ಏ.2 ರ ಭಾರತ ಬಂದ್: ತಿಳಿಯಬೇಕಾದ 10 ಸಂಗತಿ
ಪಾಟ್ನಾ, ಏಪ್ರಿಲ್ 02: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ಕಾಯ್ದೆಯಲ್ಲಿ ತಿದ್ದುಪಡಿ ತರುವ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ವಿವಿಧ ದಲಿತ ಸಂಘಟನೆಗಳು ಕರೆ ನೀಡಿರುವ ಬಂದ್, ಉತ್ತರ ಭಾರತವನ್ನು ಅಕ್ಷರಶಃ ಹೊತ್ತಿ ಉರಿಯುವಂತೆ ಮಾಡಿದೆ.
ಪೊಲೀಸರು ಮತ್ತು ಪ್ರತಿಭಟನಕಾರರ ನಡುವೆ ನಡೆದ ಚಕಮಕಿಯಲ್ಲಿ ಮಧ್ಯಪ್ರದೇಶದ ಮೊರೆನಾ ಎಂಬಲ್ಲಿ ಓರ್ವ ವಿದ್ಯಾರ್ಥಿ ಸೇರಿದಂತೆ ಒಟ್ಟು 5 ಜನ ಮೃತರಾಗಿದ್ದು, 6 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಐವರು ಮೃತರಾದ ಸುದ್ದಿ ತಿಳಿಯುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ಪರಾಮರ್ಶಿಸುವಂತೆ ಮನವಿ ಮಾಡಿದೆ.
ಇಂದು ಭಾರತ್ ಬಂದ್: ಉತ್ತರ ಭಾರತದಲ್ಲಿ ಪ್ರಕ್ಷುಬ್ದ ವಾತಾವರಣ
ಉತ್ತರ ಪ್ರದೇಶ, ರಾಜಸ್ಥಾನ, ಬಿಹಾರ, ಪಂಜಾಬ್, ಜಾರ್ಖಂಡ್ ಮುಂತಾದ ಹಲವು ರಾಜ್ಯಗಳಲ್ಲಿ ಈಗ ಹಿಂಸೆ ವಿಕೋಪಕ್ಕೆ ತಲುಪಿದ್ದು, ರಸ್ತೆಗಳಲ್ಲಿ ಬಸ್ಸು, ವಾಹನಗಳನ್ನು ಸುಡುತ್ತಿರುವ ದೃಶ್ಯ ಮಾಮೂಲಾಗಿದೆ. ಅಷ್ಟಕ್ಕೂ ಇಂದಿನ ಭಾರತ್ ಬಂದ್ ನಡೆಯುತ್ತಿರುವುದೇಕೆ? ಏನಿದು ಎಸ್ಸಿ, ಎಸ್ಟಿ ದೌರ್ಜನ್ಯ ಕಾಯ್ದೆ ಎಂಬಿತ್ಯಾದಿ ಮಾಹಿತಿ ನಿಮಗಾಗಿ ಇಲ್ಲಿದೆ.(ಚಿತ್ರಗಳು: ಪಿಟಿಐ)
ಏನಿದು ಸುಪ್ರೀಂ ಕೋರ್ಟ್ ತೀರ್ಪು?
ಮಾ.20 ರಂದು ಸುಪ್ರೀಂ ಕೋರ್ಟ್ ನೀಡಿದ್ದ ಮಹತ್ವದ ತೀರ್ಪಿನ ವಿರುದ್ಧ ಈ ಗಲಭೆ ಎದ್ದಿದೆ. ಹಲವು ಸಂದರ್ಭಗಳಲ್ಲಿ ಎಸ್ಸಿ/ಎಸ್ಟಿ ಕಾಯ್ದೆಯನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿದ್ದ ನ್ಯಾಯಾಲಯ, ದುರುಪಯೋಗವನ್ನು ತಪ್ಪಿಸುವುದಕ್ಕಾಗಿ ಕ್ರಮ ಕೈಗೊಂಡಿತ್ತು. ದಲಿತರ ಮೇಲೆ ದೌರ್ಜನ್ಯದ ಯಾವುದೇ ದೂರು ಬಂದರೂ ವಿಚಾರಣೆಯ ನಂತರವೇ ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಸ್ಸಿ ಎಸ್ಟಿ ಕಾಯ್ದೆ 1989 ರಲ್ಲಿ ತಿದ್ದುಪಡಿ ತರಲು ಕೋರ್ಟು ಹೇಳಿತ್ತು.
