ಕೂಟ ಕಾಂಗ್ರೆಸ್ (ಎಐಟಿಯುಸಿ), ಹಿಂದ್ ಮಜ್ದೂರ್ ಸಭಾ (ಎಚ್ಎಂಎಸ್), ಸ್ವಯಂ ಉದ್ಯೋಗಿ ಮಹಿಳೆಯರ ಸಂಘ (ಸೇವಾ), ಅಖಿಲ ಭಾರತ ವ್ಯಾಪಾರ ಒಕ್ಕೂಟಗಳ ಕೇಂದ್ರ ಮಂಡಳಿ (ಎಐಸಿಸಿಟಿಯು), ಕಾರ್ಮಿಕ ಪ್ರಗತಿಪರ ಸಂಘಟನೆ (ಎಲ್ಪಿಎಫ್), ಯುನೈಟೆಡ್ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಯುಟಿಯುಸಿ), ಭಾರತ ರಾಷ್ಟ್ರೀಯ ವ್ಯಾಪಾರ ಒಕ್ಕೂಟ ಕಾಂಗ್ರೆಸ್ (ಐಎನ್ಟಿಯುಸಿ) ಮತ್ತು ವ್ಯಾಪಾರ ಒಕ್ಕೂಟ ಸಮನ್ವಯ ಕೇಂದ್ರ (ಟಿಯುಸಿಸಿ) ಒಕ್ಕೂಟಗಳು ಪಾಲ್ಗೊಳ್ಳುತ್ತಿವೆ. ಅಂದಾಜು 20 ಕೋಟಿ ಉದ್ಯೋಗಿಗಳು ಮುಷ್ಕರದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಜನವರಿ 8ರ ಭಾರತ್ ಬಂದ್; ಯಾರ ಬೆಂಬಲವಿಲ್ಲ
ಮುಖ್ಯ ಬೇಡಿಕೆ ಏನು? ಸಮಸ್ಯೆ ಏನು?
ಉದ್ದೇಶಿತ ಕಾರ್ಮಿಕ ಸುಧಾರಣಾ ನೀತಿಯನ್ನು ಕೈಬಿಡಬೇಕು ಎನ್ನುವುದು ಸರ್ಕಾರಕ್ಕೆ ಕಾರ್ಮಿಕರು ಸಲ್ಲಿಸುತ್ತಿರುವ ಪ್ರಮುಖ ಬೇಡಿಕೆ. ಕಾರ್ಮಿಕ ಕಾನೂನಿನಲ್ಲಿ ಮಾಡಿರುವ ತಿದ್ದುಪಡಿಗಳಿಗೆ ಒಕ್ಕೂಟಗಳಿಂದ ಆಕ್ಷೇಪ ವ್ಯಕ್ತವಾಗಿದೆ. ಈ ತಿದ್ದುಪಡಿಗಳನ್ನು ತೆಗೆದುಹಾಕಬೇಕು ಎಂದು ಆಗ್ರಹಿಸಿದ್ದಾರೆ.
44 ಕಾರ್ಮಿಕ ಕಾನೂನುಗಳನ್ನು ನಾಲ್ಕು ಕೋಡ್ಗಳಾಗಿ ವಿಲೀನಗೊಳಿಸುವ ಪ್ರಸ್ತಾವದ ಮಸೂದೆಯನ್ನು ಲೋಕಸಭೆಯಲ್ಲಿ ಮಂಡನೆ ಮಾಡಲಾಗಿದೆ. ಕೂಲಿ, ಕೈಗಾರಿಕಾ ಸಂಬಂಧ, ಸಾಮಾಜಿಕ ಭದ್ರತೆ ಮತ್ತು ಸುರಕ್ಷಿತ ಉದ್ಯೋಗ ವಾತಾವರಣ ಎಂದು ವರ್ಗೀಕರಣ ಮಾಡಲಾಗಿದೆ.
