ಜನವರಿ 08ರಂದು ಭಾರತ್ ಬಂದ್, ಯಾವ ಸೇವೆ ಲಭ್ಯ? ಯಾವ್ದು ಅಲಭ್ಯ?
ಬೆಂಗಳೂರು, ಜನವರಿ 06: ಕಾರ್ಮಿಕ ಸಂಘಟನೆಗಳು ಜನವರಿ 8ರ (ಬುಧವಾರ) ಅಖಿಲ ಭಾರತ ಬಂದ್ ಗೆ ಕರೆ ನೀಡಿವೆ. ಬಂದ್ ದಿನದಂದು ಲಕ್ಷಾಂತರ ಕಾರ್ಮಿಕರು ಪಾಲ್ಗೊಳ್ಳಲಿದ್ದು, ಇದರಿಂದ ಜನಜೀವನ, ದೈನಂದಿನ ಚಟುವಟಿಕೆಗಳು ಅಸ್ತವ್ಯಸ್ತವಾಗುವ ಸಾಧ್ಯತೆ ಇದೆ. ಬಂದ್ ದಿನದಂದು ಯಾವ ಸೇವೆ ಲಭ್ಯ? ಯಾವ್ದು ಅಲಭ್ಯ? ಎಂಬ ವಿವರ ಇಲ್ಲಿದೆ...
ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಬಂದ್ ಗೆ ಬೆಂಬಲ ನೀಡುವ ಸಾಧ್ಯತೆ ಇದೆ. ಅಸಂಘಟಿತ ಸಾರಿಗೆ ಕಾರ್ಮಿಕರಿಗೆ ಸಾಮಾಜಿಕ ಸುರಕ್ಷಾ ಕಾಯ್ದೆ ಜಾರಿಗೆ ತರುವಂತೆ ಒತ್ತಾಯಿಸಲಾಗಿದೆ.
ವಿವಿಧ ಬೇಡಿಕೆಗಳನ್ನು ಪೂರೈಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿ ಎಐಟಿಯುಸಿ, ಸಿಐಟಿಯು, ಐಎನ್ ಟಿಯುಸಿ, ಎಲ್ಪಿಎಫ್ ಸೇರಿದಂತೆ ಇತರೆ ಕಾರ್ಮಿಕ ಸಂಘಟನೆಗಳು ಬಂದ್ ಗೆ ಕರೆ ನೀಡಿವೆ. ಕೈಗಾರಿಕಾ ವ್ಯಾಪಾರ ಒಕ್ಕೂಟಗಳಿಂದ ಹಿಡಿದು ಮಹಿಳಾ ಮತ್ತು ರೈತರ ಸಂಘಸಂಸ್ಥೆಗಳು, ಅನೇಕ ಸಂಘಟನೆಗಳು ಮುಷ್ಕರದಲ್ಲಿ ಪಾಲ್ಗೊಳ್ಳಲಿವೆ. ವಿವಿಧ ಎಡಪಕ್ಷಗಳು ಮತ್ತು ಕೇಂದ್ರ ವ್ಯಾಪಾರ ಒಕ್ಕೂಟಗಳು ಮುಷ್ಕರಕ್ಕೆ ತಮ್ಮ ಬೆಂಬಲ ಘೋಷಿಸಲಿವೆ.
ಬುಧವಾರ ಭಾರತ್ ಬಂದ್: ನಿಮಗೆ ತಿಳಿದಿರಬೇಕಾದ 5 ಸಂಗತಿಗಳು
ಬಂದ್ ದಿನದಂದು ಕರ್ನಾಟಕದಲ್ಲಿ ಎಸ್ಮಾ ಜಾರಿಯಲ್ಲಿರಲಿದ್ದು, ತುರ್ತು ಸೇವೆಗಳಾದ ಆಸ್ಪತ್ರೆ, ಮೆಡಿಕಲ್ ಶಾಪ್, ಆಂಬುಲೆನ್ಸ್ ಸೇವೆಗಳಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ. ಸರ್ಕಾರಿ ಸಾರಿಗೆ, ಮೆಟ್ರೋ ಸೇವೆ ಎಂದಿನಂತೆ ಇರಲಿದೆ. ಆದರೆ ಕೆಲವು ಸೇವೆಗಳು ವ್ಯತ್ಯಯವಾಗಲಿವೆ.
ಆಟೋ ರಿಕ್ಷಾ ಚಾಲಕರ ಬೆಂಬಲ
ಆಟೋ ರಿಕ್ಷಾ ಚಾಲಕರ ಐಕ್ಯ ಹೋರಾಟ ಸಮಿತಿ ಜನವರಿ 08ರ ದೇಶವ್ಯಾಪಿ ಮುಷ್ಕರಕ್ಕೆ ಬೆಂಬಲ ನೀಡಿದೆ. ಆಟೋ ಚಾಲಕರು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ. ಮುಷ್ಕರದ ದಿನ ಆಟೋಗಳು ರಸ್ತೆಗೆ ಇಳಿಯುವುದಿಲ್ಲ.
ಮುಷ್ಕರಕ್ಕೆ ಟ್ಯಾಕ್ಸಿ ಚಾಲಕರು ಸಹ ಬೆಂಬಲ
ಮುಷ್ಕರಕ್ಕೆ ಟ್ಯಾಕ್ಸಿ ಚಾಲಕರು ಸಹ ಬೆಂಬಲ ನೀಡಿದ್ದಾರೆ. ಆದರೆ, ಓಲಾ ಮತ್ತು ಊಬರ್ ಟ್ಯಾಕ್ಸಿಗಳ ಸೇವೆ ಸ್ಥಗಿತಗೊಳ್ಳುವುದಿಲ್ಲ. ವಿಮಾನ ನಿಲ್ದಾಣದ ಟ್ಯಾಕ್ಸಿಗಳು ಎಂದಿನಂತೆ ಸಂಚಾರ ನಡೆಸಲಿವೆ.