ಏನಿದು ಎಸ್ಸಿ ಎಸ್ಟಿ ಕಾಯ್ದೆ 1989?
ಪರಿಶಿಷ್ಟ ಜಾತಿ ಮತ್ತು ಪಂಗಡದ ಜನ ಸಾಮಾಜಿಕವಾಗಿ ಹಿಂದುಳಿದಿದ್ದು, ಅವರ ಮೇಲೆ ನಿರಂತರ ಹಿಂಸೆ ನಡೆಯುತ್ತಿದೆ ಎಂಬುದನ್ನು ಮನಗಂಡಿದ್ದ ಅಂದಿನ ಸರ್ಕಾರ 1989 ರಲ್ಲಿ ಈ ಕಾಯ್ದೆಯನ್ನು ಜಾರಿಗೆ ತಂದಿತ್ತು. ಈ ಎಸ್ಸಿ ಎಸ್ಟಿ ದೌರ್ಜನ್ಯ ಕಾಯ್ದೆ 1989ರ ಅನ್ವಯ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಯಾವುದೇ ವ್ಯಕ್ತಿ ತಮ್ಮ ಮೇಲೆ ದೌರ್ಜನ್ಯವಾಗುತ್ತಿದೆ ಎಂದು ದೂರು ನೀಡಿದ್ದೇ ಆದಲ್ಲಿ, ಆರೋಪಿಯನ್ನು ಯಾವುದೇ ವಿಚಾರಣೆಯಿಲ್ಲದೆ ಬಂಧಿಸಲಾಗುತ್ತಿತ್ತು ಮತ್ತು ಆತನ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಈ ಕಾಯ್ದೆಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬುದನ್ನು ಅರಿತ ಸುಪ್ರೀಂ ಕೋರ್ಟ್ ಈ ಕಾಯ್ದೆಯಲ್ಲಿ ತಿದ್ದುಪಡಿ ತರುವಂತೆ ಸೂಚಿಸಿತ್ತು.
ಸರ್ಕಾರಿ ವ್ಯವಹಾರ, ಪ್ರಮಾಣಪತ್ರದಲ್ಲಿ 'ದಲಿತ' ಪದ ನಿಷೇಧ
ಸುಪ್ರೀಂ ಆದೇಶಿಸಿದ ತಿದ್ದುಪಡಿಯಲ್ಲಿ ಏನಿತ್ತು?
ಸುಪ್ರೀಂ ಕೋರ್ಟ್ ಆದೇಶಿಸಿದ ತಿದ್ದುಪಡಿಯ ಪ್ರಕಾರ ಎಸ್ಸಿ ಎಸ್ಟಿ ಕಾಯ್ದೆಯನ್ವಯ ಯಾರನ್ನಾದರೂ ಬಂಧಿಸಬೇಕಾದರೆ ಪ್ರಾಥಮಿಕ ಡಿಎಸ್ ಪಿ ತನಿಖೆಯ ನಂತರವೇ ಕ್ರಮ ಕೈಗೊಳ್ಳುವಂತೆ ತೀರ್ಪು ನೀಡಿತ್ತು. ಅಷ್ಟೆ ಅಲ್ಲ, ಇದಕ್ಕೂ ಮುನ್ನ ಈ ಕಾಯ್ದೆಯಡಿ ಬಂಧಿತರಾಗುವವರಿಗೆ ಜಾಮೀನು ಸಹ ಸಿಗುತ್ತಿರಲಿಲ್ಲ. ಹೊಸ ತಿದ್ದುಪಡಿಯಲ್ಲಿ ಆರೋಪಿಗೆ ಜಾಮೀನು ನೀಡಲು ಅವಕಾಶ ಕಲ್ಪಿಸಲಾಗಿತ್ತು.
