ಸೆಪ್ಟೆಂಬರ್ 25ರಂದು ಭಾರತ್ ಬಂದ್ ಆಚರಣೆಗೆ ರೈತ ಸಂಘ ಕರೆ
ನವದೆಹಲಿ, ಸೆ. 24: ಕೇಂದ್ರ ಸರಕಾರದ ರೈತ ಹಾಗೂ ಕೃಷಿಕೂಲಿಕಾರರು, ಕಸುಬುದಾರರ ಆಧಾರಿತ ಕೃಷಿ ವಿರೋಧಿಯಾದ ಕಾರ್ಪೊರೇಟ್ ಕಂಪನಿಗಳ ಪರವಾದ ಕೃಷಿ ಸಂಬಂಧಿತ ಬಿಲ್ಗಳನ್ನು ಕೂಡಲೇ ವಾಪಾಸು ಪಡೆಯಬೇಕು ಎಂದು ಆಗ್ರಹಿಸಿ ಸೆಪ್ಟಂಬರ್ 25 ರಂದು ಭಾರತ್ ಬಂದ್ ನಡೆಸಲು ವಿವಿಧ ರೈತ ಸಂಘಟನೆಗಳು ಕರೆ ನೀಡಿವೆ.
ಕರ್ನಾಟಕ ಸರಕಾರ ಈಚೆಗೆ ಘೋಷಿಸಿರುವ ಕೃಷಿ ವಿರೋಧಿ ಭೂಸುಧಾರಣೆ ತಿದ್ದುಪಡಿ ಕಾಯ್ದೆ- 2020 ಹಾಗೂ ಎಪಿಎಂಸಿ ತಿದ್ದುಪಡಿ ಕಾಯ್ದೆ-2020, ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ-2020 ಹಾಗೂ ವಿದ್ಯುಚ್ಛಕ್ತಿ ತಿದ್ದುಪಡಿ ಕಾಯ್ದೆ-2020 ಹಾಗೂ ಕಾರ್ಮಿಕ ವಿರೋಧಿ ತಿದ್ದುಪಡಿ ಕಾಯ್ದೆ ಮುಂತಾದ ಸುಗ್ರೀವಾಜ್ಞೆಗಳನ್ನು ವಾಪಾಸು ಪಡೆಯಬೇಕು ಹಾಗೂ ಅವುಗಳನ್ನು ಶಾಸನಗಳನ್ನಾಗಿ ರೂಪಿಸುವ ಪ್ರಯತ್ನಗಳನ್ನು ತಕ್ಷಣ ಕೈಬಿಡಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರಕಾರಗಳನ್ನು ಒತ್ತಾಯಿಸಲಾಗಿದೆ.
ಸೆ. 25ರಂದು ಬಂದ್ ಇಲ್ಲ, ರೈತ ಸಂಘಗಳಿಂದ ಹೆದ್ದಾರಿ ತಡೆ ಚಳುವಳಿ
ಎನ್ಡಿಎ ಮಿತ್ರಪಕ್ಷ ಶಿರೋಮಣಿ ಅಕಾಲಿ ದಳ ಪಂಜಾಬ್ ನಲ್ಲಿ ರೈತರ ಪರ ನಿಂತಿದ್ದರೆ. ಕಾಂಗ್ರೆಸ್ ಸೇರಿದಂತೆ ವಿವಿಧ ವಿಪಕ್ಷಗಳು ರೈತ ಸಂಘಟನೆಗಳ ಪ್ರತಿಭಟನೆಗೆ ಬೆಂಬಲ ನೀಡಿವೆ. ಕೃಷಿ ಮತ್ತು ಮಾರುಕಟ್ಟೆ ನಡುವಿನ ಸಹಕಾರಿ ಮನೋಭಾವಕ್ಕೆ ಕೇಂದ್ರ ಸರ್ಕಾರದ ಹೊಸ ನೀತಿಯು ವಿರುದ್ಧವಾಗಿದೆ ಎಂದು ಕಾಂಗ್ರೆಸ್ ಕಿಡಿ ಕಾರಿದೆ. ಪ್ರದೇಶ ಕಾಂಗ್ರೆಸ್ ಸಮಿತಿಗಳಿಗೆ ಮಸೂದೆ ವಿರೋಧಿಸಿ ಪ್ರತಿಭಟನೆ ಆಯೋಜಿಸಲು ಎಐಸಿಸಿ ಸೂಚಿಸಿದೆ.
