ಕಲಾಂ ಪ್ರತಿಮೆ ಬಳಿ ಭಗವದ್ಗೀತೆ ವಿವಾದ ಈಗ ಅಂತ್ಯ
ರಾಮೇಶ್ವರಂ, ಜುಲೈ 31: ಪ್ರಧಾನಿ ನರೇಂದ್ರ ಮೋದಿ ಅವರು 'ಭಾರತ ರತ್ನ' ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಸ್ಮಾರಕವನ್ನು ಜುಲೈ 27ರಂದು ಲೋಕಾರ್ಪಣೆ ಮಾಡಿದ ಸುದ್ದಿ ಓದಿರಬಹುದು. ಕಲಾಂ ಪ್ರತಿಮೆ ಬಳಿ ಭಗವದ್ಗೀತೆ ಇಟ್ಟಿದ್ದು ಟೀಕೆಗೆ ಗುರಿಯಾಗಿತ್ತು.
ರಾಮೇಶ್ವರಂನಲ್ಲಿ ಅಬ್ದುಲ್ ಕಲಾಂ ಸ್ಮಾರಕ ಲೋಕಾರ್ಪಣೆ
ಆದರೆ, ವಿವಾದ ತಾರಕಕ್ಕೇರುವ ಮುನ್ನವೇ ಎಚ್ಚೆತ್ತುಕೊಂಡ ಕಲಾಂ ಅವರ ಕುಟುಂಬ, ಭಗವದ್ಗೀತೆ ಪಕ್ಕದಲ್ಲಿ ಕುರಾನ್ ಹಾಗೂ ಬೈಬಲ್ ಇರಿಸಿ ವಿವಾದಕ್ಕೆ ಅಂತ್ಯ ಹಾಡಿದ್ದಾರೆ.
'ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ ಡಿಒ) ಯ ಅಧಿಕಾರಿಗಳು ಕಲಾಂ ಪ್ರತಿಮೆಯ ಬಳಿ ಭಗವದ್ಗೀತೆ ಇಟ್ಟಿದ್ದರಲ್ಲಿ ಯಾವುದೇ ದುರುದ್ದೇಶವಿರಲಿಲ್ಲ. ಈಗ ಅಲ್ಲಿ ಕುರ್ ಆನ್ ಮತ್ತು ಬೈಬಲ್ ಪವಿತ್ರ ಗ್ರಂಥಗಳನ್ನು ಇಟ್ಟಿದ್ದೇವೆ. ಸದ್ಯದಲ್ಲೇ ತಮಿಳು ಗ್ರಂಥ ತಿರುಕ್ಕುರಳ್ ಇಡುತ್ತೇವೆ' ಎಂದು ಕಲಾಂ ಅವರ ಸಂಬಂಧಿಗಳಾದ ಶೇಖ್ ದಾವೂದ್ ಮತ್ತು ಸಲೀಂ ಹೇಳಿದ್ದಾರೆ.
ಸ್ಮಾರಕದ ಅಧಿಕಾರಿಗಳ ಅನುಮತಿ ಇಲ್ಲದೆಯೇ ಕುರಾನ್ ಮತ್ತು ಬೈಬಲ್ ಪುಸ್ತಕಗಳನ್ನು ಇರಿಸಲಾಗಿದೆ ಎಂದು ಹಿಂದೂ ಮಕ್ಕಳ್ ಕಟ್ಚಿ ಸಂಘಟನೆ ಮುಖಂಡ ಕೆ. ಪ್ರಭಾಕರನ್ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಈ ಸ್ಮಾರಕದಲ್ಲಿ ಕಲಾಂ ಅವರು ವೀಣೆ ನುಡಿಸುವ ಪ್ರತಿಮೆ(ಸುಮಾರು 15 ಕೋಟಿ ರು ವೆಚ್ಚ) 900ಕ್ಕೂ ಹೆಚ್ಚು ಪೇಂಟಿಂಗ್ ಗಳು ಹಾಗೂ 200ಕ್ಕೂ ಅಪರೂಪದ ಫೋಟೋಗಳಿವೆ.
ಕಲಾಂ ಸ್ಫೂರ್ತಿದಾಯಕ ನುಡಿಮುತ್ತುಗಳು
ಪ್ರತಿಮೆ ಸ್ಥಾಪನೆಗೆ ವಿರೋಧ ವ್ಯಕ್ತವಾಗಿತ್ತು: 'ಇಸ್ಲಾಂ ಧರ್ಮದಲ್ಲಿ ಮೂರ್ತಿಪೂಜೆ ಹಾಗೂ ಪ್ರತಿಮೆ ನಿರ್ಮಾಣಕ್ಕೆ ಅವಕಾಶವಿಲ್ಲ. ಆದ್ದರಿಂದ ಕಲಾಂ ಅವರ ಆದರ್ಶಗಳನ್ನು ಅನುಸರಿಸಿ, ಗೌರವಿಸಿ, ಪ್ರತಿಮೆ ಏಕೆ ನಿರ್ಮಿಸಬೇಕು' ಎಂದು ಕೆಲ ಇಸ್ಲಾಮ್ ಸಂಘಟನೆಗಳು ಪ್ರತಿರೋಧ ವ್ಯಕ್ತಪಡಿಸಿದ್ದವು. ಆದರೆ, ಕಲಾಂ ಅವರ ಸೋದರ ಮೊಹಮ್ಮದ್ ಅವರ ಅನುಮತಿ ಬಳಿಕ ಪ್ರತಿಮೆ ನಿರ್ಮಾಣ ಮಾಡಲಾಯಿತು.