ಭಾರತ ಬಂದ್ ಕರೆ ನೀಡುವುದರ ಹಿಂದಿನ ನಿಜವಾದ ಕಾರಣವೇನು?
ನವದೆಹಲಿ, ಫೆಬ್ರವರಿ.26: ಇಂಧನ ಬೆಲೆ ಏರಿಕೆ, ಇ-ವೇ ಬಿಲ್ ಮತ್ತು ಸರಕು ಸೇವಾ ತೆರಿಗೆ ವಿರೋಧಿಸಿ ಅಖಿಲ ಭಾರತ ವರ್ತಕರ ಒಕ್ಕೂಟ ಭಾರತ್ ಬಂದ್ ಗೆ ಕರೆ ನೀಡಿದೆ. ಶುಕ್ರವಾರ ದೇಶಾದ್ಯಂತ ಎಲ್ಲ ವಾಣಿಜ್ಯ ಮಾರುಕಟ್ಟೆಗಳು ಬಂದ್ ಆಗಿರಲಿವೆ.
ಅಖಿಲ ಭಾರತ ವರ್ತಕರ ಒಕ್ಕೂಟ ಕರೆ ನೀಡಿರುವ ಭಾರತ್ ಬಂದ್ ಗೆ 40,000 ವ್ಯಾಪಾರಿ ಸಂಘಗಳು ಬೆಂಬಲ ವ್ಯಕ್ತಪಡಿಸಿವೆ. ಅಖಿಲ ಭಾರತ ಸಾರಿಗೆ ಕಲ್ಯಾಣ ಸಂಘ ಸಹ ಭಾರತ್ ಬಂದ್ ಹಾಗೂ ಚಕ್ಕಾ ಜಾಮ್ ಹೋರಾಟಕ್ಕೆ ಬೆಂಬಲಿಸಿದೆ. ಬಾಂಬೆ ಸರಕು ಸಾಗಾಣಿಕೆ ಸಂಘ, ಸಿಮ್ಟಾ, ಕೆಜಿಟಿಎ, ಬರೋಡಾ ಸರಕು ಸಾಗಾಣಿಕೆ ಸಂಘ, ವಾಪಿ ಸಾರಿಗೆ ಸಂಘ, ಎಚ್ಜಿಟಿಎ, ಸಿಜಿಟಿಎ, ಕಾರ್ ಕ್ಯಾರಿಯರ್ ಅಸೋಸಿಯೇಷನ್, ಪುಣೆ ಟ್ರಾನ್ಸ್ಪೋರ್ಟರ್ಸ್, ಮತ್ತು ಇನ್ನೂ ಅನೇಕ ಸಂಘಗಳು ಈ ಒಂದು ದಿನ ತಮ್ಮ ವಹಿವಾಟನ್ನು ಬಂದ್ ಮಾಡುವುದಾಗಿ ತಿಳಿಸಿವೆ.
Bharat Bandh : ಫೆ.26ಕ್ಕೆ ಭಾರತ್ ಬಂದ್; ಸಾರಿಗೆ ಸಂಘಟನೆಗಳಿಂದ ಪ್ರತಿಭಟನೆ
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದ ಸುಧಾರಿಸಿಕೊಳ್ಳುತ್ತಿರುವ ಭಾರತದ ಜನರಿಗೆ ಕೇಂದ್ರ ಸರ್ಕಾರ ಮೇಲಿಂದ ಮೇಲೆ ಬೆಲೆ ಏರಿಕೆಯ ಬರೆ ಎಳೆಯುತ್ತಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಇದೀಗ ಸಾರಿಗೆ ವ್ಯವಸ್ಥೆಯಲ್ಲಿ ಹೊಸ ನಿಯಮಗಳ ಜಾರಿ. ಹೀಗೆ ಸರ್ಕಾರದ ದುಬಾರಿ ನಿರ್ಧಾರಗಳ ವಿರುದ್ಧ ಭಾರತ್ ಬಂದ್ ನಡೆಸಲಾಗುತ್ತಿದ್ದು, ಇಂದು ಯಾವೆಲ್ಲ ಸೇವೆಗಳು ಚಾಲ್ತಿಯಲ್ಲಿ ಇರುತ್ತವೆ. ಏನೆಲ್ಲ ಸೇವೆಗಳು ಬಂದ್ ಆಗಿರುತ್ತವೆ ಎನ್ನುವುದರ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ನೋಡಿ.
ಭಾರತ ಬಂದ್: ಯಾವೆಲ್ಲ ಸೇವೆಗಳು ಅಲಭ್ಯ?
