ಪದ್ಮಾವತಿ ಚಿತ್ರಕ್ಕೆ ಯೋಗಿ ಆದಿತ್ಯನಾಥ್ ಕೂಡ ವಿರೋಧ
ಲಖನೌ , ನವೆಂಬರ್ 21 : ಪದ್ಮಾವತಿ ಚಿತ್ರದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರು ಜನರ ಭಾವನೆಗಳೊಂದಿಗೆ ಆಟವಾಡುತ್ತಿದ್ದಾರೆ. ಚಿತ್ರದಲ್ಲಿರುವ ವಿವಾದಾತ್ಮಕ ದೃಶ್ಯಗಳನ್ನು ತೆಗೆದು ಹಾಕುವವರೆಗೂ ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದರು.
ಮಧ್ಯಪ್ರದೇಶ : ಬಿಡುಗಡೆಗೆ ಮುನ್ನವೇ 'ಪದ್ಮಾವತಿ'ಗೆ ನಿಷೇಧ
ಚಿತ್ರದ ನಟರಿಗೆ ಅಥವಾ ಇತರರಿಗೆ ಬೆದರಿಕೆ ಹಾಕುವುದು ತಪ್ಪು, ನಿರ್ದೇಶಕರದ್ದೂ ಅಷ್ಟೇ ತಪ್ಪಿದೆ, ಹೀಗಾಗಿ ಇಬ್ಬರ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕು. ಸಂಜಯ್ ಲೀಲಾ ಬನ್ಸಾಲಿಯಾಗಲಿ ಅಥವಾ ಇನ್ನಾರಾದರೂ ಕೂಡ ಕಾನೂನನ್ನು ಕೈಗೆತ್ತಿಕೊಳ್ಳು ಅವಕಾಶ ಮಾಡಿಕೊಡುವುದಿಲ್ಲ.
ಚಿತ್ರದ ನಟಿ ದೀಪಿಕಾ ಪಡುಕೋಣೆ ಹಾಗೂ ಚಿತ್ರ ತಂಡದ ಇತರರಿಗೆ ಬೆದರಿಕೆ ಹಾಕುವವರಿಗಿಂತ ಸಂಜಯ್ ಲೀಲಾ ಬನ್ಸಾಲಿ ಕಡಿಮೆ ಎಂದು ನನಗೆ ಅನಿಸುವುದಿಲ್ಲ. ಒಂದು ವೇಳೆ ಬೆದರಿಕೆ ಹಾಕುವವರ ವಿರುದ್ಧ ಕ್ರಮ ತೆಗೆದುಕೊಳ್ಳುವುದೇ ಆದಲ್ಲಿ ನಿರ್ದೇಶಕರ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕು. ಪ್ರತಿಯೊಬ್ಬರ ಭಾವನೆಗಳನ್ನು ಗೌರವಿಸಬೇಕು ಎಂದರು.
ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ಮತ್ತು ಶಾಹಿದ್ ಕಪೂರ್ ಅಭಿನಯದ ಪದ್ಮಾವತಿ ಚಿತ್ರ ರಜಪೂತರ ಕೆಂಗಣ್ಣಿಗೆ ಕಾರಣವಾಗಿದೆ. ಚಿತ್ರದಲ್ಲಿ ರಾಣಿ ಪದ್ಮಿನಿ ಇತಿಹಾಸವನ್ನು ತಿರುಚಲಾಗಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿದೆ. ರಾಜಕೀಯ ರಂಗು ಪಡೆಯುತ್ತಿರುವ ಈ ಚಿತ್ರದ ವಿರುದ್ಧ ಪ್ರತಿಭಟನೆಗಳು ಪ್ರಾರಂಭವಾಗಿದ್ದು ಪದ್ಮಾವತಿ ಚಿತ್ರದ ಬಿಡುಗಡೆಯ ದಿನಾಂಕವನ್ನೂ ಸಧ್ಯಕ್ಕೆ ಮುಂದೂಡಲಾಗಿದೆ.