ಭಾರತ ಬಂದ್ ಏಕೆ?
ಸುಪ್ರೀಂ ಕೋರ್ಟ್ ತೀರ್ಪಿನಂತೆ ಈ ಕಾಯ್ದೆಯಲ್ಲಿ ತಿದ್ದುಪಡಿ ತಂದಿದ್ದೇ ಆದರೆ ಅದು ಎಸ್ಸಿ ಎಸ್ಟಿಗಳ ಹಕ್ಕನ್ನು ಕಸಿದಂತಾಗುತ್ತದೆ ಮತ್ತು ದೌರ್ಜನ್ಯದ ಪ್ರಕರಣಗಳು ಇನ್ನೂ ಹೆಚ್ಚುತ್ತವೆ. ಆದ್ದರಿಂದ ಈ ತಿದ್ದುಪಡಿಯನ್ನು ಕೈಬಿಡುವಂತೆ ಆಗ್ರಹಿಸಿ ದಲಿತ ಸಂಘಟನೆಗಳ ಇಂದು(ಏ.02) ದೇಶದಾದ್ಯಂತ ಬಂದ್ ಗೆ ಕರೆನೀಡಿದ್ದವು. ಈ ಬಂದ್ ಗೆ ಉತ್ತರ ಪ್ರದೇಶದ ಬಹುತೇಕ ರಾಜ್ಯಗಳು ಬೆಂಬಲಿಸಿದ್ದು, ಅಹಿತಕರ ಘಟನೆಗಳನ್ನು ತಪ್ಪಿಸಲು ಹಲವೆಡೆ ಶಾಲಾ, ಕಾಲೇಜಿಗೆ ರಜೆ ಘೋಷಿಸಲಾಗಿದೆ ಎಂದು ಕೆಲವು ವರದಿಗಳು ತಿಳಿಸಿವೆ.
ತೀರ್ಪು ಮರುಪರಿಶೀಲನೆ..?
ಪರಿಸ್ಥಿತಿ ಮಿತಿ ಮೀರುತ್ತಿರುವುದನ್ನು ಅರಿತ ಕೇಂದ್ರ ಸರ್ಕಾರ ಈ ತೀರ್ಪಿನ ಕುರಿತು ಮರುಪರಿಶೀಲನೆ ನಡೆಸುವಂತೆ ಕೋರಿ ಸುಪ್ರೀಂ ಕೋರ್ಟಿಗೆ ಮನವಿ ಸಲ್ಲಿಸಿದ್ದು, ಇದರ ವಿಚಾರಣೆ ಏಪ್ರಿಲ್ 9 ರಂದು ನಡೆಯಲಿದೆ. "ಇದು ಸುಪ್ರೀಂ ಕೋರ್ಟ್ ತೀರ್ಪು. ಸರ್ಕಾರದ್ದಲ್ಲ. ಸರ್ಕಾರ ಎಂದಾದರೂ ಇಂಥ ನಿರ್ಧಾರವನ್ನು ಆತುರಾತುರವಾಗಿ ತೆಗೆದುಕೊಳ್ಳುವುದಕ್ಕೆ ಸಾಧ್ಯವೇ? ಇದು ವಿರೋಧಪಕ್ಷಗಳೇ ಬೇಕೆಂದು ಮಾಡುತ್ತಿರುವ ಕೆಲಸ" ಎಂದು ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹೇಳಿದ್ದಾರೆ.
ಪ್ರಾಣಹಾನಿಗೆ ಹೊಣೆ ಯಾರು?!