- 40,000 ವ್ಯಾಪಾರ ಸಂಘಟನೆಗಳು ಭಾರತ್ ಬಂದ್ ಗೆ ಬೆಂಬಲಿಸಿರುವ ಹಿನ್ನೆಲೆ ದೇಶದ ವಾಣಿಜ್ಯ ಮಾರುಕಟ್ಟೆಗಳೆಲ್ಲ ಬಂದ್
- ಸಾರಿಗೆ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿರುವ ಹಿನ್ನೆಲೆ ದೇಶಾದ್ಯಂತ ಬೆಳಗ್ಗೆ 6 ರಿಂದ ರಾತ್ರಿ 8 ಗಂಟೆವರೆಗೂ ಸಂಚಾರ ವ್ಯತ್ಯಯ
- ಮುಂಗಡ ಮೀಸಲಾತಿ ಹಾಗೂ ಬಿಲ್ ಆಧಾರಿತ ಸರಕುಗಳ ಸಂಚಾರದ ಮೇಲೆ ಪರಿಣಾಮ
- ಯಾವುದೇ ವ್ಯಾಪಾರಿಯು ತಮ್ಮ ಪ್ರತಿಭಟನೆಯನ್ನು ನೋಂದಾಯಿಸುವುದಕ್ಕಾಗಿ ಜಿಎಸ್ ಟಿ ಪೋರ್ಟಲ್ಗೆ ಲಾಗ್ ಇನ್ ಆಗುವುದಿಲ್ಲ
- ಚಾರ್ಟರ್ಡ್ ಅಕೌಂಟೆಂಟ್ಸ್ ಮತ್ತು ತೆರಿಗೆ ವಕೀಲರ ಸಂಘಗಳಿಂದ ಮುಷ್ಕರಕ್ಕೆ ಬೆಂಬಲ
- ಸಿಎಐಟಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಅವರ ಪ್ರಕಾರ, ಮಹಿಳಾ ಉದ್ಯಮಿಗಳು, ಸಣ್ಣ ಕೈಗಾರಿಕೆಗಳು, ವ್ಯಾಪಾರಿಗಳು ಬಂದ್ಗೆ ಸೇರಲಿದ್ದಾರೆ
ಭಾರತ್ ಬಂದ್ ದಿನ ಲಭ್ಯವಿರುವ ಸೇವೆಗಳು
- ಅಗತ್ಯ ಸೇವೆಗಳು
- ಔಷಧಿ ಅಂಗಡಿಗಳು
- ಹಾಲು
- ತರಕಾರಿ ಅಂಗಡಿ
- ಪೆಟ್ರೋಲ್ ಮತ್ತು ಡೀಸೆಲ್
ಭಾರತ್ ಬಂದ್ ನಡೆಸುವುದಕ್ಕೆ ಕಾರಣವೇನು?
ಅಖಿಲ ಭಾರತ ವರ್ತಕರ ಒಕ್ಕೂಟ ಮತ್ತು ಅಖಿಲ ಭಾರತ ಸಾರಿಗೆ ಕಲ್ಯಾಣ ಸಂಘಗಳು ಕೇಂದ್ರ ಸರ್ಕಾರ ಜಾರಿಗೊಳಿಸಲು ಹೊರಟಿರುವ ಇ-ವೇ ಬಿಲ್ ರದ್ದುಗೊಳಿಸಬೇಕು ಇಲ್ಲದಿದ್ದಲ್ಲಿ ಅದರಲ್ಲಿ ಉಲ್ಲೇಖಿಸಿರುವ ಕೆಲವು ಅಂಶಗಳನ್ನು ತೆಗೆದುಹಾಕುವಂತೆ ಒತ್ತಾಯಿಸಿ ಭಾರತ್ ಬಂದ್ ಗೆ ಕರೆ ನೀಡಿವೆ. ದೇಶಾದ್ಯಂತ ಅಂತರ್-ರಾಜ್ಯ ಸರಕು ಸೇವೆಗಳ ಮೇಲೆ ಅನ್ವಯವಾಗುವಂತೆ 2018ರ ಏಪ್ರಿಲ್.01ರಂದು ಇ-ಬಿಲ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿತ್ತು.
ಇ-ಬಿಲ್ ವ್ಯವಸ್ಥೆ ವಿರೋಧಕ್ಕೆ ಕಾರಣವಾಗಿರುವುದೇನು?