ಕೈಗಾರಿಕಾ ಸಂಬಂಧದ ಕುರಿತಾದ ಕಾರ್ಮಿಕ ಸಂಹಿತೆಯನ್ನು 2018ರ ನವೆಂಬರ್ನಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಅಂಗೀಕರಿಸಲಾಗಿದೆ. ಈ ಸಂಹಿತೆಯು ಕಾರ್ಮಿಕ ಒಕ್ಕೂಟಗಳ ಪರಿಗಣನೆಯನ್ನು ಹಿಂಪಡೆಯುವುದು ಮತ್ತು ಉದ್ಯೋಗಿಗಳನ್ನು ಕೆಲಸದಿಂದ ಕಿತ್ತೊಗೆಯುವ ನಿರ್ಧಾರ ತೆಗೆದುಕೊಳ್ಳುವ ನಿಯಮವನ್ನು ಉದ್ಯೋಗದಾತರಿಗೆ ಅನುಕೂಲವಾಗುವಂತೆ ಸಡಿಲಗೊಳಿಸುವುದು ಸೇರಿದಂತೆ ಅನೇಕ ತಿದ್ದುಪಡಿಗಳನ್ನು ಒಳಗೊಂಡಿದೆ. ಅಸಂಘಟಿತ ವಲಯದ ಶೇ 93ರಷ್ಟು ಉದ್ಯೋಗಿಗಳನ್ನು ಸಾಮಾಜಿಕ ಭದ್ರತೆಯ ಕಾರ್ಮಿಕ ಸಂಹಿತೆ ಒಳಗೊಳ್ಳುವುದಿಲ್ಲ.
ಇದಲ್ಲದೆ, ಸಂಹಿತೆಯ ಅಡಿಯಲ್ಲಿ ಉದ್ಯೋಗಿಗಳು ಮುಷ್ಕರ ಕೈಗೊಂಡರೆ ಅದನ್ನು ಸಾಮೂಹಿಕ ಪ್ರಾಸಂಗಿಕ ರಜೆ (ಕ್ಯಾಷ್ಯುವಲ್ ಲೀವ್) ಎಂದು ವ್ಯಾಖ್ಯಾನಿಸಲಾಗುತ್ತದೆ. ಶೇ 75ಕ್ಕೂ ಅಧಿಕ ಕಾರ್ಮಿಕರ ಬೆಂಬಲ ಹೊಂದಿದ್ದರೆ ಮಾತ್ರ ಒಕ್ಕೂಟವೊಂದಕ್ಕೆ ಪರಿಗಣನೆ ದೊರಕುತ್ತದೆ. ಈ ತಿದ್ದುಪಡಿಗಳನ್ನು ತೆಗೆದುಹಾಕಬೇಕು ಎನ್ನುವುದು ಕಾರ್ಮಿಕರ ಒತ್ತಾಯವಾಗಿದೆ.
ಪಾರ್ಕಿಂಗ್ ಗಾಗಿ ಪ್ರತಿಭಟನೆಗಿಳಿದ ಬೈನರಿ ಗಾರ್ಮೆಂಟ್ಸ್ ಕಾರ್ಮಿಕರು
ಇತರೆ ಬೇಡಿಕೆಗಳು ಏನು?
ವಿವಿಧ ಕಾರ್ಮಿಕ ಒಕ್ಕೂಟಗಳು ಮುಂದಿಟ್ಟಿರುವ ಇತರೆ ಕೆಲವು ಪ್ರಮುಖ ಬೇಡಿಕೆಗಳಲ್ಲಿ ಮಾಸಿಕ ಕನಿಷ್ಠ ಕೂಲಿಯನ್ನು 21,000-24,000 ರೂ.ವರೆಗೆ ಹೆಚ್ಚಿಸಬೇಕು ಎನ್ನುವುದು ಸೇರಿದೆ. ಸಾರ್ವಜನಿಕ ಸ್ವಾಮ್ಯದ ನಿಯಂತ್ರಣದಲ್ಲಿರುವ ಸಂಸ್ಥೆ, ಉದ್ಯಮಗಳನ್ನು ಖಾಸಗೀಕರಣ ಮಾಡುವುದನ್ನು ನಿಲ್ಲಿಸಬೇಕು, ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ) ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ಪಿಆರ್) ನಿರ್ಧಾರಗಳನ್ನು ರದ್ದುಗೊಳಿಸಬೇಕು.