ಕರ್ನಾಟಕದಲ್ಲಿ ಬಂದ್ ಇಲ್ಲ
ರಾಜ್ಯದಾದ್ಯಂತ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ತಡೆ ಚಳುವಳಿಗೆ ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ-ಕರ್ನಾಟಕದ ಕರೆ ನೀಡಿದೆ. ಸೆಪ್ಟೆಂಬರ್ 25ರಂದು ಉದ್ದೇಶಿತ ಬಂದ್ ಹಿಂಪಡೆಯಲಾಗಿದೆ. ಸೆಪ್ಟೆಂಬರ್ 24ರಂದು ಕರ್ನಾಟಕದಲ್ಲಿ ಮಸೂದೆ ಮಂಡನೆಯಾದರೆ ಸೆಪ್ಟೆಂಬರ್ 28ರಂದು ಕರ್ನಾಟಕ ಬಂದ್ ಆಚರಿಸಲಾಗುವುದು, ಇಲ್ಲದಿದ್ದರೆ ರಸ್ತೆ ತಡೆ ಹಾಗೂ ಪ್ರತಿಭಟನೆ ಮುಂದುವರೆಯಲಿದೆ ಎಂದು ರೈತ ಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ಭಾರತ್ ಬಂದ್ ಗೆ ಕರೆ
ಭಾರತೀಯ ಕಿಸಾನ್ ಯೂನಿಯನ್ (BKU), ಅಖಿಲ ಭಾರತ ರೈತರ ಒಕ್ಕೂಟ (AIFU), ಅಖಿಲ ಭಾರತ ಕಿಸಾನ್ ಸಂಘರ್ಷಣ ಸಮನ್ವಯ ಸಮಿತಿ (AIKSCC), ಅಖಿಲ ಭಾರತ ಕಿಸಾನ್ ಮಹಾಸಂಘ್(AIKM), ಮಹಾರಾಷ್ಟ್ರ, ತಮಿಳುನಾಡು, ಪಂಜಾಬ್ , ಹರ್ಯಾಣದ ವಿವಿಧ ರೈತ ಸಂಘಟನೆಗಳು, ಕರ್ನಾಟಕದ ಕೆಲವು ಸಂಘಟನೆಗಳು ಮಾತ್ರ ಬಂದ್ ಬೆಂಬಲಿಸಿವೆ.
ಕೃಷಿ ಮಸೂದೆ ಅಂಗೀಕಾರ, ಸೆಪ್ಟೆಂಬರ್ 25ರಂದು ಬಂದ್ಗೆ ಕರೆ
ಓಲಾ, ಊಬರ್ ಒಕ್ಕೂಟ
ಆಪ್ ಆಧಾರಿತ ಟ್ಯಾಕ್ಸಿ, ಕ್ಯಾಬ್ ಸೇವೆ ಒದಗಿಸುವ ಓಲಾ, ಊಬರ್ ಚಾಲಕರ ಸಂಘಟನೆಗಳು ಬಂದ್ ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿವೆ. ಅಖಿಲ ಭಾರತ ವ್ಯಾಪರಿಗಳ ಯೂನಿಯನ್ ಕಾಂಗ್ರೆಸ್, ಟ್ರೇಡ್ ಯೂನಿಯನ್, ಹಿಂದ್ ಮಜ್ದೂರ್ ಸಭಾ ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳು ಕೂಡಾ ಬಂದ್ ಗೆ ಬೆಂಬಲ ನೀಡಿವೆ.
100 ಸಂಘಟನೆ ಬೆಂಬಲ
100ಕ್ಕೂ ಅಧಿಕ ಸಂಘಟನೆಗಳ ಬೆಂಬಲ ಸಿಕ್ಕಿದೆ ಎಂದು ಬಿಕೆಯು ಅಧ್ಯಕ್ಷ ರಾಕೇಶ್ ತಿಕಾಯಿತ್ ಹೇಳೀದ್ದಾರೆ. ಉತ್ತರಪ್ರದೇಶದಲ್ಲಿ ಗ್ರಾಮ, ಪಟ್ಟಣ, ಹೆದ್ದಾರಿಗಳನ್ನು ಬಂದ್ ಮಾಡಲು ರೈತರು ಮುಂದಾಗಿದ್ದಾರೆ. ಹರ್ಯಾಣದಲ್ಲಿ ಸ್ಥಳೀಯ ಅಂಗಡಿ ಮುಂಗಟ್ಟುಗಳ ಮಾಲೀಕರು ಬಂದ್ ಆಚರಣೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.