ಇ-ಬಿಲ್ ವ್ಯವಸ್ಥೆಯು ಸಾಗಾಣಿಕೆದಾರರಿಗೆ ಅಪ್ರಾಯೋಗಿಕ ಅನುಸರಣೆಯನ್ನು ಕಡ್ಡಾಯಗೊಳಿಸುವ ನಿಯಮವಾಗಿದೆ. ಸರಕುಗಳನ್ನು ಹೊತ್ತು ಸಾಗುವ ಸಾಗಣೆದಾರರು ಅಥವಾ ಅದನ್ನು ರಫ್ತು ಮಾಡುತ್ತಿರುವವರು ತಮ್ಮ ಸರಕಿನ ಬಗ್ಗೆ ಆನ್ ಲೈನ್ ಪೋರ್ಟಲ್ ನಲ್ಲಿ ತುಂಬಬೇಕು. ಎ ಭಾಗದಲ್ಲಿ ಸಾಗಾಣಿಕೆಯ ಸರಕು ಮತ್ತು ಬಿ ಭಾಗದಲ್ಲಿ ವಾಹನದ ಬಗ್ಗೆ ನಮೂದಿಸಬೇಕು. ಕನಿಷ್ಠ ಲೆಕ್ಕದ ಪ್ರಕಾರ, ವಾಹನವು ದಿನಕ್ಕೆ 200 ಕಿಲೋ ಮೀಟರ್ ಸಂಚರಿಸಬೇಕು. ಆದರೆ ಪ್ರತಿನಿತ್ಯ 200 ಕಿಲೋ ಮೀಟರ್ ಸಂಚರಿಸುವುದು ಕೆಲವು ಸಂದರ್ಭಗಳಲ್ಲಿ ಅಸಾಧ್ಯವಾಗುತ್ತದೆ. ಅದಕ್ಕೆ ಹಲವು ಬಗೆಯ ಕಾರಣಗಳು ಇರುತ್ತವೆ. ಭಾನುವಾರ ಅಥವಾ ರಜಾದಿನಗಳು, ಅಪಘಾತ, ಹೆಚ್ಚಿನ ಲೋಡ್, ರಸ್ತೆ ಮತ್ತು ದಟ್ಟ ಹೊಗೆ, ವಾಹನ ದಟ್ಟಣೆ, ಅಥವಾ ಸರಕು ಇಳಿಸುವ ಸ್ಥಳದಲ್ಲಿ ಚಾಲಕನ ವೈಯಕ್ತಿಕ ಸಮಸ್ಯೆ ಮತ್ತು ಇತರ ಅಂಶಗಳಿಂದ ಪ್ರಾಯೋಗಿಕವಾಗಿ ಈ ನಿಯಮ ಪಾಲನೆ ಸಾಧ್ಯವಾಗುವುದಿಲ್ಲ. ಕೆಲವು ಬಾರಿ ಖರೀದಿದಾರರ ಅನುಕೂಲಕ್ಕೆ ತಕ್ಕಂತೆ ಸರಕುಗಳನ್ನು ಸಂಗ್ರಹಿಸಿಡಲಾಗಿರುತ್ತದೆ.
ದುಬಾರಿ ದಂಡ ವಿಧಿಸುವ ಬಗ್ಗೆ ಉಲ್ಲೇಖ
ಯಾವುದೇ ಕಾರಣದಿಂದಾಗಿ ಇ-ವೇ ಬಿಲ್ ನಲ್ಲಿ ನಮೂದಿಸಿದ ದಿನಾಂಕದೊಳಗೆ ಸರಕು ತಲುಪಿಸುವಲ್ಲಿ ವ್ಯತ್ಯಯವಾದರೆ ಹಾಗೂ ಇ-ವೇ ಬಿಲ್ ವಾಯಿದೆ ಮುಗಿದರೆ ಅದಕ್ಕೆ ಪ್ರತಿಶತ 200ರಷ್ಟು ಹೆಚ್ಚುವರಿ ದಂಡವನ್ನು ವಿಧಿಸಲಾಗುತ್ತದೆ. ಅಥವಾ 10 ಲಕ್ಷ ರೂಪಾಯಿ ಮೌಲ್ಯದ ಸರಕು ಪಟ್ಟಿಗೆ ರಾಜ್ಯ ಸರಕು ಮತ್ತು ಸೇವಾ ಕಾಯ್ದೆ 2017ರ ಅಡಿಯಲ್ಲಿ ಶೇ.100ರಷ್ಟು ತೆರಿಗೆ ವಿಧಿಸಲಾಗುತದೆ. ಇದಲ್ಲದೇ ಮಾರಾಟಗಾರರು ಮತ್ತು ಖರೀದಿದಾರರು ಈ ತೆರಿಗೆಯನ್ನು ಪಾವತಿಸಬೇಕೇ ವಿನಃ ಸಾಗಾಟದಾರರಿಗೂ ಇದಕ್ಕೂ ಯಾವುದೇ ಸಂಬಂಧವಿರುವುದಿಲ್ಲ.
ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬಲು ದುಬಾರಿ!
ಒಂದು ಕಡೆಯಲ್ಲಿ ಇ-ಬಿಲ್ ವ್ಯಾಪಾರಿಗಳು ಮತ್ತು ಖರೀದಿದಾರರ ಜೇಬಿಗೆ ಕತ್ತರಿ ಹಾಕುತ್ತಿದ್ದರೆ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಮೂಲಕ ಸಾರಿಗೆ ವ್ಯವಸ್ಥೆಗೂ ಬಿಸಿ ಮುಟ್ಟಿಸಲಾಗುತ್ತಿದೆ. ಮುಗಿಲೆತ್ತರಕ್ಕೆ ಜಿಗಿಯುತ್ತಿರುವ ಡೀಸೆಲ್ ದರವನ್ನು ಇಳಿಕೆ ಮಾಡುವಂತೆ ಆಗ್ರಹಿಸಿ ಅಖಿಲ ಭಾರತ ಸಾರಿಗೆ ಕಲ್ಯಾಣ ಸಂಘಗಳು ಭಾರತ್ ಬಂದ್ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸುತ್ತಿವೆ.