ಮನೆಯಲ್ಲೇ ಪ್ರತಿಭಟನೆ ಮುಂದುವರೆಸಲು ನಿರ್ಧರಿಸಿದ ಆಶಾ ಕಾರ್ಯಕರ್ತೆಯರು
ಮುಷ್ಕರಕ್ಕೆ ಬ್ಯಾಂಕ್ ಒಕ್ಕೂಟಗಳ ಬೆಂಬಲ
ಕೇಂದ್ರ, ಸಹಕಾರಿ, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಉದ್ಯೋಗಿಗಳು ಮತ್ತು ಭಾರತೀಯ ಜೀವ ವಿಮಾ ನಿಗಮದ ಉದ್ಯೋಗಿಗಳ ಒಕ್ಕೂಟಗಳು ಕೂಡ ಮುಷ್ಕರದಲ್ಲಿ ಭಾಗವಹಿಸಲು ನಿರ್ಧರಿಸಿವೆ. ಭಾರತೀಯ ಬ್ಯಾಂಕ್ಗಳ ಸಂಘಟನೆ (ಐಬಿಎ), ಆರು ಬ್ಯಾಂಕ್ ಒಕ್ಕೂಟಗಳು ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿವೆ. ಬ್ಯಾಂಕಿಂಗ್ ಸೇವೆಗಳು , ಮುಖ್ಯವಾಗಿ ಎಟಿಎಂಗಳು, ಶಾಖಾ ಸೇವೆಗಳಿಗೆ ಇದರಿಂದ ತೊಂದರೆಯಾಗುವ ಸಾಧ್ಯತೆ ಇದೆ. ಆದರೆ ಆನ್ಲೈನ್ ವ್ಯವಹಾರಗಳಿಗೆ ತೊಂದರೆಯಾಗುವುದಿಲ್ಲ. ಬ್ಯಾಂಕ್ ಉದ್ಯೋಗಿಗಳು ಮುಖ್ಯವಾಗಿ ತಮ್ಮ ವೇತನ ಹೆಚ್ಚಳಕ್ಕೆ ಬೇಡಿಕೆ ಇರಿಸಿದ್ದಾರೆ. ಬ್ಯಾಂಕ್ ವಿಲೀನ ಮತ್ತು ಬ್ಯಾಂಕ್ ಸುಧಾರಣೆಗಳಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಮಾತುಕತೆ ವಿಫಲ
ಸರ್ಕಾರ ಮತ್ತು ಒಕ್ಕೂಟಗಳ ಮುಖಂಡ ನಡುವಿನ ಮಾತುಕತೆಗಳು ವಿಫಲವಾದ ಹಿನ್ನೆಲೆಯಲ್ಲಿ ಮುಷ್ಕರಕ್ಕೆ ಕರೆ ನೀಡಲಾಗಿದೆ. ಗುರುವಾರ ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಹತ್ತು ವ್ಯಾಪಾರ ಒಕ್ಕೂಟಗಳೊಂದಿಗೆ ಸಭೆ ನಡೆಸಿದ್ದರು. ಈ ಬದಲಾವಣೆಗಳು ಕಾರ್ಮಿಕರ ಕಲ್ಯಾಣಕ್ಕಾಗಿಯೇ ಮಾಡಿರುವುದು ಎಂದು ಕಾರ್ಮಿಕ ಸಂಘಟನೆಗಳಿಗೆ ಅವರು ವಿವರಣೆ ನೀಡಿದ್ದರು. ಆದರೆ ತಮ್ಮ ಯಾವ ಆತಂಕಗಳ ಕುರಿತೂ ಸಭೆಯಲ್ಲಿ ಚರ್ಚೆ ನಡೆಯಲಿಲ್ಲ. ಹೀಗಾಗಿ ಮುಷ್ಕರ ನಡೆಸಲು ತೀರ್ಮಾನಿಸಿರುವುದಾಗಿ ಕಾರ್ಮಿಕ ಒಕ್ಕೂಟಗಳು ತಿಳಿಸಿವೆ.