ಈಗಾಗಲೇ ಮಧ್ಯಪ್ರದೇಶ ಮೊರೆನಾ ಎಂಬಲ್ಲಿ ಓರ್ವ ವಿದ್ಯಾರ್ಥಿ ಸೇರಿದಂತೆ ನಾಲ್ವರು ಸಾವಿಗೀಡಾಗಿದ್ದಾರೆ. ಇದೀಗ ಪರಿಸ್ಥಿತಿ ಕೈತಪ್ಪಿ ಹೋಗುತ್ತಿದೆ ಎಂಬುದನ್ನು ಮನಗಂಡ ಕೇಂದ್ರ ಸರ್ಕಾರ ಈ ಪರಿಸ್ಥಿತಿಯನ್ನು ತಹಬಂದಿಗೆ ತರಲು ಶ್ರಮಿಸುತ್ತಿದೆ. ಗ್ವಾಲಿಯಲ್, ಬಿಂಡ್ ಮುಂತಾದೆಡೆ ಪರಿಸ್ಥಿತಿಯನ್ನು ತಿಳಿಯಾಗಿಸಲು ಸೇನೆಯ ಮೊರೆ ಹೋಗಿದೆ ಸರ್ಕಾರ! ಹಲವೆಡೆ ಈಗಾಗಲೇ ನಿಷೇಧಾಜ್ಞೆ ಸಹ ಜಾರಿಗೊಳಿಸಲಾಗಿದೆ.
ಯಾವ ರಾಜ್ಯಗಳಲ್ಲಿ ಪರಿಸ್ಥಿತಿ ಉಲ್ಬಣ?
ಉತ್ತರ ಭಾರತದ ರಾಜ್ಯಗಳಲ್ಲೇ ಪರಿಸ್ಥಿತಿ ಹೆಚ್ಚು ಉಲ್ಪಣಿಸಿರುವುದು ಕಂಡುಬರುತ್ತಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಪಂಜಾಬ್, ಬಿಹಾರ್, ಒಡಿಶಾ, ಜಾರ್ಖಂಡ್ ಮುಂತಾದೆಡೆಗಳಲ್ಲಿ ವಾಹನಗಳನ್ನು ಸುಡುವ ದೃಶ್ಯ ಮಾಮೂಲಾಗಿದೆ. ಪಂಜಾಬಿನಲ್ಲಂತೂ ನೂರಾರು ಜನ ಪ್ರತಿಭಟನಕಾರರು ಕತ್ತಿ, ಬೇಸ್ ಬಾಲ್ ಬ್ಯಾಟ್, ಧ್ವಜಗಳ್ನು ಹಿಡಿದು ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸುತ್ತಿದುದು ಕಂಡುಬಂತು. ಜಲಂಧರ್, ಅಮೃತಸರ ಮುಂತಾದೆಡೆಗಳಲ್ಲಿ ಈ ದೃಶ್ಯ ಮಾಮೂಲಾಗಿತ್ತು.
ಹೆದ್ದಾರಿ ತಡೆ, ವಾಹನಕ್ಕೆ ಬೆಂಕಿ
ಬಿಹಾರ, ಒಡಿಶಾ, ಪಂಜಾಬ್, ರಾಜಸ್ಥಾನ ಮುಂತಾದೆಡೆಗಳಲ್ಲಿ ಹೆದ್ದಾರಿ ತಡೆ ನಡೆಸುತ್ತಿರುವ ದೃಶ್ಯ ಕಂಡುಬಂತು. ಮಾತ್ರವಲ್ಲ ಹಲವು ಸ್ಥಳಗಳಲ್ಲಿ ಸರ್ಕಾರಿ ಬಸ್ಸುಗಳಿಗೆ, ವಾಹನಗಳಿಗೆ ಮನಸೋ ಇಚ್ಛೆ ಕಲ್ಲು ಹೊಡೆದು, ಸುಟ್ಟ ದೃಶ್ಯವೂ ಸಾಮಾನ್ಯವಾಗಿತ್ತು! ಹಲವು ನಗರ ಪ್ರದೇಶಗಳಲ್ಲಿ ಟ್ರಾಫಿಕ್ ಸಮಸ್ಯೆಯಿಂದ ಜನರು ಬಳಲುವಂತಾಗಿತ್ತು. ಪ್ರತಿಭಟನೆಗೆ ಬೆಂಬಲಿಸದ ಜನರ ಸಂಚಾರಕ್ಕೆ ಪ್ರತಿಭಟನಕಾರರು ಅಡ್ಡಿಯಾಗುತ್ತಿದ್ದ ದೃಶ್ಯವೂ ಕೆಲವೆಡೆ ಕಂಡುಬಂತು.