ಜನವರಿ 8ರ ಭಾರತ್ ಬಂದ್; ಯಾರ ಬೆಂಬಲವಿಲ್ಲ
ಹೋಟೆಲ್ ಮಾಲೀಕರು ಮುಷ್ಕರಕ್ಕೆ ನೈತಿಕ ಬೆಂಬಲ
ಹೋಟೆಲ್ ಮಾಲೀಕರು ಮುಷ್ಕರಕ್ಕೆ ನೈತಿಕ ಬೆಂಬಲ ನೀಡಲಿದ್ದಾರೆ. ಆದ್ದರಿಂದ, ಹೋಟೆಲ್ಗಳು ತೆರೆದಿರುತ್ತವೆ. ಚಲನಚಿತ್ರ ಪ್ರದರ್ಶನ ಬಂದ್ ಮಾಡುವ ಬಗ್ಗೆ ಇನ್ನೂ ಅಂತಿಮ ನಿರ್ಧಾರವಾಗಿಲ್ಲ.
ಶಾಲೆ, ಕಾಲೇಜುಗಳಿಗೆ ಹೋಗಲು ಸಮಸ್ಯೆ
ಬಸ್, ಆಟೋ ಸಂಚಾರ ಸ್ಥಗಿತಗೊಂಡರೆ ವಿದ್ಯಾರ್ಥಿಗಳು ಶಾಲೆ, ಕಾಲೇಜುಗಳಿಗೆ ಹೋಗಲು ಸಮಸ್ಯೆ ಆಗಲಿದೆ. ಸರ್ಕಾರಿ ಶಾಲಾ-ಕಾಲೇಜುಗಳಿಗೆ ರಜೆ ನೀಡುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗುತ್ತದೆ.
ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯ
ಕೇಂದ್ರ, ಸಹಕಾರಿ, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಉದ್ಯೋಗಿಗಳು ಮತ್ತು ಭಾರತೀಯ ಜೀವ ವಿಮಾ ನಿಗಮದ ಉದ್ಯೋಗಿಗಳ ಒಕ್ಕೂಟಗಳು ಕೂಡ ಮುಷ್ಕರದಲ್ಲಿ ಭಾಗವಹಿಸಲು ನಿರ್ಧರಿಸಿವೆ. ಭಾರತೀಯ ಬ್ಯಾಂಕ್ಗಳ ಸಂಘಟನೆ (ಐಬಿಎ), ಆರು ಬ್ಯಾಂಕ್ ಒಕ್ಕೂಟಗಳು ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿವೆ. ಬ್ಯಾಂಕಿಂಗ್ ಸೇವೆಗಳು , ಮುಖ್ಯವಾಗಿ ಎಟಿಎಂಗಳು, ಶಾಖಾ ಸೇವೆಗಳಿಗೆ ಇದರಿಂದ ತೊಂದರೆಯಾಗುವ ಸಾಧ್ಯತೆ ಇದೆ. ಆದರೆ ಆನ್ಲೈನ್ ವ್ಯವಹಾರಗಳಿಗೆ ತೊಂದರೆಯಾಗುವುದಿಲ್ಲ. ಬ್ಯಾಂಕ್ ಉದ್ಯೋಗಿಗಳು ಮುಖ್ಯವಾಗಿ ತಮ್ಮ ವೇತನ ಹೆಚ್ಚಳಕ್ಕೆ ಬೇಡಿಕೆ ಇರಿಸಿದ್ದಾರೆ. ಬ್ಯಾಂಕ್ ವಿಲೀನ ಮತ್ತು ಬ್ಯಾಂಕ್ ಸುಧಾರಣೆಗಳಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದಲ್ಲಿ ಎಸ್ಮಾ ಜಾರಿಯಲ್ಲಿರಲಿದೆ
ಮುಷ್ಕರದ ವೇಳೆ ಆಸ್ಪತ್ರೆ, ಮೆಡಿಕಲ್ ಶಾಪ್, ನಮ್ಮ ಮೆಟ್ರೋ, ರೈಲು ಸೇವೆಗೆ ಯಾವುದೇ ತೊಂದರೆ ಇಲ್ಲ. ಆಂಬ್ಯಲೆನ್ಸ್, ಹಾಲಿನ ವಾಹನಗಳು ಸಹ ಎಂದಿನಂತೆ ಇರಲಿವೆ. ಕೆಎಸ್ಸಾರ್ಟಿಸಿ, ಬಿಎಂಟಿಸಿ, ನಮ್ಮ ಮೆಟ್ರೋ ಸಂಚಾರ ಎಂದಿನಂತೆ ಇರಲಿವೆ ಎಂದು ವಕ್ತಾರರು ಹೇಳಿದ್ದಾರೆ. ಆದರೆ, ಪರಿಸ್ಥಿತಿ ನೋಡಿಕೊಂಡು ಸಂಚಾರ ಸ್ಥಗಿತಗೊಳಿಸುವ ಸಾಧ್ಯತೆಯಿದೆ. ಇಂದಿರಾ ಕ್ಯಾಂಟೀನ್ ಎಂದಿನಂತೆ ಕಾರ್ಯ ನಿರ್ವಹಿಸಲಿದೆ.