ಪರೀಕ್ಷೆ ಮುಂದೂಡಿಕೆ!
ಪರಿಸ್ಥಿತಿ ಕೈಮೀರುತ್ತಿದ್ದಂತೆಯೇ ಪಂಜಾಬ್ ಸರ್ಕಾರ ತಕ್ಷಣವೇ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದಲ್ಲದೆ, ಬೋರ್ಡ್ ಪರೀಕ್ಷೆಗಳನ್ನು ಮುಂದೂಡಿದೆ. ಮಾತ್ರವಲ್ಲ ರಾತ್ರಿ 11 ಗಂಟೆಯವರೆಗೆ ರಾಜ್ಯದಲ್ಲಿ ಮೊಬೈಲ್, ಇಂಟರ್ನೆಟ್ ಸಂಪರ್ಕಗಳನ್ನು ಕಡಿತಗೊಳಿಸಲಾಗುವುದು ಎಂದು ಸರ್ಕಾರ ಹೇಳಿದೆ. ಇಲ್ಲಿನ ಬ್ಯಾಂಕುಗಳನ್ನು, ಸಾರ್ವಜನಿಕ ಸಾರಿಗೆಯನ್ನೂ ಮುಚ್ಚಲಾಗಿದೆ. ಪಂಜಾಮಿನ ಜಲಂಧರ್, ಕಪುರ್ತಲ, ನವನ್ಷರ್ ಮತ್ತು ಹೊಶಿಯಾರ್ಪುರ ಗಳಲ್ಲಿ ಅತೀ ಹೆಚ್ಚಿನ ಸಂಖ್ಯೆಯ ದಲಿತರಿರುವುದರಿಂದ ಇಲ್ಲಿ ಬಿಗಿಬಂದೋಬಸ್ತ್ ಏರ್ಪಡಿಸಲಾಗಿದೆ.
ಪ್ರತಿಭಟನೆಗೆ ಬೆಂಬಲ ನೀಡಿದ ಜೆಡಿಯು!
ಬಿಹಾರದ ಪಾಟ್ನಾದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಹೊಂದಿರುವ ಜೆಡಿಯು ಪಕ್ಷ ಈ ಬಂದ್ ಗೆ ಬೆಂಬಲ ನೀಡಿದ್ದು ಮತ್ತಷ್ಟು ಅಚ್ಚರಿಯ ಸಂಗತಿ. ಹರ್ಯಾಣ, ಪಶ್ಚಿಮಬಂಗಾಳಗಳಲ್ಲೂ ಪ್ರತಿಭಟನೆ ನಡೆಯುತ್ತಿದೆ. ಉತ್ತರ ಪ್ರದೇಶದಲ್ಲಿ 'ಶಾಂತಿ ಕಾಯ್ದುಕೊಳ್ಳುವಂತೆ' ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮನವಿ ಮಾಡಿಕೊಂಡಿದ್ದಾರೆ. 'ನಾವೆಂದಿಗೂ ದಲಿತ, ಪರಿಶಿಷ್ಟ ಜಾತಿ ಮತ್ತು ಪಂಗಡದ ಕಲ್ಯಾಣಕ್ಕೆ ಬದ್ಧರಾಗಿದ್ದೇವೆ' ಎಂದು ಅವರು ಹೇಳಿದ್ದಾರೆ.